Saturday, October 15, 2011

ತೀರಾ ಅರ್ಥವಾಗದಿದ್ದರೆ ತಲೆಕೆಡಿಸಿಕೊಳ್ಳಬೇಡಿ, ಅರ್ಥವಾಗುವವರಿಗೆ ಆಗಿರುತ್ತದೆ



ಬದುಕು ಎಂಬುದು ನಂಬಿಕೆಯ ಮೇಲೆಯೇ ನಿಂತಿದೆ. ನಾನು ನೀವು ನಂಬಿದ್ದನ್ನು ನಂಬದೇ ಇರಬಹುದು ನೀವು ನಾನು ನಂಬಿದ್ದನ್ನು ನಂಬದೇ ಇರಬಹುದು. ಆದರೆ ನಾನೂ ನಂಬಿರುತ್ತೇನೆ, ನೀವೂ ನಂಬಿರುತ್ತೀರಿ. ದೇವರು ಇದ್ದಾನೆ ಎಂದು ನಂಬಿ ಜೀವನ ನಡೆಸುವರು ಒಂದೆಡೆ, ಇಲ್ಲ ಎಂದು ನಂಬಿ ನಡೆಯುವವರು ಮತ್ತೊಂದೆಡೆ. ಇಬ್ಬರದ್ದೂ ನಂಬಿಕೆಯಷ್ಟೇ ಎಂಬುದು ಮತ್ತೊಂದು ನಂಬಿಕೆ. ಇರಲಿ ಅದು ತೀರಾ ಗೊಂದಲದ ವಿಚಾರ. ಹಾಗಾಗಿ ಅದನ್ನ ಅಲ್ಲಿಗೆ ಬಿಟ್ಟು ನಾನು ನಂಬಿದ ವಿಚಾರಕ್ಕೆ ಬರೋಣ.

ಈ ಬ್ಲಾಗಿನ ಕೆಳಗಡೆ ಕಾಣಿಸುವ ನಮ್ಮ ಮನೆಯ ಎದುರು ಒಂದು ಯಕ್ಷಿಬಣ್ಣವಿದೆ. ಅದು ಈ ಬರಹದ ಮೇಲ್ಗಡೆಯಿದೆ. ಅದು ನಮ್ಮ ಕುಟುಂಬದ ನೆಂಟರಿಷ್ಟರ ಆರಾಧ್ಯ ಧೈವ. ಮೊದಮೊದಲು ಅದು ಮದುವೆ ಆಭರಣ ಕೊಡುತ್ತಿತ್ತು ಎಂಬಂತಹ ದಂತಕಥೆಗಳು ಆಗಾಗ ಅವರಿವರ ಬಾಯಲ್ಲಿ ಹರಿದಾಡುತ್ತಿದೆ. ಅಕ್ಕಪಕ್ಕದ ಮನೆಯವರೂ ಅದಕ್ಕೊಂದು ಹಣ್ಣುಕಾಯಿ ಪೂಜೆ ಪುನಸ್ಕಾರ ಮಾಡುತ್ತಾರೆ. ಊರವರೂ ತೀರಾ ಕುತ್ತಿಗೆಗೆ ಸಮಸ್ಯೆ ಬಂದಾಗ ಓಡೋಡಿ ಬಂದು ಒಂದು ಕಾಯಿ ಒಡೆಸುವುದು ಇದೆ.

ಇಂತೆಂಬ ಯಕ್ಷಿಬಣ್ಣ ಈಗ ಜೀರ್ಣವಾಗಿದೆ. ಅದರ ಜೀರ್ಣೋದ್ಧಾರಕೆಲಸ ಶುರುವಾಗಿದೆ. ಅಕ್ಕ ಅಣ್ಣ ಇಂಜನಿಯರ್ ರಮ್ಯಾ, ರಾಜೇಶ್, ವಿಜಯ ಕಾಲೇಜ್ ಪ್ರೊಫೇಸರ್ ಬಾವ ಅಕ್ಕ , ದುಬೈ ಅಕ್ಕ ಬಾವ, ಅಕ್ಕಯ್ಯ ಬಾವ , ಸತ್ಯ, ಕಾರ್ತೀಕ, ಶ್ರೀವತ್ಸ, ರಂಜನ, ಕಾವ್ಯ -ನವ್ಯ, ಕತಾರ್ ಮಂಜು ಕತಾರ್ ನಾಣು, ಅಮ್ಮಾ ಹೀಗೆ ಭಕ್ತರ ದಂಡನ್ನೇ ಹೊತ್ತಿರುವ ಆಕೆಗೆ ಇದೇನು ಮಹಾ ಅಲ್ಲವೇ?

ಅರ್ಥವಾಯಿತಲ್ಲ ಇಷ್ಟೊಂದು ದಂಡು ಇಟಕೊಂಡು ಕೆಲಸ ಮಾಡಿಸುವ ನಾನು ಧರ್ಮದರ್ಶಿ....!. ಎಂಬಲ್ಲಿಗೆ ಯಕ್ಷಿ ಜೀರ್ಣೋದ್ಧಾರ ಬ್ಲಾಗ್ ಮುಕ್ತಾಯವೂ.


