Friday, October 21, 2011

ಅದಕ್ಕೆ ಸರ್ಕಾರ ಸಂಬಳ ಕೊಡುತ್ತೆ’

ಈಗ ಆರು ತಿಂಗಳಿಂದೀಚೆಗೆ ನನಗೆ ಹೊಸ ಹೊಸ ಜನರ ಹೊಸ ಹೊಸ ಪ್ರಪಂಚದ ಅನಾವರಣ. ಅದರಲ್ಲೊಂದು ಇದು. ನನಗೆ ರೆವಿನ್ಯೂ ಡಿಪಾರ್ಟ್ ಮೆಂಟಿನಿಂದ ವಂಶವೃಕ್ಷ, ಹಿಡುವಳಿ ಪ್ರಮಾಣಪತ್ರ ಹಾಗೂ ಆದಾಯಪ್ರಮಾಣ ಪತ್ರ ಬೇಕಿತ್ತು. ಸರಿ ಮಾಮೂಲಿಯಂತೆ ಅರ್ಜಿ ಬರೆದು ನೆಮ್ಮದಿಕೇಂದ್ರಕ್ಕೆ ಸಲ್ಲಿಸಿದೆ. ಜನಸಾಮಾನ್ಯರು ಹೇಳುವಂತೆ ಸರ್ಕಾರದ ಇಲಾಖೆಯೆಂದರೆ ಲಂಚ ತಡ ಮುಂತಾದ ಆರೋಪ ನನ್ನ ಮನಸಿನಾಳದಲ್ಲಿಯೂ ಹುಗಿದಿತ್ತು. ನೆಮ್ಮದಿ ಕೇಂದ್ರದಾಕೆ ನನ್ನ ಮೊಬೈಲ್ ನಂಬರ್ ಅರ್ಜಿಯಲ್ಲಿ ಬರೆಯಿಸಿಕೊಂಡು ಎಂಡಾಸ್ ಮೆಂಟ್ ಕೊಟ್ಟಳು. ಸರಿಯಾಗಿ ಎಂಟು ದಿವಸಕ್ಕೆ ಮೊಬೈಲ್ ಗೆ ಎಸ್ ಎಂ ಎಸ್ ಬಂತು ಯುವರ್ ಸರ್ಟಿಫಿಕೇಟ್ ಈಸ್ ರೆಡಿ, ಪ್ಲೀಸ್ ಕಲೆಕ್ಟ್ ಪ್ರಂ ನೆಮ್ಮದಿಕೇಂದ್ರ" ಎಂದು.
ಬೆಳಿಗ್ಗೆ ಹತ್ತೂವರೆಗೆ ತಾಳಗುಪ್ಪದ ನೆಮ್ಮದಿ ಕೇಂದ್ರದ ಬಾಗಿಲಲ್ಲಿ ನಿಂತೆ. ಎಸ್ ಎಂ ಎಸ್ ನಂಬರ್ ಕೇಳಿದ ಆಕೆ ಚಕಚಕನೆ ಪ್ರಿಂಟ್ ಔಟ್ ಕೊಟ್ಟಳು ಪ್ರಮಾಣ ಪತ್ರದ್ದು. ಸರ್ಕಾರಿ ಫೀ ಹತ್ತು ರೂಪಾಯಿಯನ್ನಷ್ಟೇ ಕೇಳಿದ್ದು ಮತ್ತು ನಾನು ಕೊಟ್ಟಿದ್ದು. ಎಂಬಲ್ಲಿಗೆ ಲಂಚದ ಕಿಂಚಿತ್ತೂ ಬೇಡಿಕೆಯಿಲ್ಲದೆ ನನಗೆ ಎಂಟು ದಿವಸದೊಳಗೆ ಸಿಕ್ಕ ಖುಷಿಯಲ್ಲಿ "ಮೇಡಂ ನಿಮ್ಮ ಡಿಪಾರ್ಟ್ ಮೆಂಟ್ ಅಂದ್ರೆ ಲಂಚ ಅಂತಾರಲ್ಲ , ನನಗೆ ಅಂತ ಅನುಭವ ಆಗಲೇ ಇಲ್ಲವಲ್ಲ ಎಂದೆ" . ಏನಪ್ಪ ಎಂದು ಮುಗಳ್ನಕ್ಕಳು ಆಕೆ,
ಇನ್ನು ವಂಶವೃಕ್ಷದ್ದು ಕತೆ. ಅದನ್ನ ವಿಲೇಜ್ ಅಕೌಂಟೆಟ್ ಹತ್ತಿರ ಖುದ್ದಾಗಿ ಪಡೆದುಕೊಳ್ಳಬೇಕು, ನೆಮ್ಮದಿ ಕೇಂದ್ರದ ಅವಶ್ಯಕತೆ ಅದಕ್ಕಿಲ್ಲ. ಸೀದಾ ವಿ ಎ ಹತ್ತಿರ ಹೋಗಿ ವಂಶವೃಕ್ಷದ ಬೇಡಿಕೆ ಇಟ್ಟೆ. ಕ್ಷಣ ಮಾತ್ರದಲ್ಲಿ ಅವರದೇ ಹಾಳೆ ಅವರದೇ ಪೆನ್ ನಲ್ಲಿ ನನ್ನ ವಂಶವೃಕ್ಷ ಕೈ ಸೇರಿತು. ಓಹ್ ಇದಕ್ಕೆ ನಾನು ಲಂಚ ಕೊಡಬೇಕೇನೋ ಎಂದು ಐವತ್ತರ ಒಂದು ನೋಟು ಅಂಜುತ್ತಾ ಕೊಡಲು ಹೋದೆ. ವಿ ಎ ಮಂಜುಳಾ ಮೇಡಂ "ಹಣ ಯಾಕೆ?’ ಅಂದರು. ನಾನು ಹಾಂ ಅದೂ ಇದೂ ಅಂದೆ. ನೋಡಿ ನಾನು ನನ್ನ ಡ್ಯೂಟಿ ಮಾಡಿದ್ದೇನೆ, ಅದಕ್ಕೆ ಸರ್ಕಾರ ಸಂಬಳ ಕೊಡುತ್ತೆ’ ಅಂತ ಅಂದರು.
ನಾನು ಯಾವ ತೀರ್ಮಾನಕ್ಕೆ ಬರಬೇಕು ಅಂತ ತಿಳಿಯದೇ ಬೆಕ್ಕಸಬೆರಗಾದೆ. ಬಹುಶಃ ನ್ಯಾಯವಾದ ಪ್ರಮಾಣ ಪತ್ರಗಳಿಗೆ ಲಂಚ ದ ಹೆಸರು ಅಗತ್ಯ ಬೀಳುವುದಿಲ್ಲ ಅಂತ ಅಂದುಕೊಂಡೆ.ಇಂತಹ ಪ್ರಾಮಾಣಿಕರು ಹಲವರಿದ್ದಾರೆ, ಆದರೆ ಜನರು ಅವರ ಸುದ್ದಿಯನ್ನು ಮರೆಮಾಚಿ ಎಲ್ಲಿಯೋ ಹತ್ತು ಪರ್ಸೆಂಟ್ ಅಧಿಕಾರಗಳ ಕತೆಯನ್ನು ತೇಲಿಬಿಡುತ್ತಾರೇನೋ ಅಂತಲೂ ಅನ್ನಿಸಿದ್ದು ಸುಳ್ಳಲ್ಲ

