Saturday, January 29, 2011

ಧನ್ಯೋಸ್ಮಿ ಅಂತಾದರೆ ನನಗಷ್ಟು ಸಾಕು.

ಖುಷ್ ಖುಷಿಯಾಗಿ ಚಪ್ಪರಿಸುತ್ತಾ ತಿಂದ ಆಹಾರ ದೊಡ್ಡಕರುಳನ್ನೂ ದಾಟಿ ನಮ್ಮದೇ ಹೊಟ್ಟೆಯ ಕೆಳಗೆ ಶೇಖರಿಸಲ್ಪಡುತ್ತದೆ. ಅದಕ್ಕೆ ನಾವು ಮಲ ಅಂತ ಅನ್ನುತ್ತೇವೆ. ಅದರ ಬಗೆಗಿನ ಹೇಸಿಗೆ ಎಷ್ಟರಮಟ್ಟಿಗನದು ಎಂದರೆ ಊಟಕ್ಕೆ ಕುಳಿತಾಗ ಯಾರಾದರೂ "ಹೇಲು" ಅಂತ ಅಂದುಬಿಟ್ಟರೆ ಸಾಕು ವ್ಯಾಕ್ ಅಂತ ಅಂದುಬಿಡುವಷ್ಟು. ಆದರೂ ನಮ್ಮದೇ ಆದ ಹೊಟ್ಟೆಯೊಳಗೆ ಅದು ತನ್ನದೇ ಆದ ಜಾಗ ಗಿಟ್ಟಿಸಿಕೊಂಡು ಘಮ್ಮನೆ ಸುಮ್ಮನೆ ಕುಳಿತಿದೆ. ಒಳಗಿರುವಾಗ ನಮ್ಮಜೊತೆಗಿದ್ದದ್ದು ಹೊರಬಿದ್ದಮೇಲೆ ಅದು ವ್ಯಾಕ್, ಛಿ ಥೂ. ಎಂಬಲ್ಲಿಗೆ ಒಳಗೆ ಇದ್ದಾಗ ಅದೂ ಕೂಡ ಓಕೆ.
ಹಾಗೆಯೇ ದಿನನಿತ್ಯದ ಆಲೋಚನೆಗಳು. ಕ್ಷಣ ಕ್ಷಣಕ್ಕೂ ಬೇಕಾದ್ದೂ ಬೇಡಾದ್ದೂ ಅಸಹನೆ ಸಿಟ್ಟು ಶಾಂತ ಹೀಗೆ ನಾನಾ ಬಗೆಯ ರೂಪ ತಳೆದು ಒಳಮನಸ್ಸು ಗುಣುಗುಣಿಸುತ್ತಲೇ ಇರುತ್ತದೆ. ಸರಿ ಅವು ಒಳಗಡೆ ನಡೆಯುವ ಮಥನಗಳು, ಅವುಗಳನ್ನ ಮಥಿಸಿ ಅದರ ಸತ್ವವನ್ನಷ್ಟೇ ಹೊರಹಾಕಿದವನು ಯಶಸ್ವಿಯಾಗುತ್ತಾನೆ. ಒಳಗಿನ ಎಲ್ಲಾ ಆಲೋಚನೆಯನ್ನೂ ಹೊರಹಾಕುತ್ತಲೇ ಹೋದರೆ ನಿಧಾನ ಗತಿಯಲ್ಲಿ ಹೊರಪ್ರಪಂಚಕ್ಕೆ ವ್ಯತ್ಯಾಸದ ಮನುಷ್ಯನಾಗಿಬಿಡುತ್ತಾನೆ.
ಅಂತ ಬಲ್ಲವರು ಹೇಳ್ತಾರೆ. ನಿಮಗಿಷ್ಟವಾದಕಡೆ ಈ ಮೇಲಿನವುಗಳನ್ನು ಬಳಸಿಕೊಂಡು ಧನ್ಯೋಸ್ಮಿ ಅಂತಾದರೆ ನನಗಷ್ಟು ಸಾಕು.

Thursday, January 27, 2011

ಹೆಣ್ಣು ಕೊಡುವುದಿಲ್ಲ ಬಿಡಿ.

ನಮ್ಮೂರಲ್ಲೊಬ್ಬ ಅಜ್ಜಿಯಿಲ್ಲದ ಅಜ್ಜ
ಕಿವಿ ಕೇಳಿಸದು, ಪಾಪ ವಯಸ್ಸಾಗಿದೆ ಬಿಡಿ
ಬಳೆ ಸದ್ದು ಗಜ್ಜೆ ಸಪ್ಪಳ
ಮಾತ್ರ ಕೇಳಿಸುವುದು, ಕುಹಕ ಮಾಡಬೇಡಿ

ನಮ್ಮೂರಲ್ಲೊಬ್ಬ ಅಜ್ಜಿಯಿಲ್ಲದ ಅಜ್ಜ
ಕಣ್ಣು ಕಾಣಿಸದು, ಪಾಪ ವಯಸ್ಸಾಗಿದೆ ಬಿಡಿ
ಸೀರೆಯ ಬಣ್ಣ ಜಡೆಯ ಉದ್ದ
ಮಾತ್ರ ಕಾಣಿಸುವುದು, ವ್ಯಂಗ್ಯಮಾಡಬೇಡಿ.

ನಮ್ಮೂರಲ್ಲೊಬ್ಬ ಅಜ್ಜಿಯಿಲ್ಲದ ಅಜ್ಜ
ನಿಲ್ಲಲಾಗದು, ಪಾಪ ವಯಸ್ಸಾಗಿದೆ ಬಿಡಿ
ಕಾಲೇಜು ಬಸ್ಸಿನಲ್ಲಿ
ಮಾತ್ರಾ ನಿಲ್ಲುವುದು, ತಮಾಷೆ ಮಾಡಬೇಡಿ

ಅಜ್ಜನ ವರ್ತನೆಯಿಂದ ಬೇಸತ್ತವರೆಂದರು
"ಅಜ್ಜಾ ನೀವು ಮದುವೆಯಾಗಿಬಿಡಿ"
ಜೋಲುಮುಖದಿಂದ ಹೇಳಿದ ಅಜ್ಜ
ನನಗ್ಯಾರೂ ಹೆಣ್ಣು ಕೊಡುವುದಿಲ್ಲ ಬಿಡಿ.

Wednesday, January 26, 2011

ಛಾವಣಿಯಾಗುವ ಚಪ್ಪರದವರೆ


ಬಿರು ಬಿಸಿಲಿನ ದಿವಸಗಳಲ್ಲಿ ಹಂಚಿನ ಮನೆಯೊಳಗೆ ತಂಪಾಗಿರಲು ಚಪ್ಪರದ ಅವಶ್ಯಕತೆ ಇರುತ್ತದೆ. ಹಾಗೆಯೇ ತಂಪಾದ ಮನೆಯೊಳಗೆ ಸೊಂಪಾಗಿ ತಿನ್ನಲು ತರಕಾರಿಯ ಅವಶ್ಯಕತೆ ಇದ್ದೇ ಇರುತ್ತದೆ. ಈ ಎರಡೂ ಬೇಡಿಕೆಗಳನ್ನು ಒಟ್ಟಾಗಿ ಈಡೇರಿಸುವ ಏಕೈಕ ಬಳ್ಳಿಯೆಂದರೆ ಚಪ್ಪರದವರೆ.
ಚಪ್ಪರಕ್ಕೆ ಹಬ್ಬಿ ಗೊಂಚಲು ಗೊಂಚಲು ಕಾಯಿಬಿಡುವುದರಿಂದ ಇದಕ್ಕೆ ಅದೇ ಹೆಸರು. ಅಕ್ಟೋಬರ್ ತಿಂಗಳಿನಲ್ಲಿ ಬೀಜಹಾಕಿದರೆ ಡಿಸೆಂಬರ್ ಅಂತ್ಯದೊಳಗೆ ಮನೆಯ ಸುತ್ತೆಲ್ಲಾ ವ್ಯಾಪಿಸಿ ಹಂಚಿಮಾಡನ್ನು ತುಂಬಲು ಆವರಿಸಿ ಜನವರಿಯ ಹೊತ್ತಿಗೆ ಗೊಂಚಲು ಕಾಯಿಬಿಡಲು ಆರಂಬಿಸುತ್ತದೆ ಚಪ್ಪರದವರೆ. ಹೀಗೆ ಮಾರ್ಚ್ ವರೆಗೂ ಯಥೇಚ್ಚವಾಗಿ ಕಾಯಿಬಿಡುವ ಇದು ನಂತರ ನಿಧಾನ ಒಣಗಲಾರಂಬಿಸಿ ಮಳೆಗಾಲ ಆರಂಭವಾಯಿತು ಎನ್ನುವಾಗ ಸತ್ತುಹೋಗುತ್ತದೆ. ಮಲೆನಾಡಿನ ವಿಶೇಷ ರುಚಿಯ ಈ ತರಕಾರಿ ತಿನ್ನಲೂ ಅದ್ಬುತ ರುಚಿ. ದಡ್ಡಿಗೊಬ್ಬರ, ಹಾಗೂ ಗೋಮೂತ್ರ ಹಾಕಿದರೆ ಸಾಕು ಚೀಲಗಟ್ಟಲೆ ಕಾಯಿಕೊಯ್ಯಬಹುದು , ಗೆಲ್ಲುಗಳಿಂದಲೂ ಸಂತಾನಭಿವೃದ್ಧಿ ಸಾದ್ಯವಾದರೂ ಆಯುಷ್ಯ ಕಡಿಮೆ ಹಾಗಾಗಿ ಬೀಜದ ಮೂಲಕ ಸಸಿ ನಾಟಿಯೇ ಉತ್ತಮ ವಿಧಾನ.

