Thursday, March 26, 2009

ಉಗಾದಿ ಶುಭಾಶಯ


ಎಲ್ಲಾ ಓದುಗರಿಗೂ ಉಗಾದಿಯ ಹಾರ್ದಿಕ ಶುಭಾಶಯಗಳು.

Wednesday, March 25, 2009

ವಾಸ್ತವ

ಅವನಿಗೆ ಮತ್ತೆ ವಿಚಿತ್ರ ಅನುಭವವಾಗತೊಡಗಿತು. ಹೊಟ್ಟೆಯೊಳಗಿನಿಂದ ಯೊಚನೆಗಳು ಭುಗಿಲೇಳುತ್ತಿದ್ದವು. ಅವುಗಳನ್ನು ನಿಲ್ಲಿಸುವ ಪರಿ ತಿಳಿಯದೆ ಪರದಾಡತೊಡಗಿದ. ಎದುರು ಕುಳಿತ ಸ್ವಾಮೀಜಿಯ ಕಣ್ಣುಗಳನ್ನು ದುರುಗುಟ್ಟಿ ನೋಡಿದ. ಐದು ನಿಮಿಷಕ್ಕೆ ಮೊದಲು ಫಲತಾಂಬೂಲ ಅರ್ಪಿಸಿ ಪಾದಕ್ಕೆ ಎರಗುವಾಗಿನ ಮುಖಭಾವ ಈಗಿರಲಿಲ್ಲ. ಕಣ್ಣುಗಳು ಕೆಂಪೇರತೊಡಗಿತು. ಹೊಕ್ಕುಳಬಳ್ಳಿ ಛಳಕ್ಕೆಂದಿತು.ಗಂಟಲಿನಾಳಾದಿಂದ ಧ್ವನಿ ಹೊಮ್ಮತೊಡಗಿತು.
"ನಮ್ಮಂತೆ ಮನುಷ್ಯರು ನೀವು, ಕಾವಿ ಬಟ್ಟೆ ಉಟ್ಟಾಕ್ಷಣ ಬೇರೆಯಾಗುವ ಬಗೆ ಹೇಗೆ. ನಮ್ಮಷ್ಟೆ ದುಡ್ಡಿನ ವ್ಯಾಮೋಹ ನಿಮಗೆ. ದುಡ್ಡಿಲ್ಲದ ಕ್ಷಣವನ್ನು ನೀವೂ ನಮ್ಮಂತೆ ಊಹಿಸಿಕೊಳ್ಳಲಾರಿರಿ. ಜೀವನದ ಅಭದ್ರತೆ ನಮ್ಮಂತೆ ನಿಮಗೂ ಕಾಡುತ್ತದೆ. ಯಾಕೆ? ಅಷ್ಟೇ ಯಾಕೆ? ಸ್ವಪ್ನ ಸ್ಖಲನ ನಿಮಗೂ ಆಗಿಲ್ಲವೇನು?. ಆವಾಗ ಸುಂದರ ಸ್ತ್ರೀ ನಿಮ್ಮ ಕನಸಿನಲ್ಲಿಯೂ ಬರಲಿಲ್ಲವೇನು?. ಸ್ಖಲನವಾಗಲಿಲ್ಲ ಎಂದು ನನ್ನ ಬಳಿ ಸುಳ್ಳು ಹೇಳಬೇಡಿ, ಆಗದಿದ್ದರೆ ಅದು ಪ್ರಕೃತಿಗೆ ವಿರುದ್ಧವಾದ ಕ್ರಿಯೆ. ಆವಾಗ ನೀವು ಮುವತ್ತೈದನೇ ವಯಸ್ಸಿನೊಳಗೆ ಇಹಲೋಕ ತ್ಯಜಿಸಲೇಬೇಕಿತ್ತು." ಹೀಗೆ ಮುಂದುವರೆಯುತ್ತಲೇ ಇತ್ತು.
ಸ್ವಾಮೀಜಿಗಳ ಶಿಷ್ಯ ಕೋಠಿ ಒಮ್ಮೆ ಭ್ರಮಿಸಿತಾದರೂ ನಂತರ ಎಚ್ಚೆತ್ತುಕೊಂಡು ಅವನನ್ನು ಹೆಚ್ಚುಕಮ್ಮಿ ಹೊತ್ತುಕೊಂಡು ಆಚೆ ಬಿಟ್ಟಿತು. ಗಣ್ಯ ವ್ಯಕ್ತಿಯಾದ್ದರಿಂದ ಧರ್ಮದೇಟು ಬೀಳಲಿಲ್ಲ, ಸಾರ್ವಜನಿಕರ ದೃಷ್ಟಿಯಲ್ಲಿ ಅವನಿಗೆ ಮಾನಸಿಕ ರೋಗಿಯ ಪಟ್ಟ ದೊರಕುವ ಲಕ್ಷಣ ನಿಚ್ಚಳವಾಗತೊಡಗಿತು.
ಹಾಗಂತ ಅವನೇನು ಹುಚ್ಚನಲ್ಲ, ಮಾನಸಿಕ ರೋಗಿಯೂ ಅಲ್ಲ. ಎಲ್ಲರಂತೆ ಸಾಮಾನ್ಯನೂ ಅಲ್ಲ. ಇಡೀ ತಾಲ್ಲೂಕಿನಲ್ಲಿ ಅವನದ್ದೆ ಆದ ಹೆಸರು ಗಳಿಸಿದ್ದ. ಇಪ್ಪತ್ತು ವರ್ಷಗಳಿಂದ ಹಲವಾರು ಸಂಘಸಂಸ್ಥೆಗಳಲ್ಲಿ, ಮಠ ಮಾನ್ಯಗಳಲ್ಲಿ ದುಡಿದು ಜನನಾಯಕ ಎನಿಸಿಕೊಂಡಿದ್ದ.ಇದೇ ವೇಗದಲ್ಲಿ ಮುನ್ನುಗ್ಗಿದರೆ ಆತ ಶಾಸಕನೂ ಆಗಬಹುದೆಂಬ ಮಾತು ತಾಲ್ಲೂಕಿನಾದ್ಯಂತ ಪ್ರಚಾರದಲ್ಲಿತ್ತು.ನಲವತ್ತರ ಸಣ್ಣ ವಯಸ್ಸಿನಲ್ಲಿ ಅವನಿಗೆ ಸಿಕ್ಕ ಜನಮನ್ನಣೆಗೆ ಹಲವಾರು ಜನರು ಕರುಬುತ್ತಿದ್ದರು. ಆದರೆ ಅಷ್ಟರಲ್ಲಿ ಈ ತರಹದ ವಿಚಿತ್ರ ಪರಿಸ್ಥಿತಿಯಲ್ಲಿ ಸಿಕ್ಕು ಪರಿಹಾರ ಕಾಣದೆ ಮಿಸುಕಾಡುತ್ತಿದ್ದ.
ಮೊದಲ ಬಾರಿ ಈ ರೀತಿ ಅನುಭವವಾದಾಗ ಆತ ಬಹಳ ಜನರ ಪ್ರತಿಭಟನೆ ಎದುರಿಸಬೇಕಾಯಿತು.ಅಡಿಕೆದರದ ಕುಸಿತಕ್ಕೆ ಬೆಂಬಲ ಬೆಲೆ ನೀಡುವುದರ ಕುರಿತು ಸರ್ಕಾರದ ವಿರುದ್ಧ ಪ್ರತಿಭಟನೆಯೊಂದರಲ್ಲಿ ಭಾಷಣ ಮಾಡುತ್ತಿದ್ದ. ಇದ್ದಕ್ಕಿದ್ದಂತೆ ಹೊಕ್ಕುಳಬಳ್ಳಿ ಛಳಕ್ಕೆಂದಿತು. ಒಂದರ ಹಿಂದೆ ಒಂದರಂತೆ ಆಲೋಚನೆಗಳು ನಿರಂತರವಾಗಿ ಮೂಡಿ ಬರತೊಡಗಿದವು. ಎಲ್ಲವನ್ನೂ ದೊಡ್ಡದಾಗಿ ಕೂಗಿ ಹೇಳಬೇಕೆನಿಸಿತು. ತಲೆ ಸಿಡಿದು ಹೋಗುತ್ತಿರುವ ಅನುಭವ ತಡೆಯಲಾರದೆ
" ಮಹನೀಯರೆ ಅಡಿಕೆಗೆ ಈಗಾಗಲೆ ಇರುವ ದರ ಸಾಕಷ್ಟಿದೆ, ಬೆಲೆ ಹೆಚ್ಚಾದಾಗ ನಾವು ಸರ್ಕಾರಕ್ಕೆ ಕೊಡುವುದಿಲ್ಲ.ಕಡಿಮೆಯಾದಾಗ ಕೇಳಬಾರದು. ಇಷ್ಟಕ್ಕೂ ಸುಸ್ಥಿರ ಸಮಾಜದ ನಿರ್ಮಾಣಕ್ಕೆ ಅಡಿಕೆಯಿಂದ ಹಾನಿಯೇ ಹೊರತು ಪ್ರಯೋಜನವಿಲ್ಲ. ಅಡಿಕೆ ತಂಬಾಕಿನೊಂದಿಗೆ ಸೇರಿದ ಕಾರಣಕ್ಕೆ ಅದಕ್ಕೊಂದು ಬೆಲೆ. ಗುಟ್ಕಾದ ಸೇವನೆಯಿಂದ ನಮ್ಮ ಯುವಜನತೆಯ ದೇಹ ರೋಗಗಳ ಗೂಡಾಗುತ್ತಿದೆ. ನಮ್ಮ ಮಕ್ಕಳು ಅಡಿಕೆ ತಿಂದರೆ ಅಡಿಕೆ ಬೆಳೆಗಾರರಾದ ನಾವು ಹೊಡೆಯುತ್ತೇವೆ. ಹಾಗಿದ್ದ ಮೇಲೆ ಬೇರೆಯವರು ತಿಂದು ಹಾಳಾಗಲಿ ಎಂದು ಬಯಸುವುದು ಶುದ್ಧ ತಪ್ಪು.ಇಲ್ಲಿ ಸೇರಿರುವ ಅಡಿಕೆ ಬೆಳೆಗಾರರಲ್ಲಿ ಅವರು ಸ್ವತಃ ಉಪಯೋಗಿಸುವ ಅಡಿಕೆ ಎಷ್ಟು?.ಅವರೇಕೆ ಉಪಯೋಗಿಸುವುದಿಲ್ಲ. ಯೋಚಿಸಿ ಅಡಿಕೆ ತಂಬಾಕುಗಳಂತಹ ಸಮಾಜದ ಆರೋಗ್ಯ ಹಾಳುಮಾಡುವ ಬೆಳೆಗಳನ್ನು ನಿಷೇಧಿಸಬೇಕು. ಆಹಾರ ಪದಾರ್ಥಗಳನ್ನು ಬೆಳೆಯುವ ಭತ್ತದ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ ಅವರಿಗೆ ಸರ್ಕಾರದಿಂದ ಸಹಾಯಧನ ನಿಡಬೇಕು.ಅಡಿಕೆಗೆ ತೆರಿಗೆ ಹಾಕಿ ಆ ಹಣವನ್ನು ಆಹಾರ ಪದಾರ್ಥ ಬೆಳೆಯುವ ರೈತರಿಗೆ ನೀಡಬೇಕು"
ಅವನಿಂದ ಓತಪ್ರೋತವಾಗಿ ಹರಿದುಬರುತ್ತಿತ್ತು. ಅಡಿಕೆಗೆ ಬೆಂಬಲ ನೀಡುವುದಕ್ಕಾಗಿ ಸೇರಿದ್ದ ಸಭೆಯಲ್ಲಿ ಅಡಿಕೆಬೆಳೆಗಾರರೇ ಜಾಸ್ತಿ ಇದ್ದುದರಿಂದ ಅವನನ್ನು ಅಲ್ಲಿಂದ ಆಚೆ ಕರೆದುಕೊಂಡುಹೋಗುವುದಕ್ಕೆ ಪರದಾಟ ಪಡುವಂತಾಯಿತು. ಸಭಿಕರು ಕೈಗೆ ಸಿಕ್ಕ ವಸ್ತುಗಳನ್ನು ಅವನತ್ತ ಎಸೆದರು.ಅದೃಷ್ಟವಶಾತ್ ಅವನಿಗೆ ಅದು ತಗುಲಲಿಲ್ಲ.
ಸಭೆಯಲ್ಲಿ ಅಷ್ಟು ಹೇಳಿದ ನಂತರ ಅವನ ಮನಸ್ಸಿನ ಸ್ಥಿತಿ ನಿಯಂತ್ರಣಕ್ಕೆ ಬಂದಿತ್ತು. ನಂತರ ತನ್ನಿಂದಾದ ಪ್ರಮಾದದ ಅರಿವಾಯಿತು. ತಾನು ಸಭೆಯಲ್ಲಿ ಹೇಳಿದ ಮಾತುಗಳನ್ನು ಒಮ್ಮೆ ಜ್ಞಾಪಿಸಿಕೊಂಡ "ಅರೆ ನಿಜ ತಾನು ಸಭೆಯಲ್ಲಿ ಹೇಳಿದ್ದು ಸತ್ಯ. ಹೇಳಬಾರದ ಸತ್ಯವಲ್ಲ ಆದರೆ ಅಲ್ಲಿ ಅದು ಕಹಿ ಸತ್ಯ. ಇದೊಂದೇ ಕಾರಣದಿಂದ ಅಡಿಕೆ ಬೆಳೆಗಾರರ ವಕ್ರದೃಷ್ಟಿಗೆ ಗುರಿಯಾದೆನಲ್ಲ ಇಪ್ಪತ್ತು ವರ್ಷಗಳ ಶ್ರಮ ಮಣ್ಣುಪಾಲಾಯಿತಲ್ಲ " ಎಂದು ವ್ಯಥೆಪಟ್ಟ.
ನಂತರ ಒಬ್ಬನೆ ಕುಳಿತು ಆ ಕ್ಷಣದ ಯೋಚನೆ ಮಾಡಿದಾಗೆಲ್ಲಾ ಅವನಿಗೆ ಭಯವಾಗುತ್ತಿತ್ತು. ತನ್ನ ನಿಯಂತ್ರಣದಲ್ಲಿಲ್ಲದ ಇದು ಖಾಯಿಲೆಯಾ ಎಂಬ ಚಿಂತೆ ಅವನನ್ನು ಕಾಡಿತು. ಛೆ ತನ್ನಂತ ದೃಢಮನಸ್ಸಿನವನಿಗೆ ಇಪ್ಪತ್ತು ವರ್ಷಗಳಿಂದ ನೂರಾರು ಸ್ವಭಾವದ ಸಾವಿರಾರು ಜನರೊಂದಿಗೆ ವ್ಯವಹರಿಸಿದವನಿಗೆ ಖಾಯಿಲೆ ಅದೂ ಮಾನಸಿಕೆ ಖಾಯಿಲೆ ಸಾಧ್ಯವೆ ಇಲ್ಲ ಎಂದು ಸಮಾಧಾನ ಮಾಡಿಕೊಂಡರೂ ಮರುಕ್ಷಣ ನೆನಪುಗಳು ಕಾಡುತ್ತಿತ್ತು. ಆ ತರಹದ ಯೋಚನೆಗಳು ಸ್ವಲ್ಪ ದಿನ ಕಾಡಿ ನಂತರ ಮಾಯವಾಯಿತು. ಅಷ್ಟರಲ್ಲಿ ಅಡಿಕೆಗೆ ಉತ್ತಮ ಧಾರಣೆ ಬಂದಿದ್ದರಿಂದ ಜನರೂ ಅದನ್ನು ಮರೆತರು.
ಎರಡನೆ ಸಲ ಹೊಕ್ಕುಳ ಬಳ್ಳಿ ಛಳಕ್ಕೆಂದಾಗ ಆತ ಸ್ವಾಮೀಜಿಗಳೊಂದಿಗೆ ಪ್ರಮುಖವಾದ ವಿಷಯದ ಸಂವಾದದಲ್ಲಿದ್ದ. ಜನರು ಈ ಬಾರಿ ಮಾತ್ರ ಕ್ಷಮಿಸಲಿಲ್ಲ. ಗುರುದ್ರೋಹಿ ಎಂದರು,ಬಹಿಷ್ಕಾರ ಹಾಕುವ ಪ್ರಸ್ತಾಪವೂ ಬಂತು, ಸ್ವಾಮೀಜಿಗಳ ಬಳಿ ನಿಯೋಗವೊಂದು ಹೋಯಿತು. ಅದರ ನೇತ್ರತ್ವವನ್ನು ಅವನ ಏಳ್ಗೆಯನ್ನು ಸಹಿಸಲಾರದವನೊಬ್ಬ ವಹಿಸಿದ್ದ. ಗುರುಗಳಿಗೆ ಹೇಳಬಾರದ್ದನ್ನೆಲ್ಲಾ ಹೇಳಿದ ಆತನ ವರ್ತನೆಯನ್ನು ಖಂಡಿಸಿದರು, ಅವನಿಗೆ ಮಠದಲ್ಲಿ ನೀಡಲಾದ ಹುದ್ದೆಯನ್ನು ವಾಪಾಸುಪಡೆದು ಸಮಾಜದಿಂದ ಆತನನ್ನು ಹೊರಗಟ್ಟುವಂತೆ ನಿರ್ಣಯ ಕೈಗೊಳ್ಳಲು ಒತ್ತಾಯಿಸಿದರು. ಆದರೆ ಸ್ವಾಮೀಜಿಗಳು ಮಾತ್ರಾ ಮುಗುಳ್ನಕ್ಕು ನಿಯೋಗದ ಕ್ರಮವನ್ನು ಅನುಷ್ಠಾನಗೊಳಿಸದೆ ಅವರಿಗೆ ಮಂತ್ರಾಕ್ಷತೆ ಕೊಟ್ಟು ಕಳುಹಿಸಿದರು. ಸ್ವಾಮೀಜಿಯ ವರ್ತನೆ ನಿಯೋಗದವರಿಗೆ ಅರ್ಥವಾಗದಿದ್ದರೂ ಸ್ವಾಮಿಜಿಗೆ ಅವನಾಡಿದ ನಗ್ನ ಸತ್ಯದ ಮಹತ್ವ ತಿಳಿದಿತ್ತು.