ಮತ್ತೆ ಸಿಕ್ಕಾಗ ನಗೋಣ, ಹರಟೋಣ,




ಬಂತು ದೀಪಗಳ ಹಬ್ಬ ದೀಪಾವಳಿ. ಎಲ್ಲರ ಮನೆ ದೀಪ ಬೆಳಗಲಿ. ಹ್ಯಾಪಿ ದೀಪಾವಳಿ, ದೀಪಾವಳಿ ಹಬ್ಬದ ಶುಭಾಶಯಗಳು, ಹೀಗೆಲ್ಲಾ ನಾನು ನೀವು ಅನ್ನುವ ದಿವಸ ಅಕ ಇಕ ಅನ್ನುವುದರಒಳಗೆ ಬಂದೇಬಿಟ್ಟಿತು. ನಿಮಗೆ ಇದು ಎಷ್ಟನೇ ದೀಪಾವಳಿಯೋ ಗೊತ್ತಿಲ್ಲ. ನನಗಂತೂ ನಲವತ್ನಾಲ್ಕನೆಯದು ಅಂತ ಡೇಟ್ ಆಫ್ ಬರ್ತ್ ಹೇಳುತ್ತೆ. ಆದರೆ ನೆನಪಿಗೆ ಒಂದಿಪ್ಪತ್ತೈದು ಮೂವತ್ತು ಬರಬಹುದು. ದನಗಳ ಹಬ್ಬ ನಮ್ಮ ಹಳ್ಳಿಯಲ್ಲಿ ಪಟಾಕಿ ಹಬ್ಬ ನಿಮ್ಮ ಪಟ್ಟಣಗಳಲ್ಲಿ. ಕಡುಬು ಕಜ್ಜಾಯ ನಮ್ಮಲ್ಲಿ ನಿಮ್ಮಲ್ಲಿ ಒಂದೇ. ಇರಲಿ ಅವೆಲ್ಲದರ ನಡುವೆ ನನ್ನದೊಂದು ಸಣ್ಣ ವಿಷಯವಿದೆ.

