Wednesday, August 20, 2008

ಕರಿ ಎತ್ತಾ ಕಾಳಿಂಗಾ ಬಿಳಿ ಎತ್ತ ಮಾಲಿಂಗ..ಹುಯ್




ರೆಡಿಯೋದಲ್ಲಿ ಕೃಷಿರಂಗ ಕಾರ್ಯಕ್ರಮ ಬರುವ ಮುನ್ನ ಹೀಗೊಂದು ಹಾಡು ಪ್ರಸಾರವಾಗುತ್ತಿತ್ತು ಮತ್ತು ಆಗುತ್ತಿದೆ. ಹಿಂದೆ ಈ ಹಾಡನ್ನು ಗುಣಗುಣಿಸದ ಕೃಷಿಕರಿಲ್ಲ. ಈಗ ಜಿಂಕೆ ಮರಿನಾ..-ಏನೊ ಒಂಥರಾ... ಮುಂತಾದ ಹಾಡು ಗುಣುಗುಣಿಸಿದಂತೆ ಅಂದು ಕರಿಯೆತ್ತಾ.. ಗುಣುಗುಣಿಸುತ್ತಿದ್ದರು. ಆನಂತರ ಬೆಂಕಿರೋಗಕ್ಕೆ ರೋಡೋಮಿಲ್ ಹೊಡೆಯಿರಿ, ಊಜಿ ನೊಣಕ್ಕೆ ಎಂಡೊಮಿಲ್ ಹೊಡೆಯಿರಿ, ಡಿಎಪಿ ಹಾಕಿ ಯೂರಿಯಾ ಚೆಲ್ಲಿ ಮುಂತಾಗಿ ಮುಂದುವರೆಯುತ್ತಿತ್ತು. ಅವೆಲ್ಲಾ ಇರಲಿ ಈ ಕರಿ ಹಾಗೂ ಬಿಳಿ ಎತ್ತಿನ ಕತೆಗೆ ಬರೋಣ. ನಾವು ನೀವು ದಿನನಿತ್ಯ ಊಟ ಮಾಡುವ ಬಿಳಿ ಅಕ್ಕಿಯ ಹಿಂದಿನ ಕರಿ ಕತೆ ಇಂದಿಗೂ ಬೇಸರದ ಸಂಗತಿಯೆ. ಅದೂ ಮಲೆನಾಡಿನಲ್ಲಿ ಭತ್ತ ಬೆಳೆಯುವ ಕೆಲಸವೆಂದರೆ ಅದರ ಪಾಡು ಯಾರಿಗೂ ಬೇಡ. ಮೊಣಕಾಲಿನ ಆಳ ಹುಗಿಯುವ ಕೆಸರಿನಲ್ಲಿ ಬೆನ್ನೆಲುಬು ಕಾಣುವ ಹೋರಿಗಳನ್ನು ನೇಗಿಲೆಗೆ ಕಟ್ಟಿಕೊಂಡು ಹೂಟಿ ಮಾಡುವ ಕೆಲಸದ ಕಷ್ಟ ಮಾಡಿದವರಿಗೆ ಗೊತ್ತು. ನಾಲ್ಕು ತಿಂಗಳುಗಳ ಕಾಲ ಹಗಲೂ ರಾತ್ರಿ ಹಕ್ಕಿ ಪ್ರಾಣಿ ಮಳೆಯಿಂದ ರಕ್ಷಿಸಿಕೊಂಡು ಒಂದು ಬೆಳೆ ತೆಗೆದರೆ ಆರು ತಿಂಗಳ ಊಟಕ್ಕಾಗುತ್ತದೆ. ಕೃಷಿಕನಿಗೆ ಆರು ತಿಂಗಳ ಊಟಕ್ಕಾದರೆ ಎತ್ತುಗಳಿಗೆ ಆತ ಎಲ್ಲಿಂದ ತಂದಾನು?. ಅವುಕ್ಕೆ ಗುಡ್ಡದಲ್ಲಿನ ಚುಪುರು ಚುಪುರು ಹುಲ್ಲೇ ಗತಿ. ಅದೇನು ಮನುಷ್ಯನ ಜತೆಗಿನ ಬಾಂಧವ್ಯವೋ ಆದರೂ ಅವುಗಳು ಅವನ ಜತೆಗಾರನಾಗಿವೆ. ಆಕಳುಗಳಿಗಾದರೆ ಗೋವೆಂಬ ಹಿರಿಮೆಯಿದೆ. ಹಾಲು ಕೊಡುತ್ತವೆಯಾದ್ದರಿಂದ ಅವುಕ್ಕೆ ಹಿಂಡಿ ಸಿಗುತ್ತದೆ. ಆದರೆ ಅದ್ಯಾವ ಜನ್ಮದಲ್ಲಿ ಎಂತಹ ಪಾಪ ಮಾಡಿ ಇವು ಹೋರಿಗಳಾಗಿ ಹುಟ್ಟಿವೆಯೋ ಹೂಟಿ ಮಾಡೂವ ಒಂದು ತಿಂಗಳು ಹತ್ತಿಹಿಂಡಿ ಕಂಡರೆ ಅವುಗಳ ಪುಣ್ಯ. ಗೋಮಾತೆಗಾದರೆ ಗೋಪೂಜೆಯಂತೆ, ಗೋಗ್ರಾಸವಂತೆ ಹೀಗೆ ಅಂತೆಕಂತೆಗಳ ಸಂತೆಯಿದೆ. ಅನ್ನ ನೀಡಲು ಅರ್ಲು ತುಳಿಯುವ ಹೋರಿಗಳಿಗಾದರೆ ಪೂಜೆಯೂ ಇಲ್ಲ ಗೀಜೆಯೂ ಇಲ್ಲ. ಆದರೂ ಅವು ಅರೆಹೊಟ್ಟೆಯಲ್ಲಿ ದ್ದು ಮನುಷ್ಯನಿಗೆ ಹೊಟ್ಟೆ ತುಂಬಿಸಲು ಹೋರಾಟ ಮಾಡುತ್ತಲೇ ಇವೆ. ಅವುಗಳ ಜತೆಗೆ ಬೆನ್ನಿಗೆ ಅಂಟಿಕೊಂಡಿರುವ ಚಕ್ಕಳ ಮೂಳೆಯ ರೈತನೂ ಇದ್ದಾನಲ್ಲ ಎಂಬ ಸಮಾಧಾನ ಅವುಕ್ಕೆ ಇರಬೇಕು. ಅವೇನೆ ಇರಲಿ ಹೀಗೆ ಯಾರ್ಯಾರೋ ಎಷ್ಟೆಷ್ಟೋ ಕಷ್ಟಪಟ್ಟು ನಮ್ಮ ಹೊಟ್ಟೆಗೆ ಹಿಟ್ಟು ತಲುಪಿಸುತ್ತಿದ್ದಾರಲ್ಲ ಅಂದು ಯೋಚಿಸಿದರೆ ಒಮ್ಮೆ ನಮ್ಮ ಒಣ ಠೇಂಕಾರವೆಲ್ಲಾ ಇಳಿದುಹೋಗುತ್ತದೆ.
