Friday, August 6, 2010

ತಾವರೆಯ ಗಿಡ ಹುಟ್ಟಿ......

ಅದೇಕೆ ಹಾಗೆ ಚಂದದ ಹೂವು ಬಿಡುತ್ತದೆ ಅಂತ ನನಗೆ ಇವತ್ತಿನವರೆಗೂ ಅರ್ಥವಾಗಿಲ್ಲ. ಸಾಮಾನ್ಯವಾಗಿ ಎಲ್ಲವೂ ಹೂವುಬಿಡುವುದು ಕಾಯಾಗಿಸುವುದಕ್ಕೆ. ಆದರೆ ತಾವರೆಯ ಹೂವಿಂದ ಕಾಯಾಗುವುದಿಲ್ಲ. ಬುಡದಲ್ಲಿ ಪುತಪುತ ಹಿಳ್ಳು ಒಡೆದು ತನ್ನ ವಂಶಾಭಿವೃದ್ಧಿಯನ್ನು ಮಾಡಿಕೊಳ್ಳುತ್ತದೆ. ಆದರೂ ಸಿಕ್ಕಾಪಟ್ಟೆ ಚಂದದ ಹೂವುಬಿಡುತ್ತದೆ. ಸರಿ ಹೂವು ಬಿಡುತ್ತದೆ ನೋಡಲು ಚಂದ ಇದೆ ಇನ್ನೇನು ನಿನ್ನ ರಗಳೆ ಎಂದಿರಾ?. ಇರುವುದೇ ಅಲ್ಲ, ಘೋರಾಂಡ್ಲ ಮಳೆಗಾಲ್ದಲ್ಲಿ ದೇವರೆಂಬ ದೇವರಿಗೆ ಹೂವುಗಳೇ ಇಲ್ಲದಾಗ ಆ ಕೊರತೆಯನ್ನು ನೀಗಿಸುವ ತಾಕತ್ತು ಇರುವುದು ಈ ತಾವರೆ ಗಿಡಕ್ಕೆ. ಅಯ್ಯ ಅದೂ ಒಳ್ಳೆಯದೇ ಆಯಿತು ಮತ್ತೇನು ಸಮಸ್ಯೆ ಅಂತ ಕೇಳಬಹುದು ನೀವು. ಸಮಸ್ಯೆ ಇರುವುದೇ ಅಲ್ಲಿ, ತಾವರೆಯ ಹೂವಾಗುವ ಬಹಳ ಮುಂಚೆ ಅಂದರೆ ಗಿಡ ಹುಟ್ಟಿದಾಗ. ಆಚೀಚೆ ಮನೆಯವರು ಮತ್ತು ಊರಿನವರು "ನಿಮ್ಮಲ್ಲಿ ಕೇಸರಿ ತಾವ್ರೆ ಇದ್ದು ಅಂತ ಶಾರ್ದಕ್ಕ ಹೇಳಿದ್ದ ಒಂದು ಬುಡ ತಗಂಡು ಹೋಪನ ಅಂತ ಬಂದಿ" ಎಂದು ಬಂದಾಗ ನಿಜವಾದ ಸಮಸ್ಯೆ. ಅಯ್ಯೋ ಪುಣ್ಯಾತ್ಮ ಸಾಕು ಏನದು ಸಮಸ್ಯೆ ಹೇಳು ಅಂದಿರಾ ವಾಕೆ... ಕೇಳಿ ಈಗ.