ಅವನಿಗೆ ಕುಳಿತಲ್ಲಿ ನಿಂತಲ್ಲಿ ನಿಯಂತ್ರಣ ಮೀರಿದ ತನ್ನ ವರ್ತನೆಯ ಭಯ ಆವರಿಸತೊಡಗಿತು. ಸ್ವಾಮೀಜಿಯ ಬಳಿ ಕ್ಷಮಾಪಣೆ ಕೇಳಲು ಅವನು ಸಿದ್ಧನಿದ್ದ ಆದರೆ ಸ್ವಾಮೀಜಿಯ ಪರಿವಾರ ಇವನನ್ನು ಮಠದ ಆವರಣ ಪ್ರವೇಶಕ್ಕೆ ಅವಕಾಶ ಕೊಡಲಿಲ್ಲ. ಸ್ವಾಮೀಜಿ ದರ್ಶನಕ್ಕೆ ಪೂರ್ಣ ಪ್ರಮಾಣದ ಮನಸ್ಸಿನಿಂದ ಆತನಿಗೆ ಹೋಗಲು ಧೈರ್ಯವಿರಲಿಲ್ಲ. ಮತ್ತೆ ಮೊದಲಿನಂತೆ ಆದರೆ ಎಂಬ ಹೆದರಿಕೆ. ಮನೋವೈದ್ಯರ ಭೇಟಿ ಮಾಡುವುದೇ ಸರಿಯಾದ ಕ್ರಮ ಎಂದು ಪರಿಚಯದವರೊಬ್ಬರು ಸಲಹೆ ಇತ್ತರು. ತಾನು ಮನೋರೋಗಿ ಅಂತ ಸಮಾಜ ಪರಿಗಣಿಸಿಬಿಡಬಹುದೆಂಬ ಭಯ ಇದ್ದರೂ ಸಲಹೆ ತಿರಸ್ಕರಿಸಲು ಆಗದೆ ಒಪ್ಪಿಕೊಂಡ.
ಮರುಕ್ಷಣ ಆತನಿಗೆ ಅನಿಸಿತು. ನನ್ನ ವರ್ತನೆಯಲ್ಲಿ ತಪ್ಪೇನಿದೆ?. ನಾನಾಡಿದ ಮಾತುಗಳು ಪಥ್ಯವಾಗದಿರಬಹುದು ಆದರೆ ಸತ್ಯವಂತೂ ಹೌದು.ಎಷ್ಟೊಂದು ದಿವಸಗಳಿಂದ ನಿಜವಾದ ಪ್ರಪಂಚದ ಕುರಿತು ಮನದೊಳಗೆ ಹೀಗೆಯೇ ಯೋಚಿಸುತ್ತಿರಲಿಲ್ಲವೇ? ಡಂಬಾಚಾರದ ಬಗ್ಗೆ ಚಿಂತಿಸಿರಲಿಲ್ಲವೆ? ಈಗ ಅದನ್ನು ಹೇಳಿಯಾಗಿದೆ ಅಷ್ಟೆ....... ಹೌದು ತಪ್ಪಿದ್ದೇ ಅಲ್ಲಿ "ನ ಬ್ರೂಯಾತ್ ಸತ್ಯಮಪ್ರಿಯಂ" ಹೈ ಸ್ಕೂಲಿನಲ್ಲಿ ಸಂಸ್ಕೃತ ಮೇಷ್ಟು ಹೇಳಿಕೊಟ್ಟ ಶ್ಲೋಕದ ಸಾಲುಗಳು ನೆನಪಾದವು. ಹಾಗಂದಮೇಲೆ ನನ್ನಲ್ಲೇನೋ ದೋಷವಿದೆ ಅದನ್ನು ಪರಿಹರಿಸಿಕೊಳ್ಳಬೇಕು ಎಂದು ಮನೋವೈದ್ಯರಬಳಿ ತೆರಳಿದ.
ಈಗ ಬೆಳಿಗ್ಗೆ ಮೂರು ಮಾತ್ರೆಗಳೊಂದಿಗೆ ಅವನ ದಿನಚರಿ ಆರಂಭವಾಗುತ್ತಿತ್ತು ರಾತ್ರಿ ಮೂರು ಮಾತ್ರೆಗಳೊಂದಿಗೆ ಮುಗಿಯುತ್ತಿತ್ತು.ದಿನದ ಹೆಚ್ಚಿನ ಭಾಗ ನಿದ್ರೆಯಲ್ಲಿ ಕಳೆಯುತ್ತಿತ್ತು. ಯೋಚನೆಗಳೆ ಬರುತ್ತಿರಲಿಲ್ಲ ಇನ್ನು ಹೇಳುವುದೆಲ್ಲಿ.ಆದರೆ ಅದೂ ಕೂಡ ಹೆಚ್ಚು ದಿನಗಳ ಕಾಲ ತಡೆಯಲಿಲ್ಲ.
ಮೂರು ತಿಂಗಳ ನಂತರ ಅವನ ತಂದೆಯ ಶ್ರಾಧ್ದದ ದಿನ ಮತ್ತೆ ಹೊಕ್ಕುಳಬಳ್ಳಿ ಛಳಕ್ಕೆಂದಿತು. ಈಗ ಮಾತಿನಲ್ಲಿ ಮೊದಲಿನಷ್ಟು ಗಡಸುತನವಿರಲಿಲ್ಲ. ನಿಧಾನವಾದರೂ ಓತಪ್ರೋತವಾಗಿ ಮಾತುಗಳು ಹೊರಬರುತ್ತಿತ್ತು.ಈ ಬಾರಿ ಶ್ರಾದ್ಧ ಮಾಡಿಸಲು ಬಂದ ಪುರೋಹಿತರು ಅವನ ಧಾಳಿಗೆ ತುತ್ತಾಗಿದ್ದರು.
" ನೀವು ಪುರೋಹಿತರುಗಳೆಂದರೆ ದೇವರ ಏಜೆಂಟರಾ? "ಮಾತೃ ದೇವೋಭವ ಪಿತೃ ದೇವೋ ಭವ" ಎಂದು ಆಶೀರ್ವದಿಸುವ ನೀವು ನಿಮ್ಮ ತಂದೆತಾಯಿಂದರನ್ನು ಕಾಲಿನ ಕಸಕ್ಕಿಂತ ಕಡೆಗಾಣಿಸುವುದೇಕೆ. ನೀವೇನೂ ವೇದ ಓದಿಲ್ಲವಾ ,ಅಥವಾ ವೇದದಲ್ಲಿಯೂ ಹಾಗೆ ಇದೆಯಾ, ನಿಮ್ಮ ಹತ್ತಿರ ಆಚರಣೆ ಮಾಡಲಾಗದ್ದನ್ನು ಅದೇಕೆ ಬೇರೆಯವರಿಗೆ ಹೇಳುತ್ತೀರಿ?. ನಾನು ದುಡ್ದು ಕೊಟ್ಟರೆ ನಿಮ್ಮ ಶಾಸ್ತ್ರ ಬೇಕಾದ ಹಾಗೆ ಬದಲಾಗುತ್ತದೆಯಲ್ಲವೆ. ನಿಮ್ಮ ಶಿಷ್ಯ ಸಮೂಹಕ್ಕೆ ಖಾಯಿಲೆ ಬಂದಾಗ ಮೃತ್ಯುಂಜಯ ಹವನ ಮಾಡಿಸಿ ಎನ್ನುವ ನೀವು ನಿಮಗೆ ಖಾಯಿಲೆ ಬಂದಾಗ ಡಾಕ್ಟರ ಬಳಿ ಓಡುವುದೇಕೆ?.ಇವೆಲ್ಲಾ ಅಮಾಯಕರನ್ನು ನಂಬಿಸಿ ಮಾಡುವ ಸುಲಿಗೆಯಲ್ಲವೆ?. ಅದು ಕಲ್ಲೆಂದು ನಿಮಗೆ ಗೊತ್ತಿದ್ದೂ ಜನರ ಬಳಿ ಸುಳ್ಳು ಹೇಳುವುದೇಕೆ?. ನೀವು ನಂಬದೆ ಪರರನ್ನು ನಂಬಿಸಿ ಹಣ ಕೀಳುವುದಕ್ಕಿಂತ ದರೋಡೆ ಮಾಡಿ"
ಆವತ್ತು ಶ್ರಾದ್ಧ ನಡೆಯಲಿಲ್ಲ. ಪುರೋಹಿತರು ಸಿಟಗೊಂಡು ಹೋದಮೇಲೆ ಶ್ರಾಧ್ದ ಮಾಡಿಸಲು ಮತ್ಯಾರೂ ಸಿಗಲಿಲ್ಲ. ಮನೆಯವರೆಲ್ಲಾ ಖಂಡಿತಾ ಏನೋ ಅನಾಹುತ ಆಗುತ್ತದೆ ಎಂದು ಕಾದರು ಆದರೆ ಏನೂ ಆಗಲಿಲ್ಲ. ಕಡುಬು ಕಜ್ಜಾಯಗಳನ್ನು ಕಾಗೆಗೆ ಹಾಕಿದರು,ಗೋಗ್ರಾಸ ನೀಡಿದರು ಮತ್ತು ಎಲ್ಲರೂ ರಾತ್ರಿ ಊಟ ಮಾಡಿದರು. ಪ್ರತಿನಿತ್ಯದಂತೆ ಸೂರ್ಯಮುಳುಗಿದ ಹಾಗು ಕತ್ತಲಾಯಿತು.
ಆದರೆ ಅವನಿಗೆ ತನ್ನ ಪರಿಸ್ಥಿತಿ ಕಂಡು ಮರುಗುವಂತಾಯಿತು. ತನಗೆ ಶ್ರಾದ್ಧ ಮಾಡು ಅಂತೇನು ಪುರೋಹಿತರು ಹೇಳಿರಲಿಲ್ಲ. ತಾನಾಗಿಯೇ ಅವರನ್ನು ಮನೆಗೆ ಕರೆದು ಅವಮಾನ ಮಾಡಿದೆನಲ್ಲಾ ಎಂಬ ಕೊರಗು ಕಾಡಲು ಶುರುವಾಯಿತು. ಜನರು ಅವರಾಗಿಯೇ ಇಷ್ಟಪಡುವುದರಿಂದ, ಹಾಗು ಅದರಿಂದ ಮಾನಸಿಕ ನೆಮ್ಮದಿ ಹೊಂದುವುದರಿಂದ ತಾನೆ ಪುರೋಹಿತರು ಕಾರ್ಯಕ್ರಮ ಮಾಡಿಸುವುದು. ಜನರು ಕರೆಯದಿದ್ದರೆ ಅವರೇಕೆ ಬರುತ್ತಾರೆ? ಇದರಲ್ಲಿ ಪುರೋಹಿತರ ತಪ್ಪೇನಿದೆ?. ನಿಜ ಅವೆಲ್ಲಾ ತಾನು ಹೇಳಬಾರದಿತ್ತು. ಇಷ್ಟು ವರ್ಷಗಳ ಕಾಲ ಇವೆಲ್ಲಾ ಗೊತ್ತಿದ್ದೂ ಹೇಳಿರಲಿಲ್ಲ. ಈಗ ಇದು ತನ್ನ ಕೈಮೀರಿದ ನಡವಳಿಕೆ ಆದರೆ ತನ್ನ ಪರಿಸ್ಥಿತಿ ಯಾರಿಗೂ ಅರ್ಥವಾಗುವುದಿಲ್ಲವಲ್ಲ?. ರಾತ್ರಿಯೆಲ್ಲಾ ನಿದ್ರೆ ಬಾರದೆ ಹಾಸಿಗೆಯಲ್ಲಿ ಹೊರಳಾಡಿದ. ಆದರೆ ಕಾಲಮಿಂಚಿತ್ತು, ಹೇಳಬಾರದ ಅಂತರಂಗದ ಸಂಗತಿ ಎಲ್ಲಾ ಹೇಳಿಯಾಗಿತ್ತು.
ಅವನು ಈ ಬಾರಿ ಪುರೋಹಿತರನ್ನು ಕರೆದು ಅವಮಾನ ಮಾಡಿದ್ದರಿಂದ ಬಹಳಷ್ಟು ಜನರ ವಿರೋಧ ಎದುರಿಸಬೇಕಾಯಿತು. ಕೆಲವರಂತೂ ಅವನಿಗೆ ಹೊಡೆದರೆ ಸರಿಯಾಗುತ್ತದೆ ಎನ್ನುವ ತೀರ್ಮಾನಕ್ಕೆ ಬಂದಿದ್ದರು. ಧರ್ಮ ವಿರೋಧಿ, ಊರಿಗೆ ಮಾರಿ ಎಂಬ ತೀರ್ಮಾನದ ಠರಾವು ಹೊರಟಿತು.ಅವನು ಕಟ್ಟಿ ಬೆಳಸಿದ ಸಂಘ ಸಂಸ್ಥೆಗಳು ಯಾವುದೂ ಅವನ ಸಹಾಯಕ್ಕೆ ಬರಲಿಲ್ಲ. ಅವನು ಸಂಘದ ಅಧ್ಯಕ್ಷನಾಗಿದ್ದಾಗ ಕೆಲವರ ಅವ್ಯವಹಾರವನ್ನು ಹೊರಹಾಕಿದ್ದ ಅವರೆಲ್ಲಾ ಈಗ ಒಂದಾದರು. ಹಾಗೆಯೇ ಅವನು ಬಹಳಷ್ಟು ಜನರ ಬಾಳಿಗೆ ಬೆಳಕಾಗಿದ್ದ ಅವರೆಲ್ಲಾ ಸುಮ್ಮನುಳಿದರು.
ಊರಿನಲ್ಲಿ ಒಂದು ಸಭೆ ಕರೆಯಲಾಯಿತು ಅದರ ನೇತೃತ್ವವನ್ನು ಅವನಿಂದ ಸೋಲುಂಡವರು ವಹಿಸಿದ್ದರು. ಬೆಳಗಿನ ಜಾವ ನಾಲ್ಕು ಗಂಟೆಯವರೆಗೆ ಚರ್ಚೆಗಳಾಗಿ ಅವನಿಲ್ಲದಾಗ ಅವನ ಮೇಲಿನ ಸೇಡನ್ನು ನಾಲಿಗೆಯ ತೀಟೆಯನ್ನು ಎಲ್ಲರೂ ತೀರಿಸಿಕೊಂಡರು. ಮಠದ ಗುರುಗಳಿಗೆ ಬಿಡುವಿನ ದಿನ ಊರಿಗೆ ಕರೆಯಿಸಿ ಪಾದಪೂಜೆ ಮಾಡಿ ನಂತರ ಧರ್ಮಭೃಷ್ಟನಾದ ಅವನನ್ನು ಜಾತಿಯಿಂದ ಬಹಿಷ್ಕಾರ ಹಾಕಿಸುವುದು ಮತ್ತು ಅವನ ಕುಟುಂಬದ ಜತೆ ಸಮಾಜ ಭಾಂಧವರೆಲ್ಲಾ ಸಂಪರ್ಕ ಕಡಿದುಕೊಳ್ಳುವುದು.ಎಂಬ ಅಂತಿಮ ತೀರ್ಪು ಹೊರಬಿತ್ತು. ಗುರುಪೀಠದ ಆಗಮನಕ್ಕೆ ದಿನಾಂಕ ಗೊತ್ತುಪಡಿಸಲು ನಿಯೋಗವೊಂದನ್ನು ಕಳುಹಿಸುವ ತೀರ್ಮಾನವನ್ನು ತೆಗೆದುಕೊಂಡು ಸಭೆ ವಿಸರ್ಜನೆಯಾಯಿತು.
ಸ್ವಾಮೀಜಿಗಳನ್ನು ಮಂತ್ರಘೋಷಗಳ ಜತೆಗೆ ಪೂರ್ಣಕುಂಭದೊಂದಿಗೆ ಊರಿಗೆ ಸ್ವಾಗತಿಸಲಾಯಿತು. ಸ್ವಾಮೀಜಿ ಪೀಠವನ್ನು ಅಲಂಕರಿಸಿದರು. ಅವನು ತನ್ನ ಕುಟುಂಬದೊಂದಿಗೆ ಒಂದು ಕಡೆ ಹತಾಶನಾಗಿ ಕುಳಿತಿದ್ದ. ನೂರಾರು ಜನರು ಸೇರಿದ್ದರು. ಗುರುಪೀಠವನ್ನು ವಿರೋಧಿಸುವ ಗುಂಪು ಕೂಡ ಈ ವಿಷಯದಲ್ಲಿ ರಾಜಿಯಾದಂತೆ ಅಲ್ಲಿ ಸೇರಿದ್ದರು. ನಾಸ್ತಿಕರಿಗೂ ಕುತೂಹಲ ಹಾಗಾಗಿ ಅವರೂ ಅಂಗಿ ಬಿಚ್ಚಿ ಶಲ್ಯ ಹೊದ್ದು ಬಂದಿದ್ದರು. ಮಠಕ್ಕೆ ದೇಣಿಗೆ ಕೊಡದವರೂ ಅಲ್ಲಿದ್ದರು.
ಜನರಲ್ಲಿ ದುಗುಡ ತುಂಬಿತ್ತು. ಒಂದಿಷ್ಟು ಜನರಿಗೆ ಅಂತರಾಳದಲ್ಲಿ ತಡೆಯಲಾರದ ಖುಷಿ ಹೊರಗಡೆ ನಡೆಯಬಾರದ ಅನಾಹುತ ನಡೆಯುತ್ತದೆ ಎಂಬ ಮುಖಭಾವವನ್ನು ತಂದುಕೊಳ್ಳಲು ಹರಸಾಹಸ ಪಡುತ್ತಿದ್ದರು.ಅಷ್ಟರಲ್ಲಿ ಅವನಿಗೆ ಹೊಕ್ಕುಳ ಬಳ್ಳಿ ಛಳಕ್ಕೆಂತು.
"ಇಲ್ಲಿ ಸೇರಿರುವವರೆಲ್ಲಾ ಭಕ್ತರೂ ಅಲ್ಲ, ಇವರಲ್ಲಿ ಭಕ್ತಿಯೂ ಇಲ್ಲ. ಎಲ್ಲರೂ ಪರಮ ಸ್ವಾರ್ಥಿಗಳು ಮತ್ತು ಪರಮ ಲೋಭಿಗಳು. ತಮಗೆ ಒಳ್ಳೆಯದಾಗಲಿ ಎಂದು ಗುರುಗಳ ಮಂತ್ರಾಕ್ಷತೆ ಪಡೆಯಲು ಬಂದವರು. ದಿನನಿತ್ಯ ಧರ್ಮ ವಿರೋಧಿ ಚಟುವಟಿಕೆ ಇವರ ಜೀವನ. ಸ್ವಾಮೀಜಿಗಳೆದುರಿಗೆ ಕೈಮುಗಿದು ನಾಟಕವಾಡುವ ಇವರು ನಂತರ ನಡೆ ನುಡಿಯಲ್ಲಿ ಹೆಜ್ಜೆ ಹೆಜ್ಜೆಗೂ ಮಠವನ್ನು ದೂಷಿಸುತ್ತಾರೆ. ಹಣದ ವಿಚಾರದಲ್ಲಿ ದಾಹಿಗಳು. ಇವತ್ತು ಇವರು ಈ ಪರಿ ಸೇರಿದ್ದು ಭಕ್ತಿಯಿಂದಲ್ಲ ಈ ಪರಿಸ್ಥಿತಿಯ ಲಾಭ ತನಗೆಷ್ಟು ಎಂದು ನೋಡಲು ಬಂದವರು......ಒಳ್ಳೆಯ ಕಾರ್ಯಕ್ಕೆ ಹತ್ತು ಜನ ಸೇರಿಸಲು ನಾನು ಪಾಡು ಪಟ್ಟಿದ್ದೇನೆ ಆದರೆ ಇಂದು..ನೋಡಿ......"
