Wednesday, June 18, 2008

ಅಂಗಾಲಿಗೆ ಕಲ್ಲೊತ್ತು ಮತ್ತು ಹೆಲ್ತ್ ಎಂಬ ಆರೋಗ್ಯ

ಆರೋಗ್ಯ ಮತ್ತು ಆಸ್ತಿ ಎರಡಿದ್ದರೆ ಅವನಂತಹ ಸುಖಿ ಮತ್ತೊಬ್ಬರಿಲ್ಲ ಎಂಬುದು ಪ್ರಾಜ್ಞರ ಅಭಿಮತ. ಕಾರಣ ಅವೆರಡನ್ನೂ ಸುಸ್ಥಿಯಲ್ಲಿಡಲು ತಾಳ್ಮೆ ಸಾಧನೆಗಳ ಅವಶ್ಯಕತೆಯಿದೆ. ಇರಲಿ ಅದು ದೊಡ್ಡ ಪಂಡಿತರ ಹಾಗೂ ತಿಳಿದವರ ಮಾತಾಯಿತು, ಪಾಮರರಾದ ನಮ್ಮ ಮಾತಿಗೆ ಬರೋಣ.
ನಾನು ಬೆಳಿಗ್ಗೆ ಐದುಮುಕ್ಕಾಲು ಗಂಟೆಗೆ ಎದ್ದೇಳುತ್ತೇನೆ. ಎದ್ದಕೂಡಲೆ ಸೂರ್ಯನಮಸ್ಕಾರ ಮಾಡು ಅಂತ ಅಪ್ಪಯ್ಯ ಹೇಳಿದ್ದರು. ಆದರೆ ನಾನು ಕಾಫಿ ಕುಡಿದು . ಕವಳ ಹಾಕಿ ಕೊಟ್ಟಿಗೆಗೆ ಹೋಗುತ್ತೇನೆ. ಕವಿತ , ಉಳ್ಳವರು ವ್ಯಾ ಎನ್ನುವ ವಾಸನೆಯ, ಹಾಗೂ ಸಾಸಿವೆಕಾಳಿನಷ್ಟು ಮೈಗೆ ತಾಗಿದರೂ ಡೆಟ್ಟಾಲ್ ಹಾಕಿ ತೊಳೆದುಕೊಳ್ಳುವ ಸಗಣಿಯನ್ನು ಪ್ಲಾಸ್ಟಿಕ್ ನ ಸಹಾಯದಿಂದ ಬಕೇಟ್ ಗೆ ತುಂಬಿ ಆಕಳುಗಳಿಗೆ ದಾಣಿಯನ್ನಿಡುತ್ತಾಳೆ. ನಾನು ಚೊಂಯ್ ಚೊಂಯ್ ಎಂದು ದನ ಕರೆಯಲು ಆರಂಬಿಸುತ್ತೇನೆ. ಬರೊಬ್ಬರಿ ೩ ಕೆ,ಜಿ,ತಿಂಡಿ ತಿನ್ನುವ ದನ ಬರೋಬ್ಬರಿ ನಾಲ್ಕು..! ಲೀಟರ್ ಹಾಲುಕೊಡುತ್ತದೆ. ಅದರಲ್ಲಿ ಎರಡು ಲೀಟರ್ ಮನೆಬಳಕೆಗೆ ಮತ್ತೆರಡು ಲೀಟರ್ ಡೈರಿಗೆ. ಇಪ್ಪತ್ನಾಲ್ಕು ರೂಪಾಯಿ ಹಡೆಯುವ ಎರಡು ಲೀಟರ್ ಹಾಲನ್ನು ಒಂದು ಕಿಲೋಮೀಟರ್ ದೂರದ ಡೈರಿಗೆ ಒಯ್ಯಲು ೬ ರೂಪಾಯಿ ಪೆಟ್ರೋಲ್ ಖಾಲಿ ಮಾಡಿಕೊಂಡು ಬೈಕನ್ನೇರಿ ಹೋಗುತ್ತೇನೆ. ಯಾವ ಕಾರಣಕ್ಕೂ ಆರ್ಥಿಕ ಲೆಕ್ಕಾಚಾರಕ್ಕೆ ಬಗ್ಗದ ಹಾಲೆಂಬ ಹಾಲು ಕೇವಲ ಖುಷಿಗಷ್ಟೇ ಸೀಮಿತ ಈ ಮಲೆನಾಡಿನಲ್ಲಿ. ಹಾಗಾಗಿ ಮೊನ್ನೆ ಡೈರಿಗೆ ಬೈಕನ್ನು ಒಯ್ಯಬಾರದೆಂದು ತೀರ್ಮಾನಿಸಿ ನಡೆದುಕೊಂಡೇ ಹೊರಟೆ. ಚಪ್ಪಲಿ ಧರಿಸಿ ಮನೆಯಿಂದ ಸ್ವಲ್ಪ ದೂರ ಬರುವಷ್ಟರಲ್ಲಿ ಚಪ್ಪಲಿಯ ಉಂಗುಷ್ಟ ಪಟಾರೆಂದು ಕಿತ್ತು ಬಂತು. ಸರಿ ಮಾಡುವುದಿನ್ನೇನು ಎಂದು ಚಪ್ಪಲಿಯನ್ನು ಬದಿಗೆಸೆದು ಬರಿಗಾಲಿನಲ್ಲಿ, ಹೊರಟೆ. ಆವಾಗ ಅನುಭವವಾಗಿದ್ದು ಈ ಕಥಾನಕ.
ನಮ್ಮೆಲ್ಲರ ಅಂಗಾಲು ದಪ್ಪನೆಯ ಚರ್ಮವನ್ನೊಳಗೊಂಡಿದ್ದು ಕಲ್ಲುಮುಳ್ಳಿನ ಹಾದಿಯಲ್ಲಿ ನಡೆಯಲು ಸಮರ್ಥವಾಗಿ ರಚನೆಯಾಗಿದೆ. ಅಂಗಾಲಿನಲ್ಲಿ ಕಲ್ಲುಗಳು ಒತ್ತುವುದರಿಂದ ಆರೋಗ್ಯ ಚಿಮ್ಮುತ್ತದೆಯೆಂದು ಆಕ್ಯುಪ್ರೆಷರ್ ಮಹಾಶಯರು ಹೇಳಿದ್ದಾರೆ. ಅಲ್ಲಿ ದೇಹದ ಪ್ರಮುಖ ಅಂಗಗಳ ನರಗಳು ಆರಂಭಗೊಳ್ಳುತ್ತವೆಯಂತೆ. ಅವುಗಳಿಗೆ ಪ್ರೆಷರ್ ಬಿದ್ದಾಗ ಹೊಟ್ಟೆ ಮುಂತಾದ ಕಡೆ ಹಾರ್ಮೋನ್ಗಳು ಒಸರಿ ಅವು ದೇಹದ ರಾಸಾಯನಿಕ ರಚನೆಯನ್ನು ಉತ್ತಮಪಡಿಸುತ್ತವೆಯಂತೆ. ಅದರಿಂದಾಗಿ ಆರೋಗ್ಯ ನಳನಳಿಸುತ್ತದೆಯಂತೆ. ಆದರೆ ನಾವು ದಾರಿ ತಪ್ಪಿದ್ದು ಮೊನ್ನೆ ಮನವರಿಕೆಯಾಯಿತು. ಬರಿಗಾಲಿನಲ್ಲಿ
ನಲ್ಲಿ ಸ್ವಲ್ಪ ದೂರ ನಡೆದು ಹೋದಾಗ ಅಂಗಾಲಿನಲ್ಲಿ ಬೆಂಕಿ- ಇಟ್ಟಿದ್ದಾರೆಂಬ ಅನುಭವ. ಇನ್ನು ಒಂದು ಹೆಜ್ಜೆಯನ್ನು ಕಿತ್ತಿಡಲಾರೆನು ಎಂಬಷ್ಟು ವೇದನೆ. ಅಷ್ಟುಹೊತ್ತಿಗೆ ಹರಿಜನರ ಗೋಪಾಲ ಬೆಳಿಗಾಮುಂಚಿನ ಡೋಜ್ ಹಾಕಲು ಹೊರಟಿದ್ದ. ಎದುರಿಗ ಸಿಕ್ಕ ಆತನ ಕಾಲನ್ನು ನೋಡಿದೆ. ಆತನೂ ಬರಿಗಾಲಿನಲ್ಲಿದ್ದ. ನಾನು ನಡೆಯುತ್ತಿದ್ದ ರಸ್ತೆಯಲ್ಲಿಯೇ ಅವನು ನಡೆಯುತ್ತಿದ್ದುದು. ಆದರೆ ನಾನು ಕಾಲಿಡಲು ನುಣುಪನೆಯ ಜಾಗವನ್ನು ಹುಡುಕುತ್ತಿದ್ದೆ. ಅವನು ಅದ್ಯಾವುದನ್ನು ಲೆಕ್ಕಿಸದೆ ಪುಟುಪುಟು ಹೆಜ್ಜೆಯಿಡುತ್ತ ಬಿರಬಿರನೆ ಸಾಗುತ್ತಿದ್ದ. ಅಲ್ಲಿಗೆ ನನಗೆ ಮನವರಿಕೆಯಾಯಿತು, ನಾನು ಇಷ್ಟುದಿವಸ ಭಗವಂತ ದೇಹದ ಆರೋಗ್ಯ ಹಾಗೂ ಸುಸ್ಥಿತಿಗಾಗಿ ವ್ಯವಸ್ಥಿತ ರೀತಿಯಲ್ಲಿ ಮಾಡಿದ್ದ ಪಾದಕ್ಕೆ ಬಾಟ ಕಂಪನಿಯ ಪಾದುಕೆ ಧರಿಸಿ ಜೋಪಾನ ಮಾಡಿದ್ದೆ. ಅದರಿಂದ ಎರಡು ತೊಂದರೆ ಮೊದಲನೆಯದು ಚಪ್ಪಲಿಯಿಲ್ಲದೆ ನಡೆಯಲೇ ಆಗದು ( ರಸಗೊಬ್ಬರವಿಲ್ಲದೆ ರೈತರು ಆತ್ಮಹತ್ಯೆ ಮಾಡಿಕೊಂಡಂತೆ ಮುಂದೆ ಚಪ್ಪಲಿ ಕೊರತೆಯಿಂದ ಇದೇ ಪರಿಸ್ಥಿತಿ ಬಂದರೂ ಆಶ್ಚರ್ಯವಿಲ್ಲ) ಎರಡನೆಯದು ಅಂಗಾಲಿಗೆ ಕಲ್ಲು ಒತ್ತದೆ ಆ ರೋಗ್ಯದ ಮೇಲೂ ಪರಿಣಾಮ . ಈ ಪರಿಸ್ಥಿಯನ್ನು ಲಾಭ ಪಡೆದುಕೊಳ್ಳಲು ಕಂಪನಿಗಳು ಚೂಪನೆಯ ಮುಳ್ಳುನ ಪ್ಲಾಸ್ಟಿಕ್ ಮಣೆಯನ್ನು ಮಾಡಿದ್ದಾರಂತೆ. ಬೆಳಿಗ್ಗೆ ಎದ್ದು ಅದರ ಮೇಲೆ ನಿಂತುಕೊಂಡು ತಕತಕನೆ ಕುಣಿದರೆ ಆರೋಗ್ಯ ಅಂತ ಅವರ ಪ್ರಚಾರ. ಇದು ಹೈಟೆಕ್ ಸಿಟಿ ಜನರಿಗೆ ಇ ರುವ ವ್ಯವಸ್ಥೆ.
ಅದು ಏನೇ ಇರಲಿ ಚಪ್ಪಲಿ ಧರಿಸದೆ ನಿತ್ಯ ಒಂದು ಕಿಲೋಮೀಟರ್ ನಡೆದರೆ ಆರಂಭದಲ್ಲಿ ಸ್ವಲ್ಪ ಕಷ್ಟವಾದರೂ ಕೊನೆಕೊನೆಗೆ ಅದೇನೋ ಕಾಲು ಬಗ್ ಬಗ್ ಎಂಬ ಹಿತಕರವಾದ ನೋವಿನೊಂದಿಗೆ ಆನಂದವಾಗುವುದಂತೂ ಸತ್ಯ. ಚಪ್ಪಲಿ ಧರಿಸದೇ ನಡೆಯುವ ಹಲವಾರು ಜನರ ಸ ಮೀಕ್ಷೆ ನಡೆಸಿದೆ, ೭೦ ರ ಹರೆಯದ ಮಾದೇವರ ಮನೆ ಕೃಷ್ಣಯ್ಯ, ಹರನಾಥ ರಾಯರು, ನಮ್ಮ ಮನೆ ಕೆಲಸದ ಗಣಪತಿ. ಹೀಗೆ ಹತ್ತಾರು ಜನರು ಚಪ್ಪಲಿಯನ್ನೇ ಧರಿಸುವುದಿಲ್ಲ.. ಅರೆ ಹೌದು...? ಅವರು ಆರೋಗ್ಯದಿಂದ ನಳನಳಿಸುತ್ತಿರುವುದು ಸತ್ಯ. ಆದರೆ ಚಪ್ಪಲಿ ಇಲ್ಲದೆ ನಡೆಯುವುದು ಎಂದರೆ ....? ಜನರು ಏನೆಂದಾರು..? ಹಾಗಾಗಿ ಮುಳ್ಳುಗಳಿರುವ ಪ್ಲಾಸ್ಟಿಕ್ ಮಣೆ ಖರೀದಿಸಿ ತಕತಕನೆ ಕುಣಿಯುವುದೇ ಸೂಕ್ತ.. ಮತ್ತು ಅದೇ ಸ್ಟೈಲ್ ಒಳ್ಳೆಯದು ಎಂಬುದು ಅಂತಿಮ ತೀರ್ಮಾನ ಮಾಡಿದೆ. ಸಹಜವಾಗಿ ಇದ್ದುದ್ದನ್ನು ಹೀಗೆ ಏನಾದರೂ ಒಂದು ಹೊಸ ತರಹ ಹೆಸರಿನಿಂದ ಶುರು ಮಾಡಿದರೆ ಅದಕ್ಕೆ ವ್ಯಾಲ್ಯೂ ಹಾಗೂ ಮದುವೆ ಮನೆಯಲ್ಲಿ ಅಕ್ಯುಪ್ರೆಷರ್ ಬಗ್ಗೆ ಭಾಷಣ ಬಿಗಿಯಬಹುದು. ಎಪ್ಪತ್ತು ವರ್ಷದ ಹರಿಜನರ ಗೋಪಾಲ ದಿನಕ್ಕೆ ಎರಡು ಕ್ವಾಟರ್ ತೆಗೆದುಕೊಂಡರೂ ಸರಿಯಾಗಿ ಊಟ ಮಾಡದಿದ್ದರೂ ಆರೋಗ್ಯವಾಗಿದ್ದಾನೆ ಎಂಬುದಕ್ಕೆ ಚಪ್ಪಲಿ ಧರಿಸದೇ ಇದ್ದುದ್ದೇ ಕಾರಣ ಎಂಬುದನ್ನು ತರ್ಕಬದ್ಧವಾಗಿ ಹೇಳಿ ತಕತಕನೆ ನಾವು ಭಾಷಣ ಬಿಗಿಯಬಹುದು. ಅಬ್ಬಾ ಒಂದೇ ಒಂದು ಚಪ್ಪಲಿ ಉಂಗುಷ್ಟ ಕಿತ್ತದ್ದು ಎಷ್ಟಕ್ಕೆ ಕಾರಣ............?