ನಮ್ಮ ಮಲೆನಾಡಿನಲ್ಲಿ ಉದ್ಯೋಗ ಖಾತ್ರಿಯಿಂದಾಗಿ ಕೂಲಿ ಆಳಿನ ಸಮಸ್ಯೆ ಯಡ್ಡಾದಿಡ್ಡಿ. ನೂರಾ ಐವತ್ತು ರೂಪಾಯಿ ದಿನಕ್ಕೆ ಕೊಟ್ಟು ಯಾರನ್ನಾದರೂ ಹಿಡಕೊಂಡು ಬಂದು ನಾವು ಅವರನ್ನ ಕರೆದುಕೊಂಡು ಕಾದಿಗೆ ಚೊಕ್ಕ ಮಾಡಲು ಕರೆದುಕೊಂಡು ಹೋಗಬೇಕು ಎನ್ನುವಷ್ಟರಲ್ಲಿ, ಚಾ ಕೊಟ್ಟ ಮನೆ ಹೆಂಗಸರು ಅವರನ್ನು " ಮಾರಿ(ಇದು ಹೆಸರು ಹೆದರಬೇಡಿ),,, ತಾವ್ರೆ ಗಿಡ ಹುಟ್ಟಿ ಹದಿನೈದು ದಿವ್ಸ ಆತು ಇನ್ನೂ ಅದಕ್ಕೆ ಗೂಟ ಕೊಡ್ಲಿಲ್ಲ, ಮಾರಾಯ, ಇವ್ರ ಹತ್ರ ಹೇಳಿರೆ ಹ್ವಾರ್ಯ ಇಲ್ಲ ಅಂತಾರೆ, ಹಿತ್ಲಾಕಡೆಯಿಂದ ಹೋಗಿ ಒಂದು ಹೊರೆ ಗೂಟ ತಂದುಕೊಡ" ಅಂತ ಪಾಲೀಷ್ ಮಾಡಿ ಕೆಲಸದವನನ್ನು ಕಳುಹಿಸಿಬಿಡುತ್ತಾರೆ. ಅಲ್ಲಿಗೆ ನಮ್ಮ ತೋಟದ ಕೆಲಸ ಅವತ್ತಿನ ಮಟ್ಟಿಗೆ ಪಿನಿಷ್. ಈಗ ನನ್ನ ಸಮಸ್ಯೆ ನನ್ನ ಸಮಸ್ಯೆ ಏನು ಸಮಸ್ತ ಭೂಲೋಕದಲ್ಲಿ ತಾವರೆ ಗಿಡ ಇರುವ ಮನೆಯ ಗಂಡಸರ ಸಮಸ್ಯೆ ಅರ್ಥವಾಗಿರಬೇಕು ನಿಮಗೆ.
ಹಾಗಂತ ಅದು ಅಷ್ಟಕ್ಕೆ ನಿಲ್ಲುವುದಿಲ್ಲ, ಆ ತಾವರೆ ಗಿಡ ಕೊಂಡೊಯ್ಯಲು ಬಂದಿರುತ್ತಾರಲ್ಲ ಅವರೆದುರು " ನಮ್ಮನೇಲಿ ಇವುಕ್ಕೆ ಆನು ಹೂವಿನ ಗಿಡ ಮಾಡದು ಅಂದ್ರೆ ಸಿಟ್ಟು ಮಾರಾಯ್ತಿ, ಒಂದು ಗೂಟ ತರ್ಸಲೆ ಬಿಡ್ತ್ವಲ್ಲೆ ಬೈತ" ಎಂದು ಮುಂದುವರೆಯುತಿರುತ್ತದೆ. ಆದರೂ ಅವೆಲ್ಲಾ ಒಂಥರಾ ನನ್ನ ಅಪ್ಪಯ್ಯ ಮಾಡುತ್ತಿದ ನಾನು ಮುಂದುವರೆಸುತ್ತೇನೆ ಅಷ್ಟೆ ಎನ್ನುವುದನ್ನು ಬಿಟ್ಟರೆ ಸಿಕ್ಕಾಪಟ್ಟೆ ರಗಳೆ ಇಲ್ಲ ಅನ್ನುವುದು ಬೇರೆ ಮಾತು.
ಆದರೂ ಕಾಯಾಗುವುದಿಲ್ಲ ಮತ್ತೇಕೆ ಹೂವಷ್ಟೇ ಬಿಟ್ಟು ನಮ್ಮನ್ನು ಗೋಳು ಹೊಯ್ದುಕೊಳ್ಳುತ್ತದೆ ಎಂದು ಅರ್ಥವಾಗುತ್ತಿಲ್ಲ. ಇಷ್ಟಾದ್ರೂ ಚಂದ ಇದೆ ಮಾತ್ರಾ....

ಈ ಸಮಯ ನಿಂಬ್ ಗಾರಮಯ

ಗೊತ್ತು ನಿಂಬೆಬಾಗದ ಫೋಟೋ ನೋಡಿದ ತಕ್ಷಣ ನಿಮ್ಮ ಬಾಯೊಳಗೆ ಚೊಳ್ ಅಂತ ನೀರು ಬಂತು ಅಂತ. ಆದರೆ ಒಂದೇ ಒಂದು ಸಮಾಧಾನ ಎಂದ್ರೆ ಅಂಗಡಿಗೆ ಹೋಗಿ ನೀವೂ ಇನ್ನೊಂದೆರಡು ಘಂಟೆಯೊಳಗೆ ಟೇಸ್ಟ್ ನೋಡಿ ಲೊಟ್ಟ ಬಾರಿಸಬಹುದು. ಇರಲಿ ಅವೆಲ್ಲಾ ಆಮೇಲಿನ ಕತೆಯಾಯಿತು ಈಗ ವಿಷಯಕ್ಕೆ ಬರೋಣ.
