Saturday, October 11, 2008

ಸಂಸಾರಿಯ ಸಾರ


ಅಡಿಗೆ ಭಟ್ಟರೊಯ್ಯುವರು
ಯಜ್ಞ ಸುಟ್ಟವರೊಯ್ಯುವರು
ಸರ್ವ ಬಿಟ್ಟವರೊಯ್ಯುವರು
ಸಂಸಾರಿಯಿಂದ
ಹೀಗಿದೆ ನೋಡಿ ಸಂಸಾರಿಯ ಗತಿ. ಮದುವೆ ಎಂಬ ಮೂರಕ್ಷರದ ನಂತರ ಸಂಸಾರಿ ಎಂಬ ಹಂತಕ್ಕೆ ಏರುತ್ತಾರಲ್ಲ ಆವಾಗ ಶುರು. ಮಿಕ್ಕವರೆಲ್ಲರೂ ಈ ಸಂಸಾರಿಯ ಹಿಂದೆ ಬೀಳುತ್ತಾರೆ. ಅಲ್ಲಿಯತನಕದ ಜೀವನ ಅವನಿಗೆ ನಂತರದ್ದು ಬೇರೆಯವರಿಗೆ. ಮನುಷ್ಯನಿಗೆ ಮದುವೆ ಎಂಬುದು ಬಂಧನವೂ ಹೌದು ಹಾಗೆಯೇ ಜೀವನವೂ ಹೌದು. ನಮ್ಮ ಹಿಂದೂ ಧರ್ಮ ಶಾಸ್ತ್ರಗಳು ಅಪುತ್ರಸ್ಯ ಗತಿರ್ನಾಸ್ತಿ ಎಂದು ಒಂಥರಾ ಹೆದರಿಸಿ ಮದುವೆಗೆ ಪ್ರಚೋದಿಸುತ್ತವೆ. ಮದುವೆಯಾದ ಮೇಲೆ ಮತ್ತೆ ಮಕ್ಕಳಾಗದಿದ್ದರೆ ನಾಗ ಶಾಂತಿ ಸುಬ್ರಹ್ಮಣ್ಯ ಜಪ ಹೀಗೆಲ್ಲಾ ಮುಂದುವರೆಯುತ್ತದೆ. ಇರಲಿ ಅವೆಲ್ಲಾ ಶಾಸ್ತ್ರ ಸಂಪ್ರದಾಯಗಳ ಕತೆಯಾಯಿತು ಈಗ ಸಂಸಾರದ ವಿಚಾರಕ್ಕೆ ಬರೋಣ. ನಮ್ಮ ಹಳ್ಳಿಗಳಲ್ಲಿ ಒಂದುಕಾಲದಲ್ಲಿ ಸಂಸಾರ ಎಂಬುದನ್ನು ಸಾಗರಕ್ಕೆ ಹೋಲಿಸಲಾಗುತ್ತಿತ್ತು. ಆದರೆ ನಿಜವಾಗಿಯೂ ಸಂಸಾರವೆಂದರೆ ಹಡಗಿನ ನೆನಪಾಗುತ್ತಿತ್ತು. ಅಣ್ಣತಮ್ಮಂದಿರು ಐದು ಜನ ಅವರಿಗೆ ತಲಾ ನಾಲ್ಕೈದು ಮಕ್ಕಳು ಆ ಮಕ್ಕಳಿಗೆ ಹೆಂಡಂದಿರು ಹೀಗೆ ಮೂವತ್ತು ನಲವತ್ತು ಜನರಿರುವ ಒಂದೊಂದು ಅವಿಭಕ್ತ ಕುಟುಂಬ . ಅಮ್ಮಾ .............ನಿಜವಾಗಿಯೂ ಅದನ್ನು ನಿಭಾಯಿಸಲು ಎಂಟೆದೆಯ ಭಂಟನಾಗಿರಲೇ ಬೇಕು. ಅತ್ತೆ ಸೊಸೆ ಜಗಳ ವಾರಗಿತ್ತಿಯರ ಮುನಿಸು ಗಂಡ ಹೆಂಡಿರ ಗುದ್ದಾಟ ಮಕ್ಕಳ ಚೆಲ್ಲಾಟ ಹೊಡೆದಾಟ ಒಂದೊಂದು ನೆನೆಸಿಕೊಂಡರೆ ಹಾಗೆ ಇದ್ದ ಅವಿಭಕ್ತ ಕುಟುಂಬಗಳು ಕನಸಾ ಎಂದೆನಿಸುತ್ತದೆ. ದಿನನಿತ್ಯ ಒಬ್ಬರಲ್ಲಾ ಒಬ್ಬರು ಅತಿಥಿಗಳು ಅವರಿಗೆ ಊಟ ಹಾಸಿಗೆ ಕಾಫಿ ತಿಂಡಿ. ಮಕ್ಕಳ ವಿದ್ಯಾಭ್ಯಾಸ ಅವುಗಳಿಗೆ ಬಟ್ಟೆಬರೆ . ಅದನ್ನೆಲ್ಲಾ ಹ್ಯಾಗೆ ನಿಭಾಯಿಸಿದರು? ಎಂಬ ಪ್ರಶ್ನೆ ಒಮ್ಮೊಮ್ಮೆ ಕಾಡದಿರದು. ಈಗಿನ ಕಾಲದಲ್ಲಿ ಅವಿಭಕ್ತ ಕುಟುಂಬ ಎಂಬ ಶಬ್ಧ ಬಹುಪಾಲು ತನ್ನ ಅರ್ಥ ಕಳೆದುಕೊಂಡಿದೆ. ಗಂಡ ಹೆಂಡತಿ ಒಂದು ಮಗು ಇಷ್ಟಕ್ಕೆ ಸಂಸಾರ ಮುಗಿಯುತ್ತದೆ. ಆದರೂ ಟೆನ್ಷನ್ ಜೀವನ ಹಾಗಾದರೆ ಆವಾಗ..ಇವುಗಳನ್ನೆಲ್ಲಾ ಹೇಗೆ ನಿಭಾಯಿಸಿದರು ?. ಎಂಬ ಪ್ರಶ್ನೆ ಕಾಡುತ್ತದೆ. ನಮ್ಮ ಊರಿನಲ್ಲಿ ಒಬ್ಬ ಮಹಾತಾಯಿ ಹಾಗೂ ಆಕೆಯ ಗಂಡ ಮಹಾಪುರುಷ. ಅವರಿಗೆ ಒಟ್ಟು ಹದಿನೆಂಟು ಮಕ್ಕಳು. ಆದರೆ ಆ ಕರುಣಾಮಯಿ ದೇವರ ದಯೆಯಿಂದ ಉಳಿದದ್ದು ಐದು ಗಂಡು ಒಂದು ಹೆಣ್ಣು. ಉಳಿದ ಇಷ್ಟರಿಂದಲೇ ಇಡೀ ಮನೆಯಲ್ಲಿ ಮೂವತ್ತು ಜನ. ಎರಡೂವರೆ ಎಕರೆ ಅಡಿಕೆ ಭಾಗಾಯ್ತು. ಹಿರಿಯಣ್ಣ ಮನೆಯ ಯಜಮಾನ. ಅದೇನು ಮಾಡಿದನೋ ಸಂಸಾರ. ಮಕ್ಕಳೆಲ್ಲಾ ಯಾರ ಹಿಡಿದು ಎಲ್ಲಿ ಓದಿದರೋ..? ಅಂತೂ ಇವತ್ತಿನ ಈ ಕಾಲದಲ್ಲಿ ಎಲ್ಲಾ ಮಕ್ಕಳು ದೇಶದಾದ್ಯಂತ ಒಂದೊಂದು ಕಡೆ ಅಂಗಡಿ ಕೆಲಸ ಮುಂತಾದವುಗಳನ್ನು ಅವಲಂಬಿಸಿ ಯಶಸ್ಸು ಹೊಂದಿದ್ದಾರೆ. ಆ ಮನೆಯ ಯಜಮಾನ ಎಂಬತ್ತುವರ್ಷವಾದರೂ ಇನ್ನೂ ಗಟ್ಟಿಯಾಗಿದ್ದಾನೆ.