ಸಭೆಯಲ್ಲಿ ಗದ್ದಲ ಶುರುವಾಯಿತು. ಒಬ್ಬರು ಆತನಿಗೆ ಹೊಡೆಯಿರಿ ಎಂದರೆ ಮತ್ತೊಬ್ಬರು ಬಡಿಯಿರಿ ಎನ್ನುತ್ತಿದ್ದರು. ಆತನಿಗೆ ದೇಶದಿಂದಲೇ ಓಡಿಸಬೇಕು ಎನ್ನುತ್ತಿದ್ದರು ಮಗದೊಬ್ಬರು. ಗುರುಗಳು ಇಲ್ಲದಿದ್ದರೆ ಅವನ ಕಥೆ ನೋಡಬೇಕಿತ್ತು ಎನ್ನುತ್ತಿದ್ದ ಇನ್ನೊಬ್ಬ. ಆಶ್ಚರ್ಯವೆಂದರೆ ಹಾಗೆ ಹೇಳುತ್ತಿದ್ದಾತ ಆ
ದಿನದವರೆಗೂ ಪಕ್ಕಾ ನಾಸ್ತಿಕನಾಗಿದ್ದ ಮಠ ಸ್ವಾಮೀಜಿಗಳನ್ನು ಆತ ತಾನು ಮಾನ್ಯಮಾಡುವುದಿಲ್ಲ ಅದು ಸೋಮಾರಿಗಳ ಸಂತೆ ಎನ್ನುತ್ತಿದ್ದ.
ಇಷ್ಟು ಗಲಭೆ ಗಲಾಟೆಗಳಾಗುತ್ತಿದ್ದರೂ ಸ್ವಾಮೀಜಿಗಳು ಮಾತ್ರ ಮುಗುಳ್ನಗುತ್ತಿದ್ದರು. ಅವರ ಈ ವರ್ತನೆ ಅವನ ವಿರೋಧಿಗಳಿಗೆ ನುಂಗಲಾರದ ಬಿಸಿ ತುಪ್ಪವಾಗಿತ್ತು. ಸ್ವಾಮೀಜಿಗಳ ಸಹಾನುಭೂತಿ ಅವನೆಡೆಗೆ ಬಿದ್ದರೆ ಕಷ್ಟ ಎಂಬ ಚಿಂತೆ ಕಾಡುತ್ತಿತ್ತು. ಸ್ವಾಮಿಜಿಗೆ ಅವನ ಬಗ್ಗೆ ಸರಿಯಾಗಿ ಹೇಳಿದ್ದೀರಾ ಬಹಿಷ್ಕಾರ ಖಂಡಿತಾ ತಾನೆ, ಎಂದು ನಿಯೋಗದವರೊಡನೆ ಗುಸುಗುಸು ಪಿಸ ಪಿಸ ಮಾಡುತ್ತಿದ್ದರು. ಅವರಲ್ಲೊಬ್ಬನಿಗೆ ತಡೆಯದಾಯಿತು. ಪೀಠದ ಬಳಿ ಹೋಗಿ ತಾನು ಹೊದೆದ ಶಲ್ಯವನ್ನು ತನ್ನ ಬಾಯಿಗೆ ಅಡ್ಡ ಹಿಡಿದು " ಅವನಿಗೆ ಬಹಿಷ್ಕಾರ ಹಾಕಲು ಇದು ಸರಿಯಾದ ಸಮಯ ನಿರ್ಣಯ ಕೊಡಿ ಎಂದ". ಸ್ವಾಮೀಜಿಗಳು ನಿಧಾನವಾಗಿ ಪೀಠದಿಂದ ಮೇಲೆದ್ದರು
ಸಭೆ ಒಮ್ಮೆಲೆ ಸ್ತಬ್ದವಾಯಿತು. ಇಷ್ಟು ಹೊತ್ತು ಸಭೆಯ ಗಲಾಟೆಯಿಂದ ಅವನ ಮಾತುಗಳು ಯಾರಿಗೂ ಕೇಳುತ್ತಿರಲಿಲ್ಲ. ಈಗ ಮತ್ತೆ ಆವನ ಮಾತುಗಳು ಎಲ್ಲರಿಗೂ ಕೇಳಲಾರಂಬಿಸಿತು.
"ಓ ಅಲ್ಲಿದಾರರಲ್ಲ ಅವರು ಇಷ್ಟು ದಿವಸ ಮಠವನ್ನು ವಿರೋಧಿಸುತ್ತಿದ್ದವರು, ಒಂದು ರೂಪಾಯಿ ದೇಣಿಗೆ ಕೊಟ್ಟವರಲ್ಲ, ಇವತ್ತು ಬಂದಿದ್ದು ಸ್ವಾರ್ಥಕ್ಕೆ, ಸಮಾಜವನ್ನು ಒಡೆಯಲು ಅವರ ಕಾಣಿಕೆ ಬಹಳ,ಅವರು ಹಿಂಸಾವಿನೋದಿಗಳು, ಮತ್ತೊಬ್ಬರಿಗೆ ತೊಂದರೆಯಾಗುತ್ತದೆಯಾದರೆ ಬೆಳಿಗ್ಗೆವರೆಗೂ ಸಭೆ ನಡೆಸುವ ಕುತ್ಸಿತ ಮನಸ್ಸಿನವರು. ಧರ್ಮ ದೇವರು ಎಲ್ಲಾ ಸುಳ್ಳು, ನೈತಿಕತೆ,ಸತ್ಯ ನ್ಯಾಯ ಎಲ್ಲಾ ಅನುಕೂಲಸಿಂಧು ಕಾರ್ಯಕ್ರಮಗಳು.ದುಡ್ಡು ಸಿಗುತ್ತದೆಯೆಂದರೆ ಧರ್ಮವನ್ನು ದೇವರನ್ನೂ,ನ್ಯಾಯ ನೀತಿಯನ್ನೂ ಧಿಕ್ಕರಿಸುವ ಜನರು...."
ಕೆಲವರು ಧರ್ಮನಿಂದನೆ ಎಂದು ಕಿವಿ ಮುಚ್ಚಿಕೊಂಡರು. ಹಲವರು ಖುಷಿಪಡುತ್ತಿದ್ದರು. ಕಾರಣ ಕುರಿ ಕೊಬ್ಬಿದಷ್ಟು ಕಟುಕನಿಗೆ .....
ಇಷ್ಟೆಲ್ಲಾ ನಡೆದರೂ ಸ್ವಾಮೀಜಿಗಳ ಮುಖದಲ್ಲಿ ಮಂದಹಾಸವಿತ್ತು. ಕರಂಡಿಕೆಗೆ ಕೈಹಾಕಿ ಶ್ರೀಗಂಧವನ್ನು ತೆಗೆದುಕೊಂಡು ನಿಧಾನ ಅವನ ಬಳಿ ಹೋಗಿ ಮೂಗಿನ ಮೇಲೆ ದಪ್ಪನೆಯ ಒಂದು ಶ್ರೀಗಂಧದ ನಾಮ ಹಾಕಿದರು.
ತಕ್ಷಣ ಆತನ ಮಾತುಗಳು ನಿಂತವು. ಅವನ ಕಣ್ಣುಗಳಿಂದ ದಳದಳನೆ ನೀರು ಇಳಿದು ಬರತೊಡಗಿತು. ಅವನು ನಿಧಾನವಾಗಿ ತನ್ನ ಎರಡೂ ಕೈಗಳನ್ನು ಜೋಡಿಸಿ ಸ್ವಾಮೀಜಿಗಳತ್ತ ಧನ್ಯತಾಭಾವದ ನೋಟದೊಂದಿಗೆ ಕುಸಿದು ಕುಳಿತ.
ಅದ್ಬುತವನ್ನು ಕಣ್ಣಾರೆ ಕಂಡ ಭಕ್ತಾಧಿಗಳು ಹರ್ಷೋದ್ಗಾರ ಹಾಕಿದರು. ಕಲಿಯುಗದಲ್ಲಿ ಅವತರಿಸಿದ ಪರಮಾತ್ಮ ಎಂದು ಸ್ವಾಮೀಜಿಗಳೆದುರು ಕೈಮುಗಿದು ನಿಂತರು.ಇದೆಲ್ಲಾ ಸಹಜವೆಂಬಂತೆ ಸ್ವಾಮಿಜಿ ಭಕ್ತರಿಗೆ ಮಂತ್ರಾಕ್ಷತೆ ನೀಡತೊಡಗಿದರು
ಅವನ ವಿರೋಧಿಗಳಿಗೆ ಸ್ವಾಮೀಜಿಯ ಈ ವರ್ತನೆ ಅಷ್ಟೊಂದು ಸಹ್ಯವಾಗಲಿಲ್ಲ. ತಾತ್ಕಾಲಿಕವಾಗಿ ಆಸ್ತಿಕರಾಗಿದ್ದವರು ಮತ್ತೆ ತಮ್ಮ ಮೂಲ ತತ್ವವಾದ ಮಠವಿರೋಧಿ ನಿಲುವಿಗೆ ಮರಳಿದರು.
ಸ್ವಾಮೀಜಿಗಳ ಕಾರು ಧೂಳೆಬ್ಬಿಸುತ್ತಾ ಮಾಯವಾಯಿತು.
ಅವನಿಗೆ ಜೀವನದಲ್ಲಿ ಮತ್ತೆಂದೂ ಹೊಕ್ಕಳಬಳ್ಳಿ ಛಳಕ್ಕೆನ್ನಲಿಲ್ಲ ಹಾಗು ಆನಂತರ ಮಠದ ಕೆಲಸಗಳಿಗೆ ತನ್ನನ್ನು ಇನ್ನೂ ಹೆಚ್ಚು ತೊಡಗಿಸಿಕೊಂಡು ಪುನೀತನಾದ.
***************
ಇವೆಲ್ಲ ಘಟನೆಗಳ ನಡುವೆ ಶ್ರೀಗಂಧದೊಂದಿಗೆ ಸೂಜಿಮೆಣಸಿನ ಪುಡಿ ಬೆರಸಿ ಅವನ ಮೂಗಿನ ಮೆಲೆ ಹಚ್ಚಿ ಅವನ ಮನಸ್ಸಿನ ಒತ್ತಡವನ್ನು ದೇಹದ ಉರಿಯತ್ತ ಹೊರಳಿಸಿ ಯಶಸ್ವಿಯಾದ ಸ್ವಾಮೀಜಿಯ ತಂತ್ರ, ಶ್ರೀಗಂಧಕ್ಕೆ ಮೆಣಸಿನಪುಡಿ ಬೆರಸಿದ ಗಿಂಡಿಮಾಣಿಯ ಹೊರತಾಗಿ ಯಾರಿಗೂ ತಿಳಿಯಲಿಲ್ಲ.

ಅಡಿಕೆ ಚೂರು

ಬಸ್ಸು ಹತ್ತಿ ಕುಳಿತಾಗಿದೆ, ಬಸ್ಸು ಹೊರಟೂ ಆಗಿದೆ. ಶಿವಮೊಗ್ಗ ತಲುಪಲು ಇನ್ನು ಒಂದೂವರೆ ಗಂಟೆ ಪ್ರಯಾಣ, ಅದು ನಾನ್ ಸ್ಟಾಪ್ ಬಸ್ಸು, ಸಾಗರ ಬಿಟ್ಟರೆ ಮತ್ತೆ ನಿಲ್ಲಿಸುವುದು ಶಿವಮೊಗ್ಗವೆ. ಅಲ್ಲಿಯವರೆಗಿನ ಸಂಪೂರ್ಣ ಸ್ವಾತಂತ್ರ್ಯದ ಕೆಲಸ ಕಷ್ಟಕರ . ಹೊರಗಿನವರಿಗೆ ಅಂತಹ ದೊಡ್ಡ ವಿಚಾರವೇನಲ್ಲ, ಹಲ್ಲಿನ ಸಂದಿನಲ್ಲಿ ಮನೆಯಿಂದ ಹೊರಡುವಾಗ ಹಾಕಿದ ರಸಗವಳದಲ್ಲಿದ್ದ ಅಡಿಕೆಯ ಚೂರೊಂದು ಸಿಕ್ಕಿಕೊಂಡಿದೆ. ಇದೆಂತಾ ಘನಂದಾರಿ ವಿಷಯ ಅಂತ ಕೇವಲ ಮಾಡೋಣ ಎಂದು ಕಿಟಕಿಯಿಂದ ಹೊರಗೆ ನೋಡುತ್ತಾ ಕುಳಿತರೆ ಮನಸ್ಸು ಮೊದಲು ಹಲ್ಲಿನ ಸಂದಿಯಲ್ಲಿದ್ದ ಅಡಿಕೆಚೂರನ್ನು ಕಿತ್ತು ಬಿಸಾಕು ಎಂದು ಹೇಳುತ್ತಿದೆ, ಹಲ್ಲಿನ ಸಂದಿನಲ್ಲಿ ಬೃಹದಾಕಾರದ ಬಂಡೆಯಿದೆಯೇನೋ ಎಂಬ ಅನುಭವ. ನಾಲಿಗೆಯಂತೂ ಹಲ್ಲಿನ ಸುತ್ತಲೇ ಸುತ್ತುತ್ತಿದೆ. ಹಾಗಂತ ನೋವಿಲ್ಲ ಉರಿಯಿಲ್ಲ ಆದರೆ ಅಡಿಕೆ ಚೂರು ಈಚೆ ಬರಬೇಕು ಅಲ್ಲಿಯವರೆಗೂ ಮನಸ್ಸಿಗೆ ಸಮಾಧಾನ ಇಲ್ಲ. ಅಲ್ಲೆಲ್ಲೋ ಸಂದಿಯಲ್ಲಿ ಕಡ್ಡಿ ಇರಬಹುದು ನೋಡು ಎನ್ನುತ್ತಿದೆ ಮನಸ್ಸು ಅದಕ್ಕಾಗಿ ಹುಡುಕಾಟವೂ ನಡೆಯುತ್ತಿದೆ. ಊಹ್ಞು ಅಲ್ಲೆಲ್ಲಿದೆ ಕಡ್ಡಿ?. ಯಾವಾಗಲೂ ಅಂಗಿಯ ಮೇಲೆ ಇರುತ್ತಿದ್ದ ಗುಂಡುಪಿನ್ ಬಟ್ಟೆ ತೊಳೆಯುವಾಗ "ಸೊಂಯಕ್" ಅಂತ ಕೈಗೆ ಚುಚ್ಚಿ "ಬುಳ್" ಎಂದು ರಕ್ತ ಬರುತ್ತದೆ ಎಂಬ ಕಾರಣದಿಂದ ಅಂಗಿಯಲ್ಲಿ ಚುಚ್ಚಿ ಇಟ್ಟುಕೊಳ್ಳುವುದನ್ನು ಬಿಟ್ಟಾಗಿದೆ. ಮಗ ಸಂಧ್ಯಾವಂದನೆ ಮಾಡಿ ಉದ್ಧಾರವಾಗಲಿ ಎಂದು ಅಪ್ಪ ಸಾಲ ಸೋಲ ಮಾಡಿ ಉಪನಯನದ ಮೂಲಕ ಹಾಕಿದ ಜನಿವಾರಕ್ಕೆ ಜೋಲಾಡುತ್ತಾ ಸೇಫ್ಟಿ ಪಿನ್ ಇರುತ್ತಿತ್ತು ಆದರೆ ಜನಿವಾರ ಎಂಬುದು ಕರ್ಮಠರ ಸಂಕೇತ ಎಂದು ಬುದ್ದಿಜೀವಿಗಳು ಹೇಳಿದ ಮಾತನ್ನು ನಂಬಿ ಅದನ್ನು ಕಿತ್ತು ಬಿಸಾಕಿಯಾಗಿದೆ ಹಾಗಾಗಿ ಜನಿವಾರವೇ ಇಲ್ಲದಮೇಲೆ ಸೇಫ್ಟಿ ಪಿನ್ ಎಲ್ಲಿ?. ಅನುಭವಸ್ಥ ಬುದ್ದಿವಂತರು ಹೇಳುವಂತೆ ಬಚ್ಚಲು ಮನೆಯಲ್ಲಿ ಸ್ನಾನಕ್ಕೆ ಇಳಿದಾಗ ಬೆನ್ನುತಿಕ್ಕಲು ಮತ್ತು ಆಪತ್ಕಾಲದಲ್ಲಿ ಹಲ್ಲುಕುಕ್ಕುವ ಪಿನ್ ಇಟ್ಟುಕೊಳ್ಳಲು ಜನಿವಾರ ಇರಲೇಬೇಕು ಎನ್ನುವ ಮಾತನ್ನಾದರೂ ಪಾಲಿಸಿದ್ದರೆ ಇವತ್ತು ಆರಾಮಾಗಿ ಹಲ್ಲಿನ ಕುಳಿಯಲ್ಲಿದ್ದ ಅಡಿಕೆ ಚೂರು ಆಚೆಬರುತ್ತಿತ್ತು. ಅದೊಂದು ಕಿರಿಕಿರಿ ಇಲ್ಲದಿದ್ದರೆ ಕಿಟಕಿಯಿಂದ ಆಚೆ ಕಾಣುವ ಹಸಿರು ಮರಗಳು ದನಕಾಯುವ ಹುಡುಗರು ಹಿಂದೆ ಹಿಂದೆ ಓಡುವ ಸಾಲು ಮರಗಳು ಮುಂತಾದವುಗಳನ್ನೆಲ್ಲಾ ಮನಸಾರೆ ಸವಿದು ಮನೆಗೆ ಹೋದನಂತರ ಸ್ವಂತಕ್ಕೆ ಓದಲಾದರೂ ಒಂದು ಸುಂದರ ಕವನವನ್ನಾದರೂ ಬರೆಯಬಹುದಿತ್ತು. ಆದರೆ ಆ ಮಾತನ್ನೂ ಕೇಳದೆ ಈಗ ಒಂದು ಸಣ್ಣ ಅಡಿಕೆ ಚೂರಿನಿಂದ ಅದ್ಭುತ ಅವಕಾಶ ಕಳೆದುಕೊಂಡ ಭಾವನೆ ಬೆಳೆಯುತ್ತಿದೆ. ತತ್ ಇನ್ನು ಈ ಅಡಿಕೆ ತಿನ್ನುವ ದರಿದ್ರ ಚಟವನ್ನು ಬಿಟ್ಟು ಬಿಡಬೇಕು ಅನ್ನಿಸುತ್ತಿದೆ, ನಿತ್ಯ ಮನೆಯಲ್ಲಿ ಇದೇ ವಿಚಾರದಲ್ಲಿ ಹೆಂಡತಿಯೊಡನೆ ಕಾದಾಟ ಜಗ್ಗಾಟ, ಅವಳು "ಅಡಿಕೆ ತಂಬಾಕು ತಿನ್ನಬೇಡಿ ಅದು ಗಲೀಜು,ಕೆಟ್ಟ ವಾಸನೆ ಬೇರೆ, ಹತ್ತಿರ ಬಂದರೆ ವಾಂತಿ ಬಂದಹಾಗೆ ಆಗುತ್ತದೆ, ಆರೋಗ್ಯವೂ ಹಾಳು ಸಭ್ಯರ ಮುಂದೆ ಬೆಲೆ ಇರುವುದಿಲ್ಲ" ಎಂದು ಹೇಳಿದರೆ, "ಇಲ್ಲ ಎಂಟನೆ ಕ್ಲಾಸಿನಲ್ಲಿ ಸ್ಕೂಲಿಗೆ ಚಕ್ಕರ್ ಹೊಡೆದು ಬುಡಾನ್ ಸಾಬಿಯ ಅಂಗಡಿಗೆ ಮನೆಯಿಂದ ಕದ್ದು ತಂದ ಅಡಿಕೆಬೆಟ್ಟೆ ಕೊಟ್ಟು ಬೀಡಿ ಇಸಕೊಂಡು ಸೇದಿ ಚಟ ಕಲಿತೆ, ನಂತರ ಅದು ಬಿಡಬೇಕು ಎಂದು ಅಡಿಕೆ ಜತೆ ತಂಬಾಕು ತಿನ್ನುವುದನ್ನು ಕಲಿತೆ ಈಗ ಅದು ನನ್ನನ್ನು ಬಿಡಲಾರದ ಹಂತ ತಲುಪಿದೆ ಎಂದರೆ ಅವಳ ಮುಂದೆ ಮರ್ಯಾದೆಗೆ ಕಡಿಮೆ ಅಲ್ಲವೆ? ಎಷ್ಟೆಂದರೂ ಗಂಡನೆಂಬ ಗಂಡು ಸೋಲುವುದು ಹೇಗೆ? ಅದಕ್ಕಾಗಿ "ನಾವು ಅಡಿಕೆ ಬೆಳೆಗಾರರು ನಾವೇ ಅಡಿಕೆ ತಿನ್ನದಿದ್ದರೆ ಮತ್ಯಾರು ತಿಂದಾರು? ಅಡಿಕೆ ಬೆಳೆಯಬೇಕು ಆದರೆ ತಿನ್ನಬಾರದು ಎಂಬ ಮಾತು ನನಗೆ ಹಿಡಿಸದು" ಎಂಬ ತತ್ವಭರಿತ ಪೊಳ್ಳು ವಾಗ್ಬಾಣಗಳಿಂದ ಹೆಂಡತಿಯ ಬಾಯಿಯನ್ನು ಮುಚ್ಚಿಸುವಲ್ಲಿ ಯಶಸ್ಸು ಸಿಕ್ಕಿ ಮುಕ್ತಾಯಮಾಡುತ್ತಿದ್ದೆ. ಒಮ್ಮೊಮ್ಮೆ " ಸರಿ ನಾವು ಅಡಿಕೆ ಬೆಳೆಗಾರರು ತಾನೆ ಅಡಿಕೆ ಮಾತ್ರ ತಿನ್ನಿ, ಅದರ ಜತೆ ಉಂಡೆ ಉಂಡೆ ತಂಬಾಕು ಯಾಕೆ?" ಎಂಬ ವಾದಕ್ಕೆ "ಅಯ್ಯೋ ಮಂಕೆ ಯಾರಾದರೂ ಕಾಲಿಗೆ ಕೇವಲ ಸಾಕ್ಸ್ ಹಾಕಿ ಹೋಗುವುದನ್ನು ನೊಡಿದ್ದೀಯಾ? ಇಲ್ಲ ತಾನೆ, ಶೂ ಬೇಕೇ ಬೇಕು, ಕಾಲಿಗೆ ಸಾಕ್ಸ್ ಶೂ ಜತೆಯಾಗಿ ಇದ್ದಂತೆ ಕವಳಕ್ಕೆ ಅಡಿಕೆ ತಂಬಾಕು, ತಂಬಾಕು ಇಲ್ಲದಿದ್ದರೆ ನಿನ್ನ ಅಡಿಕೆ ಯಾರು ಕೇಳುತ್ತಿದ್ದರು? ನಿನ್ನ ಕೊರಳಲ್ಲಿ ಬಂಗಾರದ ಎರಡೆಳೆ ಅವಲಕ್ಕಿಬೀಜದ ಸರ ಎಲ್ಲಿ ತೊನೆದಾಡುತ್ತಿತ್ತು?" ಎಂದು ಹೆಂಗಸರ ಹೃದಯಕ್ಕೆ ನಾಟುವಂತಹ ಬಂಗಾರದ ಮಾತು . ಆಕೆ "ಏನಾದರೂ ಮಾಡಿಕೊಳ್ಳಿ ನನಗೆ ತಿಳಿದದ್ದನ್ನು ಹೇಳಿದೆ ನಿಮ್ಮಂತೆ ಮಾತಿನ ಚಾಲಾಕು ನನ್ನಲ್ಲಿಲ್ಲ" ಅಂತಿಮವಾಗಿ ಸೋಲುವುದು ಹೆಂಡತಿಯೇ. ಆದರೆ ಈಗ ಅದೇ ಅಡಿಕೆ ಚೂರು ಕಾಡುತ್ತಿದೆ, ಇನ್ನು ಮುಂದೆ ಅಡಿಕೆ ತಿನ್ನಬಾರದು ದರಿದ್ರದ್ದು ಹಲ್ಲಿನ ಸಂದಿಯಲ್ಲಿ ಕುಳಿತ ಸಾಸಿವೆಕಾಳಿನ ಗಾತ್ರದ ಅಡಿಕೆ ದೆಸೆಯಿಂದ ಬೇರೆ ಯೋಚನೆಯನ್ನೇ ಮಾಡಲಾಗದು, ಇಲ್ಲ ಅದು ದೊಡ್ಡ ಬೆಟ್ಟದಷ್ಟಿದೆ ಸಾಸಿವೆ ಕಾಳಿನಷ್ಟಿದ್ದರೆ ನಾನೇಕೆ ಅದರ ಹಿಂದೆ ಬೀಳುತ್ತಿದ್ದೆ ಎಂದು ಭ್ರಮಿಸುವ ನಾಲಿಗೆ ಅಡಿಕೆ ಚೂರನ್ನು ಈಚೆ ಬಾ ಈಚೆ ಬಾ ಎಂದು ಒಂದೇ ಸವನೆ ಬೆನ್ನುಹತ್ತಿದೆ, ವಿಚಿತ್ರಹಿಂಸೆ ಕುಳಿತಲ್ಲಿ ಕುಳಿತುಕೊಳ್ಳಲಾಗದು ಎದ್ದು ನಡೆಯುವಂತಿಲ್ಲ ಎಲ್ಲಿಂದ ತರಲಿ ಚೂಪನೆಯ ಮುಳ್ಳನ್ನ?. ನಿಧಾನವಾಗಿ ನಾನು ಬಾಯಿಗೆ ಕೈ ಹಾಕುವುದನ್ನು ಯಾರೂ ನೊಡುತ್ತಿಲ್ಲವೆಂದು ಖಚಿತಪಡಿಸಿಕೊಂಡು ತೋರ್‍ಬೆರಳನ್ನು ಬಾಯಿಯೊಳಗೆ ಹಾಕಿ ಅಡಿಕೆಯನ್ನು ಆಚೆ ಎಳೆಯಲು ಯತ್ನಿಸಿದೆ ಊಹ್ಞೂ ಅದು ಗಟ್ಟಿಪಿಂಡ ಆಚೆ ಬರಲೊಲ್ಲೆ ಎನ್ನುತ್ತಿದೆ, ಚೂಪನೆಯ ಪಿನ್ನು ಆಹಾ ಅದೊಂದು ಸಿಕ್ಕಿದ್ದರೆ ಮತ್ಯಾವುದೂ ಬೇಡ ಈಗ ಎನ್ನುತ್ತಿದೆ ಮನಸ್ಸು. ದೊಡ್ಡ ಗುಡ್ಡದಷ್ಟು ಇದೆಯೇನೋ ಅಂತ ಭ್ರಮಿಸುವ ಕಿಟ್ಟವನ್ನು ಮೂಗಿನೊಳಗೆ ಬೆರಳು ತೂರಿ ಆಚೆ ಈಚೆ ಯಾರಾದರೂ ಗಮನಿಸುತ್ತಿರಬಹುದಾ ಎಂದು ಕದ್ದು ನೋಡಿ ಹಗೂರ ಆಚೆ ಎಳೆದು ಉಂಡೆಕಟ್ಟಿ ಸ್ವಲ್ಪ ಹೊತ್ತು ಅದೇನೋ ಕಾಣದ ಹಿತವನ್ನು ಅನುಭವಿಸಿ ಬಿಸಾಕಿ ಬಿಡಬಹುದು. ಅಥವಾ ಕುಳಿತಲ್ಲಿಯೇ ಕೈಬಿಡಬಹುದು. ಆದರೆ ಹಲ್ಲಿನ ಸಂದಿಯಲ್ಲಿರುವ ಈ ಅಡಿಕೆ ಚೂರುಹಾಗಲ್ಲ. ಅದಕ್ಕೆ ಚೂಪಾದ ಕಡ್ಡಿಯೇ ಬೇಕು. ಬೀಡಿಯ ಹಿಂಬದಿಯೇ ಬೇಕು, ಬೆಂಕಿ ಕಡ್ಡಿಯೇ ಬೇಕು. ಯಾವ್ಯಾವುದು ಬೇಕು ಎಂದು ಗೊತ್ತು ಆದರೆ ಶರವೇಗದಿಂದ ಡರ್ರ್.... ಎಂದು ಮುನ್ನುಗ್ಗುತ್ತಿರುವ ಬಸ್ಸಿನಲ್ಲಿ ಅದನ್ನು ಹೊಂದಿಸುವ ಬಗೆ ಹೇಗೆ?, ರಸ್ತೆ ಬದಿಯಲ್ಲಿ ಸಹಸ್ರ ಸಹಸ್ರ ಸಂಖ್ಯೆಯ ಹುಲ್ಲು ಕಡ್ಡಿ ಬೆಳೆದು ನಿಂತಿದೆ, ಅವುಗಳಲ್ಲಿ ಒಂದಿಂಚು ಉದ್ದದ ಒಂದೇ ಒಂದು ಕಡ್ಡಿ ನನ್ನ ಬೃಹದಾಕಾರದ ಸಮಸ್ಯೆಯನ್ನು ನೀಗಿಸಬಲ್ಲದು ಆದರೆ ಕಣ್ಣಿಗೆ ಕಾಣಿಸುತ್ತದೆ ಕೈಗೆ ಸಿಗುವುದಿಲ್ಲ, ಹೆಂಡತಿಯೊಡನೆ ಸಣ್ಣಪುಟ್ಟ ವಿಷಯಕ್ಕೆ ಜಗಳಮಾಡಿಕೊಂಡು ನಡೆದುಹೊರಟಾಗ ಎದುರು ಸಿಗುವ ಕಾಲೇಜು ಕನ್ಯೆಯ ಹಾಗೆ, ಪಕ್ಕದ ಸೀಟಿನಲ್ಲಿ ಕುಳಿತಿರುವ ಹೆಂಗಸಿನ ಕೈಯ ಬಳೆಯಲ್ಲಿರುವ ಪಿನ್ನು ಕಾಣಿಸುತ್ತಿದೆ, ಆದರೆ ಕೇಳಲು ಅದೇನೋ ಮುಜುಗರ. ಪಕ್ಕದಲ್ಲೋ ಮುಂದಿನ ಅಥವಾ ಹಿಂದಿನ ಸೀಟಿನಲ್ಲೋ ೨-೩ ರೂಪಾಯಿ ಬೆಲೆಯ ದಿನಪತ್ರಿಕೆ ಓದುತ್ತಿರುವವರ ಬಳಿ ಒಳಪುಟ ಕೇಳಬಹುದು, ಅಥವಾ ಅವರು ಮಡಚಿ ತೊಡೆಯ ಮೇಲೆ ಇಟ್ಟು ನಿದ್ರೆಗೆ ಹೋಗುವುದನ್ನೇ ಕಾದು ಹಗೂರ ಎಗರಿಸಿ ಓದಬಹುದು, ಅಕಸ್ಮಾತ್ ಅವರು ಎಚ್ಚರಗೊಂಡರೆ ಹೆ ಹೆ ಹೆ ಎಂದು ಹಲ್ಕಿರಿಯಬಹುದು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಒಂಚೂರು ಪೇಪರ್ ಕೊಡ್ತೀರಾ ಅಂತ ಹಲ್ಕಿಸಿದು ಇಸಕೊಂಡು ಓದಿ ಯಡ್ಡಾದಿಡ್ಡಿ ಮಡಚಿ ವಾಪಾಸು ಕೊಟ್ಟು ಬಿಡಬಹುದು. ಆದರೆ ಇದು ಹತ್ತು ಪೈಸೆಯ ಬೆಲೆಯ ಪಿನ್ನು, ಪೇಪರ್‌ನಂತೆ ಹಗೂರ ಕೈಹಾಕಿ ತೆಗೆದುಕೊಳ್ಳುವಂತಿಲ್ಲ, ದೊಡ್ಡ ಮಟ್ಟದ ಅನಾಹುತಕ್ಕೆ ಕಾರಣವಾಗಿಬಿಡಬಹುದು. ಆದರೆ ನಾಲಿಗೆ ಸುಮ್ಮನೆ ಒಂದೆಡೆ ನಿಲ್ಲುತ್ತಿಲ್ಲ, ಅಡಿಕೆ ಚೂರನ್ನು ಮೀಟಿ ಮೀಟಿ ನಾಲಿಗೆ ತುದಿ ಉರಿಯಲು ಶುರುವಾಗಿದೆ, ಆದರೂ ಮನಸ್ಸು ಅಡಿಕೆ ಚೂರು ಹೊರಗೆ ಹಾಕು ಆಮೆಲೆ ಏನು ಬೇಕಾದರೂ ಮಾಡಿಕೋ ಎನ್ನುತ್ತಿದೆ. ಬಾಯಿಯನ್ನು ಬಲಬಾಗಕ್ಕೆ ಒತ್ತಿ ಪುಸ್ ಅಂತ ಗಾಳಿ ಎಲೆದುಕೊಂದಾಯಿತು, ಅಕ್ಕಪಕ್ಕದವರು ಕೆಕ್ಕರಿಸಿ ನೋಡುವಂತಹ ವಿಚಿತ್ರ ಶಬ್ದ ಬಂತೇ ಹೊರತು ಚೂರು ಜಗ್ಗಲಿಲ್ಲ. ಆಕೆಯ ಬಳಿ ಪಿನ್ನು ಇದೆ ಹೇಗೆ ಕೇಳುವುದು ಅಪಾರ್ಥ ಮಾಡಿಕೊಂಡರೆ? ಥೂ ದರಿದ್ರದವನೆ ಹೋಗಯ್ಯಾ ಅಂದರೆ?. ಪಿನ್ನು ಎಂಬುದು ಮಾತನಾಡಿಸಲು ಒಂದು ನೆಪ ಅಂತ ಅಂದುಕೊಂಡರೆ, ಆದರೆ ಆಕೆ ನಿಜವಾಗಿಯೂ ಮಾತನಾಡಿಸುವಷ್ಟರ ಮಟ್ಟಿಗೆ ಚಂದ ಇಲ್ಲ, ಈ ಚಂದ ಇಲ್ಲದವರದ್ದೇ ಸ್ವಲ್ಪ ಸೋಗು, ಅವರಿಗೆ ಒಳಗೊಳಗೆ ತಮ್ಮನ್ನು ಯಾರೂ ಮಾತನಾಡಿಸುವುದಿಲ್ಲ ಎಂಬ ಅಸಮಾಧಾನವಿರುತ್ತದೆ, ಅದು ಹೀಗೆ ಏನಾದರೂ ಮಾತನಾಡಿಸಿದಾಗ ಸ್ಫೋಟಗೊಳ್ಳಲು ಕಾಯುತ್ತಿರುತ್ತದೆ. ಅಕಸ್ಮಾತ್ ೪೮ ಜನರು ಪಯಣಿಸುತ್ತಿರುವ ಈ ಬಸ್ಸಿನಲ್ಲಿ ಸ್ಪೋಟಗೊಂಡು ಅಂತಹ ಗಲಾಟೆಗಳಿಗಾಗಿಯೇ ಕಾಯುತ್ತಿರುವ ಕ್ಷುದ್ರ ಮನಸ್ಸಿನ ಜನರ ದಾಹಕ್ಕೆ ನನ್ನ ದೇಹ ಈಡಾದರೆ, ಆ ಸುದ್ದಿಗೆ ಕಾಯುತ್ತಿರುವ ನನ್ನ ಪರಿಚಯಸ್ಥರು ಈ ಬಸ್ಸಿನಲ್ಲಿದ್ದು ಅವರು ಊರೆಲ್ಲಾ ಇದೇ ಸುದ್ದಿ ಹೇಳಿ ತಿರುಗಾಡಿದರೆ, ರಗಳೆಯೇ ಬೇಡ ಎನ್ನುತ್ತಿದೆ ಬುದ್ಧಿ ಆದರೆ ಮನಸ್ಸು ಮುಳ್ಳನ್ನು ಬಯಸುತ್ತಿದೆ, ಅಡಿಕೆ ಚೂರು ಎತ್ತಲು. ಇಷ್ಟು ಆಲೋಚನೆಯ ನಡುವೆಯೂ ನಾಲಿಗೆ ತನ್ನ ಕೆಲಸ ಮಾಡುತ್ತಲೇ ಇದೆ. ಈಗ ಪಳಕ್ ಅಂತ ಅಡಿಕೆ ಚೂರು ಹೊರ ಬಂದು ಬಿಡಬೇಕು ಆ ಒಂದು ಕ್ಷಣದ ಆನಂದ ವರ್ಣಿಸಲಸದಳ. ಆದರೆ ಬರುವುದಿಲ್ಲ. ಯಾವಾಗಲೂ ಪಿನ್ನು ಇಟ್ಟುಕೊಳ್ಳುವ ಜಾಗವನ್ನೆಲ್ಲಾ ತಡಕಾಡಿಸುತ್ತದೆ ಮನಸ್ಸು, ಇಲ್ಲ ಎಲ್ಲೂ ಇಲ್ಲ. ಅಂತೂ ಬಸ್ಸು ಇಳಿಯುವ ಜಾಗ ಬರುವವರೆಗೂ ಕಳೆಯುವುದು ಎಂದರೆ ಆಗದ ಮಾತು. ಹೊಟ್ಟೆಯಲ್ಲಿ ಗುಡಗುಡ ಆದರೆ ಡ್ರೈವರ್ ಬಳಿ ಕೆಳಿ ಬಸ್ಸು ನಿಲ್ಲಿಸಯ್ಯಾ ದೊರೆ ಅಂತ ಅಲವತ್ತುಕೊಳ್ಳಬಹುದು, ಇದು