Saturday, December 22, 2012

ಮಲ್ಲು ಎಂಬ ಜಾತಿಯಲ್ಲದ ಜಾತಿ ನಾಯಿ

ಅತ್ತ ಜಾತಿಯದೇ ಅಲ್ಲ ಹಾಗಂತ ಕಂತ್ರಿಯಂತೂ ಅಲ್ಲವೇ ಅಲ್ಲ ಎಂಬಂಥಹ ಜಾತಿಗೆ ಸೇರಿದ್ದು ನಮ್ಮ ಮನೆಯ ನಾಯಿ ಮಲ್ಲು. ಅಯ್ಯ ಅದೇಂತಾ ಹೆಸರು ಮಲ್ಲು ಅಂತ ನಾಯಿಯದು ಅಂತ ನಿಮಗೆ ಅನ್ನಿಸಬಹುದು. ನಮ್ಮ ಮನೆಯಲ್ಲಿ ನಾವು ಎಲ್ಲಿಂದ ಯಾರ ಮನೆಯಿಂದ ಪ್ರಾಣಿಗಳನ್ನು ತಂದಿರುತ್ತೇವೆ ಎನ್ನುವುದರ ಮೇಲೆ ಅದರ ಹೆಸರು ನಿಕ್ಕಿಯಾಗುವ ಸಂಪ್ರದಾಯ ಲಾಗಾಯ್ತಿನಿಂದಲೂ. ಮಲ್ಲಕ್ಕಿ ಶ್ರೀಪಾದಣ್ಣನ ಮನೆಯಿಂದ ತಂದಂತಹ ನಾಯಿ ಇದಾದ್ದರಿಂದ ಶ್ರೀಪಾದ ಎಂದು ಹೆಸರಿಟ್ಟರೆ ಒದೆ ತಿನ್ನಬೇಕಾದೀತೆಂದು ಮಲ್ಲಕ್ಕಿ ಹೆಸರನ್ನು ಕತ್ತರಿಸಿ ಮಲ್ಲು ಎಂದು ನಾಮಕರಣ ಮಾಡಲಾಗಿದೆ. ಇಂತಿಪ್ಪ ಈ ನಮ್ಮ ಮಲ್ಲು ಈಸ ರೈಸ್ ಗಿರಾಕಿ. ಬಹುಶಃ ಒರಿಜಿನಲ್ ಈಸ ಕೂಡ ಇಷ್ಟು ರೈಸ್ ಆಗುವುದನ್ನು ನಾನು ನೊಡಿಲ್ಲ( ಈಸ ಪದ ಗೊತ್ತಿಲ್ಲದಿದ್ದರೆ ನನ್ನ ಯಾವುದೋ ಹಿಂದಿನ ಬ್ಲಾಗ್ ಓದಬೇಕು, ಇರಲಿ ಈಸ ಎಂದರೆ ಮುದ್ದು ಅಂತ) ನಮ್ಮ ಮಲ್ಲು ಮನುಷ್ಯರೊಡನೆ ಸ್ನೇಹಜೀವಿ, ಜಾನುವಾರು ಪ್ರಾಣಿಗಳನ್ನು ಕಂಡರೆ ಆಗದು. ವಾರಕ್ಕೊಂದೆರಡು ಹಾವುಗಳನ್ನು ಇದು ಸಾಯಿಸಿಬಿಡುತ್ತದೆ. ಒಂಥರಾ ಬೆಸರದ ಸಂಗತಿಯಾದರೂ ಅದು ಬಿಡದು ತನ್ನ ಚಟವನ್ನು ನಾವು ಬಿಡಲಾರೆವು ಮಲ್ಲುವನ್ನು. ಈಗ ಇದ್ದಕ್ಕಿದಂತೆ ಮಲ್ಲುವಿನ ಕುರಿತು ಯಾಕೆ ಬರೆದೆ ಅಂತ ಗೊತ್ತಾಗುತ್ತಿಲ್ಲ. ಒಟ್ಟಿನಲ್ಲಿ ಮಲ್ಲುವಿಗೆ ತನ್ನ ಮುಖವನ್ನು ನಿಮಗೆ ತೊರಿಸುವ ಅದೃಷ್ಟ ಮಜ ಮಾಡ್ಲಿ ಬಿಡಿ