ಈ ಬ್ಲಾಗ್ ೨೦೦೮ ರಲ್ಲಿ ನಾನು ಶುರುಮಾಡಿದ್ದು. ಏನು ಬರೆದೆನೋ ಏನು ಬಿಟ್ಟೆನೋ ನನಗಂತೂ ಒಮ್ಮೊಮ್ಮೆ ಅತಿ ಅನಿಸುವಷ್ಟಾಗಿದೆ. ಆದರೆ ಮಜ ಬಂದಿದೆ. ನೀವು ಏನು ಓದಿದಿರೋ ಏನು ಬಿಟ್ಟಿರೋ ಒಮ್ಮೊಮ್ಮೆ ಅತಿ ಅಂತಲೂ ಅನ್ನಿಸಿರಬಹುದು. ಇರಲಿ ಅದನ್ನು ಹೊಟ್ಟೆಗೆ ಹಾಕಿಕೊಳ್ಳಿ. ಆದರೆ ನನಗೆ ಈ ಬ್ಲಾಗಿಗೆ ನನ್ನ ವರಾತ ಹಂಚಿಕೊಳ್ಳಲು ಸಹಕಾರ ನೀಡಿದವರು ನೀವು. ಕಾಮೆಂಟ್ ಬಾಕ್ಸ್ ನಲ್ಲಿ ನಾನು ಉತ್ತರ ನೀಡದಿದ್ದರೂ( ಕ್ಷಮಿಸಿ ನನ್ನ ಸ್ಲೋ ನೆಟ್ ಕಾರಣದಿಂದ ಇಲ್ಲಿ ಕಾಮೆಂಟ್ ಬಾಕ್ಸ್ ಓಪನ್ ಆಗೋದು ತುಂಬಾ ಅಪರೂಪ, ಹಾಗಾಗಿ ನಾನು ಕಾಮೆಂಟ್ ಗೆ೪ ತ್ಯಾಂಕ್ಸ್ ಹೇಳಲು ಕಷ್ಟ ಹೊರತು ಸೊಕ್ಕಿನಿಂದಲ್ಲ) ಓದಿ ಕಾಮೆಂಟ್ ಜಡಿದು ಹುರುಪು ತುಂಬಿದ್ದೀರಿ. ಸೀತಾರಾಂ ರಿಂದ ಹಿಡಿದು ಮಾವೆಂಸ, ಜಿತು, ದಿಲೀಪ್, ವಿರಾ ಹೆಗಡೆ, ವಿಜಯಶ್ರೀ, ಡಾ ಕೃಷ್ಣಮೂರ್ತಿ, ಮುತ್ತು, ಹೊಸಮನೆ, ರಮ್ಯಾ, ತೇಜಸ್ವಿನಿ, ಅರವಿಂದ್ ಜಿ ಜೆ, ಪರಾಂಜಪೆ, ಪ್ರಕಾಶಣ್ಣ, ಸುಶ್ರುತ, ವಿನಾಯಕ, ಭಾರತೀಶ, ಮನ್ ಮುಕ್ತಾ, ಶಾಂತಲಾ ಭಂಡಿ, ಪ್ರೀತಿಯಿಂದ ಸಿಂಧು, ಆದಿತ್ಯ ಬೇದೂರು, ಪ್ರಸನ್ನ ಕನ್ನಡಿಗ, ನವ್ಯ, ನಾಣು, ಮಂಜುನಾಥ್, ರಾಜ್ ಬಾವಯ್ಯ, ರತ್ನಕ್ಕ, ಕಾವ್ಯ, ದಿವ್ಯ, ದಿಗ್ವಾಸ್ ಹೆಗಡೆ ಸುಬ್ರಹ್ಮಣ್ಯ, ವೇಣು, ಯಜ್ನೇಶ್, ಜಗದೀಶ್ ಶರ್ಮಾ, ಹೀಗೆ ಹೇಳುತ್ತಾ ಹೋದರೆ ಇಡೀ ಬ್ಲಾಗರ್ ರೇ ಬೇಕಾದೀತು. ಇನ್ನೂ ಕಾಮೆಂಟ್ ಹಾಕದೇ ಓದುವವರ ಲಿಸ್ಟ್ ಬೇರೆಯೇ ಇದೆ, ಇರಲಿ ಹೆಸರು ಕೈಬಿಟ್ಟವರಿಗೂ ನಿಮಗೂ ತ್ಯಾಂಕ್ಸ್.

ಈ ಎಲ್ಲಾ ವಿಷಯದ ಜತೆ ಇದೇ ೨೭-೧೦-೧೧ ರ ಗುರುವಾರ ತಲವಾಟ ಶಾಲೆಯಲ್ಲಿ (ನಾನು ನಾಲ್ಕಕ್ಷರ ಕಲಿತ ಜಾಗ) ನನ್ನ ಬ್ಲಾಗ್ ಬರಹ ಪುಸ್ತಕ ಬಿಡುಗಡೆ ಅಂತ್ ಮುಹೂರ್ತ ಇಟ್ಟಾಗಿದೆ. ನೋಡಿ ನೀವು ಅಲ್ಲಿಂದ ಇಲ್ಲಿಗೆ ಇದಕ್ಕಾಗಿಯೇ ಬರಲು ಆಗುವುದಿಲ್ಲ ಅನ್ನೋದು ನನಗೆ ಗೊತ್ತು, ಅಕಸ್ಮಾತ್ ಹಬ್ಬಕ್ಕೆ ಊರಿಗೆ ಬಂದಿದ್ದರೆ ಅಂದು ಬನ್ನಿ. ನಾನಂತೂ ಅಂದು ಬಾಸಿಂಗ ಕಟ್ಟಿದ ದೀಪಾವಳಿಯ ಎತ್ತಿನಂತಾಗಿರುತ್ತೇನೆ. ಅಕಸ್ಮಾತ್ ನಿಮ್ಮನ್ನು ಖುದ್ದು ಮಾತನಾಡಿಸಲು ಆಗದೆಯೂ ಇರಬಹುದು. ಹಾಗಾಗಿ ಬೇಸರಬೇಡ . ಮತ್ತೆ ಸಿಕ್ಕಾಗ ನಗೋಣ, ಹರಟೋಣ,

ಬನ್ನಿ, ಮತ್ತೆ ನಾನು ಫೋನ್ ಮಾಡುವುದಿಲ್ಲ,

Thursday, October 20, 2011

ಎರಡನೆಯವರಾದ ವಕೀಲರ .......