ಹೇಳಿ ಕೇಳಿ ಸಾಸಿವೆ ಕಾಳಿನಷ್ಟು ಅಡಿಕೆ ಚೂರು. ಯಾವ ಬಾಯಿಂದ ಹಾದಿಬದಿಯಲ್ಲಿದ್ದ ಮುಳ್ಳನ್ನು ಕಿತ್ತು ತರಬೇಕು ಹಲ್ಲಿನ ಸಂದಿಯಲ್ಲಿ ಅಡಿಕೆ ಚೂರು ಸಿಕ್ಕಿಕೊಂಡಿದೆ ಎಂದು ಡ್ರೈವರ್ ಬಳಿ ಕೇಳುವುದು. ಆತ ಕೇವಲವಾಗಿ ನೋಡಿಯಾನು, ತತ್ ಎಂದಾನು, ಇಲ್ಲ ಅದು ಆಗದ ಮಾತು, ಅಯ್ಯೋ ದೇವರೆ ನೀನೇ ಸೃಷ್ಟಿಸಿದ ಅಡಿಕೆ ನೀನೇ ಸೃಷ್ಟಿಸಿದ ಹಲ್ಲು ಮತ್ತು ನೀನೆ ಅದ್ಯಾವ ಮಾಯದಲ್ಲೋ ಕಣ್ಣಿಗೆ ಕಾಣಿಸದಷ್ಟು ಸಣ್ಣನೆಯ ಕ್ರಿಮಿ ಹಲ್ಲಿನೊಳಗೆ ಕಳಿಸಿ ಕೊರೆಸಿ ಮಾಡಿಸಿದ ಗುಳಿ, ಹ್ಞಾ ಗುಳಿ ಎಂದ ಕೂಡಲೆ ನೆನಪಾಯಿತು ಇಲ್ಲ ಈ ಸಾರಿ ಹಲ್ಲಿನ ಡಾಕ್ಟರ್ ಬಳಿ ಹೋಗಿ ಆ.... ಎಂದು ಬಾಯಿ ಕಳೆದು ಗುಳಿಬಿದ್ದ ಆ ಹಲ್ಲನ್ನು ಕೀಳಿಸಬೇಕು ಮತ್ತು ಇನ್ನುಮುಂದೆ ಕವಳ ಹಾಕಬಾರದು, ಇಡೀ ಬಸ್ಸಿನಲ್ಲಿ ಎಲ್ಲರೂ ಆರಾಮವಾಗಿದ್ದಾರೆ, ಕೆಲವರು ನಿದ್ರೆ, ಕೆಲವರು ಹೊರಗಡೆ ದೃಷ್ಟಿ ಹಾಯಲು ಬಿಟ್ಟು ಒಳ್ಳೆಯ ಕನಸು, ಮತ್ತೂ ಕೆಲವರು ಮುಂದೆ ಕುಳಿತ ಹುಡುಗಿ ನನಗೆ ಸಿಗಬಹುದಾ ಎಂದು ಎವೆಯಿಕ್ಕದೆ ಆಸೆಯ ನೋಟ, ಆದರೆ ನನಗೆ ಮಾತ್ರಾ ಗುಳಿ , ಚೂರು. ಛೆ ಇನ್ನು ಅಡಿಕೆ ತಿನ್ನಬಾರದು. ಇಂತಹ ದರಿದ್ರ ಚಟ ಮಾನಮರ್ಯಾದೆಯನ್ನು ಹರಾಜು ಹಾಕಿಬಿಡುತ್ತದೆ. ಹೌದು, ಬಿಟ್ಟು ಬಿಡಬೇಕು ಅಂತ ನೂರಾರು ಬಾರಿ ಪ್ರತಿಜ್ಞೆ ಮಾಡಿಯಾಗಿದೆ, ಊರಲ್ಲಿ ಯಾರಿಗಾದರೂ ಗಂಟಲು ಕ್ಯಾನ್ಸರ್ ಎಂದಾಕ್ಷಣ ಎದೆಯಲ್ಲಿ ಅದೇನೋ ಕುಟ್ಟಿ ಪುಡಿಮಾಡಿದ ಅನುಭವವಾಗಿ ಇಲ್ಲ ಇನ್ನು ಮುಂದೆ ಅಡಿಕೆ ತಿನ್ನಬಾರದು ಎಂದು ಧೀರ ಪ್ರತಿಜ್ಞೆ ಮಾಡಿದ್ದಿದೆ, ಆದರೆ ಅದು ಮೂರ್ನಾಲ್ಕು ತಾಸು ಅಷ್ಟೆ, ಕೊನೆಗೆ ಕಳ್ಳ ಮನಸ್ಸು ಅಯ್ಯೋ ಖಾಯಿಲೆ ಹೇಳಿ ಕೇಳಿ ಬರುತ್ತಾ ಅವೆಲ್ಲಾ ಡಾಕ್ಟರ್ ಸೃಷ್ಟಿಸುವ ಸುಳ್ಳು ಅಂತ ತನ್ನದೇ ತೀರ್ಮಾನ ತೆಗೆದುಕೊಂಡು ಗೊತ್ತಿಲ್ಲದಂತೆ ಕವಳ ಹಾಕಿಸಿಬಿಡುತ್ತೆ. ಆದರೆ ಇಷ್ಟೊಂದು ಅಸಾಹಾಯಕ ಹಿಂಸೆ ಹಿಂದೆಂದೂ ಆಗಿರಲಿಲ್ಲ. ಇನ್ನು ಸಾಕು ಇದೊಂದು ಚೂರು ಅಡಿಕೆ ಹಲ್ಲಿನ ಗುಳಿಯಿಂದ ಆಚೆ ಬಂದಮೇಲೆ ಅಡಿಕೆ ಗುಟ್ಕಾ ತಂಬಾಕು ಮುಟ್ಟಬಾರದು, ಇದು ಸತ್ಯದ ಪ್ರತಿಜ್ಞೆ. ಕ್ಷಣ ಕ್ಷಣಕ್ಕೂ ಅಡಿಕೆ ಹಲ್ಲಿನ ಸಂದಿಯಲ್ಲಿ ಭಾರವಾಗುತ್ತಿದೆ, ಹೇ ಭಗವಂತಾ ಮೂಗಿನದ್ದೋ ಕಿವಿಯದ್ದೋ ಗಲೀಜು ಹೊರಹಾಕಲು ಸಣ್ಣ ಸಣ್ಣ ಬೆರಳನ್ನು ಕೊಟ್ಟೆ, ಅದೇ ರೀತಿ ಒಂದೇ ಒಂದು ಚೂಪನೆಯ ಪಿನ್ನು ನೀನು ಮನಸ್ಸು ಮಾಡಿದ್ದರೆ ಎಲ್ಲಾದರೂ ಇಡುವುದು ಕಷ್ಟವಾಗಿರಲಿಲ್ಲ ಗಟ್ಟಿಯಾದ ಒಂದೇ ಒಂದು ಬೆರಳಿನ ಉಗುರು ಚೂಪಾಗಿ ಪಿನ್ನಿನಂತೆ ಇಟ್ಟುಬಿಡಬಹುದಿತ್ತು ಅದೇಕೆ ಇಡಲಿಲ್ಲ ನೀನು ತಪ್ಪಿದೆಯಲ್ಲವೇ ಮುಂದಿನ ಪೀಳಿಗೆಯಲ್ಲಾದರೂ ತಿದ್ದಿಕೋ ಎಂದು ಕಾಣದ ದೇವರಿಗೆ ಉಪಾಯ ಹೇಳಿಕೊಟ್ಟಾದರೂ ನಾಲಿಗೆ ಮಾತ್ರಾ ಕದಲದು, ಇಲ್ಲ ಖಂಡಿತಾ ದೇವರು ಇದ್ದಾನೆ, ಇಲ್ಲದಿದ್ದರೆ ನನಗೆ ಈ ಸಹಾಯ ಸಿಗುತ್ತಿರಲಿಲ್ಲ. , ಅಯ್ಯೋ ಮಂಕೆ ನಾನಿದ್ದೇನೆ ತಲೆ ಎತ್ತು ಅಲ್ಲಿದೆ ನಿನಗೆ ಬೇಕಾದ ಕಡ್ಡಿ ಅಂತ ಆಶರೀರವಾಣಿ ಖುದ್ದಾಗಿ ಬಂದು ಹೇಳದಿದ್ದರೂ ದೇವರ ವಿಚಾರ ನೆನಪಾದಾಗ , ಬಸ್ಸಿನ ಪೋಟೋಕ್ಕೆ ಹಚ್ಚಿದ್ದ ಊದುಕಡ್ಡಿ ಕಾಣಿಸಿತು. ಬತ್ತಿ ಉರಿದು ಹಲ್ಲುಚುಚ್ಚಲೆಂದೇ ಸೃಷ್ಟಿ ಮಾಡಿದ್ದಾರೇನೋ ಎನ್ನುವಂತಹ ಕಡ್ಡಿ, ಸಧ್ಯ ಅದಕ್ಕೆ ಏನೋ ಆ ಭಗವಂತ ಡ್ರೈವರ್ ಹಿಂದಿನ ಸೀಟಿನಲ್ಲಿ ಕೂರಿಸಿದ್ದ. ಹಗೂರ ಎದ್ದು ಆಚೆ ಈಚೆ ನೋಡಿ ಲಗ್ಗೇಜ್ ಬಾಕ್ಸನಲ್ಲಿ ಏನೋ ಹುಡುಕುವಂತೆ ನಾಟಕವಾಡಿ ಪೋಟೋದಲ್ಲಿ ಉರಿದು ಉಳಿದಿದ್ದ ಊದಿನ ಕಡ್ಡಿ ತೆಗೆದು ಹಲ್ಲಿನ ಸಂದಿಯಲ್ಲಿ ಅಡಗಿ ಕುಳಿತಿದ್ದ ಅಡಿಕೆಯನ್ನು ಮೀಟಲು ಅಣಿಯಾದೆ ಅಷ್ಟರಲ್ಲಿ ನಾಲಿಗೆಯೇ ಪಳಕ್ಕೆಂದು ಅಡಿಕೆಯ ಚೂರನ್ನು ಹೊರ ಹಾಕಿತು. ಅಮ್ಮಾ ನಿರಾಳವಾಯಿತು. ಚೂರು ಹೊರ ಬಂದಾಗ " ಆಹಾ ಅಯ್ಯೋ ದೇವರೆ ಒಂದೂವರೆ ಗಂಟೆಗಳ ಕಾಲ ಒಂದು ಸಣ್ಣ ಅಡಿಕೆ ಚೂರು ಹಲ್ಲಿನ ಸಂದಿಯಲ್ಲಿಟ್ಟು ಅದೆಷ್ಟು ತೊಂದರೆ ಕೊಟ್ಟೆಯಪ್ಪಾ" ಅಂತ ಅನ್ನಿಸಿದ್ದು ಸುಳ್ಳಲ್ಲ. ಅಂತೂ ಶಿವಮೊಗ್ಗ ಬಂತು. ಈ ದರಿದ್ರ ಹಲ್ಲುಗುಳಿಯ ಕಾಲದಲ್ಲಿ ಅಡಿಕೆ ಬಾಯಿಗೆ ಹಾಕುವಂತಿಲ್ಲ, ನಾಳೆ ಇಡೀ ಹಲ್ಲನ್ನು ಕೀಳಿಸಿ ಎಸೆಯಬೇಕು,ಇನ್ನು ಮೇಲೆ ಅಡಿಕೆ ತಿನ್ನಬಾರದು. ಇದೇ ಕೊನೆ ಅಂತ ಆಲೋಚಿಸುವಷ್ಟರಲ್ಲಿ ಸರಿ ನಾಳೆ ಹೇಗೂ ಹಲ್ಲು ಕೀಳಿಸುತ್ತೇನಲ್ಲ ಅಷ್ಟರತನಕ ತಿನ್ನಬಹುದಲ್ಲ, ಹೇಗೂ ನಾಡಿದ್ದಿಂದ ಇಲ್ಲವೇ ಇಲ್ಲ ಎಂದು ಒಳಮನಸ್ಸು ಚುಚ್ಚತೊಡಗಿತು, ಅರೆ ಹೌದು ಅಡಿಕೆ ತಿನ್ನದೆ ಎರಡು ತಾಸು ಕಳೆಯಿತು ನಾಳೆಯಿಂದ ಖಂಡಿತಾ ಅಡಿಕೆ ತಿನ್ನಬಾರದು ಎಂಬ ಗಟ್ಟಿ ನಿರ್ಧಾರದೊಂದಿಗೆ ಅಂಗಡಿಯವನ ಬಳಿ ಹೋಗಿ "ಒಂದು ಪ್ಯಾಕೇಟ್ ಗುಟ್ಕಾ ಒಂದು ಜನಿವಾರ ಮತ್ತು ಎರಡು ಸೇಫ್ಟಿ ಪಿನ್ ಕೊಡಿ" ಎಂದು ಹೇಳಿದೆ.

Monday, March 23, 2009

ಎರಡು ಆತ್ಮಹತ್ಯಾ ಯತ್ನಗಳು

ಮೊನ್ನೆ ಅನಿಲ ಒಂದು ಫಾರ್ವರ್ಡ್ ಮೈಲ್ ಕಳ್ಸಿದ್ದ. ಎರಡು ಆತ್ಮಹತ್ಯಾ ಯತ್ನಗಳು ಎಂಬುದು ಅದರ ತಾತ್ಪರ್ಯ.ಒಳ್ಳೆಖುಷಿ ಕೊಟ್ಟಿತು ಆ ಕಾರ್ಟೂನ್. ಇದು ನಿಮಗೂ ಬಂದಿರಬಹುದು ಆದ್ರೂ ಒಮ್ಮೆ ಇಲ್ಲಿ ನೋಡಲು ಅಭ್ಯಂತರವಿಲ್ಲವಲ್ಲ...!

ಒದ್ದೆ ಕಟ್ಟಿಗೆ (ನೀಳ್ಗತೆ)



ಉಬ್ಸಂಡೆಯಿಂದ ಗಾಳಿ ಊದಿ ಊದಿ ಬಸವಿಯ ಕಣ್ಣಿಂದ ಬಳ ಬಳ ನೀರು ಬಂತೇ ವಿನಹ ಅಡಿಗೆ ಒಲೆಯ ಬೆಂಕಿ ಹತ್ತಲಿಲ್ಲ. ಆದ್ರಮಳೆ ಶುರುವಾದಲ್ಲಿಂದ ಇದೇ ರಗಳೆ, ಆ ಮಳೆಯೊ ಒಂದೇ ಸವನೆ ಧೋ ಅಂತ ಸುರಿಯುತ್ತಿತ್ತು.ಕಟ್ಟಿಗೆ ಎಲ್ಲಾ ಒದ್ದೆಯಾಗಿ ಚಸ್ ಪಸ್ ಎಂದು ನೀರು ಉಗಳುತ್ತಾ ಒಲೆಯ ಬುಡವನ್ನೆಲ್ಲಾ ರಾಡಿ ಮಾಡುತ್ತಿತ್ತೇ ಹೊರತು ಅನ್ನದ ಪಾತ್ರೆಯ ಅಂಡೂ ಬಿಸಿಯಾಗುತ್ತಿರಲಿಲ್ಲ.
"ಅಮ್ಮಾ....ಬೇಸಿಗೆಯಲ್ಲಿ ಒಣ ಕಟ್ಟಿಗೆ ಮಾಡಿಟ್ಟುಕೊಂಡಿದ್ದರೆ ಈ ಸಮಸ್ಯೆ ಇತ್ತಾ.. ಈಗ ನೋಡು ಒದ್ದಾಟ" ಎಂದು ಚಾವಡಿಯಿಂದ ಸೀತೆ ಹೇಳಿದ್ದು ಕೇಳಿ ಬಸವಿಗೆ ಕೆಂಡದಷ್ಟು ಕೋಪ ಬಂತು.
"ಉಪದೇಸ ಎಲ್ಲಾರು ಮಾಡ್ತ್ರು, ನಾನೇನ್ ಕಮ್ಮಿ ಅಂತ ನೀನೂ ಹೇಳೂಕೆ ಸುರುಮಾಡಿದ್ಯಲೆ, ನೀನೆ ಒಣ ಕಟ್ಟಿಗೆನಾ ಮಾಡ್ಲಕ್ಕಿತ್ತಲೆ, ಬ್ಯಾಸಿಗೆ ರಜ್ದಾಗೆ ಮನೇಲೆ ಕೂಕಂಡು ಇದ್ಯಲಾ ...ನಂಗೆ ಮೈ ಹುಸಾರು ಇದ್ದೀರೆ ಇಷ್ಟೆಲ್ಲಾ ರಗಳೆ ಇತ್ತಾ...ನಿಂಗೆ ಇನ್ನೂ ಸರಿ ನೆತ್ತಿಗಂಪು ಆರ್‍ಲಿಲ್ಲೆ ನಂಗೆ ಬುದ್ದಿ ಹೇಳೂಕೆ ಹೊಂಟಿದ್ಯಲೆ ನೀನು ಎಲ್ಲಾ ನನ್ನ ಹಣೇಬರಹ, ಬಾವಿಗೆ ಬಿದ್ರೆ ಆಳಿಗೊಂದು ಕಲ್ಲು ಎಲ್ಲಾರು ಹಾಕ್ತ್ರು ಕಾಣ್" ಎನ್ನುತ್ತಾ ಉರಿಯದ ಒದ್ದೆ ಕಟ್ಟಿಗೆಯ ಮೇಲಿನ ಸಿಟ್ಟನ್ನು ಮಗಳಮೇಲೆ ತಿರಿಸಿಕೊಂಡ ಬಸವಿ ಚಿಮಣಿ ಬುಡ್ಡಿಯನ್ನು ಬಗ್ಗಿಸಿ ಸೀಮೆಎಣ್ಣೆಯನ್ನು ಕಟ್ಟಿಗೆಯ ಮೇಲೆ ಸುರಿದಳು. ಕಟ್ಟಿಗೆಯ ಮೇಲೆ ಒಮ್ಮೆಲೆ ಬಿದ್ದ ಸೀಮೆಎಣ್ಣೆಗೆ ಬಗ್ ಎಂದು ಉರಿದ ಬೆಂಕಿ ಒಲೆಯಮೇಲಿದ್ದ ಅನ್ನದ ಪಾತ್ರೆಯನ್ನೂ ಮಿಕ್ಕಿ ಮೇಲಕ್ಕೇರಿತು. ಸೀಮೆ ಎಣ್ಣೆಯ ಶಕ್ತಿ ಬತ್ತಿದೊಡನೆ ಮತ್ತೆ ನಿಧಾನ ಇಳಿದು ಸ್ವಲ್ಪ ಸಮಯದಲ್ಲಿಯೇ ಅನ್ನಕ್ಕಿಟ್ಟ ಎಸರು ಕೊತಕೊತ ಸದ್ದು ಬರತೊಡಗಿತು. ಅರ್ದ ಸಿದ್ದೆ ಅಕ್ಕಿಯನ್ನು ಕುದಿಯುವ ನೀರಿಗೆ ಹಾಕಿ ಒಲೆಯ ಮುಂದೆ ಕುಳಿತ ಬಸವಿಗೆ ಸೀತೆ ಹೇಳಿದ್ದು ನಿಜ ಅಂತ ಅನಿಸಿತು.