ಕೊನೆಯದಾಗಿ: ಇದನ್ನು ಓದಿದ ನಂತರ ಶೂ ಹಾಗೂ ಸಾಕ್ಸ್ ಕಳಚಿ ನಿಮ್ಮ ಅಂಗಾಲ ಪರಿಸ್ಥಿತಿ ನೋಡಿ. ಅದು ಮೇಗಾಲಿನಂತೆ ಮೆತ್ತ ಮೆತ್ತಗೆ, ಕೆಂಪ ಕೆಂಪಗೆ, ಬೆಳ್ಳ ಬೆಳ್ಳಗೆ , ಇದೆ ಎಂದಾದರೆ ನಿಮ್ಮ ಆರೋಗ್ಯ . ಗಟ್ಟಿಮಾಡಿಕೊಳ್ಳುವ ಯತ್ನ ಇಂದೇ ಆರಂಭಿಸಿ. ಆರೋಗ್ಯ ಗಟ್ಟಿಯಾಗುತ್ತದೆಯೋ ಇ ಲ್ಲವೋ ಕಾಲಂತೂ ಗಟ್ಟಿಯಾಗುತ್ತದೆ ಮತ್ತು ಹೊಸ ವೇಷದಿಂದ ಮನೆಮಂದಿಯ ನ ಡುವೆ ಸ್ವಲ್ಪದಿನ ಸುದ್ದಿಯಲ್ಲಿರಬಹುದು ಎಂಬುದು ಕುಹಕವಲ್ಲ....!

