Saturday, September 6, 2008

ಹುಡುಕ ಹೊರಟ ನಾನು ಹುಡಿಕಿಕೊಂಡ ಅಪ್ಪಯ್ಯ


ಹಾ ಆರಂಭದಲ್ಲಿಯೇ ಹೇಳುತ್ತೇನೆ. ಈಗ ನಾನು ಹೇಳ ಹೊರಟಿರುವುದು ಏನೇನೋ ಇದೆ. ಅದನ್ನೆಲ್ಲಾ ನಿಮ್ಮಲ್ಲಿಯೇ ಬಚ್ಚಿಟ್ಟುಕೊಳ್ಳಬೇಕು, ಕಾರಣ ಅದು ನೀವೂ ಆಗಿರಬಹುದು. ನಾನೂ ಆಗಿರಬಹುದು.
ನನಗೆ ವಯಸ್ಸು ನಲವತ್ತೊಂದು, ಪಿಯುಸಿ ವಿದ್ಯಾರ್ಹತೆ ಕನ್ನಡ ಓದಲು ಬರೆಯಲು ಹಿಂದಿ ಮಾತನಾಡಲು ಇಂಗ್ಲೀಷ್ ಓದಲು ಬರುತ್ತದೆ. ಮಲೆನಾಡಿನ ಹಳ್ಳಿಯ ಒಂಟಿಮನೆಯಲ್ಲಿ ವಾಸ. ವರ್ಷಕ್ಕೆ ಹತ್ತು ಕ್ವಿಂಟಾಲ್ ಅಡಿಕೆ ಬೆಳೆಯಲ್ಲಿ ಜೀವನ. ವೆನಿಲಾಕ್ಕೆ ಒಳ್ಳೆ ದರ ಬಂದಿದ್ದಾಗ ಕೊಂಡುಕೊಂಡ ಕಂಪ್ಯೂಟರ್,ತೊಂಬತ್ತೊಂದನೆ ಮಾಡಲ್ ಓಮ್ನಿ, ಓಲಂಪಸ್ ಕ್ಯಾಮೆರಾ, ವಾಷಿಂಗ್ ಮಷಿನ್, ಪ್ರಿಜ್, ಹೀಗೆ ಏನೇನೋ ಇದೆ. ಈಗ ವೆನಿಲಾ ವೈರಸ್ ಖಾಯಿಲೆಯಿಂದ ಸಂಪೂರ್ಣ ನಾಶವಾದ ನಂತರ ಅವೆಲ್ಲಾ ದಿನಕಳೆದಂತೆ ಮೂಲೆ ಸೇರುತ್ತಾ ಇದೆ. ಇರಲಿ ಅದೂ ಒಂದು ಕಾಲ. ಈಗ ನನ್ನ ಬುದ್ದಿಯ ಕತೆ ನೋಡೋಣ. ಹುಡುಕ ಹೊರಡುವುದು ಚಟ, ಸಿಗಲಿ ಸಿಗದಿರಲಿ ಅರ್ದಕ್ಕೆ ಕೈಬಿಡುವುದು ಕೆಟ್ಟ ಚಟ. ಇತ್ತ ದೇವರು ದಿಂಡಿರು ಎಂದು ಮಡಿ ಉಟ್ಟು ಕೂರುವುದರಲ್ಲಿ ಅರ್ಥ ಇಲ್ಲ ಅಂತ ಅನ್ನಿಸುತ್ತದೆ, ಅವೆಲ್ಲಾ ಸುಳ್ಳು ಅಂತ ಅನ್ನಿಸುತ್ತದೆ. ಆದರೆ ಸತ್ಯ ಯಾವುದು ಎಂದು ಗೊತ್ತಿಲ್ಲ. ಪ್ರತಿ ನಿತ್ಯ ಬೆಳಿಗೆ ಎದ್ದು ಮಿಂದು ಮಡಿಯನ್ನುಟ್ಟು ಅದೇ ನಾದಶಬ್ಧ ಮಹೀಂ ಗಂಟಾಂ ಸರ್ವ ವಿಘ್ನಾಪಹಾರೀಣೆ, ಪೂಜಯೇ ... ಎಂದು ಮಂತ್ರ ಹೇಳುತ್ತಾ ಗಂಧ ತೆಯ್ಯುತ್ತಾ ಮರದ ದೇವರ ಪೀಠಕ್ಕೆ ಅಲಂಕಾರ ಮಾಡುತ್ತಾ, ಕಪ್ಪಗಿರುವ ಕಲ್ಲನ್ನು ಸಾಲಿಗ್ರಾಮ ಎಂದುಕೊಂಡು ತಿಕ್ಕಿ ತಿಕ್ಕಿ ತೊಳೆದು ಆಕಳು ಹಾಲನ್ನು ಅಭಿಷೇಕ ಮಾಡಿ ತೆಯ್ದ ಗಂಧ ಹಚ್ಚಿ ಗಣಗಣ ಗಂಟೆ ಭಾರಿಸಿ ಕೊನೆಯದಾಗಿ ಶರೀರೆ ಜರ್ಜರೇಭೂತೆ ವ್ಯಾಧಿಗ್ರಸ್ತೆ ಕಲೇವರೆ ಔಷಧಿ ಜಾಹ್ನವಿತೋಯಂ.... ಮಂತ್ರ ಹೇಳಿ ಸುವಾಸನಾಭರಿತ ತೀರ್ಥವನ್ನು ತೆಗೆದುಕೊಂಡು ಪ್ರಸಾದ ಕಣ್ಣಿಗೊತ್ತಿಕೊಳ್ಳುವುದರಲ್ಲಿ ಏನಿದೆ..? ಇವೆಲ್ಲಾ ಮಾಡದೇ ಸಹಜವಾಗಿ ನಯವಿನಯ ಕರುಣೆ ಯನ್ನು ವ್ಯಕ್ತಪಡಿಸುತ್ತಾ ಮನೆಯವರೊಂದಿಗೆ ನಗುನಗುತ್ತಾ ನಾಲ್ಕು ಮಾತನಾಡಿ ಜನರಿಗೆ ನಮ್ಮ ಕೈಲಾದಷ್ಟು ಉಪಕಾರ ಮಾಡಬೇಕೆಂದು ತೀರ್ಮಾನಿಸುವ ಯಡವಟ್ಟು ಸ್ವಭಾವ ನನ್ನದು. ಹೀಗೆ ಉಪಕಾರ ಮಾಡಲು ಹೋಗಿ ಹಾದಿಯಮೇಲೆ... ಹೆಗಲಮೇಲೆ ಏರಿಸಿಕೊಂಡ ಕತೆಯೇ ಹಲವು. ನನ್ನ ಬಳಿ ದೇವರ ಕುರಿತಾದ ನೂರಾರು ಪ್ರಶ್ನೆಗಳಿವೆ. ದೇವರಪೂಜೆಯೇ ಜೀವನವಲ್ಲ, ಜೀವನದಲ್ಲಿ ದೇವರನ್ನು ಪೂಜಿಸಬೇಕು. ಕರ್ತವ್ಯವೇ ದೇವರು, ಗಣಪತಿಯೇ ದೇವರು ಎಂದಾಗಿದ್ದರೆ ಇದೇ ವಿಗ್ರಹವನ್ನು ಹಿಂದೂ ಧರ್ಮ ಗೊತ್ತಿಲ್ಲದ ದಕ್ಷಿಣ ಆಮೆರಿಕಾದ ವ್ಯಕ್ತಿಗೆ ತೋರಿಸಿದರೆ ಆತ ದಿಸ್ ಇಸ್ ಜಸ್ಟ್ ಲೈಕ್ ಎ ಎಲಿಫೆಂಟ್ ಅಂದುಬಿಡುತ್ತಾನೆ. ಆತ ಅಪ್ಪಿತಪ್ಪಿಯೂ ಓ ಮೈ ಗಾಡ್ ಎಂದು ಕೈಮುಗಿಯುವುದಿಲ್ಲ. ಕಾಪಾಡಪ್ಪಾ ವಿನಾಯಕ ಅನ್ನುವುದಿಲ್ಲ. ನಮ್ಮಂತಯೇ ಮನುಷ್ಯನಾದ ಮನುಷ್ಯನೇ ಹೀಗೆಂದಮೇಲೆ ನಮ್ಮ ಅಚ್ಚುಮೆಚ್ಚಿನ ಗಣಪ ಸರ್ವಾಂತರ್ಯಾಮಿಯಲ್ಲ ಎಂದಾಯಿತು. ಅಯ್ಯೋ ಅಮೆರಿಕಾದ ಕತೆ ಹಾಗಿರಲಿ ಚುಪುರು ಚುಪುರು ಗಡ್ಡದ ಪಾತ್ರೆಗೆ ಕಲಾಯಿ ಹಾಕುವ ಬುಡಾನ್ ಸಾಬಿ " ನಿಮ್ದೂಕಿ ಮೂರ್ತಿ ಪೂಜೆ ಮಾಡ್ತಾರೆ, ದೇವ್ರು ಹಂಗೆಲ್ಲಾ ಮೂರ್ತೀಲಿ ಇರ್ತಾರೆ ಅನ್ನೋದು ಸುಳ್ಳು, ನಮ್ದೂಕಿ ಅಲ್ಲಾನೇ ದೇವ್ರು" ಅಂತ ಹೇಳ್ತಾನೆ ಅಂದ್ಮೇಲೆ, ನಾವು ನಂಬಿದ ಕಾರಣಕ್ಕಾಗಿ ಆತ ದೇವರು ನಂಬದಿದ್ದರೆ ದೇವರು ಅಲ್ಲ ಅಂಬ ವಾದಕ್ಕೆ ಇಳಿಯುತ್ತೇನೆ. ಒಮ್ಮೆ ಒಬ್ಬ ಪುರೋಹಿತರ ಬಳಿ ವೃಥಾ ವಾದಕ್ಕೆ ಇಳಿದಿದ್ದೆ. ವಡೆಭಾಗದ ಮನೆಗಳಲ್ಲಿ ನಮಗೆ ಊಟಕ್ಕೆ ಆಗುವತನಕ ಕೆಲ್ಸ ಇರುವುದಿಲ್ಲ( ಇಲ್ಲಿ ನಮ್ಮ ಹಳ್ಳಿಗಳಲ್ಲಿ ಯಾವಾಗ ಕೆಲ್ಸ ಇದೆ ಅಂತ ನೀವು ಕೇಳಬಹುದು.. ಇರಲಿ ನೀವು ಹಾಗೆಲ್ಲ ತಲೆಹರಟೆ ಮಾಡುವುದಿಲ್ಲ ಅಂತ ನನಗೆ ಗೊತ್ತು) 'ಭಟ್ರೆ ಒಂದು ನೀವು ಸುಳ್ಳು ಇಲ್ಲ ವೇದ ಮಂತ್ರ ಸುಳ್ಳು". ಹೀಗೆ ಉದ್ಧಟತನದ ವಾಕ್ಯಕ್ಕೆ ಪುರೋಹಿತರು ಸ್ವಲ್ಪ ಕಂಗಾಲಾದರು. ಯಾಕೆ? ಎಂದರು. ನೋಡಿ ವೇದ ಮಂತ್ರ ಮಾತೃದೇವೋ ಭವ ಎನ್ನುತ್ತದೆ ನೀವು ಪುರೋಹಿತರುಗಳು ಮನೆಯಲ್ಲಿ ಅಮ್ಮನಿಗೆ ನಿಕ್ಕಾಲಾಣೆ ಗೌರವ ಕೊಡುವುದಿಲ್ಲ. ಹೆಂಡತಿಯ ಮಾತು ಕಟ್ಟಿಕೊಂಡು ಕುಣಿಯುತ್ತೀರಿ. ಹಾಗಂತ ವರ್ಷಾಂತದ ಮನೆಯಲ್ಲಿ ಶ್ರವಣರಾಗಿ ನಿಮ್ಮನ್ನು ಕರೆದಾಗ ಅಲ್ಲಿ ಭಾಷಣ ಮಾಡುತ್ತಾ ತಾಯಿಯನ್ನು ದೇವರಂತೆ ಕಾಣಬೇಕು ಎನ್ನುತ್ತೀರಿ. ಈಗ ಹೇಳಿ ಯಾವುದು ಸತ್ಯ. ನನ್ನ ಒಡ್ಡತನದ ಪ್ರಶ್ನೆಗೆ ಪುರೋಹಿತರಿಗೆ ಸಿಕ್ಕಾಪಟ್ಟೆ ಸಿಟ್ಟು ಬಂತು. ಆದರೆ ತೋರ್ಪಡಿಸುವಂತಿಲ್ಲ. ಅವರೂ ಸ್ವತ: ಮನೆಯಲ್ಲಿ ಹಾಗೆಯೇ. ಅಂತೂ ಇಂತೂ ಅಳೆದು ಹೊಯ್ದು "ಇದಕ್ಕೆ ಇವತ್ತು ಬೇಡ ಇನ್ನೊಂದು ದಿನ ಉತ್ತರ ಕೊಡುತ್ತೇನೆ " ಎಂದರು. ನಾನು ಮರೆತೆ ಆದರೆ ಪಾಪ ಅವರು ಮರೆಯಲಿಲ್ಲ. ಮತ್ತೊಂದು ದಿನ ಒಬ್ಬರೇ ಸಿಕ್ಕಾಗ "ಅಪ್ಪಿ ವೇದ ಸುಳ್ಳಲ್ಲ ನಾವೇ ಸುಳ್ಳು. ಇತ್ತ ದರೆ ಅತ್ತ ಪುಲಿ ಹಾಗಾಗಿ ಆಚಾರ ಹೇಳಾಕೆ ಬಾನಾ ಉಣ್ಣಾಕೆ ಅಂತಾಗಿದೆ ನಮ್ಮ ಸ್ಥಿತಿ. ಪುಸ್ತಕದ ನೀತಿಯೇ ಬೇರೆ ವಾಸ್ತವ ವೇ ಬೇರೆ" ಎಂದು ಜಾರಿಕೊಂಡರು. ಇಂತಹ ಯಡವಟ್ಟು ಮಾರ್ಗವನ್ನು ಆಯ್ಕೆ ಮಾಡಿಕೊಂಡ ನಾನು ಗೊಂದಲದ ಗೂಡಾಗಿ ಹೋಗುತ್ತಾ ಇದ್ದೇನೆ ಅಂತ ಅನ್ನಿಸತೊಡಗಿತು. ಆವಾಗ ಆನಂದರಾಮ ಶಾಸ್ತ್ರಿಗಳು ಸಹಾಯಕ್ಕೆ ಬಂದರು. ಅವರು ನೂರಕ್ಕೆ ನೂರು ಯೋಗ್ಯತೆಯುಳ್ಳ ಜನ. ನಿತ್ಯ ಒಂದು ಗಂಟೆ ಅವರ ಸಹವಾಸ ಮಿಕ್ಕ ಸಮಯದಲ್ಲಿ ನಾನು ನಾನೇ....