ಮತ್ತೊಂದು ಅವಿಭಕ್ತ ಕುಟುಂಬ ನನ್ನ ಅತ್ತೆಯಮನೆ, ಲಿಂಗನಮಕ್ಕಿ ಆಣೆಕಟ್ಟಿನ ಭರಾಟೆಯಲ್ಲಿ ಅಮೀನುಕಳೆದುಕೊಂಡು ಸಿರಸಿಯ ಸಮೀಪ ಕಂಚಿಕೊಪ್ಪ ಎಂಬ ಊರಿನಲ್ಲಿ ನೆಲಸಿದ ಕುಟುಂಬ. ಅತ್ತೆಗೆ ಆರು ಗಂಡು ಮೂರು ಹೆಣ್ಣು ಮಕ್ಕಳು. ನಾನು ಚಿಕ್ಕವನಿದ್ದಾಗ ಬೇಸಿಗೆ ರಜೆಗೆ ಅಲ್ಲಿಗೆ ದೌಡಾಯಿಸುತ್ತಿದ್ದೆ. ಅಲ್ಲಿ ಮಕ್ಕಳ ಸಂಖ್ಯೆ ಎಷ್ಟಿತ್ತೆಂದರೆ ರಾತ್ರಿ ಊಟಕ್ಕೆ ಕೆಲವರು ತಪ್ಪಿಸಿಕೊಂಡರೂ ಗೊತ್ತಾಗುತ್ತಲೇ ಇರಲಿಲ್ಲ. ಕರೆಂಟ್ ಕೂಡ ಅಲ್ಲಿಗೆ ಬಂದಿರಲಿಲ್ಲವಾದ್ದರಿಂದ ಚಿಮುಣಿ ಬುಡ್ಡಿ ಅಥವಾ ಗ್ಯಾಸ್ ಲೈಟ್ ಬೆಳಕಿನಲ್ಲಿ ಯಾರು ಉಂಡರೋ ಯಾರು ಬಿಟ್ಟರೋ ಭಗವಂತನೇ ಬಲ್ಲ ಎಂಬಂತಿತ್ತು. ಬೆಳಿಗ್ಗೆ ದೋಸೆ ಕನಿಷ್ಟವೆಂದರೂ ನೂರು ಬೇಕಾಗುತ್ತಿತ್ತು. ಈ ಜನಜಂಗುಳಿಯ ನಡುವೆಯೇ ಅತ್ತೆಯ ಮನೆಯ ಮಕ್ಕಳು ಮೊಮ್ಮಕ್ಕಳು ಓದಿ ವಿದ್ಯಾವಂತಾರಾಗಿ ಪ್ರಪಂಚಾದ್ಯಂತ ನೆಲಸಿದ್ದಾರೆ.
ಆದರೆ ಈಗ ಮೂರೇ ಮೂರು ಅಥವಾ ಹೆಚ್ಚೆಂದರೆ ನಾಲ್ಕು ಜನರಿರುವ ಕುಟುಂಬ ವ್ಯವಸ್ಥೆಗೆ ನಾವು ತಲುಪಿದ್ದಾಗಿದೆ. ಇರುವ ಒಂದೋ ಎರಡೋ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಲು ಅಪ್ಪ ಅಮ್ಮ ಅಂಡುಮೇಲೆ ಮಾಡಿಕೊಂಡು ಒದ್ದಾಡುವುದನ್ನು ನೋಡಿದರೆ ಅಂದಿನ ಅಮ್ಮಂದಿರಿಗೆ ಗಿಟಿಗಿಟಿ ನಗು ಬರಬಹುದೇನೋ. ಇಂದಿನ ಸಂಸಾರದ ಅಪ್ಪ ಅಮ್ಮರ ಮುನಿಸು, ಅಸಮಾಧಾನ, ಕೋಳಿ ಜಗಳ, ಪ್ರತಿ ನಿತ್ಯ ಚರ್ಚೆಯಾಗುವ ಭವಿಷ್ಯದ ಜೀವನದ ಕುರಿತು ಹೆದರಿಕೆಗಳು ಮುಂತಾದವುಗಳೆಲ್ಲಾ ಅಂದಿನ ಸಂಸಾರಕ್ಕೆ ಹೋಲಿಸಿದರೆ ನಿಜಕ್ಕೂ ನಾಚಿಕೆಯಾಗುತ್ತದೆ. ಅಂದು ಈತರಹ ಬೇಡದ ವಿಷಯಗಳನ್ನು ಆಲೋಚಿಸಲು ಮತ್ತೊಂದು ಪ್ರಪಂಚವನ್ನು ನೋಡಲು ಅವಕಾಶವೂ ಇರಲಿಲ್ಲ ಸಮಯವೂ ಇರಲಿಲ್ಲ ಇಂದು ಹಾಗಲ್ಲ. ಸಂಸಾರ ಸಣ್ಣದಾದರೂ ಭಾರವಾಗಿದೆ. ಜವಾಬ್ದಾರಿ ಪಾಸ್ ಮಾಡಲು ಗಂಡ ಹೆಂಡತಿ ಇಬ್ಬರೂ ಪರಸ್ಪರ ತಯಾರಾಗಿ ನಿಂತಿರುತ್ತಾರೆ. ಇರಲಿ ಅಂದು ಅಂದಿಗೆ ಕಷ್ಟವಾದರೂ ಇಂದು ಮಜ. ಇಂದು ಇಂದಿಗೆ ಹಿಡಿಸದಿದ್ದರೂ ಮುಂದೆ ಮಜ. ಕಾರಣ ಮುಂದೊಂದು ದಿವಸ ಯಾರೋ ಒಬ್ಬಾತ ತನ್ನ ಬ್ಲಾಗ್ ನಲ್ಲಿ "ಒಂದುಕಾಲದಲ್ಲಿ ಅಪ್ಪ ಅಮ್ಮ ಒಟ್ಟಿಗೆ ಇರುತ್ತಿದ್ದರಂತೆ.....ಅದಕ್ಕೆ ಸಂಸಾರ ಎನ್ನುತ್ತಿದ್ದರಂತೆ, ಅದು ಹೇಗೆ ಇರುತ್ತಿದ್ದರೋ ..." ಎಂಬುದಾಗಿ ಬರೆಯಬಹುದು.