ಅಂತಿಮ ಸೇರ್ಪಡೆ: ಬ್ಲಾಗ್ ಪಬ್ಲಿಶ್ ಆಗುತ್ತಿದ್ದಂತೆ ಕಲ್ಲೊತ್ತು ಎಂಬ ಪದ ನೋಡಿದ ಬಾಳೆಹೊಳೆಯ ಪೆಜತ್ತಾಯರು ಅದನ್ನು ತಮಗಾದ ಖಾಯಿಲೆಯ ಅನುಭಕ್ಕೆ ಹೋಲಿಸಿಕೊಂಡಿದ್ದಾರೆ. ಕಲ್ಲೊತ್ತು ಎಂಬುದೊಂದು ಖಾಯಿಲೆ ಇದೆ. ಅಂಗಾಲಿನಲ್ಲಿ ಸಣ್ಣ ಸಣ್ಣ ಗಂಟುಗಳಾಗಿ ಯಮಯಾತನೆ ನೀಡುತ್ತವೆ. ಅದಕ್ಕೆ ಸಟ್ಟುಗವೊಂದನ್ನು ಕಾಯಿಸಿಕೊಂಡು ಎಕ್ಕದ ಎಲೆಯನ್ನು ಸಟ್ಟುಗ ಮತ್ತು ಅಂಗಾಲಿನ ನಡುವೆ ಇಟ್ಟು ಒ ತ್ತಿದರೆ ಕಡಿಮೆಯಾಗುತ್ತದೆಯಂತೆ. ನಾನು ಇಲ್ಲಿ ಬಳಸಿದ್ದು ಕಲ್ಲು ಒ ತ್ತುವುದಕ್ಕೆ. ತೀರಾ ಮೆತ್ತನೆಯ ಸುಪ್ಪಾಣಿ ಅಂಗಾಲಿಗೆ ಈ ಕಲ್ಲುಗಳು ಒತ್ತುವುದರಿಂದ ಕಲ್ಲೊತ್ತು ಖಾಯಿಲೆ ಬರುವ ಸಾಧ್ಯತೆ ಇದೆ. ಎಚ್ಚರಿಕೆ

Tuesday, June 17, 2008

ಕ್ಯಾನ್ಸರ್ ನಿಂದಾದ ಈ ಸಾವು ನ್ಯಾಯವೇ...?


ಆ ಮನೆಯಲ್ಲೀಗ ಸೂತಕದ ಛಾಯೆ. ಹದಿಹರೆಯದ ಮನೆಯ ಯಜಮಾನ ಸಾವನ್ನಪ್ಪಿದ್ದಾನೆ. ಸಿನಿಮಾದಲ್ಲಾದರೆ "ಈ ದೇಹದಿಂದ ದೂರವಾದೆ ಏಕೆ ಆತ್ಮನೆ..? ಈ ಸಾವು ನ್ಯಾಯವೇ? ಎಂಬ ಹಾಡು ಹಾಡಿ ಕಣ್ಣೀರು ಸುರಿಸಬಹುದಿತ್ತು. ಲಯಬದ್ಧವಾದ ಹಾಡಿಗೆ ಪ್ರೇಕ್ಷಕರೂ ಸೊರ ಸೊರ ಎಂದು ಕಣ್ಣೀರು ಸುರಿಸುತ್ತಿದ್ದರು. ಆದರೆ ಇದು ವಾಸ್ತವ ಜಗತ್ತು. ಹಾಗಾಗಿ ಅವರವರ ಪಾಡು ಅವರವರಿಗೆ. ಇದೆಲ್ಲಾ ಹೇಗಾಯಿತು? ಏ ಕಾಯಿತು ಎಂದು ತಿಳಿಯುವುದರೊಳಗೆ ಎಲ್ಲಾ ಮುಗಿದೇ ಹೋಯಿತು. ಇಂತಹ ಸಾವುಗಳು ದಿನನಿತ್ಯ ನಮ್ಮ ಸುತ್ತಮುತ್ತ ನಡೆಯುತ್ತಿವೆ, ನಾಗರೀಕ ಸಮಾಜವೆನಿಸಿಕೊಂಡ ಈ ಕಾಲದಲ್ಲಿಯೂ ನಾವು ಇವನ್ನೆಲ್ಲಾ ನೋಡುತ್ತಾ ಸುಮ್ಮನುಳಿಯುತ್ತೇವೆ. ಮತ್ತು ಅವಕಾಶ ಸಿಕ್ಕಾಗಲೆಲ್ಲಾ ಆದರ್ಶದ ಭಾಷಣ ಮಾಡುತ್ತೇವೆ,

ಹದಿಹರೆಯದ ಆ ಯುವಕನಿಗೆ ಬಾಯಿ ಕ್ಯಾನ್ಸರ್. ಸುಮಾರು ೫೦ ವರ್ಷಗಳ ಹಿಂದೆ ಬಾಯಿಕ್ಯಾನ್ಸರ್ ಬಂದು ದವಡೆ ಕೀಳಿಸಿಕೊಂಡು ನಂತರ ಬಹಳ ವರ್ಷಗಳ ಕಾಲ ಬದುಕಿದ ಹಲವು ಜನರು ಸಿಗುತ್ತಾರೆ. ಆದರೆ ಈತ ಮೊದಲನೇ ಹಂತದಲ್ಲಿ ತಿಳಿದರು ೯ ತಿಂಗಳಿಗಿಂತ ಹೆಚ್ಚಿಗೆ ಬದುಕಲಿಲ್ಲ. ಇಂತಹ ವಿಜ್ಞಾನ ಯುಗದಲ್ಲೀಯೂ ಸಾವಿಗೆ ಶರಣಾದ. ಈ ಸಾವಿಗೆ ಸುವ್ಯಸ್ಥಿತ ಸಮಾಜ ಹೊಣೆ ಎಂದರೂ ತಪ್ಪಿಲ್ಲ. ಆತನ ಅಜ್ಞಾನ ಎಂದರೂ ಸರಿಯೇ. ಅವೆಲ್ಲಾ ಇಲ್ಲಿಯವರೆಗೆ ಆಗಿದ್ದೆಲ್ಲವೂ ಆಗಬೇಕಾದ್ದೇ ಎಂಬ ಹುಂಬ ಮಾತಿಗೆ ಕಟ್ಟು ಬಿದ್ದು ಬಾಯಿಮುಚ್ಚಿಕೊಂಡಿರೋಣ, ಅದು ಹೇಗಾಯ್ತು ಅಂತ ಸ್ವಲ್ಪ ನೋಡೋಣ