Monday, January 24, 2011

ಒಂದೇ ಎರಡೇ ಸಿದ್ಧರಾಗಿ ಬಾರಿಸಲು.


"ಮಾವಿನ ಚಿಗುರನು ಮೆಲ್ಲುತ ಕೋಗಿಲೆ ಪಂಚಮ ಸ್ವರದಲಿ ಹಾಡೀತು" ಅಂತ ಕವಿಯೇನೋ ಬರೆದಾಯಿತು. ಮಾವು ಚಿಗುರಿದಾಗ ಹಾಗೆಲ್ಲಾ ಆಗುವುದೂ ದಿಟವೆ. ಆದರೆ ಮಾವು ಚಿಗುರಿತು ಎಂದರೆ ಮಿಡಿ(ಹೆಣ್ಣು ಮಕ್ಕಳ ಮಿಡಿ ಅಲ್ಲ) ಮಾವಿಗೆ ಧಕ್ಕೆ ಬಂತು ಅಂತ ಅರ್ಥ, ಚಿಗುರದಿದ್ದರೆ ಮಾವು ಆ ವರ್ಷ ಫಸಲು ಸೂಪರ್. ಈ ವರ್ಷ ಹಾಗೆ ಆಗಿದೆ ಕಾಡು ಮಾವಿನ ಫಸಲು ಬಂಪರ್. ಎಲ್ಲಿ ನೋಡಿದರಲ್ಲಿ ಮಾವಿನ ಹೂಗಳೆ. ಅಬ್ಬಾ ಕಣ್ಣು ತಂಪಾಗುತ್ತದೆ. ಮಾವಿನ ಮರಗಳು ಯಾವುದೂ ಚಿಗುರಲಿಲ್ಲ ಹೂ ಬಿಟ್ಟು ನಿಂತಿವೆ. ಬಯಕೆ ತರಿಸಿಕೊಳ್ಳುವ ಪ್ರೋಗ್ರಾಂ ಬೇಕಾದರೆ ಹಾಕಿಕೊಳ್ಳಬಹುದು.
ಮಿಡಿಮಾವಿನ ಕಾಯಿ ಈ ವರ್ಷ ಬರಪ್ಪೂರ್. ಮೆಣಸಿನಕಾಯಿ ದರ ಸ್ವಲ್ಪ ಹೆಚ್ಚಾಗಿದೆ. ಆದರೂ ಆ ರುಚಿಯ ಮುಂದೆ ದರದ ಮಾತು ಅಷ್ಟೆಲ್ಲಾ ಮಂಡೆಬಿಸಿಯಲ್ಲ ಬಿಡಿ
ಮ್ಯಾಲಗ್ರ ಮಾಡಿ ಒರಟೆ ಚೀಪುವ ಪ್ರೋಗ್ರಾಂ, ಮಾವಿನ ಹಣ್ಣಿನ ಸಾಸಿವೆ, ಮಾವಿನ ಕಾಯಿ ಅಪ್ಪುಳಿ, ಕಡಗಾಯಿ, ಸಿಗಳಮಿಡಿ ಅಯ್ಯೋ ಒಂದೇ ಎರಡೇ ಸಿದ್ಧರಾಗಿ ಬಾರಿಸಲು.

ಗಟ್ಟಿ ಕೌಪೀನವೂ ಮಾಯವಾದ ಸೊಂಟನೋವೂ...