ಹತ್ತು ಗಂಟೆಯ ಹೊತ್ತಿಗೆ ನಾನು ಮೆತ್ತಿನ ಮೇಲೆ ಕಂಪ್ಯೂಟರ್ ಕುಟ್ಟುತ್ತಾ ಇರುವಾಗ ಕೆಳಗಿನಿಂದ "ರೀ........." ಎಂಬ ವಿಶೇಷ ಸ್ವರ ಕೇಳಿತು ಅಂತಾದ ಕೂಡಲೆ ನಾನು ಕ್ಯಾಮೆರಾ ಹಿಡಿದು ಹೊರಟುಬಿಡುತ್ತೇನೆ. ಇದೆಲ್ಲಾ ಶುರುವಾಗಿದ್ದು "ಸೌತೇ ಕಾಯಿ ಉಪ್ಪುಕಾರದ" ಬರಹದಿಂದ. ಬ್ಲಾಗಲ್ಲಿ ನೋಡಿದ ನನ್ನ ಅಕ್ಕಂದಿರೋ ಮತ್ಯಾರೋ ನನ್ನವಳ ಪರಿಚಯಸ್ತರು " ಅಯ್ಯೋ ಕವಿತಾ..ನಿನ್ನ ಫೋಟೋ ಪೇಪರ್ರಲ್ಲಿ ಬೈಂದಲೇ...." ಅಂತ ಫೋನ್ ಮಾಡಬಿಟ್ಟಿದ್ದಾರೆ.(ಗುಟ್ಟು ಇದು ನಿಮ್ಮೊಳಗೆ ಇರಲಿ) ಆದರ ಪರಿಣಾಮವಾಗಿ ಈಗ ಮನೆಯಲ್ಲಿ ಏನೇ ಹೊಸ ಪದಾಥ ಮಾಡುವಾಗ ನಾನು ಅಡಿಗೆಮನೆಯಲ್ಲಿ ಕ್ಯಾಮೆರಾ ಹಿಡಿದು ನಿಲ್ಲಬೇಕು, ಮತ್ತೆ ಮಾಡುವ ವಿಧಾನ ತಿಳಿಯಬೇಕು. ನಂತರ ಬ್ಲಾಗಲ್ಲಿ ಬರೆಯಬೇಕು. ನೀವಾದರೋ ಕಾಮೆಂಟಿನಲ್ಲಿ "ವಾವ್" ಎಂದು ಬರೆದು ಆಮೇಲೆ "ಇದು ಎಂತು ಹೇಳಿ ಬರ್ದಿಕ್ಕೆ, ಎಲ್ಲರಿಗೂ ಗೊತ್ತಿದ್ದಪ" ಅಂತ ಅಂದುಬಿಡಬಹುದು. ಆದರೆ ಇಲ್ಲಿ ನಿಮ್ಮ ಕಾಮೆಂಟಿಗೆ ಖುಷ್ ಆಗಿ ಮತ್ತೊಂದು ಪದಾರ್ಥ ಬರೀರಿ ಅಂತ ಹೇಳುವ ಜನ ತಯಾರಾಗಿರುತ್ತಾರೆ. ಇರಲಿ ಲೈಫು ಎಂದರೆ ವೈಫು, ಮುಂದೇ ನೋಡೋಣ.