16ರ ಹರೆಯದ ಮಾಣಿ ಎಸ್.ಎಸ್.ಎಲ್.ಸಿಗೆ ವಿದ್ಯೆ ಸಾಕು ಎಂದು ಸಲಾಂ ಹೊಡೆದ. ದೊಡ್ಡ ಕುಟುಂಬ1 ಐದಾರು ಎಕರೆ ಭಾಗಾಯ್ತು ಸಾಕು ಇನ್ನೇಕೆ ಎಂದಿದ್ದರೂ ಇದ್ದೀತು. ಮನೆಯಲ್ಲಿ ಸುಮ್ಮನೆ ಇದ್ದಾಗ ಪಕ್ಕದವರ್ಯಾರೋ ಹ್ವಾಯ್ ಎಂದರು." ಒಂದು ಬೀಡಿ ಸೇದಾ ಎಂತು , ನೀನೇನು ಆಕ್ತಲ್ಲೆ , ನೀನೇನು ದುಡ್ಡು ಕೊಡಕ ದೂಪ ಹಾಕಕ, ಒಂದು ಬೀಡಿ ಸೇದಿರೆ ಚಟ ಅಂಟ್ಕ್ಯತ್ತಲ್ಲೆ ತಗ " ಎಂದರು. ಮಾಣಿಗೆ ಅದು ಮಜ ಅಂತ ಅನ್ನಿಸಿತು. ಆದರೂ ಸಣ್ಣಕ್ಕೆ ಅಧೈರ್ಯ ತೋರಿದ." ಅಯ್ಯೋ ರಾಮಾ ಯಂತಕೆ ಹೆದರ್ತ್ಯಾ..? ಖಾಯಿಲೆ ಬಪ್ಪದಾದ್ರೆ ಹ್ಯಾಂಗಾರು ಬರ್ತು. ಬೀಡಿ ಸೇದದೆ ಇದ್ದವರು ಸಾವಿರಾರು ವರ್ಷ ಬದುಕಿದ್ವನಾ? ತಗಳ" ಮತ್ತೊಬ್ಬರು ದನಿ ಸೇರಿಸಿದರು. ಅಪ್ಪಿ ಬೆಪ್ಪಾದ ಸುಮ್ಮನೆ ಅಂಟಿಕೊಂಡಿದ್ದು ನೋಡನೋಡುತ್ತಲೇ ಚಟವಾಯಿತು. ಆನಂತರ ಮತ್ತೊಬ್ಬರು ಈತನನ್ನು ಬಳಸಿಕೊಳ್ಳಲು ಮುಂದಾದರು. ಪಾಪ ಅಪ್ಪಿಯನ್ನು ನೀನೆ ಜಗತ್ತಿನಲ್ಲಿ ಅತೀ ಬುದ್ದಿವಂತ ಎಂದರು. ತಾವು ಕುಡಿಯುತ್ತಿದ್ದ ಬಾಟ್ಲಿಯಲ್ಲಿ ಅರ್ದ ಎರಸಿ ಕೊಟ್ಟರು. ಆವಾಗಲೂ ಅದೇ ಮಾತು. ಅಯ್ಯೋ ರಾಮಾ ಕುಡಿದೇ ಇದ್ದವರು ಸಾವಿರ ವರ್ಷ ಬದುಕ್ತ್ವನ ಮಳ್ಳು..?

ಇರಲಿ ಅಪರೂಪಕ್ಕೊಮ್ಮೆ ಕುಡಿತ ದಿನಾ ಒಂದು ಕಟ್ಟು ಬೀಡಿ ಮೂವತ್ತೆಂಟು ವರ್ಷಕ್ಕೆ ಸಾಯಗೊಡುವುದಿಲ್ಲ. ಆದರೆ ಜತೆಯಲ್ಲಿ ಮಂಡೆ ಬಿಸಿ ಆಯುಷ್ಯವನ್ನು ತಿಂದು ಬಿಡುತ್ತದೆ. ಅಮಾಯಕ ಸಾತ್ವಿಕ ಹುಡುಗನಿಗೆ ತಲೆಯಲ್ಲಿ ಏನೇನೋ ತುಂಬಿ ಸಾತ್ವಿಕ ಜನರ ವಿರುದ್ಧ ಗುರು-ಹಿರಿಯರ ವಿರುದ್ಧ ಮಾತಾಡುವಂತೆ ಎತ್ತಿಕಟ್ಟಿದರು. ತಮಗೆ ಆಗದವರ ವಿರುದ್ದ್ಜ ಅಪ್ಪಿಯ ಮೂಲಕ ಬಾಯಿತೆವಲು ತೀರಿಸಿಕೊಂಡರು. ಮಾಣೀಗೆ ಮಾತ್ರಾ ನಿತ್ಯ ತಲೆಬಿಸಿ ಇತ್ತ ನಾಸ್ತಿಕನಾಗಲಾರ ಅತ್ತ ಆಸ್ತಿಕರು ಹೆದರುತ್ತಾರೆ ಹಾಗಾಗಿ ಅಲ್ಲಿ ಸೇರಲಾರ. ಆವಾಗ ಹಲ್ಲು ನೋವು ಕಾಣಿಸಿಕೊಂಡಿತು, ಮಾಮೂಲಿ ಹಲ್ಲು ನೋವುತಾನೆ ? ಎಂದು ಕೀಳಿಸ ಹೋದ . ಡಾಕ್ಟರ್ರು ಇದು ದವಡೆ ಕ್ಯಾನ್ಸರ್ ಎಂದರು. ಸುತ್ತಮುತ್ತಲಿನ ನಿತ್ಯ ಸ್ನೇಹಿತರು ಮಳ್ಳನಾ ಸುಳ್ಳೆ ಎಂದರು. ಈತನೂ ಸುಳ್ಳು ಎಂದ . ಆದರೆ ಕೆಟ್ಟ ಕ್ರಿಮಿ ಆಗಲೆ ದವಡೆಯನ್ನು ತಿನ್ನತೊಡಗಿತ್ತು. ಇರಲಿ ಬಿಡಿ ಇವತ್ತಿನ ಕಾಲದಲ್ಲಿ ಆರಂಭಹಂತದಲ್ಲಿರುವ ದವಡೆ ಕ್ಯಾನ್ಸರ್ ಮಹಾ ದೊಡ್ಡ ಖಾಯಿಲೆ ಅಲ್ಲ. ಸಮರ್ಪಕವಾದ ಚಿಕಿತ್ಸೆ ಸಿಕ್ಕರೆ ವಾಷ್ ಔಟ್. ಆದರೆ ಹಾಗಾಗಲಿಲ್ಲ . ಅಪ್ಪಿಯ ನಿತ್ಯ ಜೀವನದ ಸಲಹೆಕಾರರು ಕಣ್ಮರೆಯಾದರು. ಅಪ್ಪಿ ಕಂಗಾಲಾದ. ಯಶಸ್ವಿನಿಯಂತಹ ಒಳ್ಳೆಯೆ ವ್ಯವಸ್ಥೆಯಿದ್ದರೂ ಬಳಸಿಕೊಳ್ಳುವ ಸೂಕ್ತ ಮಾರ್ಗದರ್ಶನ ಇಲ್ಲದೆ ಮೊನ್ನೆ ಕೈಲಾಸ ವಾಸಿಯಾದ. ನಾರು ಬೇರು ಔಷಧಿ ಕೊಡುವ ನಾಟಿ ವೈದ್ಯರು ಆತನಿಗೆ ಗ್ಯಾರಂಟಿ ಕೊಟ್ಟಿದ್ದರಂತೆ. ಅದು ಈ ತರಹ ಅಂತ ಗೊತ್ತಿರಲಿಲ್ಲ.