ಆದರೆ ಅಪ್ಪಯ್ಯ ಹಾಗಲ್ಲ
ವಯಸ್ಸು ಎಂಬತ್ತು ನಿತ್ಯ ಮೂರು ತಾಸು ಪೂಜೆ ಯಾವ ಹಬ್ಬ ಹರಿದಿನ ಹೇಗೆ ಆಗಬೇಕೋ ಹಾಗೆಯೇ. ಒಂದಿಷ್ಟು ನಂಬಿಕೆಗಳು ಗಟ್ಟಿ. ಇಂದಿಗೋ ಜೀವನೋತ್ಸಾಹದ ಬುಗ್ಗೆ. ನಮ್ಮ ಪೆಜತ್ತಾಯರು ಬರೆದ ಕಾಗದದ ದೋಣಿ ಎಂಬ ಜೀವನಾನುಭವದ ಪುಸ್ತಕವನ್ನು ಮೂರೇ ದಿವಸದಲ್ಲಿ ಓದಿ ಮುಗಿಸುವ ಉತ್ಸಾಹ. ಯಾರಿಗೂ ಹೆದರಿದ ಆಸಾಮಿಯೇ ಅಲ್ಲ. ಹುಡುಕಾಟದಲ್ಲಿ ಸತ್ಯ ಸಿಕ್ಕಿದೆಯೋ ಇಲ್ಲವೋ ಎಂಬ ಗೊಂದಲ ಇಲ್ಲ ಸತ್ಯ ಸಿಕ್ಕಿದೆ, ದೇವರು ಇದ್ದಾನೆ ಎಂಬ ಮತ್ತು ಇವೆಲ್ಲಾ ಅವನದೇ ಆಟ ಎಂಬ ಅಚಲವಾದ ನಂಬಿಕೆ. ನಾನು ನಾನೇ.... (ಮುಂದುವರೆಯುತ್ತದೆ)
ಕೊನೆಯದಾಗಿ: ಶಾಸ್ತ್ರಿಗಳೇ ನಮ್ಮ ಸಿಂಧುವಿಗೆ ಗೊಂದಲ ಪುರದಿಂದ ಹೊರಗೆ ಬರಲು ದಾರಿ ತೋರಿಸಬೇಕಂತೆ ಎಂದು ಕೇಳಿದೆ. ಇದು ಆಗಾದ ಪ್ರಕೃತಿ ಒಮ್ಮೊಮ್ಮೆ ನಾವು ಏನನ್ನಾದರೂ ಸಾಧಿಸಬೇಕು ಅಂತ ಅನ್ನಿಸುತ್ತದೆ ಮತ್ತೊಮ್ಮೆ ಇಲ್ಲ ನನ್ನಿಂದ ಏನೂ ಆಗದು ಅಂತ ಅನ್ನಿಸುತ್ತದೆ. ಆದರೆ ಈ ಭೂಮಿಯ ಎಲ್ಲಾ ಜೀವಿಗಳಲ್ಲಿಯೂ ಮಾನವ ನಿರ್ಮಿತ ಜಗತ್ ಎಂಬ ವಾಕ್ಯಕ್ಕೆ ಮಹತ್ವ ಹೆಚ್ಚು. ಆದರೂ ಪ್ರಕೃತಿಯ ಕೂಸಾದ ಮಾನವ ಮರ ನೆಟ್ಟರೂ ಮರ ಕಡಿದರೂ, ಪ್ಲಾಸ್ಟಿಕ್ ಎಸೆದರೂ, ಎಸೆಯದಿದ್ದರೂ, ವಿದ್ಯುತ್ ಬಳಸಿದರೂ ಬಳಸದಿದ್ದರೂ, ಗಣಪತಿಯ ನಂಬಿದರೂ ನಂಬದಿದ್ದರೂ..ಆ ಆಗಾಧ ಶಕ್ತಿಯ ಪ್ರಕೃತಿಯ ಅಣತಿಯಂತೆಯೇ ಮಾಡಿರುವುದು ಹಾಗೂ ಮಾಡುವುದು ಅನಿವಾರ್ಯ. ಎಂದರು. ತೀರಾ ಅರ್ಥವಾಗದ ಉತ್ತರ ಅಂತ ನನಗನ್ನಿಸಿತು. ಒಮ್ಮೊಮ್ಮೆ ಹಾಗೆಯೇ ಅವರು ಎಂದು ಸುಮ್ಮನುಳಿದೆ.