ಹೀಗೆಲ್ಲಾ ಇದೆ ಮಜವಾದರೆ ಮಜ ಅನ್ನಿ ಇಲ್ಲವಾದರೆ ಬಿಟ್ಟಾಕಿ -

ಯಾರು ಎಷ್ಟೇ ಹಾರಾಡಿದರೂ  ಕೂಗಾಡಿದರೂ ಒಂದಲ್ಲ ಒಮ್ದು ದಿನ ಈ ದೇಹವನ್ನು ಬಿಡಲೇಬೇಕು. ಗೊತ್ತಿಲ್ಲದ ಗುರಿಯಿಲ್ಲದ ಪಯಣ ಅದು. ಹುಟ್ಟಿನ ಮೊದಲು ಸತ್ತ ನಂತರ ದ ವ್ಯವಹಾರಗಳು ಏನು ಎತ್ತ ಎಂಬುದು ಎಲ್ಲವೂ ಕಾಲ್ಪನಿಕವೇ. ಶಾಸ್ತ್ರ ಪುರಾಣ ಏನೇ ಹೇಳಲಿ ಅದು ಮತ್ತೆ ಮನುಷ್ಯ ಸೃಷ್ಟಿಯೇ. ಮತ್ತು ನಂಬಿಕೆಯ ಅಧಾರದ ಮೇಲೆ ನಿಂತಿದೆ. ಬಿಡಿ ಅವುಗಳನ್ನೆಲ್ಲಾ ಅದರ ಪಾಡಿಗೆ ಬಿಟ್ಟು ನಾವೂ ಒಂದು ಸುಲಭ ಉಪಾಯದ ಮೂಲಕ ಡೆತ್ ಅನುಭವ ಪಡೆದುಕೊಳ್ಲೋಣ. ಹೀಗೊಂದು ಸುಲಭ ನಂಬಿಕೆಯ ವ್ಯಾಯಾಮ ನಿಮಗೆ ನಿಮ್ಮಲ್ಲಿ ಅಡಗಿರುವ ಜೀವ ಭಯ, ಟೆನ್ಷನ್, ಖಾಯಿಲೆ ಭಯ ಹೀಗೆ ಎನೆಲ್ಲಾ ಕಪೋಲಕಲ್ಪಿತಗಳು ಇರುತ್ತವೆಯೋ ಅವನ್ನೆಲ್ಲಾ ಓಡಿಸಿ ವಾಸ್ತವಗಳನ್ನು ಮಾತ್ರಾ ನಿಮ್ಮ ಮಿದುಳು ಯೋಚಿಸುವಂತೆ ಮಾಡುತ್ತದೆ. ಅಷ್ಟಾದ ಮೇಲೆ ದಿನಪೂರ್ತಿ ಜಿಂಗಲಾಲ.
ನಿಮಗೀಗ ನಡು ವಯಸ್ಸು ಅಂತಿಟ್ಟುಕೊಂಡರೆ ನಿಮ್ಮ ಜೀವನದಲ್ಲಿ ಒಂದೆರಡು ಸಾವಿನ ಮನೆಯನ್ನು ನೋಡಿರುತ್ತಿರಿ. ಅವೆಲ್ಲಾ ನೆನಪಿರುತ್ತದೆ. ಈಗ ಅದನ್ನು ನೀವು ಒಮ್ಮೆ ಅನುಭವಿಸಿ.  ಆರಾಮವಗಿ ಅಂಗಾತ ಮಲಗಿ. ಆಳವಾದ ಉಸಿರೆಳೆದುಕೊಳ್ಳಿ. ಕಾಲಿನ ಕೊಟ್ಟ ಕೊನೆಯ ಬೆರಳನ್ನು ನೆನಪಿಸಿಕೊಳ್ಳಿ. ನಂತರ ಪಕ್ಕದ್ದು ಆಮೇಲೆ ಅಂಗಾಲು ನಂತರ ಕಾಲು ಹಾಗೆಯೇ ಮೇಲೆ ತೊಡೆ ನಂತರ .....  .... ಮತ್ತೆ ಹೊಟ್ಟೆ ಹೃದಯ ಕುತ್ತಿಗೆ ಮಿದುಳಿನೆಲ್ಲಾ ನಿಮ್ಮ ಮನಸ್ಸನ್ನು ಸುತ್ಟಾಡಿಸಿ ಕುಂಕುಮ ಪಾಯಿಂಟ್( ಮೂಗಿನ ಮೇಲೆ) ನಿಮ್ಮ ಮನಸ್ಸನ್ನು ಕೇಂದ್ರೀಕರಿಸಿ. ಅಲ್ಲಿಗೆ ನಿಮ್ಮ ಮನಸ್ಸು ಬಂತು ಅಂತಾದರೆ ದೇಹವನ್ನು ಮರೆತಿರುತ್ತದೆ. ಮರೆತಿಲ್ಲದಿದ್ದರೂ ಪರವಾಗಿಲ್ಲ ಒತ್ತಾಯಪೂರ್ವಕವಾಗಿ ನೆನಪಿಸಿಕೊಳ್ಳಬೇಡಿ. ನೆನಪಿಸಿಕೊಂಡರೂ ಪರವಾಗಿಲ್ಲ ಯಾವುದು ನೆನಪಾಯಿತೋ ಮತ್ತೆ ಅಲ್ಲಿಂದ ಮುಂದುವರೆಸಿ ಅಂತಿಮವಾಗಿ ಕುಂಕುಮ ಪಾಯಿಂಟ್ ಗೆ ಬಂದಮೇಲೆ ಕಲ್ಪಿಸಿಕೊಳ್ಳಿ "ನನ್ನ ದೇಹ ಸಾವನ್ನು ಹೊಂದಿದೆ" ನಂತರ ನಿಮ್ಮ ಸಾವು ನಿಮ್ಮ ಹತ್ತಿರವಿದ್ದವರಿಗೆ ತಿಳಿದಂತೆ ಅದರ ಪರಿಣಾಮ ನಿಮ್ಮ ಮಿದುಳಿಗೆ ತೋಚಿದಂತೆ ಕಲ್ಪಿಸುತ್ತಾ ಸಾಗಿ. ನಿಮ್ಮ ದೇಹದ ಪಯಣ ಚಿತಾಗಾರದವರೆಗೂ ಸಾಗಲಿ ಅಲ್ಲಿ ಭಸ್ಮವಾಗಲಿ. ಇವೆಲ್ಲಾ ಅನುಭವ ಕಲ್ಪನೆಗಳ ಮೇಲಷ್ತೇ ಸಾಗುವುದರಿಂದ ನಿಮ್ಮ  ಮಿದುಳು ತಮಾಷೆಯಾಗಿ ಒಂದು ಆಟದಂತೆ ಇವನ್ನೆಲ್ಲಾ ಗ್ರಹಿಸುತ್ತದೆ. ಸರಿ ಸುಮಾರು ಅರ್ದ ಗಂಟೆಯ ನಂತರ ಕಣ್ಣು ಬಿಡಿ. ನಿಮ್ಮ ಮನಸ್ಸು ಉಲ್ಲಾಸದತ್ತ ಸಾಗುತ್ತದೆ. ವರ್ತಮಾನದಲ್ಲಿ ಕಾಡುತ್ತಿರುವ ಸಮಸ್ಯೆಗಳ ಪರಿಹಾರ ತನ್ನಷ್ಟಕ್ಕೆ ಗೋಚರಿಸುತ್ತದೆ.
ಇಂತಿ ನಿಮ್ಮ -  ಶಾಸ್ರ ತಿಳಿಯದ ಶಾಸ್ತ್ರಿ

