Friday, September 19, 2008

ಆಚಾರವಿಲ್ಲದ

ಗೋಕರ್ಣದಲ್ಲಿ ಸಪ್ಟೆಂಬರ್ ಹದಿನೈದರಂದು ಸರಿ ಸುಮಾರು ಮೂವತ್ತು ಸಾವಿರ ಜನರು ಸೇರಿದ್ದ ಮಹಾಸಂಕಲ್ಪ ಕಾರ್ಯಕ್ರಮ ನಡೆಯಿತು. ದೂರದರ್ಶನದ ಚಂದನ ವಾಹಿನಿ ನೇರಪ್ರಸಾರ ಮಾಡಿದ್ದರೆ ಸುವರ್ಣ ಸಹಿತ ಈಟಿವಿ ಮೊದಲಾದವುಗಳು ತಮ್ಮ ವಾರ್ತೆಯಲ್ಲಿ ಪ್ರಸಾರ ಮಾಡಿದವು. ಆದರೆ ರಾಮಚಂದ್ರಾಪುರ ಮಠದ ವಿರುದ್ದ ಹಾದಿಯಲ್ಲಿಹೋಗುವವರು ಮಾತನಾಡಿದರೂ ಅವರ ಮುಖಕ್ಕೆ ಮೈಕ್ ಹಿಡಿದು " ಅಲ್ಲಾ ನೀವು ವಿರೋಧ ಮಾಡ್ತೀರಾ ಅಂತ" ಎಂದು ತಮಗೆ ಬೇಕಾದ ರೀತಿಯಲ್ಲಿ ಉತ್ತರ ಹೊರಡಿಸಲು ಯತ್ನಿಸುವ ಉತ್ತಮ ಸಮಾಜಕ್ಕಾಗಿ ಎಂಬ ಸ್ಲೋಗನ್ ನೊಡನೆ ಮೂಡಿಬರುವ ಟಿವಿ ನೈನ್ ಚಾನಲ್ ಗೆ ಇದೊಂದು ಕಾರ್ಯಕ್ರಮ ಅಂತ ಅನ್ನಿಸದೇ ಇದ್ದುದು ಪರಮಾಶ್ಚರ್ಯ. ಅದೇ ದಿನ ಸ್ವರ್ಣವಲ್ಲಿಯಲ್ಲಿ ನಡೆದ ವಿರೋಧಿ ಸಮಾರಂಭ ಕಾಂಜಿಪೀಂಜಿಗಳಿಗೂ ಮೈಕ್ ತಗುಲಿಸುತ್ತಿದ್ದ ಪರಿ ಆಶ್ಚ್ರಯ ಹುಟ್ಟಿಸುವಂತಿತ್ತು. ಪೇಜಾವರ ಶ್ರೀಗಳ ಬಳಿ ಫೋನ್ ಮಾಡಿ ಅವರಿಂದ ಹೇಗಾದರೂ ಮಾಡಿ ನಾನು ರಾಮಚಂದ್ರಾ ಪುರಮಠದ ವಿರೋಧಿ ಅಂತ ಹೇಳಿಸಬೇಕೆಂಬ ರಂ,ಭಾ ನ ಹರ ಸಾಹಸ ನೋಡಿದರೆ ಇದು ಮಾಹಿತಿ ನೀಡುವ ಚಾನಲ್ಲೋ ಅಥವಾ ಕಡ್ದಿಗೀರುವ ಚಾನಲ್ಲೋ ಎಂಬುದನ್ನ ಯಾವುದೇ ಅನುಮಾನ ಇಲ್ಲದೇ ಕ್ಷಣಮಾತ್ರದಲ್ಲಿ ಹೇಳಿಬಿಡಬಹುದಿತ್ತು.