ಹೊಗೆ ಹಾರುವಹೊತ್ತಿಗೆ ಅವರೆಲ್ಲಾ ಬಂದಿದ್ದರು. ಸಾವನ್ನು ನಿಗಂಟು ಮಾಡಿಕೊಳ್ಳಲಾ.. ಎಂಬ ಅನುಮಾನ ನನಗೆ.

ಅಪ್ಪಿ ಒಳ್ಳೆಯ ತಮಾಷೆಗಾರನಾಗಿದ್ದ. ಒಳ್ಳೆಯ ಹೃದಯವಂತನಾಗಿದ್ದ. ಹುಷಾರು ಮಾಡಲು ನಾವೂ ಪ್ರಯತ್ನ ಪಟ್ಟಾಗಿತ್ತು. ಆದರೆ ಸಹಕಾರ ಸಿಗಲಿಲ್ಲ. ಈಗ ಆತ ಇಲ್ಲ ಏನು ಹೇಳಿದರೂ ಪ್ರಯೋಜನವಿಲ್ಲ. ಪ್ರತೀ ಹೇಳಿಕೆಗೂ ವಿಭಿನ್ನ ಅರ್ಥ ಹುಟ್ಟಿಕೊಳ್ಳುತ್ತದೆ. ಸಣ್ಣ ಸಣ್ಣ ಇಬ್ಬರು ಮಕ್ಕಳನ್ನು ನೋಡಿದಾಗ ಕರುಳು ಚುರುಕ್ ಎನ್ನುತ್ತದೆ. ಆದರೆ ಮಾಡುವುದೇನು?. ಆಗಬೇಕಾದ್ದು ಆಗಿಯೇ ಆಗುತ್ತದೆ. ನಾವ್ಯಾರು..? ಎಂಬ ಉತ್ತರದಂತಹ ಪ್ರಶ್ನೆ ಮಾತ್ರಾ ಉಳಿಯುತ್ತದೆ ಮನಸ್ಸಿನಲ್ಲಿ

Sunday, June 15, 2008

ಗೋಮಾತೆ ಮತ್ತು GO......ಮಾತ್ರೆ.....!