ಮೊನ್ನೆ ಅದ್ಯಾವುದೋ ಸಮಾರಂಭಕ್ಕೆ ನನ್ನ ಮಗನನ್ನು ಕರೆದುಕೊಂಡು ಹೋದಾಗ ಊಟಕ್ಕೆ ಎರಡು ಜಾಗ ಹಿಡಿಯುವುದಕ್ಕೆ ಹರಸಾಹಸ ಪಡಬೇಕಾಯಿತು. ಸೀಟು ಹಿಡಿದು ಅಬ್ಬಾ ಇನ್ನು ಊಟಕ್ಕೆ ರೆಡಿ ಎಂಬಂತಿರುವ ಫೋಟೋ ನೋಡಿದಾಗ ಇವೆಲ್ಲಾ ನೆನಪಾಯಿತು. ಇದೇ ಅಂದಾಗಿದ್ದರೆ ಕನಿಷ್ಟ ಹತ್ತು ಊಟದ ಜಾಗವನ್ನು ನಾನು ಹಿಡಿಯಬೇಕಾಗಿತ್ತು ಎಂಬ ಪರಿಸ್ಥಿತಿ ನೆನೆದು ಹೀಗೆಲ್ಲಾ ಏನೇನೋ ಒಂದೊಕ್ಕೊಂದು ಸಂಬಂಧವಿಲ್ಲದೇ ಬರೆಯುವಂತಾಯಿತು.
ಕೊನೆಯಾದಾಗಿ: ಆನಂದರಾಮ ಶಾಸ್ತ್ರಿಗಳೇ ಇತಿಹಾಸ ಮರುಕಳಿಸುತ್ತದೆ ಎಂದು ಹೇಳುತ್ತಾರಲ್ಲ ಹಾಗಂದಮೇಲೆ ಮತ್ತೆ ಹೀಗೆ ನೂರಾರು ಜನರ ಅವಿಭಕ್ತ ಕುಟುಂಬ ವ್ಯವಸ್ಥೆ ಮುಂದೊಂದು ದಿನ ಬರಲೇ ಬೇಕಲ್ಲವೇ?. ಎಂದು ಕೇಳಿದೆ ಅದಕ್ಕವರು " ಇಡೀ ಸಮಾಜ ಈ ಸಂಸಾರ ವೆಂಬ ವ್ಯವಸ್ಥೆಯ ಮೇಲೆ ನಿಂತಿದೆ. ಅದು ಡಂ ಎಂದರೆ ಪ್ರಪಂಚ ಡಂ ಎಂದಂತೆ. ಸಂಸಾರಿಯಾದವನು ಹೆದರಿಕೆಯಿಂದಲಾದರೂ ಜವಾಬ್ದಾರಿಯಾಗಿ ವರ್ತಿಸುತ್ತಾನೆ. ವಿಭಕ್ತ ಅವಿಭಕ್ತ ಎಂಬುದೆಲ್ಲಾ ನಾವು ಮಾಡಿಕೊಂಡ ವ್ಯವಸ್ಥೆ. ಇಡೀ ಪ್ರಪಂಚವೇ ಒಂದು ಕುಟುಂಬ, ವಸುದೈವ ಕುಟುಂಬಕಂ....." ಎಂದು ಉತ್ತರಿಸಿದರು. ಈ ಉತ್ತರ ಹೇಗಿತ್ತೆಂದರೆ ಈ ನನ್ನ ಬ್ಲಾಗ್ ಟೈಟಲ್ ಗೂ ಹಾಗೂ ನಾ ಬರೆದ ವಿಷಯಕ್ಕೂ ಮತ್ತು ಆರಂಭದಲ್ಲಿ ನಾನು ಬರೆದ ಚತುಷ್ಪದಿಗೂ ಇದ್ದಂತೆ ಒಂದಕ್ಕೊಂದು ಸಂಬಂಧವೇ ಇರಲಿಲ್ಲ. ಆದರೂ ಎನೋ ಇತ್ತು ಅಲ್ಲಿ ನನಗೆ ಅರ್ಥವಾಗಲಿಲ್ಲವಷ್ಟೆ.
ಟಿಪ್ಸ್: ತಲೆಯಲ್ಲಿ ಎಂಟಾಣೆಯ ಬಿಲ್ಲೆಯಾಕರದಲ್ಲಿ ಕೂದಲು ಉದುರಿಹೋಗುತ್ತದೆ. ಅದೊಂದು ಮಹಾನ್ ಖಾಯಿಲೆ ಎಂದು ಚರ್ಮ ತಜ್ಞರು ಬಿಂಬಿಸಿ ಸಾವಿರಾರು ರೂಪಾಯಿ ಕೆತ್ತಿಬಿಡುತ್ತಾರೆ. ಅದಕ್ಕೆ ನಾಲ್ಕಾಣೆಯೂ ಖರ್ಚಿಲ್ಲದ ಔಷಧಿಯೆಂದರೆ ತಾಮ್ರದ ಪಾತ್ರೆಯಲ್ಲಿ ಗೋಮೂತ್ರವನ್ನು ಹಿಡಿದು ಮೂರುದಿನ ಬಿಸಿಲಿನಲ್ಲಿ ಇಟ್ಟು ಆ ಜಾಗಕ್ಕೆ ಹಚ್ಚಿದರೆ ಕೂದಲು ಬುರುಬುರುನೆ ಬರಲು ಶುರುವಾಗುತ್ತದೆ. ಪುಕ್ಕಟೆ ಔಷಧಿಗೆ ಸಾವಿರಾರು ಕಳೆಯಬೇಡಿ, ಗೋಮಾತೆ ಮಾತೆ ಎನ್ನಿರೋ....

Wednesday, October 8, 2008

ಬಿದಿರಿನ ಕಟ್ಟೆಯೂ ನೆಗೆಟೀವ್ ಯೋಚನೆಯೂ....?




ಬಿದಿರುಮಳೆಗೆ ಕಟ್ಟೆ ಬಂದರೆ ಬರಗಾಲ ಬರುತ್ತದೆ. ಬಿದಿರು ಅಕ್ಕಿಯನ್ನೇ ಉಣ್ಣುವ ಪರಿಸ್ಥಿತಿ ಖಂಡಿತ ಅಂತ ಹಳ್ಳಿಗಾಡಿನಲ್ಲಿ ನಂಬಿಕೆಯಿದೆ. ಗೋರಾಂಡಲ ರಣಬೇಸಿಗೆಯಲ್ಲಿ ಹಸಿರು ಹಸಿರಾಗಿರುವ ಬಿದಿರು ಒಣಗಿ ನಿಂತುಬಿಡುತ್ತದೆ. ಇದು ಅರವತ್ತು ವರ್ಷಕ್ಕೊಮ್ಮೆ ಸಂಭವಿಸುವ ಘಟನೆ ಎಂದು ಬಾಯಿಂದ ಬಾಯಿಗೆ ಹಬ್ಬಿ ಬಂದಿರುವ ಮಾಹಿತಿ . ಕಳೆದ ಬೇಸಿಗೆಯಲ್ಲಿ ನಮ್ಮೂರಿನ ನೂರಾರು ಬಿದಿರು ಒಣಗಿನಿಂತಿತ್ತು. ಆದರೆ ಬರಗಾಲವೇನೂ ಸಾಮೂಹಿಕವಾಗಿ ಬಂದಿಲ್ಲ. ಎಲ್ಲರೂ ಊಟ ಮಾಡುತ್ತಿದ್ದಾರೆ, ಅಂಡಿಗೆ ಬೈಕ್ ಹಾಕಿಕೊಂಡು ತಿರುಗುತ್ತಿದ್ದಾರೆ, ಕಾರ್ ಇರುವವರು ಅದರಲ್ಲಿ ಸುತ್ತುತ್ತಿದ್ದಾರೆ. ಆದರೆ ಏಪ್ರೀಲ್ ನಲ್ಲಿ ಎಲ್ಲರದ್ದೂ ಒಂದೇ ಗೊಣಗಾಟ ಇತ್ತು, ಈವರ್ಷ ಬಿದಿರಿಗೆ ಕಟ್ಟೆ ಬಂದಿದೆ ಹಾಗಾಗಿ ಬರಗಾಲ ಖಂಡಿತ, ಊಟ ಮಾಡುವುದು ಹೇಗೋ? ಹಾಗೇ ಹೀಗೆ ಮುಂತಾಗಿ. ಮಳೆಗಾಲದಲ್ಲಿ ಅಡಿಕೆಗೆ ಕೊಳೆಬಂದಾಗಲೂ ಪಾಪದ ಬಿದಿರಿಗೆ ಕಟ್ಟೆ ಬಂದಿದ್ದನ್ನೇ ಉದಾಹರಿಸಿ ಈ ವರ್ಷ ಬದುಕುವುದು ಕಷ್ಟ ಇದೆ ಅನ್ನುತ್ತಿದ್ದರು. ಪಾಪ ಈ ಸಾಮೂಹಿಕ ಯೋಚನೆಯ ಮಾತುಗಳನ್ನು ಕೇಳಿದ ಅಮಾಯಕರು ಬದುಕು ಅತ್ಯಂತ ಕಷ್ಟವಾಗುತ್ತದೆ ಎಂದು ನಿತ್ಯ ಅವ್ಯಕ್ತ ಭಯದಿಂದ ನರಳುತ್ತಾರೆ. ಈ ಸಾಮೂಹಿಕ ನೆಗೆಟಿವ್ ಯೋಚನೆ ಪ್ರಪಂಚದ ಎಲ್ಲಾ ಸ್ಥರಗಳಲ್ಲಿಯೂ ಹರಿದಾಡುತ್ತಿರುತ್ತದೆ. ಮೊನ್ನೆ ಮೊನ್ನೆ ಶೇರು ಮಾರುಕಟ್ಟೆ ಕುಸಿದಾಗ ಎಲ್ಲರಿದ್ದೂ ಇದೇ ತರಹದ ಭಯದ ಮಾತುಗಳು. ಇನ್ನು ಐಟಿ ಇಂಡಸ್ಟ್ರೀಸ್ ಕಥೆ ಮುಗಿದಂತಯೇ ಇಂಜನಿಯರಿಂಗ ಓದುವುದು ವೇಸ್ಟ್, ಮುಂತಾಗಿ ನೆಗೆಟಿವ್ ಯೋಚನೆಗಳು ಹರಿದಾಡಲಾರಂಬಿಸಿವೆ. ಸಧ್ಯ ಬಿದಿರು ಮಳೆಗೆ ಕಟ್ಟೆ ಬಂದಿದ್ದರಿಂದ ಶೇರು ಮಾರುಕಟ್ಟೆ ಕುಸಿದಿದೆ ಐಟಿ ಬಿದ್ದಿದೆ ಅಮೆರಿಕಾದ ಅರ್ಥ ವ್ಯವಸ್ಥೆ ಜಾರಿದೆ ಎಂಬ ಕತೆ ಶುರುವಾಗಿಲ್ಲ. ಇದಕ್ಕೆ ಪಟ್ಟಣದಲ್ಲಿ ಬಿದಿರುಮಳೆ ಇಲ್ಲದಿದ್ದದ್ದೂ ಕಾರಣವಿರಬಹುದು.
