Friday, October 31, 2008

ಜೇನಿನಂತ ಜೇನು ಕೊನೆಯಲ್ಲಿ ಕನ್ನಡ




ನವೆಂಬರ್ ತಿಂಗಳು ಬಂತೆಂದರೆ ನನಗೆ ದಿನಾಲೂ ಜೇನು ಪೆಟ್ಟಿಗೆಯನ್ನು ನೋಡುವ ಕೆಲಸ ಆರಂಭವಾಗುತ್ತದೆ. ಮಳೆಗಾಲದ ಅಬ್ಬರ ಕಳೆದು ತಣ್ಣನೆಯ ಚಳಿ ಕೊರೆಯಲು ಆರಂಭವಾಗುವ ಈ ದಿನಗಳಲ್ಲಿ ವಾತಾವರಣ ಆಹ್ಲಾದಕರ. ಮಲಗಿದ್ದವನ ಹಿಡಕೊಂಡೆ ಎದ್ದವನಿಂದ ಒದೆಸಿಕೊಂಡೆ ಎನ್ನುವುದು ಚಳಿಯ ಧ್ಯೇಯ ವಾಕ್ಯ. ಹಪ್ಪರೆ ಮೈನವರಿಗೆ ಮೈಯೆಲ್ಲಾ ಉರಿಉರಿ. ಕೊಬ್ಬರಿ ಎಣ್ಣೆ ಹಾಕಿ ತಿಕ್ಕಿ ತಿಕ್ಕಿ ಸಾಫ್ ಮಾಡಬೇಕು. ಅಂತಹ ಚಳಿಗಾಲದಲ್ಲಿ ಜೇನುಪೆಟ್ಟಿಗೆಯಲ್ಲಿ ಅದೊಂದು ನಿರ್ಧಾರ ಮೊಳಕೆಯೊಡೆಯುತ್ತದೆ. ರಾಣಿ ಎಂಬ ಹೆಣ್ಣು ನೊಣ ತನ್ನ ಆ ನಿರ್ಧಾರವನ್ನು ಕೆಲಸಗಾರ ನೊಣಕ್ಕೆ ರವಾನಿಸುತ್ತದೆ. ಆ ನಿರ್ಧಾರ ಯಾವುದೆಂದು ಕೇಳಿದಿರಾ..? ಅದೇ ನಮ್ಮ ವಂಶದ ರಥ ಮುಂದುವರೆಯಲು ಗಂಡಿನ ಅವಶ್ಯಕತೆಯಿದೆ ಗಂಡು ಮೊಟ್ಟೆಯನ್ನಿಡಿ. ನಾನಿಡುವ ಲಾರ್ವಾ ಗಂಡು ನೊಣವಾಗಬೇಕು ಹಾಗಾಗಿ ಅದಕ್ಕೆ ಗಂಡುನೊಣವಾಗುವ ಆಹಾರ ನೀಡಿ. ಎಂದು ಫರ್ಮಾನು ಹೊರಡಿಸುತ್ತದೆ. ಜೂನ್ ತಿಂಗಳಿನಿಂದ ಗೂಡಿನಿಂದ ಅಕ್ಷರಶಃ ಮಾಯವಾಗಿದ್ದ ಗಂಡು ನೊಣಗಳು ನವೆಂಬರ್ ಹದಿನೈದು ಇಪ್ಪತ್ತರ ಹೊತ್ತಿಗೆ ಒಂದೊಂದೆ ಜೇನಿನ ಪ್ರಪಂಚದಲ್ಲಿ ಕಣ್ಣುಬಿಡಲಾರಂಭಿಸುತ್ತವೆ. ಜೇನಿನ ಪ್ರಪಂಚದಲ್ಲಿ ಗಂಡು ಎಂಬುದು ಕೇವಲ ಸಂತಾನೋತ್ಪತ್ತಿಯ ಕೆಲಸಕ್ಕೆ ಸೀಮಿತ. ಒಂದು ಗೂಡಿನ ಒಂದು ನೊಣಕ್ಕೆ ಆ ಭಾಗ್ಯ. ಅದು ಭಾಗ್ಯವೆನ್ನುತ್ತೀರೋ ಅಥವಾ ಅಬ್ಬಾ ಅನ್ನುತ್ತೀರೋ ಅದು ನಿಮಗೆ ಬಿಟ್ಟ ವಿಚಾರ. ಈಗ ಕತೆಗೆ ಬರೊಣ. ಹೀಗೆ ನವೆಂಬರ್ ತಿಂಗಳು ಮುಗಿಯುವ ಹೊತ್ತಿಗೆ ನೂರಾರು ಗಂಡು ನೊಣಗಳು ಪ್ರಾಯಕ್ಕೆ ಬಂದುಬಿಡುತ್ತವೆ. ಆವಾಗ ರಾಣಿ ನೊಣ ತನ್ನ ಕೆಲಸಗಾರ ನೊಣಗಳಿಗೆ ಮತ್ತೊಂದು ಫರ್ಮಾನು ಹೊರಡಿಸುತ್ತದೆ. ನಾವು ಈಗ ಹಿಸ್ಸೆ ಮಾಡಿಕೊಳ್ಳಬೇಕು, ಆ ಕಾರಣದಿಂದ ಹಿಸ್ಸೆಯಾಗಬೇಕು ಎಂದಾದಾಗ ಯಜಮಾನಿಕೆಗೆ ರಾಣಿ ನೊಣದ ಅವಶ್ಯಕತೆಯಿದೆ ಹಾಗಾಗಿ ನಾನು ಇಡುವ ಮೊಟ್ಟೆ ರಾಣಿಯಾಗುವಂತೆ ರಾಜಾಷಾಹಿ ಆಹಾರ ಕೊಡಿ ಎನ್ನುತ್ತದೆ. ಕೆಲಸಗಾರ ನೊಣಗಳು ತಮ್ಮ ಕುಟುಂಬದ ಎಲ್ಲಾ ನೊಣಗಳನ್ನು ಲೆಕ್ಕ ಮಾಡಿ ಎಷ್ಟು ರಾಣಿ ಮೊಟ್ಟೆಗಳನ್ನು ಇಡಬಹುದೆಂದು ಎಣಿಸಿ ಒಂದೈದು ಹೊಸ ರಾಣಿಮೊಟ್ಟೆ ಸಿದ್ಧಪಡಿಸುತ್ತವೆ. ರಾಣಿ ಮೊಟ್ಟೆ ೧೩ ರಿಂದ ೧೫ ದಿವಸಗಳೊಳಗೆ ರಾಣಿಯಾಗುತ್ತವೆ. ಅಲ್ಲಿಂದ ಹಿಸ್ಸೆ ಪ್ರಕ್ರಿಯೆ ಷುರು. ಹೊಸ ರಾಣಿ ಒಂದೊಂದಾಗಿ ಹೊರಬಂದಂತೆ ಗಂಡು ನೋಣಗಳು ಮೀಸೆಯಮೇಲೆ ಕೈ ಅಲ್ಲಲ್ಲ ಕಾಲನ್ನಿಟ್ಟು ತಿರುವಿಕೊಳ್ಳಲು ಪ್ರಾರಂಭಿಸುತ್ತವೆ. ಹೊಸರಾಣಿ ಹೊರ ಬಂದು ನಾಲ್ಕೈದು ತಾಸಿನೊಳಗೆ ಒಂದಿಷ್ಟು ಗಂಡು ನೊಣ ಹಾಗೂ ಮತ್ತೊಂದಿಷ್ಟು ಕೆಲಸಗಾರ ನೊಣವನ್ನು ಕಟ್ಟಿಕೊಂಡು ಬೇರೆ ಗೂಡಿಗೆ ರೈಟ್. ಗೂಡು ಸೇರಿ ಕೆಲಸಗಾರ ನೊಣ ತತ್ತಿಕಟ್ಟುವ ಕೆಲ್ಸ ಆರಂಬಿಸುತ್ತಿದ್ದಂತೆ ರಾಣಿ ನೊಣ ಮಿಲನ ಮಹೋತ್ಸವದ ಹಾರಾಟ ಆರಂಬಿಸುತ್ತದೆ. ಒಂದಿಷ್ಟು ಗಂಡು ನೊಣದೊಂದಿಗೆ ಎತ್ತರಕ್ಕೆ ಎತ್ತರದೆತ್ತರಕ್ಕೆ ಏರುವ ರಾಣಿ ತನ್ನಷ್ಟು ಎತ್ತರಕ್ಕೇರುವ ಒಂದೇ ಒಂದು ಗಂಡಿನೊಂದಿಗೆ ಬಾನಲ್ಲಿ ಮಧುಚಂದ್ರವನ್ನು ಆಚರಿಸುತ್ತದೆ. ರಾಣಿಯೊಡನೆ ಮಿಲನ ಹೊಂದಿದ ಮರುಕ್ಷಣ ಆ ಗಂಡುನೊಣ ಸಾವನ್ನಪ್ಪುತ್ತದೆ. ಮಿಕ್ಕ ಗಂಡು ನೊಣಕ್ಕೆ ರಾಣಿಯೊಡನೆ ಸೇರುವ ಅವಕಾಶದೊರೆಯದಿದ್ದರೂ ಜೀವದಾನವಾಗಿರುತ್ತದೆ. ಮತ್ತೆ ಜೂನ್ ತಿಂಗಳು ತನಕ ಪುಕ್ಕಟ್ಟೇ ಕೆಲಸಮಾಡದೇ ತುಪ್ಪ ತಿನ್ನುತ್ತಾ ಆರಾಮಾವಾಗಿರುವ ಯೋಗ.ಒಮ್ಮೆ ಗಂಡನ್ನು ಸೇರಿದ ರಾಣಿ ನೊಣ ಅದರ ಜೀವಿತಾವಧಿಯಾದ ಮೂರು ವರ್‍ಷಗಳ ತನಕ ನಿರಂತರ ಅವಶ್ಯಕತೆ ಇದ್ದರೆ ದಿನವೊಂದಕ್ಕೆ ಒಂದೂವರೆ ಸಾವಿರ ಮೊಟ್ಟೆಗಳವರೆಗೂ ಇಡುತ್ತಾ ಸಂಸಾರ ನಡೆಸುತ್ತದೆ. ಮತ್ತೆ ಜೂನ್ ತಿಂಗಳು ಆರಂಭವಾಗುತ್ತಿದಂತೆ ಪ್ರಕೃತಿಯಲ್ಲಿ ಜೇನಿಗೆ ಬೇಕಾದ ಆಹಾರ ಸಿಗದ ಕಾರಣ ಅನಾವಶ್ಯಕ ಗಂಡು ನೊಣಗಳ ಜೀವಕ್ಕೆ ಮೊದಲ ಕುತ್ತು. ಎಲ್ಲಾ ಗಂಡುನೊಣಗಳನ್ನು ಆಹಾರ ಕೊಡದೆ ಫಿನಿಶ್ ಮಾಡಿಬಿಡುತ್ತದೆ.ಮತ್ತೆ ನವೆಂಬರ್ ಗೆ ಹೊಸ ಸೃಷ್ಟಿ. ಇದು ಪ್ರಕೃತಿಯ ವಿಚಿತ್ರದಾಟ.