ಕೆಲವರ್ಷಗಳಿಂದೀಚೆಗೆ ಸ್ವದೇಶಿ ಗೋವಿನ ವಿಷಯದಲ್ಲಿ ಪ್ರಚಾರ ಹೆಚ್ಚಾಗಿದೆ. ಸುಮಾರು ಇಪ್ಪತ್ತೈದು ಮೂವತ್ತು ವರ್ಷಗಳ ಹಿಂದೆ ಎಚ್.ಎಫ್ ಹಾಗೂ ಜರ್ಸಿ ಮುಂತಾದ ಮಿಶ್ರ ತಳಿಗಳು ಬಂದಾಗ ನಮ್ಮ ಮಲೆನಾಡಿನ ಹವ್ಯಕ ಬ್ರಾಹ್ಮಣ ಕೃಷಿಕರು ಅಚ್ಚರಿಯಿಂದ ನೋಡಿದ್ದರು. ದೊಡ್ಡ ಹೆಗ್ಗಣದಂತಿದ್ದ ಮಲೆನಾಡು ಗಿಡ್ಡ ತಳಿಗಳು ಹಾಗೂ ಅದು ಕೊಡುವ ಅಚ್ಚೇರು ಹಾಲು ಅಭ್ಯಾಸವಾಗಿದ್ದ ಮಲೆನಾಡಿನವರಿಗೆ ಅಚ್ಚರಿ ತಂದಿತ್ತು. ಮಟಮಟ ಮಧ್ಯಾಹ್ನ ಮಲಗಿದಾಗ ಹಿತ್ತಲಿಗೆ ಬಂದು ಸೇವಂತಿಗೆ ಗಿಡ ಸೌತೆ ಬಳ್ಳಿಗಳನ್ನು ಪಡ್ಚ ಮಾಡುವ ಹಳ್ಳಿಯ ಬಾಲ ಎತ್ತಿಕೊಂಡು ಓಡುವ ಹಡ್ಬೆ ದನಗಳನ್ನು ಹಲ್ಲುಕಚ್ಚಿಕೊಂಡು ಅಟ್ಟಿಸಿಕೊಂಡು ಹೋಗಿ ಕೊನೆಗೂ ಒಂದೇ ಒಂದು ಏಟನ್ನು ಹೊಡೆಯಲಾರದೆ, ಬಂದಿರುವ ಸಿಟ್ಟನ್ನು ತಣಿಸಿಕೊಳ್ಳಲು ದನ ಹೊಡೆಯುವ ಕೋಲನ್ನು ರಸ್ತೆಯಮೇಲೆ ಜಪ್ಪಿ ಅಸಾಹಾಯಕತೆಯ ದಿನಗಳು ಮಾಯವಾದವಲ್ಲ ಎಂದು ಖುಷಿಪಟ್ಟಿದ್ದರು ಜನ. ಸಾಧು ಸಜ್ಜನವಾಗಿದ್ದ ಜಾತಿ ದನಗಳು ಅದ್ಭುತ ಎನ್ನಿಸಿದ್ದು ಸಹಜವಾಗಿತ್ತು. ಜರ್ಸಿ ದನ ಹಾಗೂ ಅದು ಗಬ್ಬವಾಗಲು ಹೋರಿಯ ಬದಲು ಕಡ್ಡಿ ಇನ್ಸುಮೇಷನ್ ಅದ್ಬುತ ಎನಿಸಿತ್ತು. ವಡೆ ಭಾಗದ ವಾಸನೆಯ ತಿಥಿ ಮನೆಯಲ್ಲಿ ಊಟಕ್ಕೆ ಆಗುವವರೆಗೆ ಹಾಗೂ ಊಟಕ್ಕೆ ಕುಳಿತಾಗ ದೊಡ್ಡ ದೊಡ್ಡ ಹತ್ತಾರು ಲೀಟರ್ ಹಾಲುಕೊಡುವ ದನದ್ದೇ ಸುದ್ಧಿ. ಹತ್ತಿಪ್ಪತ್ತು ಸಾವಿರ ರೂಪಾಯಿ ಕೊಟ್ಟು ಆ ದನ ಸಾಕುವವರ ಗತ್ತೇ ಬೇರೆ ತರಹದ್ದಾಗಿರುತ್ತಿತ್ತು. ವಾರಕ್ಕೊಮ್ಮೆ ಡಾಕ್ಟರ್ ಬೇಕಂತೆ ಮುಂತಾದ ಅಂತೆಕಂತೆಗಳ ದಂತ ಕಥೆಗಳು ಹರಿದಾಡುತ್ತಿತ್ತು. ಕಾಲಾನಂತರ ಮಿಶ್ರತಳಿಗಳು ಮಾಮೂಲಾದವು. ಸಿಕ್ಕಾಪಟ್ಟೆ ತುಡುಮಾಡುವ ಪಟಾರನೆ ಒದೆಯುವ ಮಲೆನಾಡು ಗಿಡ್ಡ ಹವ್ಯಕ ಬ್ರಾಹ್ಮಣರ ಕೊಟ್ಟಿಗೆಯಿಂದ ಮಾಯವಾಯಿತು. ಬೃಹತ್ ಗಾತ್ರದ ದನ ಬಕೇಟ್ ಗಟ್ಟಲೆ ಹಾಲು ಕೆ.ಎಂ.ಎಫ್ ಡೈರಿಯ ದಿನಚರಿಗೆ ಒಗ್ಗಿದರು. ಹಿತ್ತಲನ್ನು ಕದ್ದು ತಿನ್ನುವ ತುಡುವೆ ಮಲೆನಾಡು ಗಿಡ್ಡ ದನಗಳು ದೀವರ ಚೌಡ, ಹರಿಜನರ ಮಾರಿ ಗೋಪಾಲ ಮುಂತಾದ ಕೊಟ್ಟಿಗೆ ಸೇರಿ ಬಾಳತೊಡಗಿದವು.
ಕಾಲಾನಂತರದಲ್ಲಿ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹಳ್ಳಿಯ ದನಕ್ಕೆ ಗೋ ಮಾತೆ ಎಂದೂ, ಕಾಂಕ್ರೀಜ್, ತಾರ್ ಪಾರ್ಕರ್ ಮುಂತಾದ ಗುಜರಾತ್ ಮೂಲದ ಆಕಳುಗಳಿಗೆ ಸ್ವದೇಶಿ ತಳಿ ಎಂದೂ ಅದು ಉತ್ತಮ ಅದರ ಮೂತ್ರದಲ್ಲಿ ಔಷಧೀಯ ಗುಣಗಳಿವೆ ಎಂದು ಸಾರಿದ್ದರಿಂದ ಹಾಗೂ ಹೈಬ್ರಿಡ್ ಆಕಳುಗಳು ಗೋವೇ ಅಲ್ಲ ಅದು ಹಂದಿಯ ಜೀನ್ಸ ಮಿಶ್ರಮಾಡಿ ಮಾಂಸಕ್ಕಾಗಿ ತಯಾರಿಸಿದ ತಳಿಗಳು ಎಂದು ವಿಜ್ಝಾನಿಗಳು ಸಾರಿದ್ದರಿಂದ, ದಡಬಡನೆ ಮಲೆನಾಡು ಹವ್ಯಕರ ಕೊಟ್ಟಿಗೆಗಳು ಮಲೆನಾಡು ಗಿಡ್ಡ ಹಾಗೂ ಮಠದಿಂದ ತರಿಸಿಕೊಟ್ಟ ಕಾಂಕ್ರೀಜ್ ತಳಿಗಳಿಂದ ತುಂಬತೊಡಗಿದವು. ಮತ್ತೆ ಯಥಾಪ್ರಕಾರ ಕಾಂಕ್ರಿಜ್ ತಳಿಯ ಹಾಲು ಹಾಗಂತೆ ಹೀಗಂತೆ, ಇದಕ್ಕೆ ಡಾಕ್ಟರ್ರೇ ಬೇಡವಂತೆ ಮುಂತಾದ ಮಾತುಗಳು ವಡೆಬಾಗದ ಕರಕರ ಶಭ್ದದ ನಡುವೆ ತಿಥಿಮನೆಯಲ್ಲಿ ಹರಿದಾಡತೊದಗಿದವು.
ಅಂತಹ ಒಂದು ಕಾಂಕ್ರೀಜ್ ತಳಿಯ ಕರುವನ್ನು ನಾನು ೪ ವರ್ಷದ ಕೆಳಗೆ ಮನೆಗೆ ತಂದೆ. ಈಗ ಅದು ಕರು ಹಾಕಿ ಒಂದು ವರ್ಷವಾಗಿದೆ. ಹೇಳಿದಷ್ಟು ಸೂಪರ್ ಅಲ್ಲದಿದ್ದರೂ ಗೋಮಾತೆ ಎನ್ನುವ ಭಾವನೆ ಈ ಜಾತಿಯ ಆಕಳಮೇಲೆ ಬರುತ್ತದೆ. ಹಾಲು ಕರೆಯುವಾಗ ಒಮ್ಮೊಮ್ಮೆ ಪಟಾರನೆ ಒದೆಯುತ್ತದೆ ಎನ್ನುವುದೊಂದನ್ನು ಬಿಟ್ಟರೆ, ಅದರ ತುಪ್ಪ ಸೂಪರ್ ಘಮಘಮ. ಮೂತ್ರ ಒಳ್ಳೆಯದಂತೆ.... ನಾನು ಕುಡಿದಿಲ್ಲ....!. ಈ ದನದ ಮೂತ್ರದಿಂದ ತಯಾರಿಸಿದ ಅರ್ಕ ಬಹಳಷ್ಟು ಖಾಯಿಲೆಯನ್ನು ದೂರ ಮಾಡುತ್ತದೆಯಂತೆ. ನಿತ್ಯ ಬೆಳಿಗ್ಗೆ ಒಂದು ಚಮಚ ಅರ್ಕ ಸೇವಿಸಿದರೆ ಬಿಪಿ ಮಾತ್ರೆ ಗೆ Go... ಅನ್ನಬಹುದಂತೆ. ಆದರೆ ದುರಂತವೆಂದರೆ ಹಳ್ಳಿಯಲ್ಲಿರುವ ಬಹುಪಾಲು ಹವ್ಯಕ ಬ್ರಾಹ್ಮಣರು ಬೆಳಿಗ್ಗೆ ಎದ್ದು ಕೊಟ್ಟಿಗೆಗೆ ಹೋದರೆ ಮೈಯೆಲ್ಲಾ ಗಬ್ಬು ವಾಸನೆ ಎಂಬ ತತ್ವಕ್ಕೆ ಇಳಿದಿರುವುದರಿಂದ ನಂದಿನಿ ಮಾತೆಗೆ ಹೆಚ್ಚು ಮಹತ್ವ ನೀಡಲಾಗಿದೆ. ಈ ಗೋ ಮಾತೆಗೆ ಮಠಕ್ಕೆ ಹೋದಾಗ ಶ್ರದ್ಧೆಯಿಂದ ಜರಿ ಸೀರೆ ಉಟ್ಟು ಪಿತಾಂಬರಿಯಾದ ಗಂಡನೊಟ್ಟಿಗೆ ೨೫೧ ರೂಪಾಯಿಕೊಟ್ಟು ಗೋಗ್ರಾಸ ಕೊಡುವವರ ಸಂಖ್ಯೆ ಹೆಚ್ಚಿದೆ. ಮನೆಯ ಮಾತೆಗೆ GO... ಮಾತೆ ಎನ್ನುವ ಕಾಲ ಇದು, ಇನ್ನು ದನಕ್ಕೆ ಗೋಮಾತೆ ಎನ್ನಲು ಸಾದ್ಯವೇ ಎನ್ನುವುದು ತೀರಾ ಕುಹಕವಾದರೂ ಸತ್ಯ.
ಅವೆಲ್ಲಾ ಇರಲಿ ಸೀತೆಯೆಂಬ ಹೆಸರಿನ ನಮ್ಮ ಮನೆಯಲ್ಲಿನ ಕಾಂಕ್ರಿಜ್ ಜಾತಿಯ ದನ ನಡೆಯುವ ಗತ್ತು, ಓಡಾಡುವ ಸ್ಟೈಲ್. ಅದರ ಕರು ಲಕ್ಷ್ಮಿ ಹಾರಾಡುವ ಪರಿ ಬಹಳ ಚಂದ. ತುಡು ಮಾಡುವುದಿಲ್ಲ. ಗತ್ತಿನಲ್ಲಿ ಹೋಗಿ ಗುಡ್ಡವನ್ನೆಲ್ಲಾ ಸುತ್ತಾಡಿ ಸಂಜೆ ಮನೆಗೆ ಬರುತ್ತದೆ. ದನಕಾಯುವ ಹುಡುಗನ ಅವಶ್ಯಕತೆ ಇಲ್ಲ. ಬಿಳಿ ಬಣ್ಣದ ಆಕಳು ಕ್ಯಾಲೆಂಡರಿನಲ್ಲಿ ಶ್ರೀಕೃಷ್ಣನ ಹಿಂದಿರುವ ಕಾಮಧೇನುವನ್ನು ನೆನಪಿಸುತ್ತದೆ.
ಈವರ್ಷ ಜೋಗ ನೋಡಲು ಬಂದಾಗ ನಮ್ಮಲ್ಲಿಗೆ ಬನ್ನಿ, ಗೋಮಾತೆಯ ದರ್ಶನ ಪಡೆದು ಪುನೀತರಾಗಿ. ಗೋಪೂಜೆ ಬೇಕಾದರೂ ಮಾಡಿ. ಗೋಗ್ರಾಸ ಬೇಕಾದರೂ ನೀಡಿ, ಎಲ್ಲಾ ಉಚಿತ ಹಾಗೂ ನೀವು ನಂಬಿದರೆ ಪುಣ್ಯ ಖಚಿತ. - 9448976959