ಕೆಳಗಿನ ಟಿಪ್ಸ್ ಓದಲು ಆಗದು ಎಂದರೆ ಅಷ್ಟೇ ಸಾಲನ್ನು ಸೆಲೆಕ್ಟ್ ಮಾಡಿ ಆವಾಗ ನೋಡಿ.
ಟಿಪ್ಸ್: ವಿಶಾಲ್ ಎಕ್ಸ್ ಪೋರ್ಟ್ ಎಂಬ ಪೆನ್ನಿ ಸ್ಟಾಕ್ ದರ ಕೇವಲ ಎರಡು ರೂಪಾಯಿಗಿಂತ ಕಡಿಮೆಯಂತೆ. ಇರಲಿ ಸಾವಿರ ರೂಪಾಯಿ ಹಾಕಿ ಒಂದೈನೂರು ಶೇರ್ ಕೊಳ್ಳಿ. ವರ್ಷ ಕಾಯಿರಿ ಹತ್ತು ರೂಪಾಯಿಗೆ ಹೋಯಿತಾ ನಿಮಗೆ ಬಂಪರ್ ಲಾಟರಿ ಕಂಪನಿ ಮುಳುಗಿತಾ ನೀವ್ ಲಾಟರಿಯಂತೂ ಅಲ್ಲ.

Wednesday, September 3, 2008

ಜೈ ಗಣೇಶ


"ಸರಿಯಪ್ಪಾ ಗಣೇಶ ನಂಬಿದವರ ಪಾಲಿನ ಕಲ್ಪತರು ನೀನೆ ಅನ್ನೋದು ಎಲ್ಲರಿಗೂ ಗೊತ್ತು ಆದರೆ ನಂಬದವರಪಾಲಿಗೂ ಕಲ್ಪತರು ನೀನು ಅಂತ ಬಹಳ ಜನಕ್ಕೆ ಗೊತ್ತಿಲ್ಲ. ಹುಲುಮನುಜರು ನಿನ್ನನ್ನು ನಂಬಲಿ ಬಿಡಲಿ ಇದೊಂದು ಸಣ್ಣ ಸಾಲಿನಿಂದ ನಿನ್ನನ್ನು ಸಣ್ಣವನನ್ನಾಗಿಸಿಬಿಟ್ಟಿದ್ದಾರೆ. ಇರಲಿ ಹೀಗಂತ ಮನುಷ್ಯರೇ ಹಾಡನ್ನು ಹಾಡಿದ್ದಾರೆ ಹೊರತು ನೀನಲ್ಲವಲ್ಲ ಅಂತ ನನಗೆ ಸಮಾಧಾನ. ಈ ಮನುಷ್ಯರು ತಾವೇ ಸೃಷ್ಟಿಸಿದ ದೇವರನ್ನು ತಮ್ಮ ಲೆವಲ್ಲಿಗೆ ಇಳಿಸಿಬಿಡುತ್ತಾರೆ. ನಂಬಿದವರು ನಂಬದವರು ಎಂದು ವಿಭಾಗ ಮಾಡಲು ಗಣೇಶನೇನು ರಾಜಕಾರಣಿಯಂತೆ ಓಟು ಹಾಕಿದವರು ಓಟು ಹಾಕದವರು ಎಂದು ವಿಭಾಗಿಸುವ ಮಟ್ಟಕ್ಕೆ ಇಳಿದು ಹೋದನಾ?. ಬಿಡಿ ಸೋಮಿ ಸ್ವಲ್ಪ ಕತ್ತೆತ್ತಿ ... ಇನ್ನೇನು ಮುಗಿದೇ ಹೋತು"
ಇದೇನು ಸ್ವಲ್ಪ ವಿಚಿತ್ರ ವಾಕ್ಯಗಳಿದೆಯಲ್ಲ ಅಂತ ಯೋಚಿಸುತ್ತಿದ್ದೀರಾ ಇದು ನಮ್ಮ ವಿಠಲನ ಡೈಲಾಗ್. ವಿಠಲ ಯಾರು ಎಂದಿರಾ?. ಅವನೊಬ್ಬ ನಾಪಿತ. ನಮ್ಮೂರ ಬಳಿಯ ಆಡುಕಟ್ಟೆಯಲ್ಲಿ ಸಂಚಾರಿ ಸಲೂನ್. ಮನೆಮನೆಗೂ ತೆರಳಿ ಅಂಗಳದಲ್ಲಿ ತುದಿಕಾಲದಲ್ಲಿ ಕುಳಿತು ತಲೆಯನ್ನು ತನ್ನೆರಡು ತೊಡೆಯ ಸಂದಿಯಲ್ಲಿ ಹಾಕಿಟ್ಟುಕೊಂಡು ಸರಿ ಸುಮಾರು ಎರಡು ತಾಸು ಇಂತಹ ವಿಚಾರಗಳನ್ನು ಅರುಹುವ ಅತಿ ಬುದ್ದಿವಂತ. ಕಳೆದ ವರ್ಷ ಆತ ಇಹಲೋಕ ತ್ಯಜಿಸಿದ. ಆದರೆ ಆತ ನನಗೆ ಚೌತಿ ಹಬ್ಬ ಬಂದಾಗಲೆಲ್ಲ ಗಣೇಶನಿಗಿಂತ ಮೊದಲು ನೆನಪಿಗೆ ಬರುತ್ತಾನೆ. ಪ್ರಾಮಾಣಿಕತೆಗೆ ಮತ್ತೊಂದು ಉದಾಹರಣೆಯಂತೆ ಬಾಳಿದ ವಿಠಲ ಚಿಂತಕರ ಪಾಲಿಗೆ ಒಳ್ಳೆಯ ವ್ಯಕ್ತಿ. ಆತನ ಪ್ರಶ್ನೆಗಳು ಆತನ ತರ್ಕದ ರೀತಿ ಬಹಳ ಮೇಲ್ಮಟ್ಟದ್ದಾಗಿತ್ತು.
ಒಮ್ಮೆ ಆತ ನಮ್ಮೂರ ಪುರೋಹಿತರ ಬೋಡನ್ನು ಹೊಡೆಯುತ್ತಿದ್ದಾಗ ಓಂದು ಪ್ರಶ್ನೆ ಎಸೆದ. ಪಾಪ ಆ ಜಪ ಈ ಜಪ ಆ ಪೂಜೆ ಈ ಪೂಜೆ ಎಂದು ರೊಕ್ಕವನ್ನಷ್ಟೆ ಮಾಡುತ್ತಿದ್ದ ಹಾಗೂ ಮಂಡೆಯಿರುವುದು ಬೋಳಿಸಿಕೊಳ್ಳಲಷ್ಟೇ ಹಾಗೂ ವೃತ್ತಿ ಇರುವುದು ಹಣಮಾಡಲಷ್ಟೇ ಎಂಬಂತಿದ್ದ ಪುರೋಹಿತರಿಗೆ ಈ ವಿಠಲ ಜಿಜ್ಞಾಸೆ ತಲೆಹರಟೆಯಾಗಿ ಕಂಡು ಕೆಂಡಾಮಂಡಲವಾಗಿದ್ದರು. ಆತ ಕೇಳಿದ್ದು ಎಂದರೆ " ಅಲ್ಲಾ ಸೋಮಿ ಈ ಗಣಪತಿ ಮುಖದ ವಿಚಾರದಲ್ಲಿ ನಂಗೊಂದು ಡೌಟು, ಗೌರಿ ಸ್ನಾನ ಮಾಡಿದ್ದು ಅದರಿಂದ ಮಣ್ಣು ಉದುರಿದ್ದು ನಂತರ ಗಣಪತಿ ಮಾಡಿದ್ದು ತುಸು ಹೆಚ್ಚು ಅಂತ ಅನ್ನಿಸಿದರೂ ನಂಬಬಹುದು. ಆದರೆ ಮುಖದ ವಿಷಯದಲ್ಲಿ ಮಾತ್ರಾ ಯಡವಟ್ಟಾಗಿದೆ. ಶಿವ ಗಣೇಶನ ರುಂಡ ಕತ್ತರಿಸಿದ ಅದಕ್ಕೆ ಅಲ್ಲೆಲ್ಲೋ ಉತ್ತರ ದಿಕ್ಕಿಗೆ ತಲೆ ಹಾಕಿ ಮಲಗಿದ್ದ ಆನೆಯ ತಲೆ ತಂದು ಜೋಡಿಸಿದರು ಅನ್ನೋ ಕತೆ. ಅಷ್ಟೆಲ್ಲಾ ತ್ರಾಸು ತೆಗೆದುಕೊಂಡು ಆನೆ ರುಂಡ ಜೋಡಿಸುವುದರ ಬದಲು ಅಲ್ಲೆ ಬಿದ್ದಿದ್ದ ಗಣೇಶನದೇ ರುಂಡವನ್ನು ಮುಂಡಕ್ಕೆ ಜೋಡಿಸಬಹುದಿತ್ತು. ಇರಲಿ ಬೇಡ ಬಿಡಿ ನೆಲಕ್ಕೆ ಬಿದ್ದ ಹೊಡೆತಕ್ಕೆ ರುಂಡಕ್ಕೆ ಮಣ್ಣು ಮಸಿ ಮೆತ್ತಿಕೊಂಡಿರಬಹುದು ಆದರೆ ನಾಲ್ಕು ಕಾಲಿನ ಪ್ರಾಣಿ ಆನೆಯ ತಲೆಯನ್ನು ತಂದು ಎರಡು ಕಾಲಿನ ಗಣೇಶನಿಗೆ ಜೋಡಿಸಿದಾಗ ಈಗ ಗಣೇಶ ಇದ್ದಾನಲ್ಲ ಹಾಗೆ ಮುಖ ಇರಲು ಸಾದ್ಯವೇ ಇಲ್ಲ. ಮುಖ ಆಕಾಶದತ್ತ ನೋಡುತ್ತಾ ಇರಬೇಕಿತ್ತು. ಅದು ಹೇಗೆ ನಾಲ್ಕು ಕಾಲಿನ ಪ್ರಾಣಿಯ ತಲೆ ಎರಡು ಕಾಲಿನ ಗಣೇಶನಿಗೆ ಇಟ್ಟರು.? ಒಮ್ಮೆ ಆಲೋಚಿಸಿ ಉತ್ತರ ಹೇಳ್ತೀರಾ " ಅಂದ. ಪಾಪ ಪುರೋಹಿತರಿಗೆ ಇಲ್ಲಿಯವರೆಗೆ ಮ್ರುತ್ಯುಂಜಯ ಜಪಕ್ಕೆ ಎಷ್ಟು , ರುದ್ರ ಹವನಕ್ಕೆ ಎಷ್ಟು ಖರ್ಚಾಗುತ್ತದೆ ಮುಂತಾದ ಪ್ರಶ್ನೆ ಕೇಳುತ್ತಿದ್ದರು. ಅವರು ಅದಕ್ಕೆ ತಕ್ಕುದಾದ ಉತ್ತರ ನೀಡುತ್ತಿದ್ದರು. ಈತ ಅದೂ ಯಕಶ್ಚಿತ್ ನಾಪಿತ ದರ್ಮಸೂಕ್ಷ್ಮ ವಿಚಾರ ಕೇಳಿದ್ದಾನೆ, ಉತ್ತರ ಗೊತ್ತಿಲ್ಲ ಎಂದರೆ ಮರ್ಯಾದೆ ಹರಾಜು. ಗೊತ್ತಿದೆ ಎಂದರೆ ಏನಂತ ಹೇಳುವುದು. ಗಣಪತಿ ಮುಖ ನೇರವಾಗಿ ನಮ್ಮನ್ನೆ ನೋಡುತ್ತಿದೆ. ಆನೆಯ ಮುಖ ಜೋಡಿಸಿದ್ದಾದರೆ ಆಕಾಶ ನೋಡಬೇಕಿತ್ತು, ಏನಪ್ಪಾ ಹೇಳುವುದು. ಎನ್ನುತ್ತಾ ಶಾಸ್ತ್ರಕಾರರನ್ನು ಬೈಯ್ದುಕೊಂಡರು. ಆದರೂ ಕೊನೆಗೆ ಅದೆಲ್ಲಾ ನಂಬಿಕೆ ಕಣಯ್ಯಾ ಎಂದು ಹಾರಿಕೆ ಉತ್ತರ ನೀಡಿದರು. ಆದರೆ ಬಡಪೆಟ್ಟಿಗೆ ವಿಠಲ ಬಿಡಲೊಲ್ಲ. "ಅಯ್ಯಾ ಅದೇಗೆ ನಂಬಿಕೆ ಆಗುತ್ತದೆ, ಗಣಪತಿ ವರ ಕೊಡುತ್ತಾನೆ ಎಂದರೆ ಅದು ನಂಬಿಕೆಯಾಯಿತು. ಇದು