Friday, October 14, 2011

ಗೊತ್ತಾ ನಿಮಗೆ ವಕಾರಾದಿ ಪಂಚಮರು...?

"ವ" ಕಾರದಿಂದ ಆರಂಭವಾಗುವ ಐದು ಜನರ ಕುರಿತು ಸಂಸ್ಕೃತ ಸುಭಾಷಿತ ಏನನ್ನೋ ಹೇಳುತ್ತದೆ. ಇರಲಿ ಅದೇನೋ ಹೇಳಲಿ ನಾವು ಏನು ಹೇಳುತ್ತೇವೋ ನೋಡೋಣ.
ವೈದ್ಯ-ವಕೀಲ-ವಣಿಕ-ವೈದೀಕ-ವೇಶ್ಯೆ ಹೀಗೆ ಸರಿಸುಮಾರು ಅರ್ಥದ ಜನರ ಬಳಿ ಸಿಕ್ಕಿಕೊಂಡರೆ ಲೈಫೆಂಬ ಜೀವನ ಕಷ್ಟವಂತೆ. ಆದರೆ ಸಿಕ್ಕಿಕೊಳ್ಳದೆ ದಾಟುವ ಮನಸಿದ್ದರೆ ಏನೂ ಮಾಡಲಾಗುವುದಿಲ್ಲವಂತೆ. ಆದರೆ ನನಗೆ ಈ ಐದು ಜನ ಸಮರ್ಥರು ಸಿಕ್ಕರೆ ಜೀವನ ಸುಗಮ ಎಂಬ ಆಲೋಚನೆ ಪಳಕ್ಕನೆ ಮಿಂಚುತ್ತಿದೆ.
ಹೌದು, ನಿಮಗೆ ಅನುಭವಕ್ಕೆ ಬಂದಿದೆಯೋ ಇಲ್ಲವೋ ಗೊತ್ತಿಲ್ಲ, ನನಗಂತೂ ಒಳ್ಳೆಯ ಅನುಭವ. ನಾನು ತಾಳಗುಪ್ಪದ ಡಾಕ್ಟರ್ ಗುರುರಾಜ ದೀಕ್ಷಿತ್ ರನ್ನು ಆಯ್ಕೆಮಾಡಿಕೊಂಡಿದ್ದೇನೆ. ಅಂತಹಾ ಘನಾಂದಾರಿ ಖಾಯಿಲೆ ಜೀವನದಲ್ಲಿ ಬಂದಿರದಿದ್ದರೂ ಸಣ್ಣ ಪುಟ್ಟ ಕಾಯಿಲೆಗಳಿಗೆ ಅವರು ತಾಳ್ಮೆಯಿಂದ ದೊಡ್ಡ ಖಾಯಿಲೆ ಯಾಗದಂತೆ ಮಾಡದೆ ಗುಣಮಾಡಿದ್ದಾರೆ. ಆದರೆ ಇತ್ತೀಚಿಗೆ ವಯಸ್ಸು ನಲವತ್ತೈದು ಆಗಿರುವ ಪರಿಣಾಮವೋ ಅಥವಾ ಕೆಲಸದ ಒತ್ತಡವೋ ಅಥವಾ ಡ್ಯಾಶ್ ಡ್ಯಾಶ್ ಸಮಸ್ಯೆಯೋ...? ಪಟಕ್ಕನೆ ನಿದ್ರೆ ಬರುತ್ತಿರಲಿಲ್ಲ. ವಾರೊಪ್ಪತ್ತು ನೋಡಿ ದೀಕ್ಷಿತರ ಬಳಿ ಓಡಿದೆ. "ಹೌದಾ.. ಖಾಲಿ ಕೂತಾಗ, ಪ್ರಪಂಚ ಒಳ್ಳೆಯದು ಅಂತಿದ್ದೀರಿ, ಈಗ ಅರ್ಥವಾಯಿತ?, ನಿಮ್ಮ ಶತ್ರುಗಳು ಎಷ್ಟಿದ್ದಾರೆ ಅಂತ?" ಎಂದು ನಕ್ಕರು. "ಅಯ್ಯಾ ಅದಕ್ಕೂ ನನ್ನ ನಿದ್ರೆಗೂ ಎಂಥ ಸಂಬಂಧ ಎಂದೆ. ಸಮಸ್ಯೆಯ ಕುರಿತು ಹೆಚ್ಚು ಯೋಚನೆ ಮಾಡಿದ್ದರ ಪರಿಣಾಮ, ಬ್ಲಾಗ್, ಕುಟ್ಟುತ್ತಾ, ಕಥೆ ಬರೆಯುತ್ತಾ ಲೇಖನ ಗೀಚುತ್ತಾ, ಭ್ರಮಾಪ್ರಪಂಚದಲ್ಲಿ ಬದುಕುವುದು ಸುಲಭ, ವಾಸ್ತವಕ್ಕೆ ಬಂದಾಗ ಅನ್ಯಾಯ ಕಂಡರೂ ಯಾರು ಮಾಡಿದ್ದು ಎನ್ನುವುದರ ಮೇಲೆ ಬಾಯಿ ಬಿಚ್ಚುವುದು ಹಾಗೂ ಬಾಯಿ ಮುಚ್ಚುವುದೂ ಮಾಡಬೇಕು, ಇರಲಿ ಆಗಿದ್ದಾಯಿತಲ್ಲ, ಇವೆರಡು ಮಾತ್ರೆ ನುಂಗಿ ರಾತ್ರಿ ಊಟಕ್ಕೆ ಅರ್ದ ಗಂಟೆ ಮೊದಲು ಎಂದು ನೆಕ್ಸ್ಟ್ ಎಂದರು.
