Tuesday, November 29, 2011

ನನಗೆ ಈಗ ಅವರ ಭಾಷೆ ಅರ್ಥವಾಗುತ್ತಿದೆ.

ನಾನು ಹಾಗೂ ನನ್ನ ಸ್ವಭಾವ ಸಿಕ್ಕಾಪಟ್ಟೆ ಬದಲಾಗಿದೆಯಾ? ಎಂಬ ಪ್ರಶ್ನೆ ನನ್ನನ್ನೇ ನಾನು ಕೇಳಿಕೊಂಡೆ. "ಹೌದು" ಎಂಬ ಉತ್ತರ ಆಳದಿಂದ ಬಂತು. ಒಂಥರಾ ಹಿಂಡಿತು ಮನಸ್ಸು. ಆ ಪ್ರಶ್ನೆ ನನ್ನನ್ನು ನಾನು ಕೇಳಿಕೊಳ್ಳುವುದಕ್ಕೆ ಕಾರಣವಿದೆ.
ಇತ್ತೀಚಿಗೆ ನನಗೆ ಬರೆಯಲಾಗುತ್ತಿಲ್ಲ. ಬ್ಲಾಗ್ ಬರಹ ಪುಸ್ತಕ ಬಿಡುಗಡೇಯಾದಬಳಿಕ ನಾನೆಲ್ಲೋ ಬ್ಲಾಗೆಲ್ಲೋ. ನಿತ್ಯ ಬೆಳಿಗ್ಗೆ ಎದ್ದು ಕೊಟ್ಟಿಗೆ ಕೆಲಸ ಮುಗಿಸಿ, ತೋಟ ತಿರುಗಿ, ಜೇನು ಪೆಟ್ಟಿಗೆಯ ಮುಚ್ಚಳ ತೆಗೆದು ನೋಡುತ್ತಾ ಕೆಲಸ ಮಾಡುತ್ತಾ ಕುಳಿತರೆ ಮತ್ತೆ ತಿಂಡಿ ಸಮಯಕ್ಕೆ ನನ್ನನ್ನು ಕರೆಯಬೇಕು. ತಿಂಡಿ ತಿಂದು ಒಂದಿಷ್ಟು ಬರೆದರೆ ಅದೇನೋ ನಿರುಮ್ಮಳ ಭಾವ. ಬರಹದಲ್ಲಿ ಸತ್ವ ಇದೆಯೋ..? ಅದರಿಂದ ಯಾರಿಗಾದರೂ ಪ್ರಯೋಜನವೋ..? ಅವರು ಹೇಗೆ ಅರ್ಥಮಾಡಿಕೊಂಡರು, ಅದರ ಭಾವಾರ್ಥವೇನು, ಧನ್ಯಾರ್ಥವೇನೂ..? ಆಳದ ಮಾತೇನು..? ಎಂಬಂತಹ ವಿಷಯದ ಗೊಂದಲ ನನ್ನಲ್ಲಿ ಇರಲಿಲ್ಲ. ಬರೆಯಬೇಕು ಬರೆದಿದ್ದೇನೆ ಅಷ್ಟೆ, ಅದು ನನ್ನ ಮಟ್ಟ ಇಷ್ಟೆ.
ಆದರೆ ಮನೆಯೆಂಬ ಮನೆ ಕಟ್ಟಿಸತೊಡಗಿದೆ ನೋಡಿ, ಹೊಸ ಪ್ರಪಂಚ ಅನಾವರಣಗೊಳ್ಳತೊಡಗಿತು. ನನ್ನ ದಿನಚರಿ, ಸ್ವಭಾವ ಗುಣ ಎಲ್ಲಾ ಅಯೋಮಯ. ಈಗ ನಿತ್ಯ ತರ್ಲೆ ಅರ್ಜಿಗಳಿಗೆ ಉತ್ತರ ಕೊಡುವುದು, ಅನಂತನ ತರ್ಲೆ ಪಟಾಲಂ ನ ಕಿರುಕುಳಕ್ಕೆ ಪ್ರತಿಕ್ರಿಯಿಸುವುದು, ಯಾರು ಯಾವಾಗ ಯಾವ ಅರ್ಜಿ ಹಾಕುತ್ತಾರೆ?, ಅದಕ್ಕೆ ಯಾರ್ ಹಿಡಿದು ಸರಿಮಾಡಿಸಬೇಕು ಅಂತ ಪ್ಲಾನ್ ಹೆಣೆಯುವುದು, ಮುಂತಾದ ಬೇಡದ ಕೆಲಸಗಳು ತಲೆತುಂಬಿಕೊಂಡು ಕಾಡಿ ಕರಡಿ ಬೆಂಡಾಗಿ, ನನ್ನಲ್ಲಿನ ಕಥೆಗಾರ ಮರೆಯಾಗತೊಡಗಿದ್ದಾನೆ. ಜೇನುಗಳೆಲ್ಲಾ ಪೆಟ್ಟಿಗೆ ಬಿಟ್ಟು ಹೊರಟುಹೋಗಿದೆ. ನಿಮ್ಮ ಹಾಗೂ ನಿಮ್ಮ ಕಾಮೆಂಟ್ ನೆನಪು ಎಲ್ಲೋ ಆಳದಲ್ಲಿ ಕುಟುಕಿದಂತಾಗುತ್ತಿದೆ ಅಷ್ಟ್ಯೆ
ತಾಳಗುಪ್ಪದಲ್ಲಿ ಲಿಂಗರಾಜು ಎಂಬೊಬರಿದ್ದಾರೆ. ಅವರು ಮಾತೆತ್ತಿದರೆ "ಚಪ್ಪಲಿಲಿ ಹೊಡಿ ಸೂಳೆಮಂಗಂಗೆ" ಅಂತಾರೆ. ರಾಜಣ್ಣ ನೀವು ಹೀಗೆಕೆ? ಎಂದೆ. ನಾನು ಒಳ್ಳೆಯವನಾಗಿದ್ದೆ, ಆದರೆ ಸಮಾಜ ನನ್ನನ್ನು ಒಳ್ಳೆಯವನ್ನಾಗಿಸಲಿಲ್ಲ, ಹಾಗೆಯೇ ಎಲ್ಲರೂ..." ಎಂದರು. ನನಗೆ ಈಗ ಅವರ ಭಾಷೆ ಅರ್ಥವಾಗುತ್ತಿದೆ.