ಕೊನೆಯದಾಗಿ: ದೇಹ ಪೋಷಣೆಯ ಹೊಣೆ ಹೊತ್ತವರು ಕಷ್ಟದಲ್ಲಿದ್ದಾರೆ ಮನಸ್ಸಿಗೆ ಮುದ ನೀಡುವ ಕೆಲಸ ಆಯ್ದುಕೊಂಡವರು ಸುಖದಲ್ಲಿ ತೇಲುತ್ತಿದಾರೆ ಇದೇಕೆ ಹೀಗೆ ? ಎಂದು ನಮ್ಮ ಆನಂದರಾಮ ಶಾಸ್ತ್ರಿಯವರನ್ನು ಕೇಳಿದೆ. ಅದಕ್ಕವರು ಜನ್ಮ ಜನ್ಮಾಂತರದ ಕತೆ ಹುಟ್ಟಿಕೊಂಡಿರುವುದು ಇಂತ ತರ್ಲೆ ಆಲೋಚನೆಯಿಂದಲೆ. ಕಡಿಮೆ ಯೋಚಿಸು ಹೆಚ್ಚು ಸುಖದಿಂದಿರು ಎಂದು ಸ್ವಲ್ಪ ಬಿರುಸಾಗಿ ಹೇಳಿದರು. ನಾನು ತೆಪ್ಪಗಾದೆ

Tuesday, August 19, 2008

ಗೋವಿಂದ ಭಟ್ಟರ ಕಾಮೆಂಟ್ ಮತ್ತು ಫೋಟೋ


ನಮ್ಮ ಗೋವಿಂದ (bhat59@gmail.com ) ಭಟ್ಟರು ಇಪ್ಪತ್ತೆರಡು ವರ್ಷದ ಹಿಂದೆ ಜಪಾನಿಗೆ ಬೇಟಿಕೊಟ್ಟಾಗಿನ ಪುಕವೂಕರ ಜತೆಗಿನ ಫೋಟೋ ಕಳುಹಿದಿದ್ದಾರೆ. ಜತೆಗೆ ನನ್ನ ಲೇಕನದಲ್ಲಿನ ಸಣ್ಣ ತಿದ್ದುಪಡಿಯೊಂದಿಗೆ. ಅವರ ಜಪಾನ್ ಬೇಟಿಯ ಪೂರಕ ಓದಿಗೆ ಲಾಗ್ ಇನ್ ಆಗಿ - http://halliyimda.blogspot.com/2008/08/blog-post_2698.html


ಪ್ರಿಯರೇ

ಇಪ್ಪತ್ತೆರಡು ವರ್ಷ ಹಿಂದೆ ನಾನು ಒಂದು ವಾರ ಫುಕೋಕರ ಅತಿಥಿಯಾಗಿದ್ದೆ. ಯಂತ್ರ ಚಾಲಿತ ಗರಗಸದಲ್ಲಿ ಪುಟ್ಟದೊಂದು ಅಪಘಾತವಾಗಿ ಬೆರಳಿನ ಹೊಲಿಗೆ ತೆಗೆಯುವ ವರೆಗೆ ಅಲ್ಲಿರಬೇಕಾಯಿತು. ನನ್ನ ನೆನಪಿನ ಪ್ರಕಾರ ಅವರ ಊರು ಶಿಕೋಕು ದ್ವೀಪದ ಮಟ್ಸುಯಾಮ ಪಟ್ಟಣದ ಹೊರವಲಯದಲ್ಲಿರುವ ಇಯೋ ಎಂಬ ಪುಟ್ಟ ಊರು. ಟೋಕಿಯೊವಿನಿಂದ ಒಂಬೈನೊರು ಕಿಲೋಮಿಟರ್ ದೂರ. ಸಾದ್ಯವಾದರೆ ಇನ್ನೆರಡು ದಿನದಲ್ಲಿ ಹೆಚ್ಚಿನ ವಿವರ ಬರೆಯುತ್ತೇನೆ.
ಫೋಟೊ ಅಲ್ಲಿ ಸೇರಿಸಲು ಸಾದ್ಯವಾಗಲಿಲ್ಲ. ಹಾಗೆ ನಿಮಗೆ ಕಳುಹಿಸುತ್ತಿದ್ದೇನೆ.