ವೈದ್ಯೋ ನಾರಾಯಣೋ ಹರಿಃ ಎಂದು ಮನೆ ಸೇರಿ ಮಾತ್ರೆ ನುಂಗಿ ಮಲಗಿದೆ. ನಿದ್ರೆ ಯಾವಾಗ ಬಂತೋ ತಿಳಿಯಲಿಲ್ಲ. ಬೆಳಗ್ಗೆ ಎದ್ದು ಫ್ರೆಶ್ ಆಗಿದ್ದೆ. ಆದರೆ ಮನಸ್ಸಿನಲ್ಲಿ ಕುರಿಕುರಿ, ನಿದ್ರೆ ಮಾತ್ರೆ ನುಂಗಿ ನಿದ್ರೆ ಮಾಡುವುದು ಎಷ್ಟು ಸರಿ?. ಮಾರನೇ ದಿನ ಸಂಜೆ ಮತ್ತೆ ದೀಕ್ಷಿತರಲ್ಲಿಗೆ ಓಡಿದೆ. "ಡಾಕ್ತ್ರೇ ಅದ್ಯಾಕೋ ನಿದ್ರೆ ಮಾತ್ರೆ ನುಂಗಿ ನಿದ್ರೆ ಮಾಡುವುದು ಒಂಥರಾ ಅವಮಾನ ಅಂತ ಅನ್ನಿಸತೊಡಗಿದೆ". ಎಂದೆ. "ನಿಮಗೆ ನಿದ್ರೆ ಮಾತ್ರೆ ಕೊಟ್ಟವರ್ಯಾರು? ಡಾಕ್ಟರಿಂದ ಮರುಪ್ರಶ್ನೆ. "ಮತ್ತೆ ಅಷ್ಟೊಂದು ಚೆನ್ನಾಗಿ ನಿದ್ರೆ ಬಂತು. ಅದಕ್ಕೆ ಹೇಳಿದ್ದು ದೇಹಕ್ಕೆ ವಯಸ್ಸಾಗಿದೆ ಮನಸ್ಸಿಗಲ್ಲ ಈಗ ಕೇಳಿ "ಆಯುರ್ವೇದ ಅದ್ಬುತ ಶಕ್ತಿಯುಳ್ಳದ್ದು , ನಾನು ನಿಮಗೆ ಕೊಟ್ಟದ್ದು ವಾತ-ಪಿತ್ಥ-ಕಫ ವನ್ನು ಸಮತೋಲನ ಮಾಡುವ ತ್ರಿಫಲ ಚೂರ್ಣ, ಜತೆಗೆ ವಿಟಮಿನ್ ಸಿ. ಹಿಂದಿನ ಕಾಲದಲ್ಲಿ ತ್ರಿಫಲ ಚೂರ್ಣದ ಜತೆ ಮೂಸಂಬಿ ಹಣ್ಣು ಕೊಡುತ್ತಿದ್ದರು, ಕಾರಣ ವಿಟಮಿನ್ ಸಿ ಮಾತ್ರೆ ಇರಲಿಲ್ಲ. ಈಗ ಮೂಸಂಬಿ ಬದಲಿಗಾಗಿ ಮಾತ್ರೆ ಅಷ್ಟೆ. ನಿಮ್ಮ ಮನಸ್ಸಿನ ಆಲೋಚನೆಗಳು ವಾತ-ಪಿತ್ಥ-ಕಫ ಪ್ರಮಾಣವನ್ನು ಏರುಪೇರು ಮಾಡುತ್ತದೆ ಈ ಚೂರ್ಣ ಮತ್ತದನ್ನ ಸಮತೋಲನಕ್ಕೆ ಒಯ್ಯುತ್ತದೆ ಆಗ ನಿದ್ರೆ ತನ್ನಷ್ಟಕ್ಕೆ. ಎಂದರು. ಜತಜತಗೆ ಅವರ ಇಷ್ಟು ಟ್ರೀಟ್ ಮೆಂಟ್ ಗೆ ತಗುಲಿದ ವೆಚ್ಚ ಮಾತ್ರೆ ಸೇರಿ ಮೂವತ್ತು ರೂಪಾಯಿಯಷ್ಟೆ.
ಈಗ ನಿಮಗೆ ವ ಕಾರದ ಆರಂಭದ ಕತೆಯಾಯಿತು. ಎರಡನೇ ಯವರ ಕತೆಯನ್ನು ಇಷ್ಟವಿದ್ದರೆ ನಾಳೆ ಓದುವಿರಂತೆ. ಓಕೆ ಗುಡ್ ನೈಟ್.