ಹೀಗೆಲ್ಲಾ ಇದೆ ಮಜವಾದರೆ ಮಜ ಅನ್ನಿ ಇಲ್ಲವಾದರೆ ಬಿಟ್ಟಾಕಿ -

Sunday, December 16, 2012

ಉತ್ಸಾಹದ ಚಿಲುಮೆ ಆರಂಭವಾಗುತ್ತದೆ.

ನಲವತ್ತು ದಾಟಿದಮೇಲೆ ಆರೋಗ್ಯದತ್ತ ಮನಸ್ಸು ಹರಿಯತೊಡಗುತ್ತದೆ. ಅತ್ತ ಯುವಕರೂ ಅಲ್ಲ ಇತ್ತ ಮುದುಕರೂ ಅಲ್ಲ, ಜವಾಬ್ದಾರಿ ಹೆಚ್ಚು ದೇಹ ಶಕ್ತಿ ಕೊಂಚ ಕಡಿಮೆ ಹೀಗೆಲ್ಲಾ ಇರುವ ಕಾಲದಲ್ಲಿ ಟೆನ್ಷನ್ ಎಂಬ ವ್ಯಾಧಿ ದೇಹವನ್ನು ತಿನ್ನತೊಡಗುತ್ತದೆ. ಆವಾಗ ಪೂಜೆ ದೇವರ ಮೊರೆ ಧಾರ್ಮಿಕ ಕಾರ್ಯಕ್ರಮ ಜಾತಕ ಹಿಡಿದು ತಿರುಗುವುದು ಮುಂತಾದ ಸಲಹೆಕಾರರ ಸಲಹೆಗಳೆಲ್ಲಾ ಅನುಷ್ಠಾನ ಗೊಳ್ಳಲಾರಂಬಿಸುತ್ತವೆ. ಒಂದಿಷ್ಟು ಸಕ್ಸಸ್ ಮತ್ತೊಂದಿಷ್ಟು ತೋಪು. ಬಿಡಿ ಅವೆಲ್ಲಾ ಬಹುಪಾಲು ಎಲ್ಲರ ಜೀವನದಲ್ಲಿ ಇದ್ದದ್ದೇ, ಈಗ ಏಕ್ ದಂ ಬೇರೆ ವಿಷಯದತ್ತ ಹೊರಳೋಣ,
ಹೇಗೂ ಸ್ನಾನ ನಿತ್ಯ ಮಾಡುತ್ತಿರಿ ನೀವು, ಅಲ್ಲಿ ನೀವೊಬ್ಬರೆ ಹೆಚ್ಚಾಗಿ ಇರುವುದು. ಗುಂಪಿನ ಸ್ನಾನ ಎಲ್ಲೋ ವರ್ಷದಲ್ಲಿ ಒಮ್ಮೊಮ್ಮೆ ಅಷ್ಟೆ ಹಾಗಾಗಿ ಅದನ್ನು ಬಿಟ್ಟಾಕಿ ಒಂಟಿ ಸ್ನಾನದ ವಿಷಯದತ್ತ ಹೊರಳೋಣ. ಬಿಸಿ ನೀರಿನ ಬೆಚ್ಚನೆಯ ಸ್ನಾನಕ್ಕಿಂತ ತಣ್ನೀರಿನಲ್ಲಿ ಮಿಂದು ಬೆಚ್ಚಗಾಗುವುದು ಉತ್ತಮ ಎಂದು ನಾನು ನಿಮಗೆ ಹೊಸದಾಗಿ ಹೇಳಿಕೊಡಬೇಕಾಗಿಲ್ಲ, ಇರಲಿ ಯಾವುದೋ ಒಂದು ನೀರಿನ ಸ್ನಾನ ಮುಗಿದಮೇಲೆ ಕೊನೇಯ ಚೊಂಬಿನ ನೀರು ತಲೆಯಮೇಲೆ ಸುರಿದುಕೊಳ್ಳಿ ಆ ನೀರು ಇಳಿದುಹೋಗಲು ಆರಂಬಿಸುತ್ತಿದ್ದಂತೆ ನೇರವಾಗಿ ನಿಲ್ಲಿ ಮುಖವೂ ಸೆಟೆದುಕೊಳ್ಳುವಷ್ಟು