ಸರಿ ಅದು ವಕಾರಾದಿ ವೈದ್ಯರ ಕತೆಯಾಯಿತು ಇನ್ನು ಎರಡನೆಯವರಾದ ವಕೀಲರ ಕತೆಯತ್ತ ನೋಡೋಣ.
ಈಗ ಮೂರು ತಿಂಗಳ ಹಿಂದೆ ನಾ ಕಟ್ಟಿಸುತ್ತಿರುವ ಮನೆಯೆ ಮೌಲ್ಡ್ ಸಮಯ. "ರಾಗು, ನೀ ಮೌಲ್ಡ್ ಹಾಕುವ ಸಮಯಕ್ಕೆ ಸರಿಯಾಗಿ ಕೋರ್ಟ್ ನಿಂದ ಸ್ಟೆ ತರುತ್ತಾರಂತೆ" ಎಂಬ ಸುದ್ದಿ ಕಿವಿಗೆ ಬಿತ್ತು. ಒಮ್ಮೆ ಗಾಬರಿಯಾದೆ. ಹೌದಪ್ಪ ಹೌದು ಮೂರ್ನಾಲ್ಕು ಲಕ್ಷದ ಮೆಟೀರಿಯಲ್ ತಂದಿಟ್ಟುಕೊಂಡು ಅಕಸ್ಮಾತ್ ಸ್ಟೆ ಬಂದುಬಿಟ್ಟರೆ ಕತೆಯೇನು? ಎಂದು ಒಳಮನಸ್ಸು ಪದೇಪದೇ ಒಳಗಿನಿಂದ ನಡುಕವನ್ನು ಸೃಷ್ಟಿಮಾಡಿ ಹೊರಬಿಡತೊಡಗಿತು. ಕೋರ್ಟು ಕಾನೂನು ನನಗೆ ಗೊತ್ತಿಲ್ಲ. ಮಾಡುವುದೇನು?. ಹೈಕೋರ್ಟ್ ಲಾಯರ್ ಸ್ನೇಹಿತ ಬಾಬುವಿಗೆ ಫೋನಾಯಿಸಿದೆ. ಆತ "ಅಯ್ಯೋ ಬಿಡ ಮಾರಾಯ ಹಾಗೆಲ್ಲ ಸ್ಟೆ ತರುವುದಕ್ಕೆ ಬರುವುದಿಲ್ಲ, ನಿನ್ನ ಸ್ವಂತ ಜಮೀನಿನಲ್ಲಿ ಮನೆಕಟ್ಟಿಸುವುದು ನಿನಗೆ ಸಂವಿಧಾನ ಕೊಟ್ಟ ಹಕ್ಕು, ಕೋರ್ಟ್ ಎಂದರೆ ನೀವೆಲ್ಲಾ ಏನೆಂದು ತಿಳಿದುಕೊಂಡಿದ್ದೀರಿ, ಆದರೂ ಸ್ಥಳೀಯ ವಕೀಲರನ್ನು ಒಮ್ಮೆ ಭೇಟಿ ಮಾಡಿ ಪರಿಚಯ ಮಾಡಿಕೋ, ಅದು ಒಳ್ಳೆಯದು" ಎಂದ. ಅಕ್ಕನ ಮಗ ಮಂಜು ಪಕ್ಕನೆ ನೆನಪಾದ. ಆತನ ಮುಖಾಂತರ ಲಾಯರ್ ರಮಣರ ಮನೆಯ ಮೆಟ್ಟಿಲೇರಿದೆ ಕಡತ ಸಹಿತ. ಹಾಗೆಯೇ ಪರಿಚಯ ಜತೆಗೆ ಸಮಸ್ಯೆ ಹೇಳಿಕೊಂಡೆ. ಇದಕ್ಕೊಂದು ಕೇವಿಯಟ್ ಬೇಕು( ಹಾಗೆಂದರೆ ಏನೂ ಅಂತಾನೂ ನನಗೆಗ್ೊತ್ತಿರಲಿಲ್ಲ) ಕಡತವನ್ನು ಪರಾಮರ್ಶಿಸಿ ಕೇವಿಯಟ್ ಅಂದರೆ ಅನ್ಯತಾ ಕೋರ್ಟ್ ಜಗಳ ಮೈಮೇಲೆಎ ಳೆದುಕೊಂಡಂತೆ. ಇದಕ್ಕೆಲ್ಲಾ ಹಾಗೆಲ್ಲ ಸ್ಟೆ ತರಲು ಬರುವುದಿಲ್ಲ, ಅಕಸ್ಮಾತ್ ಬಂದರೂ ನಾವಿದ್ದೇವೆ ಬಿಡಿ ಚಿಂತೆ" ಎಂದರು. ಒಳಗಿನಿಂದ ಧೈರ್ಯದ ಸೆಲೆ ಒಸರತೊಡಗಿತು. "ಫೀ ಎಷ್ಟು? ಎಂದೆ. "ಅಯ್ಯ ಇದೆಕ್ಕೆಲ್ಲಾ ಎಂತಾ ಫೀ" ಎಂದು ಬೀಳ್ಕೊಟ್ಟರು.
ಮತ್ತೊಂದು ಪ್ರಕರಣದಲ್ಲಿ ಖಂಡಿಕದ ರಾಗಣ್ಣ ಹಾಗೂ ಅರುಣ ಎಂಬ ವಕೀಲರ ಭೇಟಿಯಾಗುವ ಸಂದರ್ಭ ಬಂತು. ಅವರೂ ಹಾಗೆಯೇ ಸುಮ್ನೆ ಯಾಕೆ ಕೋರ್ಟು ಕಛೇರಿ, ಸುಮ್ಮನಿದ್ದು ಬಿಡಿ" ಎಂದರು.
ಅಲ್ಲಿಯತನಕ ಪರಿಚಯವೇ ಇಲ್ಲದ ನನ್ನನ್ನು ಸುಲಭವಾಗಿ ಹಾದಿತಪ್ಪಿಸಿ ದುಡ್ಡು ತೆಗೆದುಕೊಳ್ಳಬಹುದಾಗಿದ್ದ ಸಂದರ್ಭದಲ್ಲಿಯೂ ಸಮಾಧಾನದ ಮಾತನ್ನಾಡಿ ಮನೆಗೆ ಕಳುಹಿಸಿದ ವಕೀಲರು ನಮಗೆ ಸಿಕ್ಕರೆ ಜೀವನ ಸುಗಮವಲ್ಲದೇ ಮತ್ತಿನ್ನೇನು?. ಅವರು ಕುಂತಿದ್ದು ನ್ಯಾಯಕ್ಕಾಗಿ ಎಂದು ಮತ್ತೆ ಹೊಸತಾಗಿ ಹೇಳಬೇಕಾಗಿಲ್ಲ ತಾನೆ. ತ್ಯಾಂಕ್ಸ್ ವಕೀಲರೇ ಎನ್ನುತ್ತಾ ಎರಡನೆಯವರು ನಮ್ಮ ಜೀವನದಲ್ಲಿ ಸುಗಮ ದಾರಿ ಮಾಡಿಕೊಡಬಲ್ಲರು ಎಂಬ ಪುರಾಣ ಮುಕ್ತಾಯೂ ಇನ್ನು ಮೂರನೆಯವರು.