Wednesday, October 12, 2011

ಆಗದಿದ್ದರೆ ನಮ್ಮ ಪಾಡು ನಮಗೆ.

"ಏಯ್ ಸಾಗರದ ಸುವರ್ಣ ಪ್ರಭ ಪತ್ರಿಕೆಯಲ್ಲಿ ನಿನ್ನ ಹೋಂ ಸ್ಟೆ ಸುದ್ದಿ ಬಂದಿದೆ ಅಂತ ಮೊಬೈಲ್ ಫೋನ್ ಬಂದಾಗ ಒಮ್ಮೆ ನಾನು ಬೆಚ್ಚಿಬಿದ್ದೆ. ಅಯ್ಯ ಇದೆಂತದಪ್ಪಾ..? ಹೊಸ ರಗಳೆ ಅದೂ ಸುವರ್ಣಪ್ರಭದಲ್ಲಿ ಎಂದುಕೊಳ್ಳುತ್ತಾ ಸಾಗರದ ಮತ್ತೊಬ್ಬ ರಿಪೋರ್ಟರ್ ಬಳಿ ಲಿಂಕ್ ಕೇಳಿ ಇಸಕೊಂಡು ಓದ ತೊಡಗಿದೆ.
ಸಾಗರ:ಸಮೀಪದ ತಲವಾಟ ಗ್ರಾಮಪಂಚಾಯಿತಿ ವ್ಯಾಪ್ತಿ ಸ.ನಂ.೮೨ ರಲ್ಲಿ ರಾಷ್ಟ್ರೀಯ ಸಂಪತ್ತು ವಿಶಾಲವಾದ ಕೆರೆಯಿದ್ದು,ಕೆರೆ ಅಚ್ಚುಕಟ್ಟು ಭೂಮಿ ಸಮೃದ್ಧವಾಗಿದೆ.
ಕಳೆದ ನೂರಾರು ವರ್ಷಗಳಿಂದ ರೈತಕುಟುಂಬಗಳು ಕೃಷಿ ನಿರ್ವಹಿಸಿಕೊಂಡು ಮಲೆನಾಡಿನ ಸಾಂಪ್ರದಾಯಿಕ ಬೆಳೆ ಅಡಿಕೆ ತೋಟವನ್ನು ನಿರ್ಮಿಸಿಕೊಂಡಿದ್ದಾರೆ.
ಇಲ್ಲಿನ ಸಾಂಪ್ರದಾಯಿಕ ಅಡಿಕೆ ತೋಟವನ್ನು ಹಣನೀಡಿ ಖರೀದಿಸಿಕೊಂಡಿರುವ ವ್ಯಕ್ತಿಯೋರ್ವರು ಬೆಳೆದು ನೂರಾರು ವರ್ಷಗಳಿಂದ ಫಸಲು ನೀಡುತ್ತಿರುವ ಅಡಿಕೆ ಮರವನ್ನೇ ಕಡಿದು ತೋಟವನ್ನು ಸರ್ವನಾಶ ಮಾಡಿ ಪ್ರವಾಸೋದ್ಯಮದ ಹೆಸರಿನಲ್ಲಿ ಹೋಮ್ ಸ್ಟೇ ನಿರ್ಮಿಸಲು ಹೊರಟಿರುವುದು ಅಡಿಕೆ ಬೆಳೆಗಾರರ ಆಕ್ರೋಶಕ್ಕೆ ಕಾರಣವಾಗಿದೆ.
ಅಡಿಕೆ ತೋಟವನ್ನು ಕಂದಾಯ ಇಲಾಖೆಯಲ್ಲಿ ಸರ್ವೆ ನಡೆಸಿ ಬಾಗಾಯ್ತು ಎಂದು ದಾಖಲು ಮಾಡಲು ಕಳೆದ ೩ ದಶಕಗಳಿಂದ ಸಾಧ್ಯವಾಗುತ್ತಿಲ್ಲ.ಹೊಸದಾಗಿ ಅಡಿಕೆ ತೋಟ ಮಾಡಿದ ಭೂಮಿಯ ಬೆಳೆಯನ್ನು ಕೇವಲ ಸಸಿ ಬಾಳೆ ಎಂದು ನಮೂದಿಸಬಹುದಾಗಿದೆಯೇ ಹೊರತು ಬಾಗಾಯ್ತು ಎಂದು ನಮೂದಿಸಲು ಅಸಾಧ್ಯವಾಗಿದೆ.