ಪ್ರಕೃತಿಯಲ್ಲಿನ ವ್ಯತ್ಯಯಗಳನ್ನು ನಮ್ಮ ನಮ್ಮ ಜೀವನಕ್ಕೆ ಹೋಲಿಸಿಕೊಂಡು ಋಣಾತ್ಮಕ ಯೋಚನೆಗಳನ್ನು ತಲೆಗೇರಿಸಿಕೊಂಡು ನರಳುವ ಪದ್ದತಿ ಮನುಷ್ಯನ ಆರಂಭಕಾಲದಿಂದಲೂ ಕಾಡುತ್ತಿರುವ ಸಮಸ್ಯೆ. ಆದರೆ ಇದನ್ನೇ ಧನಾತ್ಮಕವಾಗಿ ಬಳಸಿಕೊಂಡು ಸುಖವಾಗಿ ಬದುಕಬಹುದು ಎಂಬ ಆಲೋಚನೆ ನಮಗೆ ಬರುವುದೇ ಇಲ್ಲ. ನೆನಪಿಸಿಕೊಳ್ಳಿ ಈಗ ಹತ್ತು ವರ್ಷದ ಹಿಂದೆ ಐಟಿ ಕ್ಷೇತ್ರದಲ್ಲಿ ಶೇರು ಮಾರುಕಟೆಯಲ್ಲಿ, ಹಳ್ಳಿಗಾಡಿನಲ್ಲಿ ಬದುಕುವುದೇ ಕಷ್ಟ ಎಂಬಂತಹ ಇದೇ ತರಹದ ನೆಗೇಟೀವ್ ಮಾತುಗಳು ಹರಿದಾಡುತ್ತಿತ್ತು. ಹಾಗಂತ ಯಾರೂ ಸತ್ತಿಲ್ಲ. ಕೆಲಸ ಮಾಡುವವರು ತಮ್ಮ ಪಾಡಿಗೆ ತಾವು ಮಾಡುತ್ತಿದ್ದಾರೆ, ಮನೆ ಕಟ್ಟಿಸುವವರು ಕಟ್ಟಿಸಿದ್ದಾರೆ , ಕಾರ್ ಕೊಳ್ಳುವವರು ಕೊಂಡಿದ್ದಾರೆ, ಬಾಯಲ್ಲಿ ಮಾತ್ರಾ ಬದುಕುವುದೇ ಕಷ್ಟ ಎಂಬ ಒಣ ಡೈಲಾಗ್. ಸತ್ಯ ಹೇಳಲಾ ಇದು ಅತಿ ಹೆಚ್ಚು ಕಾಡುವುದು ಇತಿಹಾಸದ ಮೇಲೆ ಬದುಕು ಕಟ್ಟಿಕೊಳ್ಳುತ್ತಿರುವ ನಮ್ಮಂತಹ ದೇಶದ ಜನರ ಮನಸ್ಥಿತಿ. ಅಮೆರಿಕಾದಂತಹ ಭವಿಷ್ಯಕ್ಕಾಗಿ ವರ್ತಮಾನವನ್ನು ಸವೆಸುತ್ತಿರುವ ಮನಸ್ಥಿತಿಯಲ್ಲಿ ಈ ತರಹ ವೃಥಾ ನೆಗೇಟೀವ್ ಮಾತುಗಳು ಬಹು ಕಡಿಮೆ. ನೆಗೆಟೀವ್ ಯೋಚನೆಯಿಂದ ವರ್ತಮಾನದ ಜೀವನದ ಮಜ ಕಳೆದುಹೋಗುತ್ತದೆ. ನಾನು ಕೂಡ ವೈಯಕ್ತಿಕವಾಗಿ ಅದರ ಕಷ್ಟ ಅನುಭವಿಸಿದ್ದೇನೆ. ಒಂದೋ ಭೂತಕಾಲವನ್ನು ಸ್ಮರಿಸುತ್ತಾ ಜೀವನ ಸವೆಸಬೇಕು ಅಥವಾ ಭವಿಷ್ಯಕ್ಕೆ ಕನಸು ಕಟ್ಟುತ್ತಾ ಜೀವನ ಸಾಗಿಸಬೇಕು. ಅದು ಸುಖವಾಗಿರಬೇಕು ಎಂದಾದರೆ ಭವಿಷ್ಯದ ಕನಸು ಪಾಸಿಟೀವ್ ಆಗಿರಬೇಕು ಭೂತದ ಆಲೋಚನೆ ಹೇಗಿದ್ದರೂ ಅಂತಹಾ ತೊಂದರೆಯಿಲ್ಲ.
ಹೇಗೆಂದರೆ ಅಬ್ಬಾ ಬಿದಿರಿಗೆ ಕಟ್ಟೆ ಬಂತು ಈ ವರ್ಷ ಒಣಗಿದ ಬೊಂಬು ಬೇಕಷ್ಟು ಸಿಗುತ್ತದೆ. ಬಿದಿರಿನ ಅಕ್ಕಿಯಿಂದ ಸಾವಿರಾರು ಹೊಸ ಮೊಳಕೆ ಹುಟ್ಟುತ್ತದೆ. ಹಸಿರು ಕಾಡು ಸಮೃದ್ಧವಾಗುತ್ತದೆ. ಶೆರು ಮಾರುಕಟ್ಟೆ ಬಿದ್ದದ್ದು ಒಳೆಯದೇ ಆಯಿತು, ಸಸ್ತಾದರದಲ್ಲಿ ಶೇರು ಕೊಳ್ಳಬಹುದು. ಹೀಗೆ ಆಲೋಚಿಸಿದರೆ ಒಂದಿಷ್ಟು ಆರಾಮು ಅಂತ ಅನ್ನಿಸುತ್ತದೆ ನನಗೆ , ನಿಮಗೆ ಹೇಗೋ ನನಗೆ ಗೊತ್ತಿಲ್ಲ. ಇದು ರಗಳೆ ಅಂತ ಅನ್ನಿಸಿದರೆ ನೀವು ಸುಖಿಗಳು. ಹೌದು ಅಂತ ಅನ್ನಿಸಿದರೆ ನೀವು ನನ್ನಂತೆ. ಸುಳ್ಳು ಅಂತ ಅನ್ನಿಸಿದರೆ ನೀವು ಈಗಾಗಲೇ ಗೆದ್ದಿದ್ದೀರಿ ಅಂತ ಅರ್ಥ.