ನಿಮ್ಮ,

ಕೃಷಿ ಋಷಿಗೆ ಅಂತಿಮ ನಮನ


ಈ ಜಪಾನಿ ಅಜ್ಜನಿಗೆ ತೊಂಬತ್ತೈದು ವರ್ಷ. ಈತನ ಹೆಸರು ಪ್ರಪಂಚದಲ್ಲಿನ ಕೃಷಿಕರಿಗೆ ಚಿರಪರಿಚಿತ. ಈತನಿಗೆ ಭಾರತ ಸರ್ಕಾರವೂ ಕೂಡ ಬಿರುದುಗಳನ್ನು ಕೊಟ್ಟು ಸನ್ಮಾನಿಸಿದೆ. ಅಯ್ಯೋ ಇವರು ನಮಗೆ ಗೊತ್ತಿಲ್ಲದೇ ಏನು ಎಂದಿರಾ? ಹೌದು ನಿಮಗೆ ತಿಳಿದಿರುವಂತೆ ಈತನ ಹೆಸರು ಮುಸನುಬು ಪಕವೂಕ. ಸಹಜ ಕೃಷಿಯ ನೇತಾರ. ಕೃಷಿಯೆಂದರೆ ಕಡಿಮೆ ಕೆಲಸ ಮತ್ತು ಸಂತೃಪ್ತಿ ಜೀವನ ಎಂಬುದನ್ನು ಪ್ರಪಂಚಕ್ಕೆ ಪರಿಚಯಿಸಿಕೊಟ್ಟ ಮಹಾನುಭಾವನೀತ. ದಕ್ಷಿಣ ಜಪಾನ್ ನ ಶಿಕೋಕು ಎಂಬ ಹಳ್ಳಿಯ ಪಕವೂಕ ಒಭ್ಬ ವಿಜ್ಞಾನಿಯಾಗಿ ಜೀವನವನ್ನು ಆರಂಭಿಸಿ ನಂತರ ಅದು ತನ್ನ ಮನಸ್ಥಿತಿಗೆ ಒಗ್ಗದೆ ಇದ್ದುದರಿಂದ ವಾಪಾಸು ಹಳ್ಳಿಗೆ ಮರಳಿದ. ಹಳ್ಳಿಗೆ ಮರಳಿದಾಗ ಅವನ ಹಳ್ಳಿಯಲ್ಲಿ ರಾಸಾಯನಿಕ ಕೃಷಿಯ ಭರಾಟೆ. ಆದರೆ ಪಕವೂಕನಿಗೆ ಇದು ಒಗ್ಗದು. ಆಗಲೆ ಆತನ ಹುಡುಕಾಟ ಆರಂಭ. ಹಲವು ಪ್ರಯತ್ನಗಳ ವಿಪಲದನಂತರ ಆತ ಜಗತ್ತಿಗೆ ಸಹಜ ಕೃಷಿಯ ಪಾಠ ಹೇಳುವಂತಹ ವ್ಯಕ್ತಿಯಾದ. ಆತನ ಒಂದು ಹುಲ್ಲಿನ ಕ್ರಾಂತಿ ಜಗತ್ತಿಗೆ ಪರಿಚಯವಾಯಿತು. ಆತನ ಬಗ್ಗೆ ಹೆಚ್ಚು ನಾನಿಲ್ಲೆ ಬರೆಯುವುದಕಿಂತಲೂ ಆತನ ಪುಸ್ತಕ ಓದಿದರೇ ಅರ್ಥವಾದೀತು. ನೆಟ್ ನಲ್ಲಿಯೂ ಪುಟಗಟ್ಟಲೆ ಆತನ ಬಗ್ಗೆ ಮಾಹಿತಿ ದೊರೆಯುತ್ತದೆ. ಈ ಪುಕವೂಕರ ಸ್ಲೋಗನ್ ಸ್ಯಾಂಪಲ್ ಓದಿದರೂ ಕೃಷಿಕರಿಗೆ ಮನಸ್ಸು ಪ್ರಫುಲ್ಲವಾಗುತ್ತದೆ. ಕೇವಲ ಕೃಷಿಕನಾಗಿ ಅಲ್ಲದೆ ಫಿಲಾಸಫಿಯನ್ನು ಕೃಷಿಯಲ್ಲಿ ತೊಡಗಿಸಿದ ಮುಸನುಬುವ ವಾಕ್ಯಗಳೆ ಮನಮೋಹಕ.
"If we throw mother nature out the window, she comes back in the door with a pitchfork."
"When a decision is made to cope with the symptoms of a problem, it is generally assumed that the corrective measures will solve the problem itself. They seldom do. Engineers cannot seem to get this through their heads. These countermeasures are all based on too narrow a definition of what is wrong. Human measures and countermeasures proceed from limited scientific truth and judgment. A true solution can never come about in this way."
"Natural farming is not just for growing crops, it is for the cultivation and perfection of human beings.
"Giving up your ego is the shortest way to unification with nature."(http://www.permaculture.com/drupal/node/140) . ಇದು ಮುಸನುಬು ಪಕವೂಕನ ಅತ್ಯಂತ ಕಿರುಪರಿಚಯ.
ಇಂದು ಮಧ್ಯಾಹ್ನ ಬೆಂಗಳೂರಿನಿಂದ ನರಹರಿಬಾವ ಫೋನ್ ಮಾಡಿ ಒಂದು ಸುದ್ದಿ ಹೇಳಿದ . ಅದನ್ನು ಕೇಳಿ ನನಗೆ ಸಖೇದಾಶ್ಚ್ರಯವಾಯಿತು. ಖೇದಕ್ಕೆ ಕಾರಣ ನಮ್ಮ ಮುಸನೂಬು ಪಕವೂಕ ಎಂಬ ಈ ಅಜ್ಜ ಮೊನ್ನೆ ಇಹಲೋಕ ತ್ಯಜಿಸಿದ್ದಕ್ಕೆ. ಆಶ್ಚರ್ಯಕ್ಕೆ ಕಾರಣ ಕೃಷಿಪ್ರಧಾನ ದೇಶ ಎಂದು ಬೊಬ್ಬೆ ಹೊಡೆಯುವ ನಮ್ಮ ದೇಶದ ಮಾಧ್ಯಮಗಳಲ್ಲಿ ಇದೊಂದು ಸುದ್ದಿಯೇ ಇಲ್ಲದಿರುವುದಕ್ಕೆ. ಒಂದು ದೊಡ್ಡ ಲಕ್ಷ್ಮೀ ದಡಾಕಿ ಹೊಡೆದರೂ ವಾರಗಟ್ಟಲೆ ತಗಡು ಫೋಟೋ ಹಾಕಿ ತೌಡುಕುಟ್ಟುವ ನಮ್ಮ ವೃತ್ತ ಪತ್ರಿಕೆಗಳು , ಸಣ್ಣ ಪುಟ್ಟ ಘಟನೆಗಳಾದರೂ ಅಲ್ಲಿಗೆ ಪ್ರತಿನಿಧಿಗಳನ್ನು ಕಳುಹಿಸಿ "ಅಲ್ಲಿ ಇನ್ನೂ ದೊಡ್ಡ ಗಲಾಟೆ ಆಗಬಹುದಾ..?" ಎಂದು ಕಡ್ಡಿಗೀರುವ ಟಿ.ವಿ ಚಾನೆಲ್ ಗಳೂ ಇದೊಂದು ಸುದ್ಧಿಯನ್ನು ಪ್ರಕಟಿಸಲೇ ಇಲ್ಲ. ಗಲಾಟೆ ಇಲ್ಲದ ಗೋಕರ್ಣದಲ್ಲಿ "ಉದ್ವಿಗ್ನ" ಎಂದು ಅರ್ದ ಪುಟದ ಅಕ್ಷರಗಳಲ್ಲಿ ಮುದ್ರಿಸುವ ಪತ್ರಿಕೆಗೂ ಇದೊಂದು ಸುದ್ದಿ ಅಂತ ಆನ್ನಿಸಲೇ ಇಲ್ಲ. ಇರಲಿ ಇದನ್ನೆಲ್ಲಾ ತಿದ್ದಲು ನಾವ್ಯಾರು? ಅಬ್ದುಲ್ ಕಲಾಂ ಅದಕ್ಕೆ ಹೇಳಿದ್ದು: ಇಸ್ರೇಲ್ ದೇಶ ಕೃಷಿ ಹಾಗೂ ತಂತ್ರಜ್ಞಾನದಲ್ಲಿ ಮುಂದುವರೆಯುವುದಕ್ಕೂ ಮತ್ತು ಭಾರತ ಹೀಗಿರುವುದಕ್ಕೂ ಮಾಧ್ಯಗಳೇ ಕಾರಣ.