ಹೀಗಿರುವಾಗ ಪಹಣಿಯಲ್ಲಿ ಬಾಗಾಯ್ತು ಎಂದು ನಮೂದಾಗಿರುವ ಅಮೂಲ್ಯ ಫಲವತ್ತಾದ ಅಡಿಕೆ ತೋಟವನ್ನು ನಾಶ ಮಾಡಿರುವುದು ಮಲೆನಾಡಿನ ಸಂಪ್ರದಾಯ ಸಂಸ್ಕೃತಿಯನ್ನೇ ನಶ ಮಾಡಿದಂತಾಗಿದೆ ಎಂದು ಅಡಿಕೆ ಬೆಳೆಗಾರರು,ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಲವಾಟದ ರಾಘವೇಂದ್ರ ಎನ್ನುವವರ ಹುಚ್ಚು ನಿರ್ದಾರದಿಂದ ಅಡಿಕೆ ತೋಟ ನಾಶವಾಗಿದೆ.ಕಂದಾಯ ಇಲಾಖೆಯ ನಿಯಮಾನುಸಾರ ಪಹಣಿಯಲ್ಲಿ ಬಾಗಾಯ್ತು ಅಡಿಕೆ ಬೆಳೆಯುವ ಭೂಮಿ ಎಂದು ದಾಖಲಾದ ಮೇಲೆ ಸದರಿ ಭೂಮಿಯನ್ನು ಬೇರೆ ಮುಖ್ಯ ಬೆಳೆಯಲು ಸ್ವಯಂಪ್ರೇರಿತರಾಗಿ ಪರಿವರ್ತಿಸುವುದು ನಿಯಮದ ಉಲ್ಲಂಘನೆಯಾಗುತ್ತದೆ.
ಗ್ರಾಮದ ಪ್ರಮುಖ ಜಲಮೂಲ ಕೆರೆ ಅಚ್ಚುಕಟ್ಟು ಭೂಮಿಯನ್ನು ಬೆಳೆ ಬೆಳೆಯುವ ಬದಲಿಗೆ ವ್ಯವ್ಯಹಾರಿಕ ಉದ್ದೇಶಿತ ಕಟ್ಟಡ ನಿರ್ಮಾಣ ಕಾನೂನು ಉಲ್ಲಂಘನೆಯಾಗುತ್ತದೆ.ಹೋಮ್‌ಸ್ಟೇ ಮೊದಲಾದ ಉದ್ದಿಮೆ ನಡೆಸಲು ಖುಷ್ಕಿ ಪಾಳು ಭೂಮಿಯನ್ನು ಭೂ ಪರಿವರ್ತನೆ ನಿಯಮದ ಅಡಿಯಲ್ಲಿ ಪರಿವರ್ತಿಸಿಕೊಂಡು ಕಟ್ಟಡ ನಿರ್ಮಿಸಲು ಮಾತ್ರ ಅವಕಾಶವಿರುತ್ತದೆ.
ಸ್ಥಳಿಯ ಗ್ರಾಮಪಂಚಾಯಿತಿಯೂ ಸರ್ಕಾರದಿಂದ ಭೂ-ಪರಿವರ್ತನೆಯಾಗದ ಅಡಿಕೆ ತೋಟ ಭಾಗಾಯ್ತಿನಲ್ಲಿ ಬೃಹತ್ ಕಟ್ಟಡ ನಿರ್ಮಿಸುತ್ತಿರುವುದಕ್ಕೆ ಪರವಾನಿಗೆ ಕೊಟ್ಟರೆ ನ್ಯಾಯಾಲಯದಿಂದ ನಿಂದನೆಗೆ ಗುರಿಯಾಗಬೇಕಾಗುತ್ತದೆ.
ಈ ಎಲ್ಲಾ ಅಂಶಗಳನ್ನು ಮುಂದಿಟ್ಟು ತಲವಾಟ ಪಂಚಾಯಿತಿ ಗ್ರಾಮಸ್ಥರಾದ ಹೆಚ್.ಕೆ.ರಾಮಚಂದ್ರ ಬಿನ್ ಕೃಷ್ಣಯ್ಯ ಅವರು ತಾಲ್ಲೂಕು ಕಚೇರಿಗೆ ಮತ್ತು ಜಿ.ಪಂ.ಹಾಗೂ ತಾ.ಪಂ ಮತ್ತು ಗ್ರಾಮಪಂಚಾಯಿತಿಗಳಿಗೆ ತಕರಾರು ಅರ್ಜಿ ಗುಜರಾಯಿಸಿದ್ದಾರೆ.