"ಶೀ.... ಆಗಿದ್ದಾದರೂ ಎಂತು ಇವೆಂಗೆ, ಮಳ್ಳು ಕೌಪೀನ ಅಂತೆಲ್ಲ ಬರೆದು....ಚಿ..." ಅಂತ ನೀವು ಗೊಣಗಬಹುದು. ಆದರೆ ಬೆನ್ನು ಹಾಗೂ ಸೊಂಟನೋವು ಬಾಧಿತರ ಸಂಘದ ಸದಸ್ಯರು ನೀವು ಆಗಿದ್ದರೆ ಅಂತಹಾ ಅವೆಲ್ಲಾ ಖಂಡಿತಾ ಗೌಣವಾಗುತ್ತದೆ.
ಹೌದು ಇದೆಲ್ಲಾ ಶುರುವಾಗುವುದು ಪುರೋಹಿತ ಭಟ್ಟರೊಬ್ಬರ ಸೊಂಟನೋವಿನ ಕತೆಯಿಂದ. ಹೇಳಿ ಕೇಳಿ(ರವಿಬೆಳೆಗೆರೆ ಕೇಳಿ ಅಲ್ಲ) ಪುರೋಹಿತರು ಅಂದಮೇಲೆ ಕೇಳುವುದೇ ಬೇಡ. ನಿತ್ಯ ತಿರುಗಾಟ ನಿತ್ಯ ಕಾರ್ಯಕ್ರಮ , ಹಾಗೆಲ್ಲಾ ತಿರುಗಾಟ ಎಂದಕೂಡಲೆ ಅದರ ಹಿಂದೆಯೇ ಬೆನ್ನಿಗಂಟಿಕೊಂಡಿದ್ದು ಸೊಂಟನೋವು. ಈಗ ಆರು ತಿಂಗಳ ಹಿಂದೆ ಸಿಕ್ಕಾಗ "ಅಯ್ಯೋ ಈ ಸೊಂಟನೋವಿಂದ ಕೆಟ್ಟೆ ಮಾರಾಯ" ಅಂತ ಅಂದಿದ್ದರು . "ಅಯ್ಯೋ... ಶರೀರೆ ಜರ್ಜರೇ...ವ್ಯಾಧಿಗ್ರಸ್ಥೇ ಕಲವರೇ...ಔಷಧೀ ಜಾಹ್ನವೀ....." ಎಂಬ ಎಂಬ ಮಂತ್ರ ನೀವು ಸರಿಯಾಗಿ ಹೇಳಿ ತೀರ್ಥ ತೆಗೆದುಕೊಳ್ಳಲಿಲ್ಲ ಅಂತ ಕಾಣುತ್ತೆ ಹಾಗಾಗಿ ನೋವು, ಪರಮ ನಂಬಿಕೆಯಿಂದ ಹಾಗೆ ತೀರ್ಥ ತೆಗೆದುಕೊಂಡಿದ್ದರೆ ಸೊಂಟನೋವು ಬರಲೇ ಬಾರದಿತ್ತು, ಹಾಗೂ ಬಂದರೆ ಮಂತ್ರ ಸುಳ್ಳು ಬಾರದಿದ್ದರೆ ಸತ್ಯ. ಅಂತ ಅಲ್ಲವಾ" ಎಂದು ತಮಾಷೆ ಮಾಡಿದ್ದೆ. " ಥೋ ನೀನು ಬುಡಕ್ಕೆ ತಂದಿಟ್ಟೆ ಮಾರಾಯ" ಎಂದು ಉಸ್ ಗುಟ್ಟಿದ್ದರು.