ಆಶ್ಚ್ರರ್ಯವಾಗುವುದು ಇಲ್ಲೆ. ನಮ್ಮ ದೇಶದಲ್ಲಿ ಯಾವುದೇ ಕೆಲಸ ಹಿಂದುವಿನಿಂದ ನಡೆದರೂ ಅದಕ್ಕೆ ಪ್ರಭಲವಾಗಿ ಅರ್ಥವಿಲ್ಲದೆ ವಿರೋದ ವ್ಯಕ್ತಪಡಿಸುವ ಒಂದು ಗುಂಪು ಇದೆ. ಅವರು ಅಪ್ಪಿತಪ್ಪಿಯೂ ಬಾಂಬ್ ಬ್ಲಾಸ್ಟ್ ಮಾಡಿ ಮಾರಣ ಹೋಮ ಮಾಡಿರುವವರ ಕುರಿತು ಮಾತನಾಡುವುದಿಲ್ಲ. ವಕ್ಫ್ ಮಂಡಳಿ ಕುರಿತು ಮಾತನಾಡುವುದಿಲ್ಲ. ಮತಾಂತರದ ಬಗ್ಗೆ ಚಕಾರ ವೆತ್ತುವುದಿಲ್ಲ. ಅವರೆಲ್ಲಾ ಸಾಚಾಗಳು ಹಿಂದೂ ಮಠಾಧೀಶರು ಅನ್ಯಾಯ ಮಾಡುವ ಜನ ಎಂದು ಲಂಕೇಶ್ ಪತ್ರಿಕೆಯಿಂದ ಪ್ರಾರಂಭ ಗೊಂಡು ಹಾಯ್ ಬೆಂಗಳೂರು ಸೇರಿದಂತೆ ಟಿ.ವಿ. ನೈನ್ ವರೆಗೂ ಮುಂದುವರೆಯುತ್ತದೆ. ಹಾಯ್ ನ ಬೆಳೆಗೆರೆ ರಾಮಚಂದ್ರಾ ಪುರಮಠದ ಶ್ರೀಗಳಿಗೆ ಬಳಸಿದ ಬಾಷೆ ಮುಲ್ಲಾಗಳಿಗೆ ಬಳಸಲಾಗುತ್ತದಯೇ?. ಆದರೆ ಅದೇ ಹಿಂದೂಗಳಿಗೆ ಇವರದ್ದು ಕೀಳುಮಟ್ಟದ ಭಾಷೆ. ಅರ್ತವಿಲ್ಲದ ಕುತರ್ಕ. ಮಾದ್ಯಮಗಳೆಂದರೆ ನಿಷ್ಪಕ್ಷಪಾತವಾಗಿರಬೇಕು. ಧೈರ್ಯದ ಮಾತನ್ನಾಡಿದರೆ ಎಲ್ಲರಿಗೂ ಮಾತನ್ನಾಡಬೇಕು. ಸಾಧು ಸಜ್ಜನರು ಸಿಕ್ಕಿದರೆ ರಂಭಾ ,ರಬೆ, ಗೌಲಂ, ಅಶ್ರೀ, ಮುಂತಾದ ನೂರಾರು ಜನರು ತಮ್ಮ ಲೇಖನಿ ಹರಿಬಿಡುತ್ತಾರೆ. ಉತ್ತರನ ಪೌರುಷ ಒಲೆಯ ಮುಂದೆ ಎಂದಂತೆ ಇವರ ಕತೆ.
ಇದೇಕೆ ಹೀಗೆ ಎಂದೇ ಅರ್ಥವಾಗದು. ಬಹುಶಃ ಇವರಿಗೆಲ್ಲಾ ಹಿಂದೂ ಗಳಿಂದ ಪೇಮೆಂಟ್ ಹೋಗದೇನೋ ಹಾಗಾಗಿ ಹೀಗೆ ಅಂತ ಒಂದೇ ಒಂದು ಉತ್ತರ ಸಿಗಬಹುದು. -ರಘು

Thursday, September 18, 2008

ಹಾವು ಹಾವೆಂದು