ಕಂದಾಯ ಇಲಾಖೆಯಿಂದ ಸೂಕ್ತ ತನಿಖೆ ನಡೆಸಿ ಸ್ಥಳ ಪರಿಶೀಲಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ. "

ಓದಿ ಮುಗಿಸಿದ ತಕ್ಷಣ ಅನಿಸಿದ್ದು. ಇದು ಸೂಪರ್ ತಲೆ ಉಪಯೋಗಿಸಿದ ನ್ಯೂಸು ಅಂತ ಅನಿಸಿತು. ಹೇಳಿಕೇಳಿ ಹಿತಕರ ಜೈನ್ ಸುವರ್ಣ ಪ್ರಭದ ಸಂಪಾದಕ ನನ್ಗೆ ಪರಿಚಯಸ್ಥ. ನನಗೂ ಏನೂ ಆಗದಂತೆ ಹಾಗೂ ನ್ಯೂಸು ಮಾಡಲು ಗಂಟುಬಿದ್ದ ಜನಕ್ಕೂ ಸಮಾಧಾನವಾಗುವಂತೆ ಮಾಡಿಬಿಟ್ಟಿದ್ದ. ಅಸಲಿಗೆ ನಾನು ನಿರ್ಮಿಸುತ್ತಿರುವುದು ಸದ್ಯಕ್ಕೆ ತೋಟದ ಮನೆಯೆಂದೇ. ಬ್ಲಾಗಿನಲ್ಲಿ ಹೋಂ ಸ್ಟೇ ಎಂದಿದ್ದನ್ನ ಬರಪ್ಪೂರ್ ಸಾಕ್ಷಿ ಅಂದುಕೊಂಡ ರಾಮಚಂದ್ರ ಎಂಡ್ ಮೆಂಬರ್ಸ್ ಅದನ್ನೇ ಹೋಂ ಸ್ಟೇ ಎಂದು ಸ್ವಯಂ ಘೋಷಿಸಿಬಿಟ್ಟಿದ್ದಾರೆ. ಇರಲಿ ಅವರಿಗೆ ನನ್ನ ಮೇಲೆ ಉರಿ ಇದೆ. ಹೇಗಾದರೂ ಮಾಡಿ ತೀರಿಸಿಕೊಳ್ಳಬೇಕು, ಹೀಗಾದರೂ ನನ್ನಿಂದ ಸಮಾಧಾನವಾಗುವುದಾದರೆ ನನಗೆ ಒಂಥರಾ ಖುಷಿ. ನನ್ನನ್ನು ಯಾರೂ ಪ್ರಶ್ನಿಸಬಾರದೆಂಬ ಮನೋಭಾವ ನನ್ನದಲ್ಲ. ನಾನು ಮಾಡಹೊರಟಿರುವ ಕೆಲಸ ಸರ್ಕಾರಿಜಾಗ ಹಾಗೂ ರಸ್ತೆಗೆ ಬೇಲಿ ಹಾಕಲಲ್ಲ ಎಂಬ ಸಮಾಧಾನ ನನಗಿದೆ. ನನ್ನ ಎಲ್ಲಾ ದಾಖಲೆಗಳೂ ಸಾರ್ವಜನಿಕರಿಗೆ ಸಿಗುವಂತಾಗಬೇಕು. ಇದೇ ರಾಮಚಂದ್ರ ಬಿನ್ ಕೃಷ್ಣಯ್ಯ ಹದಿನೈದು ದಿನದ ಹಿಂದೆ ರಸ್ತೆ ಹಾಳುಮಾಡಿದ್ದಾರೆ ಎಂದು ಪಂಚಾಯತಿಗೆ ಕಂಪ್ಲೇಟ್ ಮಾಡಿದ ಮಾರನೇ ದಿವಸ ಹಾಳಾಗದಿದ್ದ ರಸ್ತೆಗೆ ನಾನು ಹಾಳುಮಾಡಿರದ ರಸ್ತೆಗೆ ಹದಿಮೂರು ಲೋಡ್ ಮಣ್ಣು ನನ್ನ ಸ್ವಂತ ಹಣದಿಂದ ಹಾಕಿದವನು ನಾನು.
ಅಯ್ಯಾ ಇದನ್ನೆಲ್ಲಾ ಯಾಕೆ ರಗಳೆ ಮಾಡುತ್ತೀ ಅಂತ ನೀವು ಕೇಳಬಹುದು. ಇಂದು ಮುಂಜಾನೆ ನನ್ನ ಬ್ಲಾಗ್ ನ ಹಳೇ ಪೋಸ್ಟ್ ನಲ್ಲಿ
"Anonymous said...
Yenidu marayre
http://suvarnaprabhadaily.blogspot.com/
Clarification kodtheera?

-Nimma Abhimaani
ತಲವಾಟ ಗ್ರಾಮದ ಸರ್ವೆ ನಂ ೮೨ ಪಹಣಿಯಲ್ಲಿ "ಹುಲ್ಲುಬನ್ನಿ ಹರಾಜು" ಎಂದು ನಮೂದಾಗಿದೆ. ಹಾಗಾಗಿ ಸರ್ಕಾರಕ್ಕೇ ಇದು ಕೆರೆಯೋ ಹರಾಜೋ ಎಂಬ ಅನುಮಾನ, ಸಮೃದ್ದವಾಗಿ ಅಲ್ಲಿ ಹುಲ್ಲು ಬೆಳೆದಿದೆ ನೀರು ಜನವರಿಗೆ ಖಲಾಸ್.