ತೊಂಬತ್ತೈದು ವರ್ಷ ಆರೋಗ್ಯಪೂರ್ಣವಾಗಿ ಯಾವ ಖಾಯಿಲೆಗೂ ತುತ್ತಾಗದೇ ಇಹ ತ್ಯಜಿಸಿದ ಕೃಷಿ ಋಷಿಗೆ ಇದು ಅಂತಿಮ ನಮನ. ದೂರದ ಜಪಾನ್ ನಲ್ಲಿ ಹುಟ್ಟಿ ಭಾರತದ ಇಂತಹ ಹಳ್ಳಿಯ ಮೂಲೆಗೆ ಆತನ ವಿಚಾರಧಾರೆ ತಲುಪಿಸಿದ ಎಂದರೆ ಆತ ಮಹಾತ್ಮನೇ.
ಕೊನೆಯಾದಾಗಿ: ಸುದೀರ್ಘಕಾಲ ಆರೋಗ್ಯವಾಗಿ ಬದುಕಿ ಯಾವಕಾಯಿಲೆಯೂ ಇಲ್ಲದೆ ಸಹಜವಾಗಿ ಇಹ ತ್ಯಜಿಸುವವರು ನಿಜವಾದ ಅಧ್ಯಾತ್ಮಿಕ ವ್ಯಕ್ತಿಗಳು. ಅವರ ಕ್ಷೇತ್ರ ಯಾವುದಾದರೂ ಅಲ್ಲಿ ಅವರ ಪ್ರಭೆ ಪ್ರಖರವಾಗಿರುತ್ತದೆ
ಅಂದು ಆನಂದರಾಮ ಶಾಶ್ತ್ರಿಗಳು ಹೇಳುತ್ತಿರುತ್ತಾರೆ. ಅಂತಹ ವ್ಯಕ್ತಿ ಈ ಮುಸನೂಬು ಪಕವೂಕ ಎನ್ನುವುದರಲ್ಲಿ ಎರಡು ಮಾತಿಲ್ಲ.

ವಿಧಿಯೆಂಬ ವಿಚಾರ ಅದೃಷ್ಟವೇ ವಿಷಯ

ಆತನ ಹೆಸರು ರಮೇಶ.ವಯಸ್ಸು ಮೂವತ್ತು. ತಾಳಗುಪ್ಪದಲ್ಲಿ ಮಾರುತಿ ಕಾರ್ ಮ್ಯಕಾನಿಕ್. ಕಷ್ಟಜೀವಿ,ಬುದ್ದಿವಂತ,ಹೃದಯವಂತ ಮುಂತಾದ ಸನ್ನಡತೆಯ ಗುಣಗಳು ಆತನವು. ತಾಳಗುಪ್ಪದಂತಹ ತಾಳಗುಪ್ಪದಲ್ಲಿ ಮಾರುತಿ ಕಾರ್ ಗ್ಯಾರೇಜ್ ನಡೆಸುವುದು ಅತ್ಯಂತ ಕಷ್ಟ. ಹಗಲಿಡೀ ಮೈಮುರಿದು ಕೆಲಸ ಮಾಡೀದರೂ ಉದ್ರಿ ಗಿರಾಕಿಯೇ ಜಾಸ್ತಿ. ಇಪ್ಪತ್ತು ರೂಪಾಯಿ ಚಾರ್ಜ್ ಮಾಡೀದರೆ ಹೆಚ್ಚು ಹತ್ತುರೂಪಾಯಿ ಎಂದರೆ ವರ್ಕ್ಔಟ್ ಆಗದು. ಆದರೂ ಆತನ ಕೆಲಸದ ಗುಣಮಟ್ಟಕ್ಕೆ ಹಾಗೂ ಪ್ರಾಮಾಣಿಕತೆಗೆ ಸಾಗರದಿಂದ ಜೋಗದವರೆಗಿನ ಮಾರುತಿ ಕಾರುಗಳು ರಿಪೇರಿಗೆಂದು ಬರುತ್ತಿದ್ದವು. ಮದ್ಯಮಮಟ್ಟದ ಜೀವನ ಸಾಗಿಸುತ್ತಿದ್ದ ರಮೇಶನಿಗೆ ಸರಿಯಾಗಿ ಐದು ವರ್ಷದ ಹಿಂದೆ ಅಗಸ್ಟ್ ಏಳನೇ ತಾರೀಖು ಮೋಟರ್ ಸೈಕಲ್ ಆಕ್ಸಿಡೆಂಟ್ ಆಯಿತು. ಆತ ಉತ್ತಮ ಡ್ರೈವರ್ ಕೂಡ, ಆದರೂ ಅಪಘಾತ ಆಯಿತು. ಅದಕ್ಕೆ ನಾವು ವಿಧಿಯೆನ್ನುವುದು ಆಲ್ಲವೇ? ಇರಲಿ. ಕಣ್ಣಿನ ಹುಬ್ಬಿನ ಬಳಿ ಆಳವಾದ ಗಾಯವಾಯಿತು.ಒಂದು ಕಣ್ಣು ಪೂರ್ತಿ ಕತ್ತಲೆ. ಶಿವಮೊಗ್ಗ ದ ಕಣ್ಣಿನ ವೈದ್ಯರ ಬಳಿ ತೋರಿಸಿದಾಗ ರೆಟಿನಾಕ್ಕೆ ಪೆಟ್ಟುಬಿದ್ದಿದೆ ಆಪರೇಷನ್ ಆಗಬೇಕು ಇಪ್ಪತ್ತೈದುಸಾವಿರ ರೂಪಾಯಿ ಆಗಬಹುದು ಎಂದರು. ರಮೇಶ ಆಯಿತು ನಾಳೆ ಬರುತ್ತೇನೆ ಎಂದು ನೂರಾಐವತ್ತು ರೂಪಾಯಿ ಕೊಟ್ಟು ಮನೆಗೆ ಬಂದು ಮಲಗಿದ. ನಾಳೆ ಹೋಗಲು ಇಪ್ಪತ್ತೈದು ಸಾವಿರ ರೂಪಾಯಿಯ ಕೊರತೆ ಇತ್ತು. ಹಾಗಾಗಿ ಕೆಲಸಮಾಡಲು ಒಂದು ಕಣ್ಣು ಸಾಕು ಎಂಬ ಹುಂಬತನದ ಗಟ್ಟಿ ತೀರ್ಮಾನಕ್ಕೆ ಬಂದು ಸುಮ್ಮನುಳಿದ. ಅವನ ಈ ತೀರ್ಮಾನ ಅದೃಷ್ಟದ್ದಾಗಿತ್ತು. ಇಪ್ಪತ್ತು ದಿವಸಗಳೊಳಗೆ ಕಣ್ಣು ಮಂಜು ಮಂಜಾಗಿ ಕಾಣಿಸತೊಡಗಿತು. ತಿಂಗಳಿನಲ್ಲಿ ಅದ್ಭುತ ಎಂಬಂತೆ ಕಣ್ಣು ಸರಿಯಾಯಿತು. ಈಗ ಜನರು ಅವನ ತೀರ್ಮಾನಕ್ಕೆ ಅದೃಷ್ಟ ಇತ್ತು ಬಚಾವಾದೆ ಎಂದರು. ಆತ ತನ್ನ ಕಾಯಕದಲ್ಲಿ ಮುಂದುವರೆದ. ಎರಡುವರ್ಷದ ನಂತರ ಮದುವೆಯಾಯಿತು. ಮತ್ತು ಸುಖೀ ಸಣ್ಣ ಸಂಸಾರ.