ಕೊನೆಯದಾಗಿ: ನೆಗೆಟೀವ್ ಪಾಸಿಟೀವ್ ಯೋಚನೆ ಅಂತ ಇದೆಯಾ? ಎಂದು ಆನಂದರಾಮ ಶಾಸ್ತ್ರಿಗಳನ್ನು ಕೆಣಕಿದೆ. ಯೋಚನೆಗಳಲ್ಲಿ ಹಾಗೆ ವಿಭಾಗ ಇಲ್ಲ ಆದರೆ ಯೋಚಿಸುವವನಲ್ಲಿ ಇದೆ. ಯೋಚನೆಯೆಂದರೆ ಅರ್ದ ಬಾಟಲಿ ಮದ್ಯ ಯೋಚಿಸುವವ ಇಷ್ಟು ಇದೆ , ಇಷ್ಟೇ ಇದೆ ಎಂದು ವಿಭಾಗಿಸಿಕೊಂಡು ಒದ್ದಾಡುತ್ತಾನೆ ಸುಖಿಸುತ್ತಾನೆ, ಪರಿಣಾಮ ಅರ್ದ ಬಾಟಲಿ ಮದ್ಯದ ಮೇಲಾಗದು ಎಂಬಂತಹ ಕಬ್ಬಿಣದ ಕಡಲೆಯಂತ ಉತ್ತರ ಕೊಟ್ಟರು. ನಾನು ಸುಮ್ಮನುಳಿದೆ. ಒಮ್ಮೊಮ್ಮೆ ಲೂಸ್ ತರಹ ಆಡುತ್ತಾರವರು
ಟಿಪ್ಸ್: ಹುಡುಗಿಗೆ ಹುಡುಗ ಇಷ್ಟವಾದರೆ ಆಕೆ ತನಗೆ ಅರಿವಿಲ್ಲದಂತೆ ತನ್ನ ಮೂಗಿನಮೇಲೆ ಕೈ ಆಡಿಸುತ್ತಾಳಂತೆ. ಲವ್ ಮಾಡೋ ಹುಡುಗರು ಇದೊಂದು ವರ್ತನೆಯ ಮುಖಾಂತರ ತಮ್ಮ ಪ್ರಪೋಸಲ್ ಹೇಳುವ ಧೈರ್ಯ ಮಾಡಬಹುದು. ಯಡವಟ್ಟಾದ್ರೆ ನಾನು ಜವಾಬ್ದಾರನಲ್ಲ.

Monday, October 6, 2008

ನವರಾತ್ರಿ ಸಂಜೆಯಲಿ..ನಾನುಡಿವ ಮಾತಿನಲಿ...


ಪ್ರಶ್ನೆಯೊಂದು ಮೂಡಿಹುದು ಕೇಳಮ್ಮ, ನವರಾತ್ರಿ ಸಂಜೆಯಲಿ ನಾನುಡಿವ ಮಾತಿನಲಿ ಉತ್ತರವು ಅಡಗಿಹುದು ಕೇಳಮ್ಮ. ಹೀಗೆ ಹಾಡು ಮುಂದುವರೆಯುತ್ತದೆ. ಅದೇಕೋ ಗೊತ್ತಿಲ್ಲ ನವರಾತ್ರಿ ಬಂದಾಗಲೆಲ್ಲ ನನಗೆ ಈ ಹಾಡು ನೆನಪಾಗುತ್ತದೆ. ನವರಾತ್ರಿ ಎಂಬ ಶಬ್ದ ಹಾಡಿನಲ್ಲಿದ್ದ ಕಾರಣವಿರಬಹುದು. ಇರಲಿ ವಿಷಯಕ್ಕೆ ಬರೋಣ. ಎರಡು ರೇಖೆಗಳು ಸಿನೆಮಾದಲ್ಲಿ ನಾಯಕನಿಗೆ ಎರಡು ಹೆಂಡಿರು. ಅವರುಗಳ ಅನುಮಾನವನ್ನು ಪರಸ್ಪರ ಹಾಡಿನ ಮೂಲಕ ಪರಿಹರಿಸಿಕೊಳ್ಳಲು ಹಾಡುವ ಹಾಡು ಅದು. ಹಾಡು ಸಮಯಕ್ಕೆ ಸರಿಯಾಗಿ ಹಾಗೂ ಕತೆಗೆ ಪೂರಕವಾಗಿದೆ. ಸಿನೆಮಾ ಅದ್ಭುತವಾಗಿದೆ, ಕಥೆ ಚೆನ್ನಾಗಿದೆ, ಅಲ್ಲಿ ಒಂದು ಸಂದೇಶವಿದೆ. ಗಂಭೀರವಾದ ಚಿಂತನೆಗೆ ಅವಕಾಶವಿದೆ. ಹೀಗೆ ಚಿಂತನೆಗೆ ಅವಕಾಶವಿರುವ ಹಲವಾರು ಸಿನೆಮಾಗಳಲ್ಲಿ ಅದೂ ಒಂದು. ಒಬ್ಬಾಕೆಯೊಡನೆ ಬಡತನದ ಸಂಸಾರ ಮತ್ತೊಬ್ಬಾಕೆ ಡಿ.ಸಿ . ಹಲವು ಹೊಯ್ದಾಟದ ನಡುವೆ ಇಬ್ಬರು ಹೆಂಡಿರುಗಳೊಡನೆ ಅಂತಿಮವಾಗಿ ಸುಖಸಂಸಾರ. ಅದು ಬೊಂಬಾಟಾಗಿತ್ತು. ಇರಲಿ ಅದು ಸಿನೆಮಾ ಜಗತ್ತು ಪರದೆಯಲ್ಲಿ ತೋರಿಸುವಂತೆ ಸ್ವತಃ ಅವರೂ ಇರಲಾರರು, ಈಗ ವಾಸ್ತವಕ್ಕೆ ಬರೋಣ. ವಾಸ್ತವವೆಂದರೆ ಅದೇ ಮದುವೆಯದೇ ಸಮಸ್ಯೆ.