ನೂರಾರು ವರ್ಷದಿಂದ ಅಲ್ಲಿ ಅಡಿಕೆ ಇಲ್ಲ. ಕೇವಲ ಹತ್ತು ವರ್ಷದಿಂದ ನಾನೇ ಸ್ವತಹ ಅಡಿಕೆ ಸಸಿ ಹಾಕಿದ್ದೆ. ಪಹಣಿಯಲ್ಲಿ ತರಿ ಎಂದೇ ಹಾಗೂ ಬೆ: ಅಡಿಕೆಬಾಳೆ ಎಂದೇ ಬರುತ್ತಿದೆ. ಹಾಗೂ ನನ್ನ ಸ್ವಂತ ವಾಸಕ್ಕಾಗಿ ಬೆಳೆಯಿಲ್ಲದ ಅಡಿಕೆ ಮರ ಬೆಳೆಯದ ಕಲ್ಲು ಜಾಗದಲ್ಲಿ ಮನೆ ಕಟ್ಟಿರುತ್ತೇನೆ. ಒಂದೇ ಒಂದು ಅಡಿಕೆ ಮರವನ್ನೂ ಕಡಿದಿಲ್ಲ. ನನಗೆ ಹುಚ್ಚು ಧೈರ್ಯವೂ ಇಲ್ಲ. ಇನ್ನೂ ಹೋಂ ಸ್ಟೆ ನನಗಿಂತ ಹೆಚ್ಚಿನ ಆಸಕ್ತಿ ಅರ್ಜಿದಾರರಿಗೆ ಇದೆ ಹಾಗೂ ನಾನು ಯಾವ ಸರ್ಕಾರಿ ದಾಖಲೆ ಅಥವಾ ಅರ್ಜಿಯಲ್ಲಿ ಹೋಮ್ ಸ್ಟೆ ಕುರಿತು ಹೇಳಿಲ್ಲ.
ನಾನು ಸರ್ಕಾರಕ್ಕೆ ಅರ್ಜಿ ಹಾಕಿದ್ದು ಹಾಗೂ ಕಟ್ಟಿಸುವ ಉದ್ದೇಶ ವಾಸಕ್ಕಾಗಿ ಎಂದಿದೆ. ಇಷ್ಟಾಗ್ಯೂ ಹೋಂ ಸ್ಟೆ ವ್ಯಾವಾಹಾರಿಕ ವ್ಯಾಪ್ತಿಯಲ್ಲಿ ಬರುವುದಿಲ್ಲ. ನಮ್ಮ ವಾಸದ ಮನೆಯ ಹೆಚ್ಚುವರಿಕೋಣೆಯನ್ನು ಇಷ್ಟಪಟ್ಟವರಿಗೆ ಕೊಡಬಹುದು. ಅದನ್ನು ಸರ್ಕಾರ ಕಾನೂನು ಮಾಡಿ ಅದಕ್ಕೆ ಹೋಂ ಸ್ಟೆ ಎಂಬ ಹೆಸರನ್ನಿಟ್ಟಿದೆ.
ರೆವಿನ್ಯೂ ಕಾನೂನಿನ ೯೫/೧ ರ ಪ್ರಕಾರ ಜಮೀನಿನ ಒಡೆಯನು ಕೃಷಿ ಅಭಿವೃದ್ದಿಗೆ ಪೂರಕವಾಗಿ ಕಟ್ಟಡಗಳನ್ನು ಹಾಗೂ ಬಾವಿಯನ್ನು ನಿರ್ಮಿಸಿಕೊಳ್ಳಬಹುದು, ಅದಕ್ಕೆ ಯಾರ ಪರವಾನಿಗೆಯ ಅವಶ್ಯಕತೆಯಿಲ್ಲ. ಹಾಗೂ ಸದರಿ ರೆವಿನ್ಯೂ ಜಾಗದಲ್ಲಿರುವ ಕಟ್ಟಡಕ್ಕೆ ಕೃಷಿಕನಿಗೆ ಸಾಂವಿಧಾನಿಕ ಹಕ್ಕಾದ್ದರಿಂದ ಗ್ರಾಮ ಪಂಚಾಯ್ತಿಯವರು ಪರವಾನಿಗಿ ನೀಡಲು ಬರುವುದಿಲ್ಲ ಅವರು ಎನ್ ಒ ಸಿ ನೀಡಬಹುದಷ್ಟೆ. ಹಾಗಾಗಿ ಪರವಾನಿಗಿ ನೀಡಿದರೆ ಅದು ನ್ಯಾಯಾಂಗ ನಿಂದನೆಯಾಗುತ್ತದೆ. ಅದೂ ಕೂಡ ನ್ಯಾಯಾಂಗ ನಿಂದನೆ ಎಂಬುದಲ್ಲ ಸಂವಿಧಾನ ಬಾಹೀರ.