ಹಾಗಲ್ಲ, ತಪ್ಪಾಗಿದೆ". ಎಂದ. ಪುರೋಹಿತರಿಗೆ ಸಿಟ್ಟೊಂದು ಬಿಟ್ಟರೆ ಮತ್ತೇನು ಹೊಳೆಯಲಿಲ್ಲ. ನಂತರ ವಿಠಲನೇ ಮುಂದುವರೆಸಿ: ಸೋಮಿ ಆನೆ ತಲೆ ತಂದು ಗಣೇಶನಿಗೆ ಜೋಡಿಸಿದಾಗ ಮುಖ ಆಕಾಶ ನೋಡುತ್ತಿತ್ತು, ಆನಂತರ ರಾವಣನ ಆತ್ಮಲಿಂಗದ ಗಲಾಟೆಯಾಯಿತಲ್ಲ ಆವಾಗ ರಾವಣ ಸಿಟಗೊಂಡು ಗಣಪತಿಯ ತಲೆಮೇಲೆ ಗುದ್ದಿದನಲ್ಲ ಆವಾಗ ಆಕಾಶ ನೊಡುತ್ತಿದ್ದ ಮುಖ ನಮ್ಮತ್ತ ನೋಡುವಂತಾಯಿತು, ಎಂದು ಕತೆ ಸೇರಿಸಿ " ಎಂದ. ಪುರೋಹಿತರಿಗೆ ಸುಸ್ತಾಗಿತ್ತು. ಹ್ಞೂ ಎಂದರು,
ಹೀಗೆ ಅದ್ಬುತ ಪ್ರಶ್ನಾವಳಿಯ ಸಂಗ್ರಹ ಹೊಂದಿದ್ದ ವಿಠಲ ಇಂದು ಇಲ್ಲ. ಆದರೆ ಅವನ ಇಂತಹ ಹಲವಾರು ಕತೆಗಳು ಉಳಿದಿವೆ. ಇರಲಿ ಇಂದು ಗಣೇಶನ ಹಬ್ಬ ವಿಠಲ ಅಲ್ಲಿ ಸ್ವರ್ಗದಲ್ಲಿ ಇದ್ದಾನೆ ಅಲ್ಲಿದ್ದ ಗಣೇಶ ಪೂಜೆ ಮಾಡಿಸಿಕೊಂಡು ಹೋಗಲು ಇಲ್ಲಿಗೆ ಬಂದಿದ್ದಾನೆ ಗಣೇಶನ ಮುಖಾಂತರ ವಿಠಲನಿಗೆ ನಮ್ಮದೊಂದು ಜೈ ಕಾರ ಕಳುಹಿಸೋಣ.
ನಿಮಗೂ ಹ್ಯಾಪಿ ಗಣೇಶ.
ಕೊನೆಯದಾಗಿ: ಚೌತಿ ದಿವಸ ಚಿತ್ರ ವಿಚಿತ್ರ ನಾಲಿಗೆ ಹೊರಳದಂತಹ ಹೆಸರಿರುವ ಸಹಸ್ರನಾಮ ಓದುವುದು ಕಷ್ಟ . ಹಾಗಾಗಿ ಸಾವಿರ ಬೇರೆ ಬೇರೆ ಹೆಸರಿನಿಂದ ಗಣೇಶನನ್ನು ಭಜಿಸಿ ಸಹಸ್ರ ನಾಮ ಓದುವುದರ ಬದಲು ಸಾವಿರ ಬಾರಿ ಗಣೇಶ ಗಣೇಶ ಅಂತ ಹೇಳಿದರೆ ಪುಣ್ಯ ಬರುವುದಿಲ್ಲವೇ. ಎಂದು ಆನಂದರಾಮ ಶಾಶ್ತ್ರಿಗಳನ್ನು ಕೇಳಿದೆ. ಅದಕ್ಕವರು ಅಯ್ಯಾ ದೊರೆ ನೀನೆ ಸ್ವಲ್ಪ ಮೇಲು ಮೊನ್ನೆ ಮತ್ತೊಬ್ಬ ಭಕ್ತ ಸ್ವಾಮಿ ಗಣೇಶ ಹೋಲ್ ಸ್ಕ್ವೇರ್ ಅಂತ ಹತ್ತು ಸಾರಿ ಹೇಳಿದರೆ ಸಹಸ್ರ ನಾಮ ಆದಂತಲ್ಲವೇ ಅಂದಿದ್ದ. ಎಂದರು ,