ನೇರ, (ಅಪಾರ್ಥ ಬೇಡ ಮೈಮೇಲೆ ಬಟ್ಟೆ ಇರಬಾರದು) ಈಗ ನಿಮ್ಮ ಎರಡು ಪಾದಗಳನ್ನು ಕೊಂಚ ಅಗಲ ಮಾಡಿ, ಅಂದರೆ ನಿಮ್ಮ ದೇಹದ ಭಾರ ಎರಡು ಕಾಲುಗಳ ಮೇಲಿದ್ದರೂ ನಡು ಮಧ್ಯೆ ಇರುವ ಅನುಭವವಾಗುತ್ತದೆ. ಆಗ ಕುತ್ತಿಗೆಯನ್ನು ಮಾತ್ರಾ ಬಗ್ಗಿಸಿ ನೋಡಿ, ಏನು ಕಾಣಿಸಿತು ಎಂಬುದರ ಮೇಲೆ ನಿಮ್ಮ ಅವಸ್ಥೆ.  ಹೆಬ್ಬೆರಳು ಸಂಪೂರ್ಣ ಕಾಣಿಸುತ್ತದೆ ಎಂದರೆ ನಿಮಗೆ ಯಾವ ಧ್ಯಾನ ಯೋಗ ದ ಅವಶ್ಯಕತೆಯಿಲ್ಲ ಆರೋಗ್ಯ ಸಾಕಷ್ಟಿದೆ.  ಹೆಬ್ಬರಳ ಉಗುರು ಮಾತ್ರಾ ಕೊಂಚ ಕಾಣಿಸುತ್ತಿದೆ ಎಂದರೆ ನಿಮ್ಮ ದೇಹದ ಸಮಸ್ಯೆ ಈಗಷ್ಟೇ ಆರಂಭ. ಇಲ್ಲ ನನಗೆ ಪಾದವೇ ಕಾಣಿಸುತ್ತಿಲ್ಲ ನನ್ನ  ಹೊಟ್ಟೆ  ಮಾತ್ರಾ ಕಾಣಿಸುತ್ತಿದೆ ಎಂದಾದರೆ ನಿಮ್ಮ ಆರೋಗ್ಯ ಹದೆಗೆಟ್ಟಿದೆ ಎಂದರ್ಥ. ಸರಿ ಸರಿ ಸಮಸ್ಯೆ  ಗೊತ್ತಾಯಿತು ಪರಿಹಾರವೇನು ಎಂದಿರಾ. ಸಿಂಪಲ್ ಹಾಗೆಯೇ ಮತ್ತೆ ಕುತ್ತಿಗೆ ನೇರಮಾಡಿ ಕಣ್ಮುಚ್ಚಿ ಹೀಗೆ ಹೇಳಿ " ಮುಂದಿನ ತಿಂಗಳು ಸದರಿ ದಿನಾಂಕದಂದು ನಾನು ಕುತ್ತಿಗೆ ಬಗ್ಗಿಸಿದಾಗ ನನ್ನ ಕಾಲಿನ ಹೆಬ್ಬೆರಳು ಕಾಣುವಾಂತಾಗಲಿ" ಹೀಗೆ ನಿತ್ಯ ಸ್ನಾನ ಮಾಡಿದ ಮೇಲೆ ಬಚ್ಚಲಲ್ಲಿಯೇ ನಿಂತು ಇಷ್ಟೆಲ್ಲಾ ಮಾಡಿ ಹೇಳುತ್ತಾ ಸಾಗಿ. ಒಂದು ತಿಂಗಳ ನಂತರ ಅಚ್ಚರಿ ನೋಡಿ, ನಿಮ್ಮ ಹೊಟ್ಟೆ ವಾಪಾಸು ಹೋಗಿರುತ್ತದೆ ಮತ್ತು ಅದೇನೋ ಅದಮ್ಯ ಉತ್ಸಾಹದ ಚಿಲುಮೆ ಆರಂಭವಾಗುತ್ತದೆ. ಆಗಿಲ್ಲವಾದರೆ ನಿಮ್ಮ ಕ್ರಮದಲ್ಲಿ ತುಸು ವ್ಯತ್ಯಯವಾಗಿದೆ ಅಂತ ಅರ್ಥ. ನನಗೆ ಫೋನಾಯಿಸಿ ಸರಿಪಡಿಸುತ್ತೇನೆ  .