ನಮ್ಮ ಹವ್ಯಕರ ಹಳ್ಳಿಗಳಲ್ಲಿ ಮೂವತ್ತರಿಂದ ನಲವತ್ತೈದು ವರ್ಷಗಳವರೆಗಿನ ಗಂಡುಗಳು ಬೇಕಷ್ಟು ಸಿಗುತ್ತವೆ. ಎರಡು ರೇಖೆಗಳಂತೆ ಎರಡು ಹೆಂಡಿರ ಕಥೆ ಆಮೇಲಾಯಿತು ಮೊದಲನೇ ಹೆಂಡತಿಯೇ ಇಲ್ಲದಂತಾಗಿದೆ. ಹೆಣ್ಣುಮಕ್ಕಳು ವಿದ್ಯಾವಂತರಾಗಿದ್ದು ಒಂದೆಡೆಯಾದರೆ, ಹಳ್ಳಿಯ ಸಂಪ್ರದಾಯಬದ್ಧ ಸ್ವಾತಂತ್ರ್ಯ ರಹಿತ ಜೀವನದ ಬೇಸರ ಇನ್ನೊಂದೆಡೆ. ಹಾಗೂ ಆರ್ಥಿಕ ವಾಗಿ ಹಳ್ಳಿಯ ಯುವಕರು ಹಿಂದು ಎಂಬ ವಿಚಾರ ಮತ್ತೊಂದೆಡೆ, ಹೀಗೆ ನಾನಾ ಕಾರಣಗಳಿಂದ ಹಳ್ಳಿಯ ಹೈದರಿಗೆ ಮದುವೆ ಇಲ್ಲ. ಅದು ಹವ್ಯಕ ಬ್ರಾಹ್ಮಣರಲ್ಲಿ ಹೆಚ್ಚಿದ ಸಮಸ್ಯೆ. ನೀವು ಹಲವಾರು ಮಾದ್ಯಮಗಳಲ್ಲಿ ಇದನ್ನು ಓದಿರುತ್ತೀರಿ ಹಾಗೂ ಕೇಳಿರುತ್ತೀರಿ. ಹೀಗಾಗಿ ನಮ್ಮ ಹಳ್ಳಿಗಳಲ್ಲಿ ನಾಲ್ಕು ಜನ ಸೇರಿದೆಡೆ ಈ ಒಂದು ಸಮಸ್ಯೆ ಕುರಿತು ಮಾತುಗಳು ಹರಿದಾಡುತ್ತಲೇ ಇರುತ್ತವೆ. ಯಾರಬಳಿಯಾದರೂ ಈ ಸಮಸ್ಯೆ ಹೇಳಿದರೆ "ಅಯ್ಯೋ ಈ ಮದುವೆಯಾಗದವರ ಕಾಲದಲ್ಲಿ ನಮ್ಮ ಹೆಂಡಿರನ್ನು ಕಾಪಾಡುವುದೇ ಕಷ್ಟವಾಗಿದೆ, ಇನ್ನು ಅವರಿಗೆ ಹೆಣ್ಣುಹುಡುಕುವುದು ಯಾರು ಮಾರಾಯ? ಎಂಬ ತಮಾಷೆಯ ಮಾತಿನಿಂದ ಹಿಡಿದು, ಹೌದು ಇದೊಂದು ಪೀಳಿಗೆಯ ಸಮಸ್ಯೆ, ಹೀಗೆ ಮುಂದುವರೆದಲ್ಲಿ ಅಂತ್ಯ ತುಂಬಾ ಕಷ್ಟಕರ ಎಂಬ ಗಂಭೀರ ಚರ್ಚೆಯವರೆಗೂ ಮುಂದುವರೆಯುತ್ತದೆ.

ಈಗ ಸಮಸ್ಯೆಗೆ ಪರಿಹಾರ ಹುಡುಕುವುದು ಒಂದೆಡೆಯಾದರೆ, ನಮ್ಮ ಹಳ್ಳಿಯ ಹೈದರ ಮನಸ್ಥಿತಿಯನ್ನು ಗಮನಿಸಬೇಕಾದ ಕೆಲಸ ಇನ್ನೊಂದೆಡೆ. ನಿಜವಾಗಿ ಹಳ್ಳಿ ಹೈದರಿಗೆ ಹೆಣ್ಣು ಸಿಗುತ್ತಿಲ್ಲ ಎಂಬುದು ಹಸೀ ಸುಳ್ಳಿನ ಸಂಗತಿ ಎಂಬುದು ಬಹಳಷ್ಟು ಜನರಿಗೆ ತಿಳಿದಿಲ್ಲ. ಹಳ್ಳಿಯ ಗಂಡುಗಳಿಗೆ ಮದುವೆಯ ಜವಾಬ್ದಾರಿಯ ಉಮ್ಮೇದೇ ಇಲ್ಲ ಎಂಬುದು ಒಳಗುಟ್ಟು.

ತಿಳಿದವರ ಪ್ರಕಾರ ಮದುವೆ ಎನ್ನುವುದು ಗಂಡಿಗೆ ತಿಳುವಳಿಕೆ ಬರುವುದಕ್ಕಿಂತ ಮೊದಲೇ ಆಗಬೇಕಾದ ಪ್ರಕ್ರಿಯೆ. ಪ್ರಕೃತಿಯಲ್ಲಿ ಗಂಡು ಎಂಬ ಪ್ರಾಣಿ ಸಹಜವಾಗಿ ಬೇಜವಾಬ್ದಾರಿ ಹಾಗೂ ಸೋಮಾರಿ. ಅದೊಂದು ಉನ್ಮಾದದ ಹಂತದ ಸುಮಾರು ಇಪ್ಪತ್ನಾಲ್ಕು ಇಪ್ಪತೈದ್ರ ವಯಸ್ಸಿನಲ್ಲಿ ಗಂಡಿಗೆ ಮದುವೆಯ ಉಮೇದು ಇರುತ್ತದೆ ಹಾಗೂ ಪ್ರಪಂಚದ ತಿಳುವಳಿಕೆ ಇರುವುದಿಲ್ಲ. ಆನಂತರ ಆತ ಹಗೂರವಾಗಿ ಬೇಜವಾಬ್ದಾರಿ ಜೀವನಕ್ಕೆ ಜಾರುತ್ತಾನೆ. ಕೆಲಸ ಕರ್ತವ್ಯ ಮಾಡಬಹುದು ಆದರೆ ಅದೇನೋ ನಿರುತ್ಸಾಹ ತುಂಬತೊಡಗುತ್ತದೆ. ಮದುವೆ ಜವಾಬ್ದಾರಿ ಹೊರೆ ಮುಂತಾದವುಗಳಾಗಿ ಅನ್ನಿಸತೊಡಗುತ್ತದೆ. ಇಲ್ಲಿ ಆಗಿದ್ದು ಅದೇ, ಹಳ್ಳಿಯಲ್ಲಿರುವವರು ಜೀವನೋತ್ಸಾಹ ಕಳೆದುಕೊಂಡು ಅಲೆದಾಡುತ್ತಿದ್ದಾರೆ ಎಂಬುದು ವಾಸ್ತವ ಸತ್ಯ. ಗಂಡೊಂದು ಮದುವೆಯಾಗಲೇ ಬೇಕೆಂಬ ಹಠಕ್ಕೆ ಬಿದ್ದರೆ ಹೆಣ್ಣುಗಳು ಖಂಡಿತಾ ಸಿಗುತ್ತಾರೆ. ಹೆಣ್ಣೆಂದರೆ ನೀರಿದ್ದಂತೆ, ಪಾತ್ರೆಯಲ್ಲಿದ್ದರೆ ಪಾತ್ರೆಯ ಆಕಾರ, ಲೋಟದಲ್ಲಿದ್ದರೆ ಲೋಟದ ಆಕಾರ. ಆದರೆ ಇಲ್ಲಿರುವುದು ಗಂಡುಗಳ ನಿರುತ್ಸಾಹ. ಮೊದಲಿನಂತೆ ಮನೆಬಾಗಿಲಿಗೆ ಹೆಣ್ಣುಗಳ ಜಾತಕ ಹಿಡಿದುಕೊಂಡು ಬರುವವರು ಇಲ್ಲ, ಹತ್ತೆಂಟು ಹೆಣ್ಣು ನೋಡಿ ಕೇಸರಿಬಾತು ಖಾಲಿ ಮಾಡುವ ಅವಕಾಶ ಇಲ್ಲ ಎಂಬುದನ್ನು ಬಿಟ್ಟರೆ ಇಂದೂ ಕೂಡ ಹಳ್ಳಿಯ ಗಂಡುಗಳಿಗೆ ಹೆಣ್ಣುಗಳು ಅವರವರ ಯೋಗ್ಯತೆಯನುಸಾರವಾಗಿ ಇವೆ. ಆದರೆ ಈ ಗಂಡುಗಳು ಅದೇಕೋ ಅದರಬಗ್ಗೆ ಆಲೋಚನೆ ಮಾಡದೆ ಹಾಯಾಗಿ ಇವೆ. ಅದಕ್ಕೆ ಗುಟ್ಕಾವೂ ಕಾರಣ ಎಂಬ ಆಪಾದನೆಯೂ ಇದೆ ಎನ್ನಿ. ಇರಲಿ ಕಾರಣವೇನಿರಲಿ ಸಮಸ್ಯೆ ಇರುವುದಂತೂ ನಿಜ. ಮಜ ನೋಡಿ ಇಂತಹ ಜ್ವಲಂತ ಸಮಸ್ಯೆ ಇದ್ದರೂ ನಮ್ಮ ಹಳ್ಳಿಯ ಕಡೆ ಐವತ್ತು ದಾಟಿದವರು ಯಶಸ್ವಿಯಾಗಿ ಎರಡನೆ ಮದುವೆ ಮಾಡಿಕೊಂಡು ಅಷ್ಟಕ್ಕೂ ತೃಪ್ತರಾಗದೆ ಸೊಪ್ಪಿನ ಬೆಟ್ಟದಲ್ಲಿ " ನವರಾತ್ರಿ ಸಂಜೆಯಲಿ ನಾನುಡಿವ ಮಾತಿನಲಿ" ಹಾಡಿಗೆ ಅವಕಾಶ ಮಾಡಿಕೊಡುತ್ತಿದ್ದಾರೆ. ಇದೇ ಅರ್ಥವಾಗದ್ದು ಎಂದರೆ. ಇರಲಿ ಕಾಲಾಯ ತಸ್ಮೈ ನಮಃ ಅಲ್ಲವೇ?

ಕೊನೆಯದಾಗಿ: " ಹಳ್ಳಿಗಳಲ್ಲಿ ಯುವಕರು ಮುದುಡುತ್ತಿದ್ದಾರೆ ಮುದುಕರು ಯುವಕರಾಗಿದ್ದಲೂ ಪುಟಿಯುತ್ತಿದ್ದರು ಈಗಲೂ ಪುಟಿಯುತ್ತಿದ್ದಾರೆ, ಯಾಕೆ ಹೀಗೆ ?" ಎಂದು ಆನಂದರಾಮ ಶಾಸ್ತ್ರಿಗಳನ್ನು ಕೇಳಿದೆ. ಅದಕ್ಕವರು "ಅರಳಿದ ಹೂವಿಗೆ ದುಂಬಿ ಜೇನು ತಮ್ಮ ಕೆಲಸ ಮಾಡದಿದ್ದರೆ ಸೊಳ್ಳೆಗಳನ್ನು ಹೂವು ಆಕರ್ಷಿಸುವುದು ಹೂವಿಗೆ ಅನಿವಾರ್ಯ" ಅಂತ ಅಂದು ಬಿಡೋದೆ. ಅವರ ಮಾತನ್ನು ಕೇಳಿದ ಹಳ್ಳಿಯ ಜೇನಿನಂತ ಯುವಕರಿಗೆ ಈ ಮಾತು ಹೇಳಬೇಕು ಅಂತ ಅನ್ನಿಸಿತು.
ಅಂತಿಮವಾಗಿ: ಕನ್ನಡಪ್ರಭದವರು ಈ ವಾರದ ಸಾಪ್ತಾಹಿಕದಲ್ಲಿ ನಿಮ್ಮ ಗ್ರಹಚಾರವೋ ನನ್ನ ಯೋಗವೋ ಯಾವುದೇ ಇರಲಿ ನನ್ನದೊಂದು ಕಥೆ ಪ್ರಕಟಿಸಿದ್ದಾರೆ ತದ್ಗತ್ ಆದಾಗ ಓದಿ, ಅಥವಾ ಓದದಿದ್ದರೂ ಹೀಗೆ ಸಿಕ್ಕಾಗ ಓದಿದೆ ಚೆನ್ನಾಗಿತ್ತು ಅಂತಲಾದರೂ ಹೇಳಿ. http://www.kannadaprabha.com/news.asp?id=KP420081004035740
ಟಿಪ್ಸ್: ಸಿಕ್ಕಾಪಟ್ಟೆ ಕಾರ ತಿಂದು ಬಾಯಿಬಾಯಿ ಬಡಕೊಳ್ಳುವಂತಾದಾಗ ಸಕ್ಕರೆ ತಿಂದು ಒದ್ದಾಡುವುದಕ್ಕಿಂತಲೂ ಸುಲಭದ ಮಾರ್ಗವೆಂದರೆ ಬಾಯಿ ಕಳೆದು ನಾಲಿಗೆ ಹೊರಗೆ ಚಾಚಿ ಬಗ್ಗಿ ಕುಳಿತುಕೊಳ್ಳುವುದು. ಆವಾಗ ನಾಲಿಗೆಯಿಂದ ಬುಳುಬುಳು ನೀರು ಬೀಳತೊಡಗುತ್ತದೆ. ಕ್ಷಣಮಾತ್ರದಲ್ಲಿ ಕಾರದ ಪ್ರಾಬ್ಲಂ ಮಾಯವಾಗಿ ಒಂಥರಾ ಮಜ ಸಿಗುತ್ತದೆ.