ಹಾ ಈ ಸೃಷ್ಟಿ ರಹಸ್ಯವನ್ನು ಹೆಂಗಸರಿಗೆ ಹೇಳಬೇಡಿ .....ಮತ್ತೆ ಅನುಕರಿಸಿದರೆ ನಮ್ಮ ಗತಿ... !

ನಾನು ಗಂಡು ನೊಣ ಪೆಟ್ಟಿಗೆಯಲ್ಲಿ ಕಂಡೊಡನೆ ಅವುಗಳನ್ನು ಕೃತಕವಾಗಿ ಹಿಸ್ಸೆಮಾಡಿಸಬೇಕು. ಇಲ್ಲದಿದ್ದರೆ ನೀವು ನಮ್ಮಲ್ಲಿಗೆ ಬಂದಾಗ ಕೊಡಲು ಒಂದು ತೊಟ್ಟೂ ತುಪ್ಪ ಇರುವುದಿಲ್ಲ. ಹಾಗಾಗಿ ನಿತ್ಯ ಪೆಟ್ಟಿಗೆಯ ಮುಚ್ಚಳ ತೆಗೆದು ಬಂದೆಯಾ.. ಹೀರೋ..! ಎಂದು ನೋಡುತ್ತಲಿದ್ದೇನೆ. ಜೇನಿನ ಜೀವನದಲ್ಲಿ ಇಂತಹ ಹತ್ತಾರು ಅಚ್ಚರಿಯ ವಿಷಯಗಳಿವೆ ನಮ್ಮ ನಿಮ್ಮ ಜೀವನದಲ್ಲಿ ಇರುವಂತೆ. ಆದರೂ ಅದೇನೆ ಇರಲಿ ಜೇನು ನಮ್ಮ ಕನ್ನಡಕ್ಕೂ ತುಂಬಾ ನಂಟು ಎಂಬ ಹೊಸ ವಿಚಾರವನ್ನು ಸೇರಿಸಬಹುದು. ಕಾರಣ ಕನ್ನಡ ವರ್ಷಕ್ಕೊಮ್ಮೆ ಶುರುವಾಗುವುದು ನವಂಬರ್ ಒಂದರಿಂದ ಮತ್ತು ಜೇನಿನ ಹೊಸ ಜೀವನ ಚಕ್ರದ ಚ ಟುವಟಿಕೆ ಯ ಆರಂಭವೂ ನವೆಂಬರ್ರೇ.... ಹ್ಯಾಪಿ ಕನ್ನ್ಡಡ ರಾಜ್ಯೋತ್ಸವ, ವಣಕ್ಕಂ, ನಮಸ್ಕಾರಮು.

