Thursday, December 8, 2011

ಕೆಂಪು ಟವೆಲ್ಲು ಮತ್ತು......

ನಗುವುದು ಆರೋಗ್ಯ, ನಗಿಸುವುದು ಕಲೆ. ಅದಕ್ಕೆ ಜೋಕ್ ಗಳು ಸಾವಿರಾಋ ಸೃಷ್ಟಿಯಾಗಿವೆ. ಹಾಗಂತ ಗೊತ್ತಿದ್ದ ನಗೆಹನಿಗಳನ್ನು ಸಮಯ ಸಂದರ್ಭಕ್ಕನುಸಾರವಾಗಿ ಹೇಳುವುದು ಮತ್ತೊಂದು ಕಲೆ. ಅಂತಹ ಕಲೆಗಾರರ ಸಂಖ್ಯೆ ವಿರಳ. ನಮ್ಮ ನಿಮ್ಮ ಜತೆಯ ಜನ ಅಂತಹವರು ಸಿಕ್ಕಿದರೆ ಧಾವಂತದ ಬದುಕಿನಲ್ಲಿಯೂ ಸಣ್ಣ ಮಜ ಸಿಗುತ್ತದೆ.
ನಮ್ಮ ತಲವಾಟದ ಹರಿಭಟ್ರ ಗಣಪತಿ ಅಂತಹ ಅಪರೂಪದ ಜನ. ಎಲ್ಲೋ ಅಪರೂಪಕ್ಕೆ ಮಾತನಾಡುವ ಆತ ಗುಂಪಿನಲ್ಲಿ ಒಂದು ಮಜ ಕೊಡುತ್ತಾನೆ. ನಿನ್ನೆ ಒಂದು ಪ್ರಸಂಗದ ಜಲಕ್ ಇಲ್ಲಿದೆ.
ಡೈರಿ ಕಟ್ಟೆಯಲ್ಲಿ ಹತ್ತೆಂಟು ಜನ ಸೇರಿದಾಗ ತಾಸರ್ದ ತಾಸು ಹರಟುವುದು ದಿನಚರಿ. ಹಾಗೆ ಹರಟುತ್ತಾ ಕುಳಿತಾಗ ಯಾರೋ ಒಬ್ಬರು ಹೇಳಿದರು. "ನನ್ನ ಮಗಂಗೆ ನಿನ್ನೆಯಿಂದ ಬೇಧಿ ಮಾರಾಯ, ಎಂಥ ಔಷಧಿ ಮಾಡಿದರು ನಿಲ್ತಾನೆ ಇಲ್ಲ" ಎಂದ.
ಅದಕ್ಕೆ ಗಣಪತಿ "ಕೆಂಪು ಟವೆಲ್ ತೋರ್ಸಾ, ನಿಂತು ಹೋಗುತ್ತೆ ಬೇಧಿ" ಎಂದ.
ಎಲ್ಲರಿಗೂ ಆಶ್ಚರ್ಯ, ಅದೆಂತಾ ಮದ್ದು, ಕೆಂಪು ಟವೆಲ್ ತೋರಿಸುವುದಕ್ಕೂ ಭೇಧಿ ನಿಲ್ಲುವುದಕ್ಕೂ ಎತ್ತಣದೆತ್ತಣ ಸಂಬಂಧ ಅಂತ ಎಲ್ಲರೂ ಗಣಪತಿಯತ್ತ ಮಿಕಿಮಿಕಿ ನೋಡತೊಡಗಿದರು. ಆತ ಮೌನಿ. ಅಂತೂ ಕುತೂಹಲ ತಡೆಯಲಾರದೆ "ಅದೇಗೆ?" ಎಂದು ಗಂಟು ಬಿದ್ದಾಗ ಆತ ಘನಗಂಭೀರ ಮುಖಾರವಿಂದದೊಡನೆ " ಅಲ್ಲಾ,, ಕೆಂಪು ಬಟ್ಟೆ ತೋರಿಸಿದರೆ ಅಷ್ಟುದ್ದಾ ರೈಲೇ ನಿಲ್ಲುತ್ತದೆಯಂತೆ... ಇನ್ನು ಅಪ್ಪಿಯ ಭೇಧಿ ನಿಲ್ಲದೇ ಇರುತ್ತಾ...." ಎಂದು ಹೇಳಿದಾಗ.... ನಂತರ ಎಲ್ಲರೂ ಘೊಳ್ಳಂತ ನಕ್ಕಿದ್ದು ಎಷ್ಟು ಅಂತ ವಿವರಿಸುವ ಅಗತ್ಯ ಇಲ್ಲ ತಾನೆ...?