Friday, June 17, 2011

ನನ್ನ ನೆನಪು ನಿಮಗಾಗಿ ಅಷ್ಟೆ.



ಮಲೆನಾಡಿನಲ್ಲಿ ಮಳೆಗಾಲವೆಂದರೆ ಧೋ ಎಂಬ ಶಬ್ಧ ನಿರಂತರ. ಆಕಾಶಕ್ಕೆ ತೂತು ಬಿದ್ದಿದೆಯೇನೋ ಎಂಬಂತೆ ಸುರಿಯುವ ನೀರು ಹತ್ತು ಹಲವಾರು ನದಿತೊರೆಗಳನ್ನು ನಿರ್ಮಿಸುತ್ತದೆ. ಮಳೆಗಾಲದ ಆರಂಭದಲ್ಲಿ ನದಿತೊರೆಗಳಲ್ಲಿ ಕೆಂಪುನೀರು, ಅದಕ್ಕೆ ನಾವು ಸಣ್ಣಕ್ಕಿದ್ದಾಗ "ಮಣ್ಣುಕರಡಿ ಬತ್ತು" ಎಂದು ಹಿರಿಯರು ಹೆದರಿಸುತ್ತಿದ್ದರು. ಮಣ್ಣುಕರಡಿ ಎಂದರೆ ನಮ್ಮ ಲೆಕ್ಕ ಪ್ರಾಣಿ ಎಂದರ್ಥ ಆದರೆ ಅದು ಮಣ್ಣು ನೀರಲ್ಲಿ ಕರಡಿ ಬರುತ್ತದೆ ಎಂಬ ಬೇರೆ ಬೇರೆ ಶಬ್ಧದ ಒಳಾರ್ಥ ಅಲ್ಲಿತ್ತು. ಮಣ್ಣುಕರಡಿ ಮಾಯವಾದ ಮೇಲೆ ತಿಳಿನೀರು ಜುಳು ಜುಳು ಹರಿಯತೊಡಗುತ್ತದೆ ಎಲ್ಲೆಂದರಲ್ಲಿ. ಅದು ಬೆಟ್ಟುಜಲದ ನೀರು. ವಾವ್ ಅದರ ಅಂದ ಒನಪು ಒಯ್ಯಾರ ಬಲು ಚೆನ್ನ. ಅಲ್ಲಿ ಕುಕ್ಕುರುಗಾಲಿನಲ್ಲಿ ಕುಳಿತು ಆಟವಾಡಲು ಮಕ್ಕಳಿಗೇನು ನಲವತ್ಮೂರು ದಾಟುತ್ತಿರುವ ನನಗೂ ಯಾರಾದರೂ ಏನಾದರೂ ಅಂದುಕೊಳ್ಳದಿದ್ದರೆ ಇಂದೂ ಒಂದಷ್ಟು ಆಟವಾಡಿಬಿಡೋಣ ಅಂತ ಅನ್ನಿಸುತ್ತದೆ. ಹಾಗಿರುತ್ತದೆ ಆ ತಿಳಿನೀರಿನ ಮಹಿಮೆ.
ಅಂದಹಾಗೆ ಗೌರೀಶ ಕೊಂಡ ಜಾಗದಲ್ಲಿ ಹೋಂ ಸ್ಟೇ ತಯಾರಾಗುತ್ತಿದೆ ಅಂದನಲ್ಲ ಅದರ ತುಸು ಹಿಂದೆ ಈಗ ನಿಮಗೆ ಚಿತ್ರದಲ್ಲಿ ಕಂಡ ತಿಳಿನೀರಿನ ನದಿ ಮಳೆಗಾಲದಾದ್ಯಂತ ಜುಳುಜುಳು ಹೀಗೆಯೇ ಹರಿಯುತ್ತದೆ. ನಮ್ಮೆಲ್ಲರ ಬಾಲ್ಯ ಅಲ್ಲಿ ಕುಕ್ಕುರುಗಾಲಿನಲ್ಲಿ ಕುಳಿತು ಕಳೆದಿದೆ. ನನ್ನ ಅಕ್ಕನ ಮಕ್ಕಳೂ(ಈಗ ಅವರು ಸಾಪ್ಟ್ ವೇರ್ ಬಿಡಿ, "ಅಯ್ಯೋ ಈ ನೀರಾ..."ಎಂದು ರಾಗ ಎಳೆದರೂ ಎಳೆಯಬಹುದು, ಆದರೂ ಬಾಲ್ಯ ಅವರಿಗೂ ಖುಷಿಯೇ) ಇಲ್ಲಿ ಆಟವಾಡಿದ್ದಿದೆ.
ಹೀಗೆ ಸುಮ್ಮನೆ ಅವೆಲ್ಲಾ ನೆನಪಾಯಿತು, ಸಿಕ್ಕಾಪಟ್ಟೆ ಕೊರೆಯಲು ಸಮಯ ಕಡಿಮೆ, ಒಂದು ನನ್ನ ನೆನಪು ನಿಮಗಾಗಿ ಅಷ್ಟೆ.