Saturday, December 15, 2012

ಕಲ್ಲು ಭೂಮಿಯಲ್ಲಿ ಕೈ ಹಿಡಿದ ಅನಾನಸ್


ಕೃಷಿ ಯಶಸ್ವಿಯಾಗಲು ಭೂಮಿಯ ಫಲವತ್ತತೆ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಲ್ಯಾಟ್ರೇಟ್ ಕಲ್ಲಿನ ಮೇಲ್ಪದರವುಳ್ಳ ಭೂಮಿಯನ್ನು ಖರೀದಿ ಮಾಡಿ ಕೃಷಿ ಮಾಡುತ್ತೇನೆಂದು ಹೊರಟರೆ ಅಲ್ಲಿ ಫಲ ಸಿಗುವುದು ದುಸ್ತರ ಎಂಬುದು ಎಲ್ಲರ ಭಾವನೆ. ಅದರ ಜತೆ ಮೇಲ್ಗಡೆ ಹೈಟೆನ್ಷನ್ ವಿದ್ಯುತ್ ತಂತಿ ಹಾದು ಹೋಗಿದೆ ಎಂದರೆ ಆ ಭೂಮಿಯ ಗತಿ ಕೇಳುವವರೇ ಇಲ್ಲ. ಕೃಷಿಗಂತೂ ಕಷ್ಟ, ವಿದ್ಯುತ್ ಕಂಬಗಳು ಹಾದುಹೋಗಿರುವುದರಿಂದ ಕೆಂಪು ಕಲ್ಲು ಗಣಿಗಾರಿಕೆಗೂ ಅನುಪಯುಕ್ತ ಎಂಬುದು ಜನಸಾಮಾನ್ಯರ ಅಭಿಪ್ರಾಯ. ಅದು ಆದರೆ ತಾಳಗುಪ್ಪ ಸಮೀಪದ ಹಿರೇಮನೆಯ ಎಂ ಆರ್ ಅಣ್ಣಪ್ಪ ಎಂಬ ರೈತ ವಿಶೇಷ ಧೈರ್ಯ ದಿಂದ ಇಂಥಹ ಅಭಿಪ್ರಾಯದ ಗೊಡ್ಡು ಭೂಮಿ ಖರೀದಿ ಮಾಡಿ ಆರು ವರ್ಷಗಳ ನಿರಂತರ ಶ್ರಮದಿಂದ ಯಶಸ್ಸು ಸಾಧಿಸಿದ್ದಾರೆ.
೨೦೦೬ ನೇ ಇಸವಿಯಲ್ಲಿ ಲೋಕೋಪಯೋಗಿ ಇಲಾಖೆಯ ಕ್ಲಾಸ್ ೩ ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿದ್ದ ಅಣ್ಣಪ್ಪರಿಗೆ ಕೃಷಿ ಮಾಡಬೇಕೆಂಬ ಹುಚ್ಚು ತಲೆಗೆ ಹತ್ತಿತ್ತು. ವಂಶಪಾರಂಪರಿಕವಾಗಿ ಕೃಷಿಕರಾಗಿದ್ದರೂ ಹೊಸತನ್ನು ಸಾಧಿಸಬೇಕೆಂಬ ಹಂಬಲದೊಂದಿಗೆ ಕೃಷಿ ಯೋಗ್ಯ ಭೂಮಿ ಅರಸಲು ಆರಂಭಿಸಿದರು. ಕೃಷಿಯೋಗ್ಯ ಫಲವತ್ತಾದ ಭೂಮಿ ಖರೀದಿ ಅಣ್ಣಪ್ಪನವರ ಜೇಬಿಗೆ ಎಟುಕುವಂತೆ ದೊರಕಲಿಲ್ಲ. ಆಗ ಕಂಡಿದ್ದು ಬಹುಪಾಲು ಕಲ್ಲುತುಂಬಿದ್ದ ಗೊಡ್ಡು ಖುಷ್ಕಿ ಭೂಮಿ. ಮೇಲ್ಗಡೆ ಹಾಯ್ದು ಹೋದ ಹೈ ಟೆನ್ಷನ್ ವಿದ್ಯುತ್ ತಂತಿ. ಹೀಗಿರುವ ಆರೂವರೆ ಎಕರೆ ಖುಷ್ಕಿ ಖರೀದಿ ಮಾಡ ಹೊರಟ ಅಣ್ಣಪ್ಪನವರ ಕೆಲಸಕ್ಕೆ ಹುಚ್ಚು ಎಂದವರು ಬಹಳ ಮಂದಿ. ಆದರೆ ಇಂದು ಅವರತ್ತ ಬೆರಗುಗಣ್ಣಿನಿಂದ ಎಲ್ಲ ನೋಡುವಂತಾಗಿದೆ.
ಲ್ಯಾಟ್ರೇಟ್ ಕಲ್ಲಿನ ಖುಷ್ಕಿ ಖರೀದಿಸಿದ ಅಣ್ಣಪ್ಪ ಗುಡ್ಡದಂಚಿನಲ್ಲಿ ತೆರೆದ ಬಾವಿ ತೆಗೆಯಿಸಿದರು. ಅವರ ಆರಂಭದ ಯತ್ನವೇ ಸಫಲವಾಯಿತು. ೨೫ ಅಡಿ ಆಳದಲ್ಲಿ ೬ ಎಕರೆಗೆ ಬೇಕಾಗುವಷ್ಟು ನೀರು ಸಿಕ್ಕಿತು. ಆವಾಗ ಅವರು ಆಯ್ಕೆ ಮಾಡಿಕೊಂಡಿದ್ದು ಬಾಳೆ ಹಾಗೂ ಅಡಿಕೆ. ಖುಷ್ಕಿ ಭೂಮಿಯಲ್ಲಿ ಬಾಳೆ ಸಾಧಾರಣ ಬೆಳೆ ಬಂದಿತಾದರೂ ಅಡಿಕೆಗೆ ಅಷ್ಟು ಪ್ರಯೋಜನ ಅಲ್ಲ ಜತೆಯಲ್ಲಿ ಮೇಲ್ಗಡೆ ಹೈಟೆನ್ಷನ್ ವಿದ್ಯುತ್ ತಂತಿ ಇರುವ ಕಾರಣ ಎತ್ತರದ ಸಮಸ್ಯೆಯಿಂದಾಗಿ ಅಡಿಕೆಗೆ ಒಗ್ಗದು ಎಂಬುದು ಪ್ರಯೋಗದಿಂದ ಮನದಟ್ಟಾಯಿತು. ಜತೆಯಲ್ಲಿ ಭೂಮಿಯ ಬಹು ಭಾಗ ವಿದ್ಯುತ್ ತಂತಿ ಕಂಬಗಳು ಹಾದು ಹೋಗಿರುವ ಕಾರಣ ಮತ್ತು ಭೂಮಿಯ ಹೆಚ್ಚು ಭಾಗ ಲ್ಯಾಟ್ರೇಟ್ ಕಲ್ಲಿನದಾದ್ದರಿಂದ ಅದಕ್ಕೆ ತಕ್ಕುದಾದ ಬೆಳೆ ಅರಸುವ ಕೆಲಸಕ್ಕೆ ಅಣ್ಣಪ್ಪ ಇಳಿದರು. ಆವಾಗ ಸಿಕ್ಕಿದ್ದು ಅನಾನಸ್.