ಇಷ್ಟು ವರ್ಷ ಸೌದಿಕಟ್ಟಿಗೆಯ ವಿಷಯದಲ್ಲಿ ಬಸವಿ ತುಂಬಾ ಮುಂಜಾಗರೂಕತೆಯಿಂದ ಇರುತ್ತಿದ್ದಳು, ಚಳಿ ಮುಗಿದು ಬೇಸಿಗೆ ಶುರುವಾಗುತ್ತಿದ್ದಂತೆ ನಿತ್ಯ ಒಡೆಯರ ಮನೆಯಿಂದ ಕೆಲಸ ಮುಗಿಸಿ ವಾಪಾಸು ಬರುವಾಗ ಒಂದು ಹೊರೆ ಕಟ್ಟಿಗೆ ಮನೆಗೆ ತಂದು ಅರ್ದ ನಿತ್ಯದ ಉಪಯೋಗಕ್ಕೆ ಬಳಸಿ ಮಿಕ್ಕರ್ದವನ್ನು ಮಳೆಗಾಲಕ್ಕೆ ಎತ್ತಿಡುತ್ತಿದ್ದಳು. ಪ್ರತಿನಿತ್ಯ ಉಳಿತಾಯದ ಕಟ್ಟಿಗೆ ಇಡೀ ಮಳೆಗಾಲ ಕಳೆಯಲು ಸಾಕಾಗುತ್ತಿತ್ತು. ಅಕಸ್ಮಾತ್ ಕಡಿಮೆಯಾಗಬಹುದೆಂಬ ಗುಮಾನಿಯಿದ್ದ ವರ್ಷಗಳಲ್ಲಿ ಮಳೆಗಾಲ ಹದಿನೈದು ದಿನ ಇದೆ ಅನ್ನುವಾಗ ಒಡೆಯರ ಮನೆಗೆ ಬರುವ ಗಂಡಾಳುಗಳಿಗೆ ಕೆಲ್ಸ ಬಿಟ್ಟ ಮೇಲೆ ಖರ್ಚಿಗೆ ಐದೋ ಹತ್ತೋ ರೂಪಾಯಿ ಕೊಟ್ಟು ಒಂದೆರಡು ಮಾರು ಕಟ್ಟಿಗೆ ಮಾಡಿಸಿಕೊಳ್ಳುತ್ತಿದ್ದುದೂ ಉಂಟು. ಆದರೆ ಈ ವರ್ಷ ಮಾತ್ರ ಹಾಗಾಗಲೆ ಇಲ್ಲ. ಬೇಸಿಗೆ ತುಂಬಾ ವಾರಕ್ಕೆರಡು ದಿನ ಜ್ವರ ಮತ್ತೆ ಮೂರು ದಿನ ಗಿರ, ಹಾಗಾಗಿ ಕಟ್ಟಿಗೆಯನ್ನು ಸುರಿವ ಮಳೆಯ ಮಧ್ಯೆ ಸೊಪ್ಪಿನ ಬೆಟ್ಟದಲ್ಲಿ ಆರಿಸಿಕೊಂಡು ಅಡಿಗೆ ಮಾಡುವುದು ಅನಿವಾರ್ಯವಾಗಿತ್ತು. ಆ ಅನಿವಾರ್ಯತೆ ಕಣ್ಣಿನಿಂದ ನೀರನ್ನು ಉಕ್ಕಿಸುತ್ತಿತ್ತು.
"ಅಮ್ಮಾ ನಂಗೆ ಇವತ್ತಿಂದ ಪರೀಕ್ಷೆ ಸುರು, ಎರಡು ಗಂಟೆಗೆ ಕಾಲೇಜಿಗೆ ಹೊಯ್ಕು ಬೇಗ ಅಡಿಗೆ ಮಾಡು" ಚಾವಡಿಯಿಂದ ಮಗಳ ಅಣತಿಗೆ ಬಸವಿಗೆ ತನ್ನ ಶಾಲೆಯ ದಿನಗಳ ನೆನಪಾಯಿತು. ತಾನೂ ಹೀಗೆ ಅಬ್ಬೆಯನ್ನು ಕಾಡುತ್ತಿದ್ದೆ, ಅಂದಿನ ಅಬ್ಬೆಯ ಕಷ್ಟ ಲೆಕ್ಕಿಸದೆ ಗದರುತ್ತಿದ್ದೆ, ಗಿಜರಾಯುತ್ತಿದ್ದೆ ಆದರೆ ಅವೆಲ್ಲಾ ಕನಸಿನಂತೆ ಕರಗಿ ಹೋದವು, ತಾನು ಎಂಟನೇ ಕ್ಲಾಸಿಗೆ ದೊಡ್ಡವಳಾಗಿರದಿದ್ದರೆ ಪೇಟೆ ಪಟ್ಟಣ ಸೇರಿ ಸುಖವಾಗಿರಬಹುದಿತ್ತು. ಆದರೆ ವಿಧಿ ಯೌವನ ರೂಪದಲ್ಲಿ ಬಂದು ಓದು ಅರ್ದಕ್ಕೆ ನಿಲ್ಲುವಂತಾಯಿತು. ತನ್ನ ಜತೆಯವರಾದ, ತನ್ನಷ್ಟೇ ಓದಿದ ಬ್ರಾಹ್ಮಣ, ಗೌಡರ ಜಾತಿಯ ಶೈಲಜಾ, ಸರೋಜ ಮುಂತಾದ ಹೆಣ್ಣು ಮಕ್ಕಳೆಲ್ಲಾ ಪಟ್ಟಣ ಸೇರಿ ವರ್ಷಕ್ಕೊಮ್ಮೆ ಗಂಡನೊಟ್ಟಿಗೆ ಇಂಜನಿಯರ್, ಡಾಕ್ಟರ್ ಓದುತ್ತಿರುವ ಮಕ್ಕಳನ್ನು ಕೂರಿಸಿಕೊಂಡು ಬಣ್ಣ ಬಣ್ಣದ ಕಾರಿನಲ್ಲಿ ಬಿಡಾರದ ಮುಂದೆ ಹಾದು ಹೋಗುವಾಗ ತನ್ನ ಗತಿ ನೆನಸಿಕೊಂಡು ತಥ್ ಅಂತ ಅನ್ನಿಸುತ್ತಿತ್ತು ಬಸವಿಗೆ. ಓದಿನಲ್ಲಿ ತನಗಿಂತ ಹಿಂದೆಯೇ ಇದ್ದ ಅವರ ಈಗಿನ ನಸೀಬು ಕಂಡು ಮನಸ್ಸು ಕುಬ್ಜವಾಗುತ್ತಿತ್ತು. ಅವರು ಅಕಸ್ಮಾತ್ ಎದುರು ಕಂಡರೆ ಮಾತನಾಡಿಸಬೇಕಾದೀತೆಂದು ಅಡ್ಡ ಮುಖ ಹಾಕಿಕೊಳ್ಳುತ್ತಿದ್ದಳು ಬಸವಿ. ಇದಕ್ಕೆಲ್ಲಾ ತನ್ನ ಹೆತ್ತಬ್ಬೆಯೇ ಕಾರಣ ಅಂತ ಅನ್ನಿಸಿ ಒಮ್ಮೊಮ್ಮೆ ಅವಳ ಮೇಲೆ ರೋಷ ಉಕ್ಕಿ ಅಂತಿಮವಾಗಿ ಮತ್ತದೆ ಅಸಾಹಾಯಕ ಕಣ್ಣೀರಿನ ರೂಪ ತಳೆದು ಹಣೆಬರಹ ದೂಷಿಸುವ ತನಕ ಬಂದು ನಿಲ್ಲುತ್ತಿತ್ತು.ಯಾರೋ ಉಳ್ಳವರನ್ನು ಮದುವೆಯಾಗಿ ತನ್ನನ್ನು ಹಡೆದಿದ್ದರೆ ಪಾಡು ಹೀಗಿರಲಿಲ್ಲ.ಅವೆಲ್ಲಾ ರೆ.... ಪ್ರಪಂಚದ ವಿಷಯವಾಗಿದ್ದರಿಂದ ಕೊರಗಿ ಪ್ರಯೋಜನವಿಲ್ಲವೆಂದೆನಿಸಿ ಸುಮ್ಮನುಳಿಯುವುದನ್ನು ಒತ್ತಾಯಪೂರ್ವಕವಾಗಿ ಅಭ್ಯಾಸ ಮಾಡಿಕೊಂಡಿದ್ದಳು. ಆವಾಗ ಪ್ರಪಂಚ ತಿಳಿಯದ ವಯಸ್ಸು ತನ್ನದು, ತಿಳುವಳಿಕೆಯುಳ್ಳ ಅಬ್ಬೆಯಾಗಿದ್ದರೆ ಹೊಡೆದು ಬಡಿದು ತನ್ನನ್ನು ತಿದ್ದುತ್ತಿದಳು ಆದರೆ ಹಾಗೆ ಮಾಡಲಿಲ್ಲ ಎಂಬುದು ಬಸವಿಗೆ ಹರೆಯ ಮುಗಿದಾಗಲೂ ಅಬ್ಬೆ ಮೇಲಿದ್ದ ರೋಷ. ಆದರೆ ತಾನು ಪಟ್ಟ ಕಷ್ಟ, ಪಾಡು ತನ್ನ ಮಗಳು ಅನುಭವಿಸಬಾರದೆಂಬ ಛಲ ತೊಟ್ಟು ಮಗಳಿಗೆ ತನ್ನತನವನ್ನೆಲ್ಲಾ ಧಾರೆ ಎರೆದು ಓದಿನಲ್ಲಿ ತೊಡಗಿಸಿದ್ದಳು. ಒಮ್ಮೊಮ್ಮೆ ತನ್ನವರೆನ್ನುವವರು ಹತ್ತಿರ ಇದ್ದಿದ್ದರೆ ಪರಿಸ್ಥಿತಿ ಸುಲಭವಾಗಿತ್ತೇನೋ ಅಂತಲೂ ಅನ್ನಿಸುತ್ತಿತ್ತು.ತನ್ನವರೆಂಬ ಬಂಧು ಬಳಗ ಇಲ್ಲದ್ದಕ್ಕೆ ಹಳಿಯುವುದು ಯಾರನ್ನು? ಅಬ್ಬೆಯನ್ನೋ ಅಥವಾ ತಾನು ಕಾಣದ ಅಪ್ಪನನ್ನೋ ಎಂಬ ಪ್ರಶ್ನೆಗೆ ಉತ್ತರ ಕಾಣದೆ ಸುಮ್ಮನುಳಿಯುತ್ತಿದ್ದಳು.
***************
ಬಸವಿ ದೂರದ ಕುಂದಾಪುರದಿಂದ ಘಟ್ಟದ ಮೇಲಿನ ತಟ್ಟಿಕೆರೆ ಎಂಬ ಅಡಿಕೆ ಭಾಗಾಯ್ತುದಾರರ ಊರಿಗೆ ಬಂದು ನೆಲೆ ನಿಲ್ಲುವಾಗ ಆರು ವರ್ಷದ ಕೂಸು. ಸಣ್ಣ ವಯಸ್ಸಿನಲ್ಲೇ ಗಂಡನ ಕಳೆದುಕೊಂಡ ಬಸವಿಯ ಅಬ್ಬೆ ಸೇರುಗಾರರ ತಂಡಕ್ಕೆ ಅಡಿಗೆಗಾಗಿ ಬಂದು ತಟ್ಟಿಕೆರೆ ಊರಿನ ಬುಡದಲ್ಲಿ ಇರುವ ಬಿಡಾರ ಸೇರಿದ್ದಳು. ಬೇಸಿಗೆಯಲ್ಲಿ ಅಡಿಕೆ ತೋಟದ ಕೆಲಸ ಮುಗಿಸಿ ಮಳೆಗಾಲ ಶುರುವಾಯಿತು ಎನ್ನುವಾಗ ದುಡಿದ ದುಡ್ಡಿನೊಂದಿಗೆ ವಾಪಾಸು ಊರಿಗೆ ಹೊರಟ ಸೇರುಗಾರರ ತಂಡದೊಂದಿಗೆ ಬಸವಿ ಮತ್ತವಳ ಅಬ್ಬೆಯೂ ಹೊರಡಬೇಕಾಗಿತ್ತು. ಮೊದಲೆರಡು ವರ್ಷ ಹೀಗೆಯೇ ಸಾಗಿತ್ತು. ಮಳೆಗಾಲ ಘಟ್ಟದ ಕೆಳೆಗೆ, ಚಳಿಗಾಲ ಹಾಗೂ ಬೇಸಿಗೆ ಘಟ್ಟದ ಮೇಲೆ. ಬಸವಿ ಹಾಗೂ ಅವಳ ಅಬ್ಬೆ ಘಟ್ಟದ ಮೇಲೆ ಬರಲು ಶುರುಮಾಡಿದ ಮೂರನೇ ವರ್ಷ ತಟ್ಟಿಕೆರೆ ಊರಿನಲ್ಲಿಯೇ ದೊಡ್ಡ ಅಡಿಕೆ ತೋಟದ ಮಾಲಿಕರಾದ ರಾಮೇಗೌಡ್ರ ಮನೆಗೆ ನಿತ್ಯ ಕೆಲಸಕ್ಕೆ ಹೆಣ್ಣಾಳು ಬೇಕು ಅಂದಿದ್ದರಿಂದ ಹಾಗೂ ಕುಂದಾಪುರದಲ್ಲಿಯೂ ಬಸವಿಯ ಅಬ್ಬೆಗೆ ಹೇಳಿಕೊಳ್ಳಬಹುದಾದ ಯಾರೂ ಇಲ್ಲದ್ದರಿಂದ, ಮತ್ತು ಒಂದು ಕಡೆ ನೆಲೆ ನಿಂತರೆ ಮಗಳ ವಿದ್ಯಾಭ್ಯಾಸಕ್ಕೆ ಸಹಾಯವಾಗುತ್ತದೆಯೆಂದು ಕುಂದಾಪುರದ ದಾರಿ ಮರೆತಳು. ಆಗಲೇ ಶಾಲೆಯಿಲ್ಲದೆ ಎರಡು ವರ್ಷ ಕಳೆದ ಬಸವಿಯನ್ನು ತಟ್ಟಿಕೆರೆ ಹಿರಿಯ ಪ್ರಾಥಮಿಕ ಶಾಲೆಗೆ ಸೇರಿಸಿ ಅವಳನ್ನು ವಿದ್ಯಾವಂತೆ ಯನ್ನಾಗಿ ಮಾಡುವ ಕನಸು ಕಂಡು ಶಾಶ್ವತವಾಗಿ ತಟ್ಟಿಕೆರೆ ಗ್ರಾಮ ವಾಸಿಯಾಗಿದ್ದರು ಬಸವಿ ಮತ್ತು ಅವಳ ಅಬ್ಬೆ.
ಹಗಲು ರಾತ್ರಿ, ಮಳೆಗಾಲ,ಚಳಿಗಾಲ ಬೇಸಿಗೆ, ಅದು ಹೇಗೆ ಕಳೆಯಿತೋ ಬಸವಿಗೆ ತಿಳಿಯದಂತೆ ಏಳನೆ ಇಯತ್ತೆ ತಟ್ಟಿಕೆರೆಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಗಿಯಿತು. ಓದಿನಲ್ಲಿ ಚೂಟಿಯಾಗಿದ್ದ ಬಸವಿ ಊರಿನ ಶ್ರೀಮಂತ ಮಕ್ಕಳಿಗಿಂತ ಒಂದು ಹೆಜ್ಜೆ ಮುಂದು ಹಾಗಾಗಿ ಓದು ನಿಲ್ಲಿಸುವಂತಿಲ್ಲ. ಎಂಟನೆ ಕ್ಲಾಸಿಗೆ ಮೂರು ಕಿಲೋಮೀಟರ್ ದೂರದ ತಾಳಗುಪ್ಪಕ್ಕೆ ಹೋಗಬೇಕು. ಅಬ್ಬೆಗೆ ಬುದ್ದಿವಂತ ಮಗಳ ಬಗ್ಗೆ ಹೆಮ್ಮೆ, ಹಾಗಾಗಿ ತಂಟೆ ತಕರಾರಿಲ್ಲದೆ ದಿನನಿತ್ಯ ಬಸವಿಯ ಹೈಸ್ಕೂಲ್ ಪ್ರಯಾಣ ಆರಂಭವಾಯಿತು.
ಏಳನೇ ಕ್ಲಾಸಿನಲ್ಲಿ ಓದುವಾಗಲೇ ವಯಸ್ಸಿಗಿಂತ ಹೆಚ್ಚು ಬೆಳೆದಿದ್ದ ಬಸವಿ ಹೈಸ್ಕೂಲ್ ಸೇರುತ್ತಿದ್ದಂತೆ ಇನ್ನಷ್ಟು ಆಕರ್ಷಣೆಯಾಗಿ ದೊಡ್ಡವಳಾದಳು. ಅಲ್ಲಿಯವರೆಗೆ ಓದಿನಲ್ಲಿ ಮುಂದಿದ್ದ ಬಸವಿಯ ಗಮನ ಈಗ ತನ್ನದೇ ದೇಹದತ್ತ ಹೊರಳಿದ್ದರಿಂದ ಓದು ಬೇಸರ ತರಿಸತೊಡಗಿತು. ಊರಿನ ಗಂಡುಗಲಿಗಳ ಕಣ್ಣು ಬಸವಿಯನ್ನು ಹರಿದು ತಿನ್ನುವಂತೆ ನೋಡುವಾಗ ಬಸವಿಗೆ ಅದೇನೋ ಹೇಳಲಾಗದ ಹಿತವಾದ ಅನುಭವ. ಅದೆಲ್ಲಿಂದಲೋ ರಾಜಕುಮಾರ ಬಂದು ತನ್ನನ್ನು ಎತ್ತಿ ಕೊಂಡೊಯ್ಯುವ ಕನಸುಗಳು ಬಸವಿಯನ್ನು ನಿತ್ಯ ಕಾಡತೊಡಗಿತು. ಆ ರಾಜಕುಮಾರನ ಮುಖ ಒಮ್ಮೊಮ್ಮೆ ತಟ್ಟಿಕೆರೆ ರಾಮೇಗೌಡ್ರ ಮಗ ವಿಜಯನಂತೆಯೂ ಮತ್ತೊಮ್ಮೆ ಕೃಷ್ಣಹೆಗಡೆಯ ಮಗ ಶ್ಯಾಮನಂತೆಯೂ ಕಾಣಿಸತೊಡಗಿತು. ಓದು ಒಕ್ಕಾಲು ಬುದ್ದಿ ಮುಕ್ಕಾಲು ಆಗಿ ದೇಹದ ಉಬ್ಬುತಗ್ಗುಗಳನ್ನು ಗಮನಿಸುತ್ತಾ ಬಸವಿಯ ಕನ್ನಡಿಯ ಸಖ್ಯ ಜಾಸ್ತಿಯಾಗಿದ್ದನ್ನು ಗಮನಿಸಿದ ಅಬ್ಬೆ ಮಗಳಿಗೆ ಬುದ್ದಿಮಾತು ಹೇಳಿದಳು. ಆದರೆ ಅದನ್ನು ಗಮನಿಸುವ ಹಂತವನ್ನು ಬಸವಿ ಆಗಲೇ ದಾಟಿಬಿಟ್ಟಿದ್ದಳು.
ಅಬ್ಬೆ ಕೆಲಸಕ್ಕಾಗಿ ರಾಮೇ ಗೌಡ್ರ ಮನೆಗೆ ಹೊರಡುತ್ತಿದ್ದಂತೆ ಬಸವಿ ಶಾಲೆಯ ನೆಪದಲ್ಲಿ ಮನೆಯಿಂದ ಹೊರಡುತ್ತಿದ್ದಳು. ಆದರೆ ಮಧ್ಯೆ ದಾರಿ ಶಾಲೆಯ ತಪ್ಪಲು ಪ್ರಾರಂಭವಾಯಿತು. ಅದೇನೂ ಒಮ್ಮಿಂದೊಮ್ಮೆಲೆ ಶುರುವಾಗಲಿಲ್ಲ. ಶಾಲೆಗೆ ರಜ ಇದ್ದ ಒಂದು ದಿನ ಅಬ್ಬೆಯೊಟ್ಟಿಗೆ ರಾಮೇಗೌಡ್ರ ಮನೆಗೆ ಹೋದಾಗ ಕಡುಕಪ್ಪು ಕತ್ತಲಿನ ಪಣತದ ಮನೆಯಲ್ಲಿ ಗೌಡರ ಹಿರೇಮಗ ವಿಜಯ ಬಸವಿಯ ಕೈ ಹಿಡಿದು ಬರಸೆಳೆದ. ಬಸವಿಗಿಂತ ನಾಲ್ಕೈದು ವರ್ಷ ದೊಡ್ದವನಾದ ವಿಜಯನ ಬಿಸಿಯುಸಿರು ಬಸವಿಗೆ ಹಿತವಾದ ಅನುಭವ ನೀಡಿತು. ಯಾರಾದರೂ ನೋಡಿಯಾರೆಂಬ ಭಯದಿಂದ ಕೊಸರಾಡಿ ತಪ್ಪಿಸಿಕೊಂಡು ಓಡುವ ಯತ್ನ ಮಾಡಬೇಕೆಂದೆನಿಸಿದರೂ ಬುದ್ದಿ ಮಾನ್ಯಮಾಡಲಿಲ್ಲ. ವಿಜಯನ ಬಿಸಿಯಪ್ಪುಗೆಯಿಂದ ಮುಂದಿನ ಹೆಜ್ಜೆಗೆ ಅಡಿಯೇರಲು ಹೆಚ್ಚಿನ ದಿನ ಹಿಡಿಯಲಿಲ್ಲ, ಶಾಲೆಗೆ ಹೋಗುವ ದಾರಿಯಲ್ಲಿ ಸಿಗುವ ಹೊಳಿಗೆರೆ ತಿರುವಿನ ಮೇಲ್ಬಾಗದ ನಿರ್ಜನ ಜಾಗ ವಿಜಯ ಮತ್ತು ಬಸವಿಯ ನೆಚ್ಚಿನ ತಾಣವಾಯಿತು. ದುಡ್ಡಿನ ಜನರ ಸಹವಾಸವಾದ್ದರಿಂದ ಬಸವಿಯ ದೇಹ ಬಣ್ಣ ಬಣ್ಣದ ಬಟ್ಟೆಗಳಿಂದ ಹಾಗೂ ಕಾಗೆಬಂಗಾರದ ಆಭರಣಗಳಿಂದ ತುಂಬಿ ತುಳುಕಾಡತೊಡಗಿತು.ಏರು ಯೌವ್ವನ, ಖರ್ಚಿಗೆ ಕಾಸು, ಯಾರಿಗೆ ಬೇಕು ಪುಸ್ತಕ ಪಾಠ ಎನ್ನುವಂತಾಯಿತು ಬಸವಿಯ ಸ್ಥಿತಿ. ಬಸವಿಯ ಪ್ರೇಮ ಸಲ್ಲಾಪದ ಕಥೆಯನ್ನು ವಿಜಯ ತನ್ನ ಸ್ನೇಹಿತ ಶ್ಯಾಮನಿಗೆ ಹೇಳಿದ, ದಿನ ಕಳೆದಂತೆ ಶ್ಯಾಮನೂ ಬಸವಿಗೆ ಜತೆಯಾದ. ಶ್ಯಾಮ ನ ಜೇಬಿನಲ್ಲಿ ಕಾಸಿನ ಕೊರತೆಯಿದ್ದುದರಿಂದ ಪ್ರೀತಿ ಪ್ರೇಮದ ಮಾತುಗಳ ಕನಸು ಬಸವಿಯನ್ನು ಆಕಾಶಕ್ಕೆ ಒಯ್ದಿತು. ಹೀಗೆ ಕುತೂಹಲಕ್ಕೆ ಶುರುವಾದದ್ದು ಶಾಲೆಯನ್ನು ತೊರೆಯುವಂತೆ ಮಾಡಿತು. ಬಸವಿ ಒಂದು ದಿನ ಶ್ಯಾಮನೊಟ್ಟಿಗೆ ಮಗದೊಂದು ದಿನ ವಿಜಯನೊಟ್ಟಿಗೆ ಸಮಯ ಕಳೆದು ಶಾಲೆ ಮುಗಿಯುವ ಸಮಯಕ್ಕೆ ಮನೆ ಸೇರುತ್ತಿದ್ದಳು. ಸುದ್ದಿ ಊರಿನವರಿಗೆ ತಲುಪಿ ಎಲ್ಲಾರ ಬಾಯಲ್ಲಿ ಹೊರಳಿ, ಹೊಳ್ಯಾಡಿ ಅಬ್ಬೆಯ ಕಿವಿ ತಲುಪಿದಾಗ ತಿಂಗಳುಗಳು ಉರುಳಿದ್ದವು. ಬಸವಿಯ ಬಗ್ಗೆ ನೂರಾರು ಕನಸುಕಂಡಿದ್ದ ಅಬ್ಬೆ ,
"ಹೆಣ್ಣೆ.. ಪರಪಂಚ ಅಂದ್ರೆ ಎಂತು ಅಂತ ತಿಳ್ಕಂಡಿದೆ, ಹಿಂಗೆಲ್ಲಾ ಮಾಡುಕಾಗ, ಆ ದ್ಯಾವ್ರು ನಿಂಗೂ ಸುಖದ ಕಾಲ ಕೊಡ್ತಾ,ಆವಾಗ ಮೊಗೆ ಮೊಗೆದು ಅನುಬವಿಸು...... ಈಗ ಓದು ಮಗಳೆ, ನನ್ನ ಬಾಳಂತೂ ಇದ್ಯೆ ಇಲ್ದೇನೆ ಕೂಲಿನಾಲಿ ಮಾಡುವಂಗಾಯ್ತು, ನೀನಾರು ಓದಿ ದುಡೂಕೆ ಸುರುಮಾಡಿರೆ ಅದ್ನ ಕಂಡ್ಕಂಡು ಕಣ್ಮುಚ್ತೆ" ಎಂದು ಬುದ್ದಿವಾದ ಹೇಳಿದಳು, ಬಸವಿಗೆ ಒಮ್ಮೊಮ್ಮೆ ಅಬ್ಬೆ ಹೇಳಿದ್ದು ಸರಿ ಅನ್ನಿಸಿ ಮನಸ್ಸು ಗಟ್ಟಿ ಮಾಡಿಕೊಂಡು ಶಪಥ ಮಾಡಿಕೊಳ್ಳುತ್ತಿದ್ದಳು. ಆದರೆ ತಿಂಗಳಿನ ನಡು ದಿನಗಳಲ್ಲಿ ಹರೆಯದ ದೇಹದ ಬಯಕೆಗಳು ವಿಜಯ, ಶ್ಯಾಮರ ಬಿಗಿಯಾದ ಅಪ್ಪುಗೆಯನ್ನು ಬೇಡತೊಡಗುತ್ತಿತ್ತು. ನನಸಿನಲ್ಲಿ ತಡೆಹಿಡಿದದ್ದು ಕನಸಿನಲ್ಲಿಯೂ ಕಾಡಿ ಅಲ್ಲಿ ಕಂಡಿದ್ದು ನನಸು ಮಾಡುವುದು ಅನಿವಾರ್ಯವಾಗತೊಡಗಿತು. ಅದೇನೋ ಅಷ್ಟಕ್ಕಾದರೂ ನಿಲ್ಲುತ್ತಿತ್ತೇನೋ ಅಷ್ಟರಲ್ಲಿ ಶ್ರೀಮಂತರ ಮನೆ ಹುಡುಗಿಯರಾದ ಶೈಲಜ, ಸರೋಜ ಮುಂತಾದವರೆಲ್ಲಾ ಬಸವಿಗೆ ಜತೆಯಾದರು. ಅವರಿಗೆ ಓದು ಅನವಶ್ಯಕವಾಗಿ, ಪ್ರಕೃತಿ ಸಹಜ ಕುತೂಹಲ ಕಾಡುತ್ತಿತ್ತು. ಓದು ಬೇಡದ ಜತೆಗಾರರ ಸಂಖ್ಯೆ ದಿನದಿಂದ ದಿನಕ್ಕೆ ಏರಿತು. ಅಬ್ಬೆ ಪದೆ ಪದೆ " "ಮಗಾ ಬಡವರು ಮಾಡಿದ್ರೆ ತಪ್ಪು ಉಳ್ಳೋರು ಮಾಡಿದ್ರೆ ನ್ಯಾಯ. ಪರಪಂಚದ ನಿಯಮ ಅದನ್ನೆಲ್ಲಾ ಬದ್ಲು ಮಾಡೂಕೆ ಯಾರಿಂದ್ಲೂ ಆತಿಲ್ಲೆ, ನವಿಲು ಕುಣಿಯುತ್ ಅಂತ ಕೆಂಬೂತ ಕುಣಿದ ಕಥೆಯಾಗುತ್ ಬೇಡ ಕೆಟ್ಟ ಸಹವಾಸ ಬಿಡು" ಎಂದು ಎಷ್ಟು ಹೇಳಿದರೂ ಬಸವಿ ಬಗ್ಗದಿದ್ದಾಗ ಅಬ್ಬೆ ಸುಮ್ಮನುಳಿದಿದ್ದಳು.
ದಿನಕಳೆಯುತ್ತಿದ್ದಂತೆ ಬಸವಿಯ ದೇಹದಲ್ಲಾದ ವ್ಯತ್ಯಯ ಬೆಳಗಿನ ವಾಂತಿಯಾಗಿ ಕಾಡತೊಡಗಿದ್ದನ್ನು ಗಮನಿಸಿದ ಅಬ್ಬೆ ಕೆಂಡಾಮಂಡಲವಾದಳು. "ಬೋಸುಡಿ, ನಿನ್ನ ಈ ಅವಸ್ಥೆಗೆ ಅದ್ಯಾವ ಮಿಂಡ ಕಾರಣ ಅಂತ ಹೇಳು,ಅವನ ರುಂಡ ಚೆಲ್ಲಾಡ್ತೆ, ನನ್ನ ಜೀವ ಕಷ್ಟದಲ್ಲೇ ಕಳೀತು, ನೀನಾರು ಸುಖ ಕಾಣ್ಲಿ ಅಂದ್ರೆ ಅಡ್ಡ ದಾರಿ ಹಿಡ್ದ್ಯಲೆ ಹಡ್ಬೆ ರಂಡೆ, ಅವನ ಪಿಂಡ ಅವನ ಮನೆಯಲ್ಲಿ ಇಳ್ಸುವ " ಎಂದು ಕೋಲು ಪುಡಿಗಟ್ಟಿದಳು. ಅಬ್ಬೆಗೆ ಕೈಸೋತಿತೇ ವಿನಹ ಬಸವಿ ಬಾಯ್ಬಿಡಲಿಲ್ಲ. ಬಸವಿ ಅಂದುಸಂಜೆ ಹೊಳಿಗೆರೆ ತಿರುವಿನ ಸೊಪ್ಪಿನ ಬೆಟ್ಟದಲ್ಲಿ ವಾಂತಿಯ ವಿಷಯವನ್ನು ಶ್ಯಾಮನಿಗೆ ಹೇಳಿದರೆ ಅವನು ವಿಜಯನತ್ತಲೂ, ವಿಜಯನಿಗೆ ಹೇಳಿದರೆ ಅವನು ಶ್ಯಾಮನತ್ತಲೂ ಕೈತೋರಿಸಿ ಮಾಯವಾದರು. ಬಸವಿಗೆ ಜಾತಿ ಜನಿವಾರಗಳು,ಶ್ರೀಮಂತಿಕೆ ,ಬಡತನಗಳೆಲ್ಲಾ ಜೀವನಕ್ಕೆ ಅಡ್ಡಿಬರುತ್ತದೆಯೆಂಬ ನಿಜ ಪ್ರಪಂಚದ ಅರಿವಾಗಿದ್ದು ಆವಾಗಲೇ. ಆದರೆ ಕಾಲ ಮಿಂಚಿತ್ತು. ಇದಕ್ಕೆ ಬಸವಿ ತನ್ನ ಬುದ್ಧಿ ಮಟ್ಟದಲ್ಲಿ ತನ್ನದೇ ಒಂದು ಪರಿಹಾರ ಮಾರ್ಗವನ್ನು ಯೋಚಿಸಿ ಮಾರನೇ ದಿನ ಬೆಳಗಿನ ಜಾವ ನೀರು ಕಡಿಮೆ ಇರುವ ತಟ್ಟಿಕೆರೆ ದೇವಸ್ಥಾನದ ಬಾವಿಗೆ ಹಾರಿ,ಕೆಳಗಿನಿಂದ "ನನ್ನ ಮ್ಯಾಲೆ ಎತ್ತುಕೆ ಶ್ಯಾಮ ಬರ್ಕು....ವಿಜಯ ಬರ್ಕು...ನಂಗೆ ಜೀವನ ಕೊಡ್ಕು ಇಲ್ದಿದ್ರೆ ನಾನಿಲ್ಲೆ ಸಾಯ್ತೆ", ಎಂದು ಕೂಗತೊಡಗಿದಳು. ಊರಿಗೆ ಊರೇ ಬಾವಿಯ ಸುತ್ತ ಸೇರಿತು. ಬಸವಿ ಯಾರದ್ದೇ ಒಬ್ಬರ ಹೆಸರು ಹೇಳಿ ಕೂಗಿದ್ದರೆ ಪರಿಹಾರ ಸುಲಭವಾಗುತ್ತಿತ್ತೇನೋ. ಆದರೆ ಇಬ್ಬರ ಹೆಸರನ್ನು ಕೂಗಿದ್ದರಿಂದ ನ್ಯಾಯ ಪಂಚಾಯ್ತಿ ನಡೆದು ಹುಡುಗರಿಬ್ಬರೂ ಸಾಚಾ, ಬಸವಿಯೇ ಹಾದರಗಿತ್ತಿ ಎಂಬ ಹಣೆಪಟ್ಟಿ ಹಚ್ಚಿ ಕೈತೊಳೆದುಕೊಂಡಿತು. ಬಸವಿ ಇವೆಲ್ಲಾ ಸತ್ಯ ಅಂತ ಹೇಳಲು ಶೈಲಜಾ, ಸರೋಜ,ಅವರನ್ನೆಲ್ಲಾ ಕರೆದಳು. ಅವರಾದರೂ ಬರುತ್ತಿದ್ದರೇನೋ ಆದರೆ ಅವರ ಮನೆಯವರು ತಮ್ಮ ಮಕ್ಕಳ ಬಾಯಿಂದ ಇವೆಲ್ಲಾ ತಮಗೆ ಗೊತ್ತಿಲ್ಲ ಎಂದು ಆಣೆ ಪ್ರಮಾಣಗಳ ಸಹಿತ ಹೇಳಿಸಿ ಮಕ್ಕಳನ್ನು ಮನೆ ಸೇರಿಸಿ ಅಗಳಿ ಹಾಕಿಟ್ಟುಕೊಂಡರು.
ಬಸವಿಗೆ ಉಳಿದದ್ದು ಆಗ ಅಬ್ಬೆ ಮಾತ್ರ. ಅಬ್ಬೆಯ ಮುಂದೆ ಅತ್ತೂ ಕರೆದು ಸೋತು ಸುಣ್ಣವಾದಳು. ಹೆತ್ತ ಹೃದಯ ಕರಗಿ ನೀರಾಯಿತು. "ಮಗಳೆ ಪರಪಂಚ ಎಂದ್ರೆ ಹಂಗೆ,ನಮ್ಮ ಹುಸಾರು ನಮ್ಗೆ ಇಲ್ದೀರೆ ಹಿಂಗೆ ಆಗತ್ತ್, ಆ ದ್ಯಾವ್ರಿಗೂ ಕಣ್ಣಿಲ್ಲೆ, ಬಡತನಕ್ಕೆ ಕಷ್ಟ, ಅದೂ ರೂಪ ಇದ್ರಂತೂ ಇನ್ನೂ ಕಷ್ಟ ಬಡವರು ಅಂದ್ರೆ ಒದ್ದೆ ಕಟ್ಟಿಗೆ ಹಂಗೆ ಇರ್ಕು, ಆವಾಗ ಯಾರೂ ಹತ್ರ ಬರೂದಿಲ್ಲೆ, ಹತ್ರ ಬಂದೋರು ಒಣಗಿಸಿ ಉರಿಸ್ತ್ರು,ಆವಾಗ ಎಂತೂ ಆತಿಲ್ಲೆ, ಎಂತಾರು ಆಗ್ಲಿ ಆಗಿದ್ದು ಆಗಿ ಹೋಯ್ತಲ... ಒಂದ್ಸಾರಿ ಗೌಡ್ರ ಕೈ ಕಾಲು ಹಿಡಿತೇ" ಎಂದು ಗೌಡ್ರ ಮನೆಗೆ ಹೋದಾಗ ಅಬ್ಬೆ ವಾಪಾಸು ಬರುವವರೆಗೂ ತನಗೆ ವಿಜಯ ಗಂಡನಾಗುತ್ತಾನೆ ಎಂದು ಸಣ್ಣ ಆಸೆ ಬಸವಿಗೆ ಚಿಗುರಿತ್ತು. ಅಬ್ಬೆ ಗೌಡ್ರ ಮನೆಯಿಂದ ವಾಪಾಸು ಬಂದಾಗ ಬಸವಿಯ ಮದುವೆ ಸುದ್ದಿಯನ್ನು ಹೊತ್ತು ತಂದಿದ್ದಳು ಆದರೆ ವರ ಮಾತ್ರ ಗೌಡ್ರ ಮನೆಯಲ್ಲಿ ಲಾಗಾಯ್ತಿನಿಂದ ಕೆಲಸಕ್ಕಿದ್ದ ಒಂಟಿ ಜೀವಿ ಅರವತ್ತರ ಹರೆಯದ ಗೂರುಕೆಮ್ಮಿನ ಕೊಗ್ಗ. ಬಸವಿ ಗೋಳಾಡಿದಳು, ಅತ್ತು ರಂಪ ಮಾಡಿದಳು. ಆದರೆ ಕೇಳುವವರು ಅಲ್ಲಿ ಯಾರೂ ಇರಲಿಲ್ಲ.ಬಸವಿಯ ಹೊರತಾದ ಪ್ರಪಂಚ ಕಿವುಡಾಗಿತ್ತು.ಈಗಾಗಲೇ ಬಸವಿಯ ಹೊಟ್ಟೆಯಲ್ಲಿದ್ದ ಜೀವಕ್ಕೆ ಅಪ್ಪನೊಬ್ಬ ಬೇಕಾಗಿತ್ತಾದ್ದರಿಂದ ಅವಳೂ ಅನಿವಾರ್ಯವಾಗಿ ಸುಮ್ಮನುಳಿದಳು. ಬಸವಿಯ ಮದುವೆಯಾಗಿ ಏಳೂವರೆ ತಿಂಗಳಿಗೆ ಸೀತೆಯನ್ನು ಹೆತ್ತಳು. ಆದೇನೋ ಉಳ್ಳವರ ಅದೃಷ್ಟಕ್ಕೆ ಕೂಸು ಬಸವಿಯನ್ನು ಹೋಲುತ್ತಿತ್ತು. ಬಸವಿ ಹೆತ್ತ ಕೂಸನ್ನು ನೋಡಿ ತನ್ನದೇ ಕೂಸು ದಿನತುಂಬುವ ಮೊದಲೇ ಹುಟ್ಟಿದೆ ಎಂದು ತಿಳಿದುಕೊಂಡು ಕೊಗ್ಗ ಕಣ್ಮುಚ್ಚಿದ. ಕೂಸು ಬಸವಿಯನ್ನೇ ಹೋಲುತ್ತಿದ್ದುರಿಂದ ಅಬ್ಬೆಯೂ ಅನುಮಾನ ಪಡದೆ ಮಗಳು ಇಷ್ಟಾದರೂ ನಿಯತ್ತಿನಿಂದ ಇದ್ದಾಳಲ್ಲ ಎಂದು ತಿಳಿದುಕೊಂಡು ಸ್ವಲ್ಪ ವರ್ಷಗಳಲ್ಲಿ ಕಣ್ಮುಚ್ಚಿದಳು. ನಂತರದ ದಿನಗಳಲ್ಲಿ ಊರಿನ ಉಳ್ಳ ಕಚ್ಚೆಹರುಕ ಗಂಡಸರು ತಮ್ಮ ಮನೆಯಲ್ಲಿ ಕಳೆಯದಿರುವ ಜಾನುವಾರು ಹುಡುಕುವ ನೆಪದಲ್ಲಿ ಬಿಡಾರದ ಬಳಿ ಅಡ್ಡಾಡುವುದು ಸಹಜವಾಯಿತು. ಗಂಡನೂ ಬದುಕಿಲ್ಲದ್ದರಿಂದ ಬಸವಿ ಎಲ್ಲಾ ಮುನ್ನೆಚ್ಚರಿಕೆಯನ್ನೂ ಪಾಲಿಸುತ್ತಿದ್ದಳು, ಮಗಳ ಭವಿಷ್ಯ ಚೆನ್ನಾಗಿರಬೇಕು ಎಂದಾದರೆ ಅವಳನ್ನು ಓದಿಸಬೇಕು, ಓದಿಸಲು ಹಣ ಬೇಕು, ಹಣ ಬೇಕು ಎಂದಾದರೆ ಹಾಗೆಲ್ಲಾ ಮಾಡುವುದು ಬಸವಿಗೆ ಅನಿವಾರ್ಯವಾಗಿತ್ತು. ಅಬ್ಬೆಯಿಂದ ಬಳುವಳಿಯಾಗಿ ಬಂದ ಗೌಡರ ಮನೆ ಕೆಲಸದ ಜತೆ ಇದೊಂದು ಹೆಚ್ಚಿನ ಕೆಲಸ ಬಸವಿಯದಾಯಿತು.
******************
"ಅಮ್ಮಾ ಊಟಕ್ಕೆ ಬರುದಾ... ಓದೂ ಕಾಲು ಗಂಟೆ ಆಯ್ತು ನಂಗೆ ಬಸ್ಸು ತಪ್ಪಿಹೋರೆ ಕಷ್ಟ,ಇವತ್ತಿಂದ ಒಂದುವಾರ ನಂಗೆ ಪರೀಕ್ಷೆ ಇತ್ತು,ಇಲ್ಲಿ ಇದ್ರೆ ನಂಗೆ ಓದೂಕೆ ಆತಿಲ್ಲೆ ಹಂಗಾಗಿ ಒಂದುವಾರ ನಾನು ಮನೆಗೆ ಬರೂದಿಲ್ಲೆ, ಫ್ರೆಂಡ್ಸ್ ಮನೆಯಲ್ಲೇ ಉಳ್ಕತ್ತೆ, ವಾರಕ್ಕೆ ಬೇಕಾಪು ಬಟ್ಟೆನೂ ತಕಂಡು ಹೋತೆ" ಎನ್ನುತ್ತಾ ಒಳಗೆ ಬಂದ ಸೀತೆಗೆ
"ಆಯ್ತು ಮಗಾ ನಿಂಗೆ ಓದೂಕೆ ಎಲ್ಲಿ ಆರಾಮೋ ಅಲ್ಲಿಯೇ ಇರು, ಒಟ್ನಲ್ಲಿ ನೀ ಓದಿ ಒಂದು ನೌಕರಿ ಅಂತ ಹಿಡದ್ರೆ ಆವತ್ತೆ ನಾನು ಕಣ್ಮುಚ್ತೆ" ಎನ್ನುತ್ತಾ ಬಟ್ಟಲು ಹಾಕಿ ಅನ್ನ ಸಾರು ಬಡಿಸಿದಳು. ತಲೆ ಬಗ್ಗಿಸಿ ಊಟ ಮಾಡುತ್ತಿದ್ದ ಮಗಳನ್ನು ಕಂಡ ಬಸವಿಗೆ ಹೆಮ್ಮೆ ಅನ್ನಿಸಿತು. ತಾನು ಮಾಡಿದ ತಪ್ಪು ತನ್ನ ಜೀವನಕ್ಕೆ ಅಂತ್ಯವಾಗಬೇಕು ಎಂದು ಮಗಳ ಬಳಿ ತನ್ನದೇ ಕಥೆಯನ್ನು ಹೇಳಿ ಶ್ರೀಮಂತರ ಬಲೆಗೆ ಬೀಳದಂತೆ ಬೆಳಸಿದ್ದು ಸಾರ್ಥಕವಾಯಿತು. ತನ್ನ ಬಾಳಂತೂ ಅನಿವಾರ್ಯವಾಗಿ ಶ್ರೀಮಂತರ ದಬ್ಬಾಳಿಕೆಗೆ, ಅಟ್ಟಹಾಸಕ್ಕೆ ಈಡಾಯಿತು, ಅದರಲ್ಲಿ ತನ್ನ ಪಾಲು ಎಷ್ಟಿತ್ತು ಎನ್ನುವುದು ಗೊತ್ತಾಗದ ಕಾಲ, ಆದರೆ ಅವುಗಳನ್ನು ಪ್ರಶ್ನಿಸುವ ಮನಸ್ಥಿತಿಗೆ ಮಗಳು ಮಾನಸಿಕವಾಗಿ ಏರಿದ್ದು ಬಾಳು ಹಸನಾಗಲು ಸಾಕು ಎಂಬ ತೀರ್ಮಾನಕ್ಕೆ ಬಸವಿ ಬಂದಿದ್ದಳು. ಈಗಿನ ಕಾಲದ ಮಕ್ಕಳ ತಿಳುವಳಿಕೆಯೇ ಬೇರೆ. ಇವತ್ತಿನ ಕಾಲದಲ್ಲಿಯೂ ಕಾಟ ಕೊಡುವ ಗಂಡುಗಳು ಇದ್ದರೂ ಸೀತೆಯಂತಹವರನ್ನು ಯಾರೂ ಏನೂ ಮಾಡಲಾಗದು. ಒಂಬತ್ತನೆ ಕ್ಲಾಸಿಗೆ ಹೋಗುತ್ತಿದ್ದಾಗಲೇ ಸೀತೆ ಯಾರೋ ಹುಡುಗರು ರಾಕೆಟ್ ಬಿಟ್ಟರೆಂದು ಚಪ್ಪಲಿ ತೋರಿಸಿ ಮನೆಗೆ ಬಂದಿದ್ದಳು. ಈಗ ಕಾಲೇಜಿನಲ್ಲಿ ಹತ್ತಾರು ಹುಡುಗರೊಡನೆ ವಿಧ್ಯಾರ್ಥಿ ಸಂಘಕ್ಕೆ ಓಡಾಡಿ ತನ್ನಂತೆ ಶೋಷಿತರ ಹಿತ ಕಾಯುವ ನಾಯಕಿಯಾಗಿ ಬೆಳೆದು ನಿಂತಿದ್ದಳು. ನಿತ್ಯ ಕಾಲೇಜಿನಲ್ಲಿ ದುಡ್ಡಿನ ಸೊಕ್ಕಿನಿಂದ ಮೆರೆಯುವ ಹುಡುಗರಿಗೆ ಚಳ್ಳೆ ಹಣ್ಣು ತಿನ್ನಿಸಿದ ಕಥೆಯನ್ನೆಲ್ಲಾ ಬಸವಿಗೆ ಬಂದು ಹೇಳುತ್ತಿದ್ದಳು. ಇನ್ನೊಂದೆರಡು ವರ್ಷ ಹೀಗೆ ಓದಿದದರೆ ನಂತರ ಮಗಳು ಸಾವಿರಗಟ್ಟಲೆ ದುಡಿದು ಮನೆಗೆ ತರುತ್ತಾಳೆ ಅಲ್ಲಿಗೆ ತನ್ನ ಗೋಳಿನ ಗೋಳಿನ ಜೀವನಕ್ಕೂ ಮುಕ್ತಿ. ತನ್ನ ವ್ಯಕ್ತಿತ್ವಕ್ಕೊಂದು ಗೌರವವೂ ಬರುತ್ತದೆ. ಇಂದು ಮಗಳು ಹೇಳುವ ಕಾಲೇಜಿನ ಸಾಹಸದ ಕಥೆ, ತನ್ನ ಕಾಲದಲ್ಲಿ ತಾನೂ ಅಬ್ಬೆಗೆ ಹೀಗೆಲ್ಲಾ ಹೇಳುವಂತಿದ್ದರೆ, ಅಥವಾ ತನ್ನಂತೆ ಅಬ್ಬೆ ಮಗಳನ್ನು ವಿಚಾರಿಸಿಕೊಂಡಿದ್ದರೆ ತನ್ನ ಬಾಳೂ ಹಸನಾಗುತ್ತಿತ್ತೇನೋ ಎಂದೆನಿಸಿತು ಬಸವಿಗೆ.
ಸೀತೆ ಕಾಲೇಜಿಗೆ ಹೊರಟನಂತರ ಬಸವಿ ಊಟ ಮಾಡಿ ಪಾತ್ರೆ ತೊಳೆದಿಟ್ಟು, ಉಳಿದ ಒದ್ದೆ ಕಟ್ಟಿಗೆಯನ್ನು ಬೆಚ್ಚಗಿದ್ದ ಒಲೆಯ ಬಳಿ ಆರಲು ಇಟ್ಟು ರಾಮೇಗೌಡ್ರ ಮನೆಗೆ ಹೋದಳು. ಗೌಡ್ರ ಮನೆ ಮೆಟ್ಟಿಲು ಹತ್ತುತ್ತಿದ್ದಂತೆ ಜಗುಲಿಯಿಂದ ಗೌಡತಿ " ಬಸವಿ ನಿನ್ನ ಮಗಳ ಫೋಟೋ ಪೇಪರ್ರಲ್ಲಿ ಬಂದಿದೆಯಲ್ಲೇ, ಶೋಷಿತರ ವಿದ್ಯಾರ್ಥಿ ಸಂಘದಲ್ಲಿ ನಕ್ಸಲರ ಪರವಾಗಿ ಅವಳು ಕೆಲಸ ಮಾಡ್ತಾ ಇದಾಳಂತೆ, ಅದಕ್ಕೆ ಪೋಲೀಸರು ಹೆಸರು ಹಾಕಿದಾರೆ" ಎಂದು ಹೇಳಿದಳು.
ಮೊದಲ ಸುದ್ದಿಯಿಂದ ಹರ್ಷಿತಳಾದ ಬಸವಿಗೆ ಕೊನೆಯಲ್ಲಿನ ಪೋಲೀಸ್ ಶಬ್ಧ ಕಿವಿಗೆ ಬಿದ್ದಾಕ್ಷಣ ಎದೆ ಒಡೆದ ಅನುಭವ ಆಯಿತು.
"ಎಂತ ಅಮ್ಮ ಸರಿ ಹೇಳಿನಿ" ಎಂದು ಗಾಬರಿಯಿಂದ ಕೆಳಿದಳು ಬಸವಿ.
ಅದ್ಯಂತದೊ ನಕ್ಸಲ್ ಪಟ್ಟಿಯಂತಪಾ ನಂಗೆ ಸರಿ ಗೊತ್ತಿಲ್ಲ ಇವ್ರನ್ನ ಕೇಳು ಎನ್ನುತ್ತಾ ಗೌಡ್ತಿ ಒಳ ಸೇರಿದಳು.
ಮಗಳು ಏನೋ ಯಡವಟ್ಟು ಮಾಡಿಕೊಂಡಿದ್ದಾಳೆಂದು ಬಸವಿಗೆ ಅನಿಸಿ , ಅವಳನ್ನು ಕೇಳಲು ಬಸ್ ಸ್ಟ್ಯಾಂಡಿನತ್ತ ಒಟಕಿತ್ತಳು. ಆದರೆ ಅಷ್ಟರಲ್ಲಿ ಬಸ್ಸು ಹೊರಟು ಹೋಗಿತ್ತು. ಡವಗುಟ್ಟುವ ಎದೆಬಡಿತ ನಿಯಂತ್ರಿಸಲಾಗದೆ ಮನೆಗೆ ಬಂದು ಚಾವಡಿಯ ಮಂಚದ ಮೇಲೆ ಕುಸಿದುಕುಳಿತಳು.
" ಅಮ್ಮಾ ನಾನು ಶ್ರೀಮಂತರ ಸೊಕ್ಕಿಗೆ ಬಂದೂಕಿನಿಂದ ಉತ್ತರ ಕೊಡಲು ನನ್ನ ಒಡನಾಡಿ ಕಾಮ್ರೆಡ್ ಶಿವುವಿನೊಡನೆ ಹೋಗುತ್ತಿದ್ದೇನೆ" ಎಂಬ ಒಂದೇ ವಾಕ್ಯ ಬರೆದ ಹಾಳೆ ಚಾವಡಿಯ ಮಂಚದ ಮೇಲಿಂದ ಬಸವಿಯನ್ನು ನೋಡಿ ಅಣಕಿಸಿತು.
."ಅಯ್ಯೋ ಮಗಳೆ ...... ಶ್ರೀಮಂತರನ್ನೆದುರಿಸಲು ಶ್ರೀಮಂತಳಾಗು ಎಂದರೆ ಮತ್ತೆ ಬಡವಿಯಾದೆಯಲ್ಲೇ..ಬಾಣಲೆಯಿಂದ ಬೆಂಕಿಗೆ ಬಿದ್ದೆಯಲ್ಲೇ.... " ಎನ್ನುತ್ತಾ ಗೋಳಾಡಿದಳು. ಆದರೆ ಬಸವಿಯ ಗೋಳಾಟಕ್ಕೆ ಸಮಾಧಾನ ಹೇಳಲು ಅಲ್ಲಿ ಯಾರೂ ಇರಲಿಲ್ಲ. ಒಮ್ಮೆ ಬಸವಿಗೆ ಇಡೀ ಪ್ರಪಂಚವೇ ತನ್ನನ್ನು ನೋಡಿ ನಕ್ಕಂತಾಯಿತು. ಉರಿವ ಹೊಟ್ಟೆಯ ತಣಿಸಲೆಂದು ನೀರು ಕುಡಿಯಲು ಅಡಿಗೆ ಮನೆಗೆ ಬಂದಳು. ಅಲ್ಲಿ ಒಲೆಯ ಬಳಿ ರಾತ್ರಿ ಅಡಿಗೆಗೆಂದು ಆರಲು ಇಟ್ಟ ಒದ್ದೆ ಕಟ್ಟಿಗೆಗಳಿಗೆ ಕೆಂಪು ಬಣ್ಣದ ಬೆಂಕಿ ತನ್ನ ಕೆನ್ನಾಲಿಗೆಯನ್ನು ಚಾಚಿ ಆಹುತಿ ತೆಗದುಕೊಳ್ಳುತ್ತಿತ್ತು. ಅಸಾಹಾಯಕಳಾದ ಬಸವಿಗೆ ಒಮ್ಮೆ ಅಬ್ಬೆಯ ನೆನಪಾಗಿ ಒಲೆಯ ಬುಡದಲ್ಲಿ ಕುಸಿದು ಕುಳಿತಳು, ತನಗೆ ಸಮಾಧಾನ ಮಾಡಲು ಅಬ್ಬೆಯೂ ಇಲ್ಲ ತನ್ನ ಸಿಟ್ಟು ತೀರಿಸಿಕೊಳ್ಳಲು ಮಗಳೂ ಕಣ್ಣೆದುರಿಗಿಲ್ಲ, "ಅಬ್ಬೆ ನೀನೆ ಅದೃಷ್ಟವಂತೆ ನಿನ್ನ ಸಿಟ್ಟಿಗೆ ನಾನು ಕಣ್ಣೆದುರಿಗಿದ್ದೆ ಈಗ ನನಗೆ ಯಾರೂ ಇಲ್ಲವಲ್ಲೇ...." ಆಕಾಶದತ್ತ ಮುಖ ಮಾಡಿ ಗೋಳಾಡತೊಡಗಿದಳು ಬಸವಿ.
ಕಟ್ಟಿಗೆಯ ತುಂಡಿನಲ್ಲಿದ್ದ ಕೆಂಪು ಬಣ್ಣದ ಬೆಂಕಿಯ ಕೆಂಡದ ಚೂರೊಂದು ಚಟ್ ಎಂದು ಸಿಡಿದು ಬಸವಿಯ ಸೀರೆಯ ಮೇಲೆ ಹಾರಿ ಬಿತ್ತು. ಬಸವಿಗೆ ಅದನ್ನು ಕೊಡವಿಕೊಳ್ಳುವಷ್ಟು ಅರಿವು ಇರಲಿಲ್ಲ. ಆ ಪ್ರಯತ್ನಕ್ಕೆ ಅರ್ಥವೂ ಇರಲಿಲ್ಲ ಕಾರಣ ಒದ್ದೆಕಟ್ಟಿಗೆಯ ಕೆಂಪುಕೆಂಡ ಆಗಲೆ ಬಸವಿ ಮತ್ತು ಸೀತೆಯನ್ನು ವಾಪಾಸುಬರಲಾಗದಷ್ಟು ನುಂಗಿಹಾಕಿತ್ತು.
**************************