ನಿನ್ನೆ ನಮ್ಮ ಮನೆಗೆ ಭಟ್ಟರು ಬಂದಿದ್ದರು. ನಡಿಗೆ ಲಕಲಕ ಮುಖದಲ್ಲಿ ಪಕಪಕ. ಸೊಂಟನೋವಿನ ಸುದ್ಧಿಯೇ ಇಲ್ಲ. ಅರೆ ಇದೇನು ಅಂತ ಆಶ್ಚರ್ಯ ನನಗೆ. ಕುತೂಹಲ ತಡೆಯಲಾರದೇ ಕೇಳಿಯೇ ಬಿಟ್ಟೆ. ಆಗ ಅವರು ಹೇಳಿದ್ದಿಷ್ಟು. ಹೀಗೆ ಪೌರೋಹಿತ್ಯಕ್ಕೆ ಹೋದಾಗ ೭೫ ವರ್ಷದ ವೃದ್ಧರ ಬಳಿ ತಮ್ಮ ನೋವು ಹೇಳಿಕೊಂಡರಂತೆ, ನಿಮಗೂ ಈ ವಯಸ್ಸಲ್ಲಿ ಹೀಗೇನಾ ಎಂದರಂತೆ, ಅದಕ್ಕೆ ಅವರು ಇಲ್ಲ ನನಗೆ ಸೊಂಟವೇ ಇಲ್ಲ ಎನ್ನುವಷ್ಟು ಅರಾಂ ಇದೆ, ಎಂದರಂತೆ. ಇವರು ಕುತೂಹಲದಿಂದ ಕಾರಣ ಕೇಳಿದರಂತೆ. ಆವಾಗ ಅವರು ನನಗೂ ಹಿಂದೆ ಬಾಧಿಸುತ್ತಿತ್ತು ಹೀಗೆ ಯಾರೋ ಹೇಳಿದರು ಕೌಪೀನ ಗಟ್ಟಿಯಾಗಿ ಧರಿಸು ಕಿರಿಕಿರಿ ಮಾಯವಾಗುತ್ತದೆ ಎಂದು ಹಾಗೆಯೇ ಅನುಸರಿಸಿದೆ ಈಗ ಬಿಲ್ ಕುಲ್ ಆರಾಂ ಎಂದರಂತೆ. ಸಲಹೆ ಸಿಕ್ಕಿದ ಪುರೋಹಿತ ಭಟ್ಟರು ಪೇಟೆಯಿಂದ ಬರುವಾಗ ನಾಲ್ಕು ಕೌಪೀನದೊಂದಿಗೆ ಮನೆಗೆ ಬಂದು ಬಿಗಿಯಾಗಿ ಧರಿಸಲು ಆರಂಬಿಸಿದರಂತೆ. ಅಲ್ಲಿಂದ ಎರಡು ತಿಂಗಳ ನಂತರ ಸೊಂಟನೋವು ಬೆನ್ನುನೋವು ಮೊದಲಾದ ಕಿರಿಕಿರಿಯೆಲ್ಲಾ ಮಂಗಮಾಯವಾಯಿತಂತೆ. ಅಲ್ಲಿಯವರೆಗೆ ಆಲೋಪತಿ-ಹೋಮಿಯೋಪತಿ(ಶ್ರೀರಾಮುಲು ಅವರ ಹೋಮೋಪತಿ ಅಲ್ಲ)-ಗಣಪತಿ ಹೀಗೆ ಹತ್ತಾರು ಬಗೆಯ ಪ್ರಯೋಗಕ್ಕೆ ಸೊಂಟನೋವು ಬಗ್ಗದ್ದು ಜಸ್ಟ್ ನಾಲ್ಕಿಂಚು ಅಗಲದ ಕೌಪೀನಕ್ಕೆ ಹೆದರಿ ಮಾಯವಾಯಿತಂತೆ. ಜತೆಯಲ್ಲಿ ವಾತ ಓಡಿಸಲು ರಾತ್ರಿ ಕಂಬಳಿಯಮೇಲೆ ಮಲಗುವುದು ಎಕ್ಸ್ಟ್ರಾ ಬೆನಿಫಿಟ್ ಎಂಬುದು ಅವರ ಸಲಹೆ. ಸೊಂಟ ನೋವು ಇದ್ದವರು ಪ್ರಯೋಗಿಸಿ ನೋಡಿ ಇಲ್ಲದಿದ್ದವರು ನೆನಪಿಟ್ಟುಕೊಳ್ಳಿ ಸೊಂಟನೋವು ಬರುವ ತನಕ. ಒಟ್ಟಿನಲ್ಲಿ ಕೌ-ಗಳಿಗೂ ಕೌ ಪೀನ ಗಳಿಗೂ ಮತ್ತೆ ಕಾಲ ಬಂದರೂ ಬಂದೀತೆ.