Tuesday, October 18, 2011

ಸೋಲನ್ನು ಮೆಟ್ಟಿಲು ಮಾಡಿಕೊಂಡು ..........

ಜೀವನ ಎಂದಮೇಲೆ ಸೋಲು ಗೆಲುವು,ಹುಟ್ಟು ಸಾವು, ನೋವು ನಲಿವು, ಎಂಬಂತದೆಲ್ಲಾ ಇದ್ದದ್ದೇ. ಅದರಾಚೆ ಎಂದರೆ ಶೂನ್ಯ ಭಾವ ಅಷ್ಟೆ. ಅಲ್ಲಿ ಮಜ ಇಲ್ಲ ಅಥವಾ ಗೊತ್ತಿಲ್ಲ. ಈಗ ಅಂತಹ ಗೊತ್ತಿಲ್ಲದ ವಿಚಾರಗಳನ್ನೆಲ್ಲಾ ಬದಿಗೊತ್ತಿ ಚೂರುಪಾರು ಗೊತ್ತಾಗುತ್ತದೆ, ಗೊತ್ತಾಗುತ್ತಿದೆ ಎನ್ನುವ ವಿಚಾರದತ್ತ ಹೊರಳೋಣ.


"ಗೆಲುವು" ಎಂಬ ಮೂರಕ್ಷರದ ಪದ ಇದೆಯಲ್ಲ, ಅದನ್ನು ಸಾಕಾರಗೊಳಿಸಿಕೊಳ್ಳಲು ಸೋಲನ್ನು ಮೆಟ್ಟಿಲು ಮಾಡಿಕೊಳ್ಳಬೇಕು" ಎಂಬ ವಿಚಾರ ಬಹು ವಿಶೇಷವಾಗಿದೆ. ಗೆಲುವು ಸೋಲುಗಳು ವಿಷಯಾಧಾರಿತವಾದದ್ದು. ಅವನು ಯಾವುದನ್ನು ಯಾಕಾಗಿ ಎಷ್ಟು ಪ್ರಮಾಣದಲ್ಲಿ ಗೆಲ್ಲಲು ಹೊರಟಿದ್ದಾನೆ ಎಂಬುದರ ಮೇಲೆ ಫಲಿತಾಂಶ. ಗೆಲುವನ್ನ ಸಾವಿನಲ್ಲೂ ಕಾಣಬಹುದು ಸೋಲನ್ನು ಬದುಕಿದ್ದೂ ಕಾಣಬಹುದು. ಅದಕ್ಕೊಂದು ಮಜವಾದ್ ಕತೆ ಮಾಡಿದ್ದಾರೆ ಯಾರೋ ಬುದ್ಧಿವಂತರು. ಒಮ್ಮೆ ಓದಿ.