ಐದು ವರ್ಷದ ನಂತರ ಅದೇ ಆಗಸ್ಟ್ ತಿಂಗಳ ಏಳನೇ ತಾರೀಖಿನಂದು ಮತ್ತದೇ ವಿಧಿಬರಹ. ಟೆಸ್ಟ್ ಡ್ರೈವ್ ಗೆ ತೆಗೆದುಕೊಂಡು ಹೋಗುತ್ತಿದ್ದ ಮಾರುತಿ ಓಮ್ನಿಯ ಸ್ಟಿಯರಿಂಗ್ ರಿಪೇರಿಗೆಂದು ಎತ್ತಿದಾಗ ಮತ್ತದರ ಮೂಲ ಜಾಗಕ್ಕೆ ಕೂರಲಿಲ್ಲ. ಓಮ್ನಿ ಸೀದಾ ಗದ್ದೆಗೆ ಹಾರಿ ಮರಕ್ಕೆ ಬಡಿದು ನುಜ್ಜುಗುಜ್ಜಾಗಿ ನಿಂತಿತು. ಈ ಬಾರಿ ವಿಧಿ ಮೊಣಕಾಲಿನ ಚಿಪ್ಪಿಗೆ ಭಾರಿಸಿತ್ತು. ಅದೃಷ್ಟ ಜೀವ ಉಳಿಸಿತ್ತು. ಮೊಳ್ಳಂಡೆ ಚಿಪ್ಪು ಅತಿಯಾದ ನೋವಿನಿಂದ ಮಣಿಪಾಲಿನವರೆಗೆ ಕರೆದುಕೊಂಡು ಹೋಗಿ ಈಗಾಗಲೇ ಇಪ್ಪತ್ತು ಸಾವಿರ ಕೈಬಿಡಿಸಿದೆ. ಒಂದು ತಿಂಗಳು ಮಲಗಿದಲ್ಲಿಂದ ಅಲ್ಲಾಡುವಂತಿಲ್ಲ. ಮಾರುತಿ ಓಮ್ನಿಯ ಓನರ್ ಗೆ ನಲವತ್ತು ಸಾವಿರ ದಂಡ ಕಟ್ಟಬೇಕಿದೆ. ಹೀಗೆ ಒಂದರ ಹಿಂದೆ ಒಂದು ಎಂಬಂತೆ ಸುಮಾರು ಒಂದು ಲಕ್ಷ ರೂಪಾಯಿಯನ್ನು ವಿಧಿ ಬೇಡುತ್ತಿದೆ. ಅದೃಷ್ಟ ಇನ್ನೂ ಕಣ್ಣುಬಿಟ್ಟಿಲ್ಲ. ನಾನು ನನ್ನ ಕೈಲಾದ ಸಹಾಯವನ್ನು ಮಾಡುವ ತೀರ್ಮಾನ ಮಾಡೀದ್ದೇನೆ.
ಇರಲಿ ಇವೆಲ್ಲಾ ಇಲ್ಲಿ ಯಾಕೆ ಬರೆದೆನೆಂದರೆ ಮೊನ್ನೆ ನಮ್ಮ ಯಜ್ಞೇಶನ ಬ್ಲಾಗ್ ಓದುತ್ತಾ ಇದ್ದೆ. ಅಲ್ಲೂ ಹೀಗೆ ವ್ಯಕ್ತಿಯೊಬ್ಬನಿಗೆ ಖಾಯಿಲೆಯಿಂದ ಹೊರಬರಲು ಹಣದ ಅವಶ್ಯಕತೆ ಇತ್ತು. ಕೊಡುವ ಮನಸ್ಸು ಹಲವರಿಗಿತ್ತು. ಆದರೆ ಪಡೆಯುವವನನ್ನು ವಿಧಿ ಎಳೆದೊಯ್ದಿತ್ತು. ಇಲ್ಲಿ ಹಾಗಲ್ಲ ಪಡೆಯುವ ಅರ್ಹತೆಯುಳ್ಳ ಪ್ರಾಮಾಣಿಕ ವ್ಯಕ್ತಿ ಇದ್ದಾನೆ. ಮತ್ತು ನಿಮಗೆ ನಿಮ್ಮ ಅವಶ್ಯಕತೆಗೆ ಹೆಚ್ಚಾದ ಹಣ ಇದ್ದರೆ ಸಧ್ಯಕ್ಕೆ ಕೊಡಬಹುದು. ಹಾಗಂತ ನೀವು ಬೆವರು ಹರಿಸಿ ದುಡಿಯುವಾಗ ಅಥವಾ ನೀವು ಕಷ್ಟದಲ್ಲಿದ್ದಾಗ ನಿಮಗೆ ಯಾರೂ ಸಹಾಯ ಮಾಡಿಲ್ಲದಿರಬಹುದು. ಅಥವಾ ಯಾರಾದರೂ ಮಾಡಿರಲೂ ಬಹುದು. ನಮ್ಮ ರಮೇಶನಂತೂ ನಿಮಗೆ ನೇರವಾಗಿ ಸಹಾಯ ಮಾಡಿರಲು ಸಾದ್ಯವಿಲ್ಲ. ಅವೆಲ್ಲಾ ತರ್ಕವನ್ನು ಬದಿಗಿರಿಸಿ ನಿಮ್ಮಲ್ಲಿ ನಿಮ್ಮ ಎಲ್ಲಾ ಅವಶ್ಯಕತೆಗಳಿಗೂ ಮಿಕ್ಕಿ ದಾನಕ್ಕೆ ಅಂತ ಹಣವಿದ್ದರೆ ತಾತ್ಕಾಲಿಕ್ಕಾದರೂ ಕೊಡಿ. ಮುಂದೆ ಆತ ವಾಪಾಸುಕೊಡುತ್ತಾನೆ ಎನ್ನುವ ಭರವಸೆ ನನ್ನದು. ಕೊಡದಿದ್ದರೂ ಭಗವಂತ ಕೊಡುತ್ತಾನೆ ನಿಮಗೆ ಎನ್ನುವ ನಂಬಿಕೆ ಇನ್ನೂ ಒಳ್ಳೆಯದು. ಕಾರಣ ವ್ಯಕ್ತಿಗಳ ಮನಸ್ಥಿತಿ ಕಾಲಕಾಲಕ್ಕೂ ಬದಲಾಗಿ ಬಿಡಬಹುದಲ್ಲ. ಆದರೆ ಸಧ್ಯಕ್ಕೆ ನಮ್ಮ ರಮೆಶನೇಂಬ ಆ ವ್ಯಕ್ತಿಗೆ ಹೀಗೆ ಬ್ಲಾಗ್ ನಲ್ಲಿ ಬರೆಯುವುದೂ ಮುಜುಗರದ ವಿಚಾರ. ಆದರೆ ಆತನ ಸಂಪೂರ್ಣ ಅವಶ್ಯಕತೆ ಪೂರೈಸುವಷ್ಟು ತಾಕತ್ತು ನನ್ನ ಬಳಿ ಇಲ್ಲ. ಹಾಗಾಗಿ ಇದು ಅನಿವಾರ್ಯ. ಇದು ವಿಧಿಯ ವ್ಯಥೆಯಾದರೆ ಇನ್ನು ಮುಂದಿನದು ಆತನ ಅದೃಷ್ಟದ ಕತೆ. ಇಲ್ಲಿ ಸಂಪರ್ಕಿಸಿ shreeshum@gmail.com
ಕೊನೆಯದಾಗಿ: ಕಷ್ಟದಿಂದ ಅವರ ಅನ್ನ ದುಡಿದು ಹಾಗೂ ಪ್ರಾಮಾಣಿಕತೆಯಿಂದ ಬದುಕುತ್ತಿರುವವರಿಗೆ ಏಕೆ ಹೀಗಾಗುತ್ತದೆ? ಎಂದು ಆನಂದರಾಮಾ ಶಾಸ್ತ್ರಿಗಳನ್ನು ಕೇಳಿದೆ.
ಕಷ್ಟ ಸುಖ ಅವರವರ ಭಾವಕ್ಕೆ, ಜೀವ ಉಳಿದದ್ದು ಸುಖ ಎಂದು ಕೊಂಡರೆ ಹಣ ಮತ್ತೆ ಗಳಿಸಬಹುದು. ಎಂದರವರು

Sunday, August 17, 2008

ಗೋಕರ್ಣಂತು ಮಹಾಕಾಶಿ.....



...ವಿಶ್ವನಾಥೋ ಮಹಾಬಲ: , ಕೋಟಿತೀರ್ಥೇಶು ಗಂಗಾಯಾಂ ಸಮುದ್ರಂ ಅಧಿಕಂ ಬಲಂ. ಎಂಬ ಶ್ಲೋಕವನ್ನು ಬಹುಪಾಲು ಜನ ಕೇಳಿರುತ್ತೀರಿ. ಗೋಕರ್ಣ ಸಮುದ್ರ ಹೊಂದಿದ್ದಕ್ಕಾಗಿ ಕಾಶಿಗಿಂತ ಒಂದು ತೂಕ ಜಾಸ್ತಿಯಂತೆ. ಇರಲಿ ಅದು ಭಕ್ತಿಯಿರುವ ಭಕ್ತರ ಕತೆಯಾಯಿತು. ನನಗೆ ಇದೊಂದು ಶ್ಲೋಕ ನೆನಪಾದಾಗಲೆಲ್ಲ ಮಾಚಭಟ್ಟರು ನೆನಪಾಗುತ್ತಾರೆ. ಆಜಾನುಬಾಹು ಎಂದು ವ್ಯಕ್ತಿಗಳನ್ನು ವರ್ಣಿಸುವುದಿದೆ. ಆ ವರ್ಣನೆಗೆ ತಕ್ಕುದಾದ ವ್ಯಕ್ತಿ ಈ ಮಾಚಭಟ್ಟರು.
ಘಟ್ಟದ ಮೇಲಿನ ಹಲವಾರು ಹವ್ಯಕರ ಮನೆಗಳಿಗೆ ಅವರವರ ಪುರೋಹಿತರು ಗೋಕರ್ಣದ ಮಹಾಬಲೇಶ್ವರನಿಗೆ ಪೂಜೆ ಸಲ್ಲಿಸಿ ದೂರ್ವೆ ಪ್ರಸಾದ ಕುಂಕುಮ ಹಾಗೂ ಕೊಬ್ಬರಿ ಪ್ರಸಾದ ಬಗಲ ಗಂಟಿನಲ್ಲಿ ಹಾಕಿಕೊಂಡು ಅಡಿಕೆ ಕೊಯ್ಲಿನ ನಂತರ ಭೇಟಿಕೊಡುವ ಪದ್ದತಿ ಹಿಂದೆ ಚಾಲ್ತಿಯಲ್ಲಿತ್ತು. ಅದಕ್ಕೆ ಸರ್ತೆ ಎನ್ನುತ್ತಿದ್ದರು. ಹಾಗೆ ಗೋಕರ್ಣದ ಪ್ರಸಾದ ತಂದ ಪುರೋಹಿತರಿಗೆ ನಮಸ್ಕಾರ ಮಾಡಿ ಅವರು ಕಾಯಿ ಕುಂಕುಮ ಪ್ರಸಾದ ಇಟ್ಟುಕೊಡುವ ಬಟ್ಟಲ ತುಂಬಾ ನಾವು ಬೆಳದ ಅಡಿಕೆ ನೀಡಿದರೆ ಅದು ದೇವರಿಗೆ ತಲುಪಿತು ಅಂಬ ಧನ್ಯತಾ ಭಾವ. ಆ ಪುರೋಹಿತರಾದರೂ ಅಷ್ಟೆ ಎಲ್ಲರ ಮನೆಗೆ ಹೋಗುವ ಜಾಯಮಾನದವರಲ್ಲ. ಮಹಾ ಸ್ವಾಭಿಮಾನಿಗಳು. ತಮ್ಮ ಶಿಷ್ಯ ವರ್ಗದ ಮನೆಗೆ ಮಾತ್ರಾ ಅವರ ಭೇಟಿ. ಅಂಥಹಾ ಒಬ್ಬ ಪುರೋಹಿತರು ನಾನು ಈಗ ಹೇಳಹೊರಟಿರುವ ಮಹಾಬಲೆಶ್ವರ ಭಟ್ಟರು ಅಥವಾ ಅಚ್ಚಿಮೆಚ್ಚಿನ ಶಾರ್ಟಾಗಿ ಮಾಚಜ್ಜ ಅಥವಾ ಮಾಚಭಟ್ಟರು.
ಚಳಿ ಚಳಿಯ ಕೊನೆಕೊಯ್ಲಿನ ದಿವಸದಲ್ಲಿ ಮಾಚಭಟ್ಟರು ಬಂದರೆಂದರೆ ನಮಗೆಲ್ಲಾ ಹಬ್ಬ, ಸರ್ತೆಗೆ ಬರುವ ರಾಮ ಭಟ್ಟರು ಗಣಪ ಭಟ್ಟರು ಮೊದಲಾದವರಿಗಿಂತಲೂ ಮಾಚ ಭಟ್ಟರು ಮಕ್ಕಳ ಪಾಲಿಗೆ ಕಾಶಿಯೆದುರು ಗೋಕರ್ಣ ಹೆಚ್ಚಾದಂತೆ ಒಂದು ಹೆಚ್ಚಿನ ತೂಕ. ಮಿಕ್ಕವರು ಕೊಬ್ಬರಿ ಕಲ್ಲುಸಕ್ಕರೆ ನೀಡಿ ಆಶೀರ್ವಾದ ಮಾಡಿದರೆ ಮಾಚಭಟ್ಟರು ಮಕ್ಕಳಿಗೆ ಇಷ್ಟವಾಗುವ ಓಂದಲ್ಲಾ ಒಂದೂರಲ್ಲಿ ಒಬ್ಬನಿದ್ದನು ಎಂಬ ಸ್ವಾರಸ್ಯಕರವಾದ ಕತೆ ಹೇಳುತ್ತಿದ್ದರು. ಕಾಶಿಯ ಬಗ್ಗೆ ಗೋಕರ್ಣದ ಬಗ್ಗೆ ಪುರಾಣದಲ್ಲಿನ ಮಹತ್ವ ಸೇರಿಸಿ ಕತೆ ಹೇಳುತ್ತಿದ್ದರು. ಅವರೆ ಹೊಸೆದ ಮಾಯಮಂತ್ರದ ಕತೆ ಕೇಳಲು ಕುಳಿತರೆ ನಾವು ಪ್ರಪಂಚ ಮರೆಯುತ್ತಿದ್ದೆವು. ಕತೆಯ ನಡುವೆ ರಾಕ್ಷಸ ಹ್ರೋಂ ಪಟ್ ಎಂದು ಮಾಯವಾಗುವ ಸಂದರ್ಭದಲ್ಲಿ ದೊಡ್ಡದಾಗಿ ಕಿರುಚಿ ಮಕ್ಕಳು ಬೆಚ್ಚಿಬೀಳುವಂತ ಶಭ್ದ ಹೊರಡಿಸುತ್ತಿದ್ದರು. ಮಹಾಲಕ್ಷ್ಮೀ ಮಹಾಕಾಳಿ ಮಹಾಸರಸ್ವತಿ ಮೂರೆ ಸಾಕು ಎಂದುತಿನ್ನುವ ದೋಸೆ ಲೆಕ್ಕವನ್ನು ದೇವರಿಗೆ ಹೋಲಿಸುತ್ತಿದ್ದರು. ಕ್ಯಾ...ಕ್ ಎಂದು ಕತೆಯ ಮಧ್ಯೆ ನಶ್ಯದಿಂದ ಉಂಟಾದ ಸುಂಬಳವನ್ನು ನಶ್ಯಕ್ಕಿಂತ ಕಪ್ಪಗಿರುವ ಬಿಳಿಯ..! ಪಂಚೆಗೆ ವರೆಸಿ ಅದೂ ಕತೆಯದೇ ಒಂದು ಭಾಗ ಎಂಬಂತೆ ನಂಬಿಸಿ ಹುಡುಗರಿಗೆ ತಮ್ಮ ಸಿಂಬಳದಿಂದ ಉಂಟಾಗುವ ಹೇಸಿಗೆಯನ್ನು ಮರೆಸುತ್ತಿದ್ದರು. ಗೋಕರ್ಣದ ಕೋಟಿ ತೀರ್ಥದಲ್ಲಿ ಆಚೆಯಿಂದ ಈಚೆ ಹತ್ತಾರು ಬಾರಿ ಈಜಿದವರ ಕತೆ ಗಂಟೆಗಟ್ಟಲೆ ಮುಳುಗಿದವರ ಕತೆ, ರಾವಣನ ಆತ್ಮಲಿಂಗದ ಕತೆ ಹೀಗೆ ನೂರಾರು. ನಮಗೆ ಬಾಲ್ಯದಲ್ಲಿ ಗೋಕರ್ಣವೆಂದರೆ ಸ್ವರ್ಗ ಎಂಬ ಕಲ್ಪನೆಯನ್ನು ಕೊಟ್ಟು ಅವರು ಸ್ವರ್ಗ ಸೇರಿದರು.