Sunday, January 23, 2011

ವಾವ್-ಛೆ-ಥೋ-ಹೆ ಹೆ ಹೆ-ಹಹಹ

ಕಾರ್ ಕಾರ್ ಕಾರ್ ಕೆಸ್ರಲ್ಲಿ ಕಾರ್ ಅಂತ ಯಾರದ್ದೋ ಕಾರು ಕೆಸರಲ್ಲಿ ತೊಪ್ಪೆಯಾದಾಗ ಅಂದುಬಿಡಬಹುದು. ಆದರೆ ನೀವೇ ಪ್ರೀತಿಸಿದ ಲಕ್ಷಗಟ್ಟಲೇ ತೆತ್ತು ಕೊಂಡ ಕಾರು ಕೆಸರಲ್ಲಿ ಸಿಕ್ಕಿ ಒರ್ರರ್ರೋ ಅಂತ ಚಕ್ರ ತಿರುಗಿದಾಗ ಹೊಟ್ತೆಯೊಳಗೆ ಹುಣಿಸೆಹಣ್ಣು ಹಾಕಿ ಕಿವಿಚಿದಂತಾಗುತ್ತದೆ.
ಮಲೆನಾಡಿನ ಮಳೆಗಾಲದ ಸೊಬಗು ಬೆಚಗೆ ಕುಳಿತು ಕೇಳಲು ಬಲು ಚಂದ ಆಹಾ ಆನಂದ. ಹೊರಗೆ ಜಡಿಮಳೆ,ಒಳಗೆ ಹೊಡಚಲು, ಹಲಿಸಿನ ಬೀಜದ ಘಮ ಘಮ ಗೇರುಬೀಜ ಸುಟ್ಟ ಪರಿಮಳ ವಾಹ್ ಸ್ವರ್ಗಕ್ಕೆ ಕಿಚ್ಚು ಹಚ್ಚಬಹುದು ಅಂತ ಬಿರುಬೇಸಿಗೆಯದಿನದಲ್ಲಿ ಕತೆ ಕುಟ್ಟಬಹುದು. ಆದರೆ ಜಡಿಮಳೆಯ ರಸ್ತೆ ನೆನೆಸಿಕೊಂಡಾಗ ಅವೆಲ್ಲಾ ಪಟ್ಟಂಗದ ಕತೆಗಳು ಅಂತ ರೇಜಿಗೆ ಹುಟ್ಟಿಸಿಬಿಡುತ್ತದೆ.
ಲಕ್ಷಗಟ್ಟಲೆ ಬೆಲೆಯ ಷವರ್ಲೆ ಕಾರು ತೆಗೆದುಕೊಂಡು ನಾನೂ ವಿಶಾಲಕ್ಕ ಎಂಡ್ ಮುತ್ತುಬಾವಯ್ಯ ಹೊನ್ನೆಮರಡುಗೆ ಹೋರಟಿದ್ದೇ ಮೊದಲ ತಪ್ಪು. ಇರಲಿ ತಪ್ಪುಗಳ ಹಣೇಬರಹವೇ ಅಷ್ಟು ಆದಮೇಲೆ ಗೊತ್ತಾಗುತ್ತೆ ಮತ್ತೆ ಹೊಸ ತಪ್ಪು ನಡೆಯುವರೆಗೂ ನೆನಪಿರುತ್ತೆ. ಅಯ್ಯಾ ಅಂಕುಡೊಂಕಿನ ಕೆಸರು ಗುಂಡಿಯ ರಸ್ತೆಯಲ್ಲಿ ಇಳಿಯುತ್ತಾ ಹತ್ತುತ್ತಾ ಅಂತೂ ಮುಕ್ಕಾಲು ದಾರಿ ತಲುಪಿಯಾಯಿತು. ಇನ್ನೇನು ಅರ್ದ ಕಿಲೋಮೀಟರ್ ಹೊನ್ನೇಮರಡು ಎನ್ನುವಷ್ಟರಲ್ಲಿ ಷವರ್ಲೆ ಹೊಂಡದೊಳಗೆ ದುಡುಂ. ಎಷ್ಟೇ ಆಕ್ಸಿಲೇಟರ್ ಓತ್ತಿದರೂ ಚಕ್ರವಷ್ಟೇ ಗರಗರ ಬರಬರ. ಡ್ರೈವ್ ಮಾಡುತ್ತಿದ್ದ ನನಗಂತೂ ಮಾನಮರ್ವಾದೆ ಮೂರು ಕಾಸಿಗೆ ಹರಾಜಾಗಿಹೋಯಿತು. ಎನೋ ಓನರ್ ಪಕ್ಕದಲ್ಲಿ ಇರದಿದ್ದರೆ ನಾನು ಸೇಫಾಗಿ ಹೋಗಿ ಬಂದೆ ಅಂತ ಸುಳ್ಳನ್ನಾದರೂ ಒಗೆಯಬಹುದಿತ್ತು. ಆದರೆ ಇಲ್ಲಿ ಹಾಗಲ್ಲ. ಓನರ್ರೂ ಇಲ್ಲಿಯೇ ಹಾಜರ್ರು. ಅಂತೂ ಇಂತು ಅಲ್ಲಿಯೇ ಕೆಲವರ ಸಹಾಯದಿಂದ ಕಾರು ಮೇಲೆ ಬಂತು. ಆನಂತರ ಓನರ್ ತಮ್ಮ ಕಾರಿನ ಪರಿಸ್ಥಿತಿ ತೋರಿಸಿಕೊಂಡ ಪರಿ ಇದು. ವಾವ್-ಛೆ-ಥೋ-ಹೆ ಹೆ ಹೆ-ಹಹಹ-ಮುಂತಾದ ಏನು ಬೇಕಾದರೂ ಅಂದುಕೊಳ್ಳುವ ಸ್ವಾತಂತ್ರ್ಯ ನಿಮಗೆ.