ಕೊನೆಯದಾಗಿ: ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಇಂದು ಸಿಕ್ಕಿದೆ!ಸಿರಿಗನ್ನಡಂ ಗೆಲ್ಗೆ!ನಮ್ಮದು ಪರಿಪೂರ್ಣ ಭಾಷೆ!ಇಷ್ಟು ಪರಿಪೂರ್ಣವಾಗಿ ಬರೆಯಲು ಮತ್ತು ಉಚ್ಛರಿಸಲುಬೇರಾವ ಭಾಷೆಯಲ್ಲಿ ಸಾಧ್ಯ?
ಶಾಂತಿ ಸೌಹಾರ್ಧ ಕನ್ನಡ ನಾಡಿನಲ್ಲಿ ಮತ್ತು ನಮ್ಮ ದೇಶದಲ್ಲಿ ನೆಲೆಸಲಿ!ಇಂದು ಎಲ್ಲರಿಗೂಸಂತೋಷದ ರಾಜ್ಯೋತ್ಸವ! ಎಂದು ಪೆಜತ್ತಾಯ ಮೈಲ್ ಮಾಡಿದ್ದಾರೆ ಅವರಿಗೆ ಏನೆಂದು ಉತ್ತರಿಸಲಿ ಎಂದು ಆನಂದ ರಾಮಾ ಶಾಸ್ತ್ರಿಗಳನ್ನು ಕೇಳಿದೆ ಅದಕ್ಕವರು ಓಕೆ, ಥ್ಯಾಂಕ್ಯೂ ಸೇಮ್ ಟು ಯೂ ಅಂತ ಉತ್ತರಿಸು ಅದೇ ಸರಿಯಾದ ಕನ್ನಡ ಎಂದು ಬಿಡೋದೆ


Tuesday, October 28, 2008

ದೀಪಾವಳಿ ವಿಶೇಷಾಂಕ ಬಿಡುಗಡೆ ಸಮಾರಂಭ

ಆತ್ಮೀಯರೆ
ನಾಳೆ ಅಂದರೆ ೨೯-೧೦-೨೦೦೮ ರ ಸಂಜೆ ನಮ್ಮ ತಲವಾಟ ಶಾಲಾ ಆವರಣದಲ್ಲಿ ಕಟ್ಟೆ ವಾರಪತ್ರಿಕೆಯ ದೀಪಾವಳಿ ವಿಶೇಷಾಂಕ ಬಿಡುಗಡೆ ಸಮಾರಂಭವನ್ನು ಚಿಂತನ ವಿಕಾಸ ವಾಹಿನಿ ತಲವಾಟ ರವರು ಹಮ್ಮಿಕೊಂಡಿದ್ದಾರೆ. ಹಬ್ಬವನ್ನು ಇನ್ನಷ್ಟು ರಂಗಾಗಿಸೋಣ ಬನ್ನಿ. ಬರಲಾಗದಿದ್ದರೆ ನವೆಂಬರ್ ೧ ನೆ ತಾರೀಖು ನಿಮಗೆ ವಿಶೇಷಾಂಕದ ಪಿಡಿಎಫ್ ಪ್ರತಿ ಆನ್ ಲೈನ್ ಮುಖಾಂತರ ತಲುಪುತ್ತದೆ
ಧನ್ಯವಾದಗಳು
ಚಿಂತನ ವಿಕಾಸ ವಾಹಿನಿ
ಕಟ್ಟೆ ಪತ್ರಿಕೆ ತಲವಾಟ