ಅನಾನಸ್ ಬಂಪರ್ ಬೆಳೆ : ಅನಾನಸ್ ನಾಟಿ ಮಾಡಿ ಹದಿನೆಂಟು ತಿಂಗಳಿಗೆ ಉತ್ತಮ ಬೆಳೆ ಬಂದಿತು. ಭೂಮಿ ಹದ ಮಾಡಲು ಸ್ವಲ್ಪ ಅಧಿಕ ವೆಚ್ಚ ತಗುಲಿದರೂ ಎಕರೆಗೆ ೫ ರಿಂದ ೬ ಟನ್ ಅತ್ಯುತ್ತಮ ಫಸಲು ದೊರಕಲಾರಂಭಿಸಿದಾಗ ಅಣ್ಣಪ್ಪನವರ ಶ್ರಮ ಸಾರ್ಥಕವಾದಂತೆನಿಸಿತು. ಭೂಮಿ ಖರಿದಿಸಿ ಅನಾನಸ್ ಕೃಷಿ ಪ್ರಾರಂಭಿಸಿ ಆರು ವರ್ಷಗಳು ಸಂದಿವೆ. ವರ್ಷವೊಂದಕ್ಕೆ ೨ ಲಕ್ಷ ಹಣ ಅನಾನಸ್ ಮೂಲಕ ಗಳಿಸುತ್ತಿರುವ ಅಣ್ಣಪ್ಪ ಖರ್ಚು ಕಳೆದು ೧ ಲಕ್ಷ ಮಿಗಿಸುತ್ತಿದ್ದಾರೆ. ಕಳೆದ ವರ್ಷದಿಂದ ಅನಾನಸ್ ಬೆಳೆಯ ನಡುವೆ ಅತ್ತರಕ್ಕೆ ಬೆಳೆಯದ ಪೇರಲೆ ಹಲಸು ಮುಂತಾದ ಹಣ್ಣಿನ ಗಿದಗಳನ್ನು ನಾಟಿಮಾಡಿದ್ದಾರೆ. ಅನಾನಸ್ ಆರ್ಥಿಕ ಲಾಭ ತರುವ ಬೆಳೆಯಾದರೂ ನಿರಂತರ ಕೂಲಿಯಾಳುಗಳನ್ನು ಅವಲಂಬಿಸುವುದರಿಂದ ಬಂಡವಾಳ ವಾಪಾಸು ಬಂದನಂತರ ಹಣ್ಣಿನ ಬೆಳೆಗಳಿಗೆ ಹೊರಳುವುದು ಅಣ್ಣಪ್ಪನವರ ಚಿಂತನೆ.