ಈಗ ಜಸ್ಟ್ ಮೂವತ್ತೈದು ವರ್ಷಗಳ ಹಿಂದೆ

, ಕಾಲ ಹೀಗಿರಲಿಲ್ಲ, ಇಲ್ಲ ಬಿಡಿ ಹೀಗಿರೋಕೆ ಹೇಗೆ ಸಾದ್ಯ?. ಸುಖದ ಸುಪ್ಪತ್ತಿಗೆಯಲ್ಲಿ ತೇಲುತ್ತಿರುವ ಕಾಲ ಇದು. ಜನರೆಲ್ಲಾ ಹೇಳುವಂತೆ ಆ ಕಾಲ ಸುಖದ ಸುಪ್ಪತ್ತಿಗೆಯಲ್ಲ. ಅದು ಬರೀ ಓಳು ದಿನನಿತ್ಯ ಗೋಳು. ನೋಡಿ ಅಂದು ಸೈಕಲ್ ಇತ್ತೆಂದರೆ ಅದೇ ಘನಂದಾರಿ ಲೆವಲ್ಲು. ಯುವಕರೆಂಬ ಯುಕರು ಬೆಲ್ ಬಾಟಮ್ ಪ್ಯಾಂಟ್ ಹಾಕಿ ಇಳಿಜಾರಿನ ರಸ್ತೆಯಲ್ಲಿ ಪೆಡಲ್ ಹಿಂದೆ ಸರಸರ ತಿರುಗಿಸುತ್ತಾ ಹೋದರೆ ಅದೇ ಹೆಣ್ಣು ಹೈಕಳಿಗೆ ಕಾಳು ಹಾಕುವ ಅತ್ಯಂತ ಹೈಲೆವಲ್ ವಿಧಾನ.ಸೈಕಲ್ ಇರುವ ಸಂಖ್ಯೆ ಊರಲ್ಲಿ ಶೇಕಡಾ ಇಪ್ಪತ್ತರಷ್ಟು. ಅವರೇನು ಅವರ ಗತ್ತೇನು, ಅಯ್ಯೋ ವರ್ಣಿಸಲು ಪದಗಳೇ ಇಲ್ಲ ಬಿಡಿ. ರ್ಯಾಲಿ-ಹರ್ಕ್ಯುಲೆಸ್ ಎಂಬ ಎರಡು ಕಂಪನಿಯ ಸೈಕಲ್ ಆದರೆ ಅದರ ಗತ್ತು ಇನ್ನೂ ಒಂದು ತೂಕ ಹೆಚ್ಚಿನದು. ಅದಕ್ಕೊಂದು ಡೈನಮಾ ಇದ್ದರಂತೂ ಮುಗಿದೇ ಹೋಯಿತು. ಆತನಿಗೆ ಸ್ವರ್ಗ ಮೂರೇ ಗೇಣು. ಸ್ಯಾಂಕ್ಯೂ ಎಂಬ ಕಂಪನಿಯ ಡೈನಮೋ ಸಿಕ್ಕಾಪಟ್ಟೆ ಫೇಮಸ್. "ಅವನು ಸೈಕಲ್ ಮಾರಿದನಂತೆ , ಆದರೆ ಡೈನಮೋ ಕೊಡಲಿಲ್ಲವಂತೆ" ಎಂಬುದು ಸಂಜೆ ಕಟ್ಟೆ ಪಂಚಾಯ್ತಿಯ ವಿಷಯ. ಆನಂತರ ಡೈನಮೋಕ್ಕೆ ಡಿಪ್ ಎಂಡ್ ಡಿಮ್ ಸ್ವಿಚ್ ಬಂತು ಆಗ ಇನ್ನೂ ಒಂದು ಲೆವಲ್ ತೂಕ. ರಾತ್ರಿ ಮಾತ್ರಾ ಉಪಯೋಗಕ್ಕೆ ಬರುವ ಡೈನಮೋ ಹಗಲು ಪ್ರದರ್ಶನದ ವಸ್ತು, ಸೀಟ್ ಮೇಲೆ ಕೂತು ನೆಲಕ್ಕೆ ಒಂದುಕಾಲು ಊರಿ ಡೈನಮೊದತ್ತ ವಾರೇನೋಟ ಬೀರಿದರೆ ಅದೊಂದು ಸ್ಟೈಲ್. ಸೈಕಲ್ ಎಂಬ ಸೈಕಲ್ ನ ಚಿಕ್ಕಮಕ್ಕಳಿಗೆ ಹೊಡೆಯುವುದಕ್ಕೆ ಕೊಡುವುದಿರಲಿ ಮುಟ್ಟುವುದಕ್ಕೂ ಕೊಡುತ್ತಿರಲಿಲ್ಲ. ಎಲ್ಲೋ ಅಪರೂಪಕ್ಕೆ ಒಂದು ಅಂಬಾಸಡರ್ ಎಂಬ ಬೃಹತ್ ಕಾರು. ಅದು ಬಂದರೆ ಅದರ ಹಿಂದೆ ಒಂದು ದೊಡ್ಡ ಹುಡುಗರ ದಂಡು, ಆನಂತರದ ದಿನಗಳಲ್ಲಿ ಸುವೇಗಾ -ವಿಕ್ಕಿ-ಲೂನಾ ಎಂಬ ಟೂವೀಲರ್ ಬಂತು. ಪೆರ್ ಪೆರ್ ಎಂದು ಅರ್ದ ಪೆಡಲ್ ತುಳಿಯುತ್ತಾ ಅರ್ದ ಇಂಜೆನ್ನಿನ ಸಹಾಯದಿಂದ ಸಾಗುವ ಗಾಡಿಗಳು. ಇವೆಲ್ಲಾ ಬಂದರೂ ಸೈಕಲ್ ವ್ಯಾಲ್ಯೂ ಕಡಿಮೆಯಾಗಲಿಲ್ಲ. ಇನ್ನು ರೆಡಿಯೋ ಕತೆಯೂ ಅಷ್ಟೆ. ಪ್ರತೀ ವರ್ಷ ಅದಕ್ಕೆ ಲೈಸೆನ್ಸ್ ಪಡೆಯಬೇಕಿತ್ತು. ಲೈಸೆನ್ಸ್ ಪಡೆಯದ ರೇಡಿಯೋಗಳನ್ನು ಇನಿಸ್ಪೆಕ್ಟರ್ ಬಂದು ಮುಟ್ಟುಗೋಲು ಹಾಕಿಕೊಳ್ಳುತ್ತಿದ್ದರು.ಸಿಕ್ಕಾಪಟ್ಟೆ ಅಚ್ಚರಿ ಹುಟ್ಟಿಸಿದ್ದು ಪ್ಯಾನಾಸಾನಿಕ್ ಕಂಪನಿಯ ಟೇಪ್ ರೆಕಾರ್ಡರ್. ವಾವ್ ನಮ್ಮ ದನಿಯನ್ನು ಮರುಕ್ಷಣ ರಿಪೀಟ್ ಮಾಡುವ ಯಂತ್ರ ಕಂಡು ಕಣ್ಣು ಅಗಲಮಾಡಿಕೊಂಡು ಬೆಕ್ಕಸಬೆರೆಗಾಗಿದ್ದಿದೆ. ನಂತರದ್ದು ಫೋನು, ಅಯ್ಯಾ ಆ ಪೋನು ಬಂದ ಹೊಸತರ ಕತೆ ಕೇಳುವುದೇ ಬೇಡ.
ಈಗ ಅದನ್ನೆಲ್ಲಾ ನೆನೆಸಿಕೊಂಡರೆ ಸುಳ್ಳೇನೋ ಅಂತ ಅನ್ನಿಸುತ್ತಿದೆ. ಹಾಗಂತ ತೀರಾ ಹಿಂದಿನ ಕತೆಗಳಲ್ಲ ಇವು ಜಸ್ಟ್ ಮೂವತ್ತು ವರ್ಷದ ಹಿಂದಿನದು. ಹಾಗಾಗಿ ನನಗಂತೂ ೨೦೩೦ ರಲ್ಲಿ ಉಪ್ಪಿಯ ಸೂಪರ್ ಕಲ್ಪನೆ ತೀರಾ ಬಾಲಿಷವಲ್ಲ ಅಂತ ಅನ್ನಿಸತೊಡಗಿದೆ.