ಬರೋಬ್ಬರಿ ಮಳೆಗಾಲದ ಆಗಸ್ಟ್ ತಿಂಗಳಿನಲ್ಲಿ ಹಿತ್ತಲಿನ ಗಿಡದಲ್ಲಿ ನಿಂಬೆ ಹಣ್ಣು ತೊನೆದಾಡುತ್ತಿರುತ್ತದೆ. ಉಪ್ಪಿನಕಾಯಿಯೂ ಬೇಸರ ಬರುವಷ್ಟು, ಪಾನಕ ಮಾಡಿ ತಣ್ಣಗೆ ನೇಟೋಣ ಎಂದರೆ ಚಳಿ ಚಳಿ. ಆಗಲೇ ಈ ನಿಂಬೆಗಾರದ ಬಗೆ. ಒಂದೇ ಒಂದು ಹನಿ ನಾಲಿಗೆ ಮೇಲಿಟ್ಟರೆ ಲೊಚ್ ಎಂಬ ಶಬ್ಧ ತನ್ನಷ್ಟಕ್ಕೆ. ಅದಕ್ಕೆ ಹಾಕುವ ಸೂಜಿಮೆಣಸಿನ ಕಾಯಿ ಗಂಟಲನ್ನು ಗರಂ ಮಾಡಿಬಿಡುತ್ತದೆ. ನಿಂಬೆ ಕಡಿಯಿಂದ ಬೀಜ ತೆಗೆದು ಕೇವಲ ರಸ ಪಾತ್ರೆಗೆ ಹಾಕಿಟ್ಟುಕೊಂಡು, ಸಾಸಿವೆ ಜೀರಿಗೆ ಹಾಗೂ ಉದ್ದಿನಬೇಳೆ ಸೂಜಿಮೆಣಸು ಹುರಿದುಕೊಂಡು ನಂತರ ಹುಳಿ ಸೇರಿಸಿ ಬೀಸಿದರಾಯಿತು. ಆನಂತರ ಒಳ್ಳೆಯ ಗೋಕರ್ಣದ ಇಂಗು ಹಾಕಿ ಒಂದು ಒಗ್ಗರಣೆ ಜಡಿದರೆ ನಿಂಬ್ ಗಾರ ರೆಡಿ.
ಗೊತ್ತಿದ್ದರೂ ಮಾಡಿ ಗೊತ್ತಿಲ್ಲದಿದ್ದರೂ ಮಾಡಿ ಅಥವಾ ನಾಳೆ ನಾಡಿದ್ದರೊಳಗೆ ನಮ್ಮ ಮನೆಗೆ ಬನ್ನಿ.

Wednesday, August 4, 2010

ಮತ್ತಿ ಎಲೆ ಶ್ಯಾಂಪು ನೆತ್ತಿ ಮೇಲೆ ತಂಪು.

ತಲೆಕೂದಲಿಗೊಂದು ಮಜಬೂತು ಸ್ನಾನ ಮಾಡಿಸಬೇಕು ಅಂತಾದರೆ ಈ ಕಾಲದಲ್ಲಿ ಶ್ಯಾಂಪೂ ಅತ್ಯವಶ್ಯಕ. ನೊರೆನೊರೆ ಯೆಂಬ ಬೆಳ್ಳನೆಯ ರಾಶಿ, ಸುವಾಸನೆ, ಸ್ನಾನದ ನಂತರ ಕೂದಲಿಗೆ ಬರುವ ಹೊಳಪು, ಮುಂತಾದವುಗಳಿಗೆ ಶ್ಯಾಂಪೂ ಪರಿಣಾಮಕಾರಿ. ಮಹಿಳೆಯರ ವಿಷಯದಲ್ಲಂತೂ ಕೂದಲು ಉನ್ನತ ಸ್ಥಾನ ಪಡೆದಿರುವುದರಿಂದ ಅದಕ್ಕೆ ವಿಶೇಷ ಆರೈಕೆ. ಬಳಸುವ ಶ್ಯಾಂಪೂ ಜತೆಗೆ ಕಂಡೀಷನರ್ ಮುಂತಾದವುಗಳ ಪಟ್ಟಿ ದೊಡ್ಡದಿರುತ್ತದೆ. ಮತ್ತೆ ಯಾವ ಕಂಪನಿಯ ಯಾವ ಬ್ರ್ಯಾಂಡ್ ಬಳಸಿದರೆ ಪರಿಣಾಮಗಳೇನು? ಎಂಬುದು ಬಾಯಿಪಾಠವಾಗಿರುತ್ತದೆ. ಇನ್ನು ರಾಸಾಯನಿಕ ಬಳಸಲು ಒಪ್ಪದ ಜನರು ಅಂಗಡಿಯಲ್ಲಿ ದೊರಕುವ ಶೀಕೆಕಾಯಿ ಅಂಟುವಾಳ ಚಿಗರೆ ಪುಡಿ ಮುಂತಾದವುಗಳಿಗೆ ಮೊರೆ ಹೋಗುತ್ತಾರೆ. ಆದರೆ ಮಲೆನಾಡ ಮಹಿಳೆಯರು ತಮ್ಮ ಕೂದಲಿಗೆ ಮೆರಗುಕೊಡಲು ಇನ್ನೂ ನಿಸರ್ಗವನ್ನೇ ಅವಲಂಬಿಸಿದ್ದಾರೆ. ಮತ್ತಿ ಎಂಬ ಗಿಡದ ಸೊಪ್ಪು ಅವರ ತಲೆಕೂದಲನ್ನು ನಿರಂತರವಾಗಿ ಆರೈಕೆ ಮಾಡುತ್ತಿದೆ.