ಅಕ್ಕಪಕ್ಕದಲ್ಲಿ ಮನೆ ಕಟ್ಟಿಕೊಂಡವರಿಬ್ಬರು ಕೆಲ ವರ್ಷ ಅತೀ ಆತ್ಮೀಯತೆಯಿಂದ ಇದ್ದರು. ಆ ಅತಿ ಯ ಪರಿಣಾಮ ಅವರಿಬ್ಬರು ಪರಮ ಶತ್ರುಗಳಾಗಿ ಬದಲಾದರು. ಬೆಳಗಿನಿಂದ ಸಂಜೆಯ ತನಕ ಪುರ್ಸೊತ್ತು ಸಿಕ್ಕಾಗಲೆಲ್ಲ ಜಗಳ ಜಗಳ ಜಗಳ. ಬಾಯಿಮಾತಿನಿಂದ ಶುರುವಾದ ಜಗಳ ಪೋಲೀಸ್ ಸ್ಟೇಷನ್ ಕೋರ್ಟು ಮೆಟ್ಟಿಲೇರಿತು. ಗಡಿ ವ್ಯಾಜ್ಯ, ಸದ್ದಿನ ವ್ಯಾಜ್ಯ ಸಪ್ಪಳದ ವ್ಯಾಜ್ಯ ಹೀಗೆ ಒಂದರ ಹಿಂದೊಂದು ಕಾರಣಗಳು. ಒಂದರಲ್ಲಿ ಒಬ್ಬನಿಗೆ ಸೋಲಾದರೆ ಮತ್ತೊಂದರಲ್ಲಿ ಮತ್ತೊಬ್ಬನಿಗೆ ಸೋಲು, ಗೆಲುವೂ ಹಾಗೆ ಹೇಗೂ ಉಲ್ಟಾ. ಹೀಗೆ ಗಲಾಟೆ ದೊಂಬಿಯಲ್ಲಿ ನೆರೆಹೊರೆಯವರಿಬ್ಬರೂ ತಮ್ಮ ಆಯುಷ್ಯವನ್ನೇ ಕಳೆಯುತ್ತಾ ಬಂದರು.


ಇಂತಿಪ್ಪ ಸಂದರ್ಭದಲ್ಲಿ ಒಂದು ಮನೆಯವನಿಗೆ ಖಾಯಿಲೆ ದೇಹಕ್ಕೆ ಆವರಿಸಿತು. ದಿನದಿಂದ ದಿನಕ್ಕೆ ಖಾಯಿಲೆ ಉಲ್ಬಣಿಸಿ ಇನ್ನು ಹೆಚ್ಚು ದಿನ ಆತ ಬದುಕಲಾರ ಎಂಬ ಸ್ಥಿತಿಗೆ ಬಂತು. ಮತ್ತೊಬ್ಬನಿಗೆ ಒಳಗೊಳಗೆ ಆನಂದ. "ಉರದಾ ಉರದಾ ಈಗ ನೋಡು ಅನುಭವಿಸುತ್ತಾ ಇದ್ದಾನೆ" ಎಂದು ಒಳಗೊಳಗೆ ಬೀಗತೊಡಗಿದ. ಹೀಗೆ ಒಳಾನಂದವನ್ನು ಅನುಭವಿಸುತ್ತಾ ಇರಬೇಕಾದ ಸಂದರ್ಭದಲ್ಲಿ ಪಕ್ಕದ ಮನೆಯವನಿಂದ ಒಮ್ಮೆ ತನ್ನನ್ನು ಭೇಟಿ ಮಾಡಿ ಹೋಗುವಂತೆ ಆಹ್ವಾನ ಬಂತು. ಈತನಿಗೂ ಜಗಳ ಸಾಕಾಗಿತ್ತು, ಪಾಪ ಇನ್ನು ಸತ್ತು ಹೋಗುತ್ತಾನೆ ,ಇನ್ನೆಂಥಾ ದ್ವೇಷ ಎನ್ನುತ್ತಾ ಸೀದಾ ಮಲಗಿದವನ ಹಾಸಿಗೆಯ ಬಳಿಗೆ ಬಂದ. ಆಗ ಖಾಯಿಲೆಯಾತ " ನೋಡು ನಾನು ಕ್ಷಮಿಸಲಾರದ ತಪ್ಪುಗಳನ್ನು ಮಾಡಿದ್ದೇನೆ, ಅದಕ್ಕಾಗಿ ಭಗವಂತ ನನಗೆ ಈ ಶಿಕ್ಷೆ ಕೊಟ್ಟಿದ್ದಾನೆ" ಎಂದು ಕಣ್ಣೀರ್ಗರೆದ. ಈತನಿಗೂ ಛೆ ಅಂತ ಅನಿಸಿತು. "ಆಯಿತು ಆಗಿದ್ದೆಲ್ಲಾ , ಮರೆತುಬಿಡು, ನನ್ನ ಗ್ರಹಚಾರವೂ ಹಾಗಿತ್ತು, ಎಲ್ಲಾ ಭಗವಂತನ ಆಟ" ಎಂದು ಕಣ್ಣೀರ್ಗರೆದ. ಅಲ್ಲಿಯತನಕ ಪರಮ ಶತ್ರುಗಳಾಗಿದ್ದವರು ಮತ್ತೆ ಪರಮಮಿತ್ರರಾಗಿ ಹರಟಿದರು. ಖಾಯಿಲೆ ಮರೆತು ನಕ್ಕ ಮತ್ತೊಬ್ಬ. ಸ್ವಲ್ಪ ಸಮಯದ ನಂತರ ಖಾಯಿಲೆಯಾತ " ನನ್ನದೊಂದು ಕೊನೆಯ ಆಸೆ ಇದೆ ಈಡೇರಿಸಿಕೊಡುತ್ತೀಯಾ ಮಿತ್ರ" ಎಂದು ಕೈ ಹಿಡಿದು ಕೇಳಿದ. "ಆಯಿತು ಹೇಳು" ಎಂದ ಈತ.


"ನಾನು ಹೇಗೂ ಇನ್ನೊಂದೆರಡು ದಿವಸದಲ್ಲಿ ಸಾಯುತ್ತೇನೆ, ನಾನು ಸತ್ತಮೇಲೆ ನನ್ನ ಗುಧದ್ವಾರದಲ್ಲಿ ನೀನು ಹಾರೆಯೊಂದನ್ನು ತೂರಿಸಬೇಕು, ಇದು ನಾನು ನಿನಗೆ ಕೊಟ್ಟ ತೊಂದರೆಗಾಗಿ ಪ್ರಾಯಶ್ಚಿತ್ತ, ಮುಂದಿನ ಜನ್ಮದಲ್ಲಾದರೂ ಒಳ್ಳೆಯ ಬುದ್ಧಿ ನನಗೆ ದೇವರು ಕೊಡಲಿ" ಎಂದ


ಹಳೆ ಶತ್ರು ಪ್ರಸೆಂಟ್ ಮಿತ್ರನ ವಿಚಿತ್ರ ಬಯಕೆಯನ್ನು ಈತ ಅನಿವಾರ್ಯವಾಗಿ ಒಪ್ಪಿಕೊಂಡ. ಎರಡಿ ದಿವಸದನಂತರ ಆತ ಸಾವನ್ನಪ್ಪಿದ. ಈತ ಕೊಟ್ಟ ಮಾತಿನಂತೆ ಸಾವು ಖಚಿತವಾದನಂತರ ಒಂದು ಬರೊಬ್ಬರಿ ಕಬ್ಬಿಣದ ಹಾರೆಯನ್ನು "ಅಲ್ಲಿ" ತೂರಿಸಿದ. ನಂತರ ಜನ ಒಬ್ಬೊಬ್ಬರಾಗಿ ಬರತೊಡಗಿದರು, ಎಲ್ಲರೂ ಹಾರೆಯ ವಿಷಯ ಕುತೂಹಲದಿಂದ ಕೇಳತೊಡಗಿದರು. ಈತ ನಡೆದ ಕತೆ ಹೇಳಿ ತಾನೇ ತೂರಿಸಿದ್ದು ಎಂದ. ಆದರೆ ಜನರಿಗೇಕೋ ಅನುಮಾನ, ಗುಸು ಗುಸು ಪಿಸ ಪಿಸ. ಈ ಗುಸುಗುಸು ಪಿಸಪಿಸ ಕ್ಕೆ ದನಿಯಾಗಿ ಕೆಲ ಸಮಯದ ನಂತರ ಪೋಲೀಸರು ಬಂದರು. ಮತ್ತು ಹಾರೆಯನ್ನು "ಅಲ್ಲಿ" ಹಾಕಿ ಶತ್ರುವಾಗಿದ್ದ ಆತನನ್ನು ಕೊಂದ ಆಪಾದನೆಯ ಮೇಲೆ ಆರೆಸ್ಟ್ ಮಾಡಿ ಈತನನ್ನು ಜೈಲಿಗಟ್ಟಿದರು.


ಆತ ಸಾವೆಂಬ ಸೋಲನ್ನು ಮೆಟ್ಟಿಲು ಮಾಡಿಕೊಂಡು ಶತ್ರುವನ್ನು ಸೋಲಿಸಿ ತಾನು ಗೆಲುವು ಕಂಡಿದ್ದ.

Monday, October 17, 2011

ಕತೆಯೇ ಸರಿ.