ಹಾವು ಎಂದರೆ ಯಾರಿಗೆ ಭಯವಿಲ್ಲ. ಎಲ್ಲರೂ ಮಾರು ದೂರ ಹಾರುತ್ತಾರೆ. ಬೆಳಿಗ್ಗೆ ದೇವರಿಗೆ ಹೂವು ಕೊಯ್ಯುತ್ತಿರುವಾಗ ನಿರುಪದ್ರವಿ ಹಸಿರುಳ್ಳೆ ಹಾವು ಕಂಡರೂ ಸಾಕು ಟಣ್ಣಂತ ಆಚೆ ಜಿಗಿಯುತ್ತೇವೆ ನಾವು. ಹಾವು ಎಂದರೆ ಅಷ್ಟರ ಮಟ್ಟಿಗಿನ ಭಯ ಮನಸ್ಸಿನ ಆಳಕ್ಕೆ ಇಳಿದುಹೋಗಿದೆ. ಆದರೆ ವಾಸ್ತವವೆಂದರೆ ಶೇಕಡಾ ಎಂಬತ್ತರಷ್ಟು ಹಾವುಗಳು ನಿರುಪದ್ರವಿ. ತನ್ನಷ್ಟಕ್ಕೆ ತಾನು ಇಲ್ಲಿಯವರೆಗೆ ಯಾರಮೇಲೂ ಅಟ್ಯಾಕ್ ಮಾಡಿದ ದಾಖಲೆಯಂತೂ ಇಲ್ಲವೇ ಇಲ್ಲ. ಹಾವು ತನ್ನ ಜೀವ ರಕ್ಷಣೆಗೋ ಅಥವಾ ಆಹಾರಕ್ಕಾಗಿಯೋ ಮಿಕ್ಕ ಜೀವಿಯ ಮೇಲೆ ಧಾಳಿ ಮಾಡುತ್ತವೆ ಎನ್ನುವುದು ಸರ್ವವಿಧಿತ. ಆದರೆ ಮನುಷ್ಯ ಹಾವನ್ನು ತನ್ನಂತೆಯೇ ಎಂದು ಎಣಿಸಿದ್ದರಿಂದ ಹಾವಿಗೆ ಹೆದರಿ ಬದುಕುವಂತಾಗಿದೆ. ನಮ್ಮ ಮನೆಯ ಸುತ್ತಮುತ್ತ ಮಳೆಗಾಲ್ದ ದಿವಸದಲ್ಲಿ ನೂರಾರು ಜಾತಿಯ ಹಾವು ಹರಿದಾಡುತ್ತಿರುತ್ತದೆ. ಅದರ ಜತೆಯಲ್ಲಿ ಹಾವು ಗೊಲ್ಲರ ಬೆತ್ತದ ಬುಟ್ಟಿಯೊಳಗಿನ ನಾಗರಹಾವೂ ಅದೇ ಸಮಯದಲ್ಲಿ ಬರುತ್ತದೆ. ಈ ಹಾವು ಗೊಲ್ಲರ ಜೀವನ ಒಂದು ಅದ್ಬುತ ತಾಕತ್ತಿನದು. "ಗೌರಬ್ಬೇ...ಮಹಾತಾಯಿ ಒಂದಿಷ್ಟು ಬಿಕ್ಷಾ ಹಾಕಿ ತಾಯಿ..." ಎನ್ನುವ ಡೈಲಾಗ್ ನೊಂದಿಗೆ ಹಾವುಗೊಲ್ಲ ಹೆಂಗಸರು ಮನೆಬಾಗಿಲಿಗೆ ಬರುತ್ತಾರೆ. "ಆತು ಬಿಕ್ಷೆ ಹಾಕ್ತಿನಿ ಮತ್ತೆ ರಗಳೆ ಮಾಡಬಾರದು" ಎಂಬ ಅಣತಿಯೊಂದಿಗೆ ಒಂದು ಮುಷ್ಟಿ ಅಕ್ಕಿ ಹಾಕುತ್ತೇವೆ. ಅಕ್ಕಿ ಅವರ ಚೀಲದೊಳಗೆ ಬಿದ್ದ ಮರುಕ್ಷಣ" ಸ್ವಾಮೀ... ಮಗ ಊಟ ಮಾಡದೆ ಮೂರು ದಿವ್ಸ ಆತು ತಿನ್ನಕೆ ಏನಾದ್ರೂ ಇದ್ರೆ ಕೊಡ್ರವ್ವಾ...." ಎಂಬ ಉದ್ಗಾರ." ಆಗ್ಲೆ ಹೇಳಿದೀನಿ ಮತ್ತೆಂತು ಕೇಳ್ಬಾರ್ದು ಅಂತ" ಎಂದು ನಾವು ಗದರಿದರೆ " ನಿಮ್ಮ ಮಗು ಅಂತ ತಿಳ್ಕಂಡು ಹಾಕ್ರಿ ಯಪ್ಪಾ" ಅಂದು ಬಿಡ್ತಾರೆ ಸಧ್ಯ ಸಂಬಂದ ಹೀಗೆಲ್ಲಾ ಆಗುತ್ತಿರುವುದನ್ನು ಕಂಡು ಹೆದರಿ ಮುಂದುವರೆಯುವ ರಗಳೆ ಬೇಡ ಎಂದು ಅಳಿದುಳಿದ ರೊಟ್ಟಿ ಕೊಟ್ಟರೆ ಮರುಕ್ಷಣ "ಕವಳಾ ಹಾಕಾಕೆ ನಾಲ್ಕು ಅಡಿಕೆ ಕೊಡಿ" ಎನ್ನುವ ಅದರ ನಂತರ ಉಡಾಕೆ ಹಳಪಳೆ ಸೀರೆ ಇದ್ರೆ ಕೊಡೀ..... ಎನ್ನುವ ವಿಚಿತ್ರ ಧ್ವನಿಯ ಹಾಗೂ ಶೈಲಿಯ ರಾಗ ಮುಂದುವರೆಯುತ್ತದೆ. ಈ ಹಾವುಗೊಲ್ಲ ಹೆಂಗಸರು ಕಚಪಚ ನಮ್ಮನ್ನು ಬೈಯುತ್ತಾ ಆಚೆ ದಾಟುತ್ತಿದ್ದಂತೆ ಪಿಟಿಪಿಟಿ ಹೆಜ್ಜೆ ಹಾಕುತ್ತಾ ಹಾವುಗೊಲ್ಲ ಬರುತ್ತಾನೆ. ಆತ ಈ ಹೆಂಗಸರಿಗೂ ತನಗೂ ಯಾವುದೇ ಸಂಬಂಧ ಇಲ್ಲ ಎನ್ನುವ ವರ್ತನೆಯೊಂದಿಗೆ "ಹಾವು ನೋಡ್ತೀರಾ ಸೋಮಿ.." ಎನ್ನುತ್ತಾನೆ. ಹೂ ಎಂದಿರಾ? ಹತ್ತೊ ಇಪ್ಪತ್ತೋ ರೂಪಾಯಿ ಕೈಬಿಟ್ಟಿತು ಎಂದರ್ಥ. ಹಾವು ನೋಡದಿದ್ದರೆ ಒಂದು ಮುಷ್ಠಿ ಬಿಕ್ಷಕ್ಕಷ್ಟೇ ಆತ ಸಮಾಧಾನಿ ಎಲ್ಲಾದರೂ ಅಕಸ್ಮಾತ್ ಅಡಿಕೆ ಕೇಳಿಯಾನು. ಆತನ ಬಗಲಲ್ಲಿ ಒಂದು ಕಾಲದಲ್ಲಿ ಘಟಸರ್ಪ ಎಂದು ಖ್ಯಾತಿ ಪಡೆದು ನಂತರ ಗುರುಬಲದ ದೋಷದಿಂದ ಈ ಬಡಕಲು ಹಾವುಗೊಲ್ಲನ ಕಣ್ಣಿಗೆ ಬಿದ್ದು ಹಲ್ಲುಕೀಳಿಸಿಕೊಂಡ ನಾಗರಹಾವು ಬೆತ್ತದ ಚಾಪೆಯೊಳಗೆ ಸುರುಳಿಸುತ್ತಿ ಮಲಗಿರುತ್ತದೆ. ಎಂತಹ ವಿಚಿತ್ರ, ಮಾರುದೂರದಲ್ಲಿ ಕಂಡರೆ ಬೆಚ್ಚಿಬೀಳುವ ನಾವು, ಬಗಲಲ್ಲಿ ಇಟ್ಟುಕೊಂಡು ಜೀವನ ಅರಸುವ ಹಾವುಗೊಲ್ಲ. ಹಾವೆಂಬ ಜೀವಿ ಒಬ್ಬರಿಗೆ ಜೀವಭಯವನ್ನು ತರಿಸುತ್ತಿದ್ದರೆ ಮತ್ತೊಬ್ಬರಿಗೆ ಜೀವನವನ್ನೇ ಕೊಡುತ್ತಿದೆ. ಎಂಬಲ್ಲಿಗೆ ಹಾವು ಪುರಾಣ ಮುಕ್ತಾಯವೂ.......