ಮತ್ತಿ ಎಂಬ ಈ ಕಾಡುಗಿಡ ಮಲೆನಾಡಿನ ಪರಿಸರದಲ್ಲಿ ತನ್ನಷ್ಟಕ್ಕೆ ತಾನೇ ವಿಫುಲವಾಗಿ ಬೆಳೆಯುತ್ತದೆ. ಮರವಾದ ನಂತರ ಉತ್ತಮ ನಾಟವಾಗಿಯೂ ಇದು ಬಳಕೆಯಾಗುತ್ತದೆ. ಆದರೆ ಅದಕ್ಕಿಂತ ಮೊದಲು ಇದರ ಎಲೆಗಳು ಉತ್ತಮ ಶ್ಯಾಂಪೂವಾಗಿ ಲಾಗಾಯ್ತಿನಿಂದಲು ಮಲೆನಾಡಿನಲ್ಲಿ ಬಳಕೆಯಲ್ಲಿದೆ. ಇದರಲ್ಲಿ ಗಂಡುಮತ್ತಿ ಹೆಣ್ಣುಮತ್ತಿ ಎಂಬ ಎರಡು ಪ್ರಬೇಧಗಳಿದ್ದು ಯಥಾಪ್ರಕಾರ ಗಂಡುಮತ್ತಿ ಗಂಪನ್ನು ನೀಡಲಾರದು. ಹೆಣ್ಣುಮತ್ತಿಯ ಹತ್ತು ಎಲೆಗಳನ್ನು ಹತ್ತು ನಿಮಿಷ ನೀರಿನಲ್ಲಿ ನೆನೆಹಾಕಿ ನಂತರ ಅದೇ ನೀರಿಗೆ ಸೊಪ್ಪನ್ನು ಕಿವುಚಿದರೆ ಗಂಪಿನ ಶ್ಯಾಂಪೂ ಒಂದು ತಲೆಯ ಬಳಕೆಗೆ ಸಿದ್ಧ. ಇದರ ಜತೆ ಸ್ವಲ್ಪವೇ ಸ್ವಲ್ಪ ಶೀಕೇಕಾಯಿ ಪುಡಿ ಬೆರಸಿ ಕೂದಲಿಗೆ ಹಚ್ಚಿದರೆ ಗಂಪಿನ ಜತೆ ತಂಪು ಕೂಡ. ಹಾಗಾಗಿ ಯಾವ ಕಂಪನಿಯ ಶ್ಯಾಂಪೂಗಳು ಇದರ ಮುಂದೆ ನಿಲ್ಲಲಾರವು. ಶೀಕೆಕಾಯಿ ಬೆರಸಿದ ನಂತರ ಮತ್ತಿಗಂಪು ಕಂಡೀಷನರ್ ನಂತೆ ಕೆಲಸ ಮಾಡುತ್ತದೆ. ಬೇಸಿಗೆಯಲ್ಲಿ ಇದರ ಎಲೆಯನ್ನು ಒಣಗಿಸಿ ಪುಡಿಮಾಡಿಟ್ಟುಕೊಂಡರೆ ವರ್ಷಪೂರ್ತಿ ಬಳಸಬಹುದು. ಆದರೆ ಆಗಷ್ಟೆ ಕೊಯ್ದ ಎಲೆಗಳಿಂದ ಮಾಡಿದ ಗಂಪಿನಷ್ಟು ತಾಜಾತನ ಇರುವುದಿಲ್ಲ. ಹೀಗೆ ಮತ್ತಿ ತನ್ನ ಎಲೆಗಳಮೂಲಕ ತಲೆತಲಾಂತರದಿಂದ ಮಹಿಳೆಯ ನೆತ್ತಿಯನ್ನು ತಂಪಾಗಿಸುತ್ತಾ ಬಂದಿದೆ
(ಇಂದಿನ ವಿಜಯಕರ್ನಾಟಕ ಲವಲವಿಕೆಯಲ್ಲಿ ಪ್ರಕಟಿತ)