ಇನ್ನು ಅಂತಿಮವಾಗಿ ನನಗೆ ಸದರಿ ತಲವಾಟ ಹಾಗೂ ಹಿರೇಮನೆ ಗ್ರಾಮಸ್ಥರು ಮತ್ತು ತಲವಾಟ ಗ್ರಾಮ ಪಂಚಾಯ್ತಿ ಸಂಪೂರ್ಣ ಬೆಂಬಲ ನೀಡಿದೆ. ಹಿರೇಮನೆ ಗ್ರಾಮವಾಸಿಯಾದ ಹೆಚ್.ಕೆ.ರಾಮಚಂದ್ರ ಬಿನ್ ಕೃಷ್ಣಯ್ಯ ರವರು ವೈಯಕ್ತಿಕ ದ್ವೇಷದಿಂದ ಈ ರೀತಿ ಅರ್ಜಿಗಳನ್ನು ಗುಜರಾಯಿಸಿದ್ದಾರೆ. ಸದರಿ ವ್ಯಕ್ತಿಯು ಕಳೆದವರ್ಷ ಅವರ ಆಪ್ತ್ರರಾದ ಎಚ್ ಡಿ ಅನಂತ ಬಿನ್ ಗಂಗೆ ದತ್ತಪ್ಪ ಎಂಬುವವರು ಹಿರೇಮನೆ ಗಂಗಾವಿಶ್ವೇಶ್ವರ ದೇವಸ್ಥಾನದ ಬಳಕೆಯ ಜಮೀನಿಗೆ ಬೇಲಿ ಹಾಕಿದಾಗ ಅದರ ಪರವಾಗಿ ನನ್ನನ್ನು ಸಹಕರಿಸಿ ಎಂದು ಕೇಳಲು ಬಂದಿದ್ದರು, ನಾನು ಅನ್ಯಾಯಕ್ಕೆ ಸಹಕಾರ ನೀಡುವುದಿಲ್ಲ ಎಂದಿದ್ದಕ್ಕಾಗಿ ಅನಂತರವರ ಹಣಬಲದಿಂದ ನನಗೆ ಹೀಗೆ ಕಳೆದ ಆರುತಿಂಗಳಿನಿಂದ ಕಿರುಕುಳ ನೀಡುತ್ತಿದ್ದಾರೆ.
ಈ ಮೇಲ್ಕಂಡ ಕಾರಣಗಳು ಕೇವಲ ನನ್ನ ಸಮಜಾಯಿಶಿ ಅಲ್ಲ ವಾಸ್ತವ. ಹೆಚ್ಚಿನ ಮಾಹಿತಿ ನೋಡಲು ಅಥವಾ ತಿಳಿಯಲು ಬಯಸಿದಲ್ಲಿ ಖುದ್ದು ಭೇಟಿಯನ್ನೂ ನೀಡಬಹುದು.


ಹೀಗೋಂದು ಕಾಮೆಂಟ್ ಬಿದ್ದದ್ದರಿಂದ ಹೀಗೆ ಸೃಷ್ಟೀಕರಣ ಕೊಡಬೇಕಾಯಿತು. ನಾನು ಕಾನೂನುಬಾಹೀರವಾಗಿ ಯಾವುದೇ ಚಟುವಟಿಕೆಯನ್ನು ಮಾಡಿದ್ದರೆ ನನಗೇನು ಅಧಿಕಾರಿಗಳೇ ಬಂದು ಪ್ರಶ್ನಿಸಬೇಕಿಲ್ಲ. ನನ್ನ ಎಲ್ಲಾ ಕೆಲಸಗಳೂ ಕಾನೂನಿನ ಚೌಕಟ್ಟಿನಲ್ಲಿ ಹಾಗೂ ಸಂವಿಧಾನ ಕೃಷಿಕನಿಗೆ ಕೊಟ್ಟ ಹಕ್ಕಿನ ವ್ಯಾಪ್ತಿಯಲ್ಲಿದೆ. ಇಷ್ಟಕ್ಕೂ ತರಲೆಗಳಿಗೆ ಯಾರೂ ಏನೂ ಮಾಡಲಾಗುವಿದಿಲ್ಲ. ಇನ್ನು ಪತ್ರಿಕೆಯಲ್ಲಿನ ವಿಚಾರ, ಅವರು ಇರುವುದೇ ನಮ್ಮ ತಪ್ಪನ್ನು ತಿದ್ದಲು, ಅಕಸ್ಮಾತ್ ಆಗಿದ್ದರೆ ತಿದ್ದಿಕೊಂಡರಾಯಿತಲ್ಲ. ಆಗದಿದ್ದರೆ ನಮ್ಮ ಪಾಡು ನಮಗೆ.
ಆದರೆ ಮಜ ಎಂದರೆ ಇದೊಂದು ನ್ಯೂಸ್ ನಿಂದ ನನಗೆ ಸಾಗರದ ಹಳೇ ಸ್ನೇಹಿತರು ಒಂದಿಷ್ಟು ಮತ್ತೆ ಸಿಕ್ಕಂತಾಯಿತು. ಸಂಜೆ ಏಳರಿಂದ ಹತ್ತ ರ ತನಕ ಎಂಟು ಫೋನು. "ರಾಘು ನಾವಿದ್ದೇವೆ ಎಷ್ಟು ಹೊತ್ತಿಗೆ ಬೇಕಾದರೂ ಹೇಳು" . ಹಾಗಾಗಿಯೇ ಹೇಳಿದ್ದು ಹಿಂದೆ ...."ನಾವಲ್ಲ ಗ್ರೇಟ್ ಅವರೇ.." ಎಂದು ಮತ್ತು ನಿಂದಕರು ಇರಬೇಕು..... ಆಗಲೇ ನಾವು ಮತ್ತು ನಮ್ಮ ಬುದ್ದಿ ಬೆಳೆಯುವುದು.