ಇಪ್ಪತ್ತು ವರ್ಷದ ಹಿಂದಿರಬಹುದು. ಮುಖದಲ್ಲಿನ ಭಾವ ಮಸುಕು ಆದರೆ ದನಿ ಇನ್ನೂ ನೆನಪಿದೆ" ರಾಗೂ ಅಂವನು ಪ್ರೀತಿಸಿ ಮೋಸಮಾಡಿಬಿಟ್ಟ, ನೀನಾದರೂ ಹೋಗಿ ಹೇಳು, ಅವನದು ನಾಟಕ ಅಂತ ನನಗೆ ಈಗ ಗೊತ್ತಾಗಿದೆ, ಒಂದಿಷ್ಟು ದುಡ್ಡು ಕಳಕೊಂಡೆ." ಎಂದು ಹೇಳಿದಳಾಕೆ. ನನಗೆ ಕರುಳು ಚುರುಕ್ ಎಂದಿತಾದರೂ ಮುಂದುವರೆಯುವ ಧೈರ್ಯ ಇರಲಿಲ್ಲ. ಏನಂತ ಹೇಳಬೇಕು? ಹಗೂರವಾಗಿ ಕೇಳಿದೆ. "ಆವತ್ತು ನಾವಿಬ್ಬರು ಮೋರಿಕಟ್ಟೆಯ ಮೇಲೆ ಮಾತನಾಡಿದನ್ನು ನೀನು ನೋಡಿ, ಯಾರದು ಎಂದೆಯಲ್ಲ, ಅದನ್ನ ಉದಾಹರಿಸಿ ಕೇಳು ಮದುವೆಯಾಗಲು ಹೇಳು" ಎಂದಳು. ಯಾಕೋ ಮನಸ್ಸಾಗಲಿಲ್ಲ, ಕಾರಣ ಇನ್ನೂ ಗೊತ್ತಿಲ್ಲ. "ನೋಡು.. ಆತ ಮೋಸಗಾರ ಎಂದು ನಿನಗೆ ಈಗಲೇ ಗೊತ್ತಾಗಿದ್ದು ತುಂಬಾ ಒಳ್ಳೆಯದಾಯಿತು, ಸಂಸಾರವೇ ಜೀವನವಲ್ಲ, ಮರೆತು ಮುಂದಿನ ಜೀವನ ಬಾಳು ಇಲ್ಲದಿದ್ದರೆ ಇದು ಪ್ಯಾಚ್ ಕಟ್ಟಿದ ಸಂಸಾರ ಹಾಗಾಗಿ ನಿತ್ಯ ಗೋಳು" ಎಂದು ಸಮಾಧಾನಿಸಿದೆ. ನಂತರ ಬಹಳ ದಿವಸಗಳು ಈ ವಿಷಯ ಕಾಡಿದ್ದಿದೆ. ನಾನು ತಪ್ಪಿದೆನೆ?, ಅಸಹಾಯಕ ಹೆಣ್ಣುಮಗಳಿಗೆ ಸಹಾಯ ಮಾಡಲಿಲ್ಲವಲ್ಲ ಎಂಬ ಕೊರಗು ಕಾಡುತ್ತಿತ್ತು. ಕಾಲ ಎಲ್ಲವನ್ನೂ ನುಂಗಿ ನೀರು ಕುಡಿಯಿತುಬಿಡಿ.


ಆಕೆಯ ಮದುವೆ ಬೇರೆಯವರ ಜತೆ ನಡೆಯಿತು. ಮೊನ್ನೆ ಸಿಕ್ಕಿದ್ದಳು, ಸುಖೀ ಸಂಸಾರದ ಭಾವ ಮುಖದಲ್ಲಿ ಎದ್ದು ಕುಣಿಯುತ್ತಿತ್ತು. ಆತನ ಮದುವೆಯೂ ನಡೆದು ಎರಡು ಮಕ್ಕಳು, ಆದರೆ ಇಂದಿಗೂ ಆತ ಸ್ಯಾಡಿಸ್ಟ್ ವರ್ತನೆ ತೋರಿಸುತ್ತಿದ್ದಾನೆ. ಒಮ್ಮೊಮ್ಮೆ ಬುಡಕ್ಕೆ ತಂದಿಟ್ಟು ಚಂದ ನೋಡುತ್ತಾನೆ. ಸಂಸಾರದ ಮುಖದಲ್ಲಿ ಕಳೆ ಇಲ್ಲ. ಕಾರಣ ಆತನ ಆ "ಅದರ" ಹುಡುಕಾಟ ಇನ್ನೂ ಮುಗಿದಿಲ್ಲ.


ಅಂತೂ ಸಮಾಧಾನವಾಯಿತು. ಇಲ್ಲ ಅಂದು ನಾನು ಸುಮ್ಮನುಳಿದಿದ್ದೇ ಒಳ್ಳೆಯದಾಯಿತು. ಹೌದು ಒಮ್ಮೊಮ್ಮೆ ಸುಮ್ಮನುಳಿಯಬೇಕಾಗುತ್ತದೆ, ಮಗದೊಮ್ಮೆ ಬುಸ್ ಎನ್ನಬೇಕಾಗುತ್ತದೆ. ಆದರೆ ಕಚ್ಚಬಾರದು. ಅಕಸ್ಮಾತ್ ಕಚ್ಚಿದರೆ ಉಳಿಯಬಾರದು ಎಂಬ "ಸನ್ಯಾಸಿ ಮತ್ತು ನಾಗರಹಾವಿನ" ಕತೆಯೇ ಸರಿ.