ನಾನು ಮಾಚಭಟ್ಟರು ಸ್ವರ್ಗಸ್ಥರಾದಮೇಲೆ ಗೋಕರ್ಣಕ್ಕೆ ಹೋದೆ. ಮಾಚಭಟ್ಟರ ಸ್ವರ್ಗದ ಕನಪಿನಲ್ಲಿದ್ದ ನನಗೆ ಗೋಕರ್ಣವೆಂದರೆ ನರಕ ಎಂದು ಅರಿವಾಯಿತು. ಅಲ್ಲಿಯ ಕೋಟಿ ತೀರ್ಥದಲ್ಲಿ ಸ್ನಾನ ಮಾಡಿದರೆ ಪುಣ್ಯ ಬರುವುದು ನಂತರದ ಮಾತಾಯಿತು ರೋಗ ಬರದಿದ್ದರೆ ಸಾಕು ಎಂಬಂತಿತ್ತು. ಒಂದರ ಕುಂಡೆಯಲ್ಲಿ ಒಂದರಂತಿರುವ ನೂರಾರು ಮನೆಗಳು, ಎಲ್ಲಿ ನೋಡಿದರಲ್ಲಿ ಗಲೀಜು, ನಮ್ಮಲ್ಲಿ ಪೂಜೆ ಮಾಡಿಸಿ ಎಂದು ವರಾತ ಹಚ್ಚುವ ಪುರೋಹಿತರು. ರಾವಣನಿಂದ ಭೂಮಿಯ ಒಳಗೆ ಹೋದ ಆತ್ಮಲಿಂಗವನ್ನು ಕಿತ್ತು ಮನೆಗೆ ಒಯ್ಯುತ್ತಾರೇನೋ ಎಂಬ ಭ್ರಮೆ ಹುಟ್ಟಿಸುವ ಲಿಂಗದ ತಲೆ ಮುಟ್ಟಲು ಮುರಿಬೀಳುವ ಭಕ್ತಾದಿಗಳು. ಅಸ್ತಿ ವಿಸರ್ಜನೆಗೆ ಮೀಸಲಾಗಿರುವ ದೇವಸ್ಥಾಅದ ಹಿಂದಿನ ಕೊಳ... ಅಬ್ಬಬ್ಬಾ ಇದು ಅಕ್ಷರಶ: ನರಕ ಎಂದು ಅನ್ನಿಸಿತು. ಪಾಪ ಮಾಚ ಭಟ್ಟರು ತಾವು ನರಕದಲ್ಲಿ ಬದುಕಿ ನಮ್ಮ ಬಾಲ್ಯವನ್ನು ಸ್ವರ್ಗದ ನೆನಪನ್ನಾಗಿಸಿದ್ದರು.
ಈಗ ಸರ್ತೆ ಭಟ್ಟರು ಮಾಯವಾಗಿದ್ದಾರೆ. ಘಟ್ಟದ ಮೇಲಿನ ಹವ್ಯಕರು ಸರ್ತೆಗೆ ಬರುವ ಪುರೋಹಿತರನ್ನು ಒಳ್ಳೆಯ ರೀತಿಯಲ್ಲಿ ನಡೆಯಿಸಿಕೊಳ್ಳುವುದಿಲ್ಲ ಎಂಬುದು ಅವರು ಮೇಲೆ ಬಾರದಿರಲು ಒಂದು ಕಾರಣವಂತೆ. ಅದೇ ರೀತಿ ಪುರೋಹಿತರುಗಳ ಮಕ್ಕಳು ಒಳ್ಳೋಳ್ಳೆ ಉದ್ಯೋಗ ಹಿಡಿದುಕೊಂಡು ಬಾಂಬೆ-ದುಬೈ ಸೇರಿರುವುದು ಸರ್ತೆ ಭಟ್ಟರು ಬಾರದಿರುವುದಕ್ಕೆ ಕಾರಣ. ಅಲ್ಲೊಭ್ಬರು ಇಲ್ಲೊಬ್ಬರು ಬರುತ್ತಾರಾದರೂ ಅವರುಗಳು ಘಟ್ಟದ ಕೆಳಗಿನ ಗೋಕರ್ಣಕ್ಕೂ ಹಾಗೂ ಘಟ್ಟದ ಮೇಲಿನ ಜನಕ್ಕೂ ಕೊಂಡಿಯಾಗಿ ಕೆಲಸ ಮಾಡುವ ತಾಳ್ಮೆ ಇಲ್ಲ. ಆದರೆ ಗೋಕರ್ಣದ ಸೌಭಾಗ್ಯವೆಂಬಂತೆ ನಮ್ಮ ಘನ ಸರ್ಕಾರ ಒಂದು ಉತ್ತಮ ಕೆಲಸ ಮಾಡಿದೆ. ಗೋಕರ್ಣದ ಆಡಳಿತವನ್ನು ಶ್ರೀ ರಾಮಚಂದ್ರಾ ಪುರ ಮಠಕ್ಕೆ ವಹಿಸಿದೆ. ಇಷ್ಟು ವರ್ಷ ಗೋಕರ್ಣ ಮಂಡಲಾಧೀಶ್ವರರುಎ ಎಂಬ ಹೆಸರನ್ನಷ್ಟೇ ಹೊಂದಿದ್ದ ಶ್ರೀಗಳಿಗೆ ಈಗ ನಿಜವಾದ ಮೂಲಮನೆಯ ಜವಾಬ್ದಾರಿ ದೊರೆತಿದೆ. ಧಾರ್ಮಿಕ ಸ್ಥಳಗಳ ನಿರ್ವಹಣೆ ಧಾರ್ಮಿಕ ವ್ಯಕ್ತಿಗಳೇ ಮಾಡಿದರೆ ಅಭಿವೃದ್ಧಿ ಸಾಧ್ಯ ಎಂಬುದು ಸರ್ಕಾರಕ್ಕೆ ಅರಿವಾಗಿದೆ. ಘಟ್ಟದ ಮೇಲೆ ಯೇ ಏನೂ ಗೋಕರ್ಣಕ್ಕೂ ಮಿಕ್ಕ ಪ್ರಪಂಚಕ್ಕೂ ಕೊಂಡಿಯ ಕೆಲಸ ಶ್ರೀಗಳು ಮಾಡಬಲ್ಲರು.
ಕೊನೆಯದಾಗಿ: ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳು ನಮ್ಮ ಮಾಚ ಭಟ್ಟರು ಹೇಳಿದ ಸ್ವರ್ಗದಂತಿದ್ದ ಗೋಕರ್ಣವನ್ನು ಮತ್ತೆ ಚಾಲ್ತಿಗೆ ತರುತ್ತಾರೆ ಎನ್ನುವುದರಲ್ಲಿ ಸಂಶಯವಿಲ್ಲ ಎಂಬುದು ಆನಂದರಾಮ ಶಾಸ್ರಿಗಳ ಅಭಿಮತ. ಹಾಗೆಯೇ ಆಗಲಿ.