ನಿವೃತ್ತಿಯಿಲ್ಲದ ಜೀವನ: ಕೃಷಿಕನ ಜೀವನ ಸುಂದರ ಎನ್ನುವ ಅಣ್ಣಪ್ಪ ಶಾಂತಿ ನೆಮ್ಮದಿ ಇರುವುದು ಹಾಗೂ ನಿವೃತ್ತಿಯ ಚಿಂತೆ ಕಾಡದಿರುವುದು ಕೃಷಿಕರಿಗೆ ಮಾತ್ರಾ ಎನ್ನುತ್ತಾರೆ. ಗಿಡಗಳ ನಡುವೆ ನಾವು ನಂಟು ಬೆಳೆಸಿಕೊಂಡರೆ ಅವೂ ಮಾತಾನಾಡುತ್ತವೆ ಆದರೆ ಅದನ್ನು ಗಮನಿಸುವ ಮನಸ್ಸಿರಬೇಕು ಎನ್ನುತ್ತಾರೆ. ಮೇಲೆ ತಂತಿ ಕೆಳಗೆ ಕಲ್ಲು ನಡುವೆ ಅಣ್ಣಪ್ಪ ನವರ ಶ್ರಮದಿಂದಾಗಿ ಭೂಮಿ ಇಂದು ಹಸಿರಿನಿಂದ ನಳನಳಿಸುವಂತಾಗಿದೆ. ಶ್ರಧ್ದೆ ಹಾಗೂ ತಾಳ್ಮೆ ಇದ್ದರೆ ಭೂಮಿ ಖಂಡಿತಾ ಬರಡಲ್ಲ ಹಾಗೂ ಬರಡು ಭೂಮಿ ಎಂಬುದು ನಮ್ಮ ಮಾನಸಿಕ ಅವಸ್ಥೆ, ಮನಸ್ಸನ್ನು ಹಸಿರುಗೊಳಿಸಿದರೆ ಎಲ್ಲೆಡೆ ಹಸಿರು ಕಾಣಬಹುದು ಎಂಬುದು ಅಣ್ಣಪ್ಪ ನವರ ಅನುಭವವೇದ್ಯ ಮಾತುಗಳು.

ಪೋನ್:೯೩೭೯೪೧೨೦೦೩

Friday, December 7, 2012

ಶಾಲೆಯಲ್ಲೊಂದು "ಶ್ವಾನ" ಪ್ರಾರ್ಥನೆ




ಮಕ್ಕಳ ಶಾಲೆಗಳು ಆರಂಭವಾಗುವುದು ಪ್ರಾರ್ಥನೆಯಿಂದ. "ಸ್ವಾಮಿ ದೇವನೆ ಲೋಕಪಾಲನೆ.." ಜಯ ಭಾರತ ಜನನಿಯೆ ತನುಜಾತೆ" ಜನಗಣಮನ ಎಂಬ ರಾಷ್ಟ್ರ ಗೀತೆ ಇರಬಹುದು ಒಟ್ಟಿನಲ್ಲಿ ಆರಂಭ ಪ್ರಾರ್ಥನೆಯಿಂದಲೆ. ಇದು ಎಲ್ಲ ಶಾಲೆಯ ಆರಂಭದ ಕ್ಷಣಗಳು. ಘಂಟೆ ಭಾರಿಸಿದ ತಕ್ಷಣ ಸಾಲಿನ ಸರತಿಯಲ್ಲಿ ನಿಲ್ಲುವ ಮಕ್ಕಳು ತಮ್ಮದೇ ಆದಂತಹ ಮುದ್ದು ಭಾಷೆಯಲ್ಲಿ ಹೇಳುವ ಸಾಲುಗಳು ಎಲ್ಲರ ಗಮನ ಸೆಳೆಯುತ್ತದೆ. ಅವೆಲ್ಲ ಸಹಜ ಬಿಡಿ, ಆದರೆ ಕಳೆದ ಎರಡು ವರ್ಷಗಳಿಂದ ಕಾರ್ಗಲ್ ಸಮೀಪದ ಲಿಂಗನಮಕ್ಕಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶೇಷ ನಡೆಯುತ್ತಿದೆ ಅದು ಶ್ವಾನ ಪ್ರಾರ್ಥನೆ.
ಇದು ವಿಶೇಷವಾದಂತಹ ಘಟನೆ. ಬೆಳಿಗ್ಗೆ ಹತ್ತು ಗಂಟೆಗೆ ಸರಿಯಾಗಿ ಶಾಲಾಗಂಟೆ ಭಾರಿಸುತ್ತಿದ್ದಂತೆ ಎರಡು ನಾಯಿಗಳು ಶಾಲೆಯ ಮಕ್ಕಳ ನಡುವೆ ದಾರಿ ಮಾಡಿಕೊಂಡು ಶಾಲೆಯ ಒಳ ಆವರಣ ಪ್ರವೇಶಿಸುತ್ತವೆ. ಮುಖ್ಯೋಪಾಧ್ಯಾಯರಾದ ಬಸವರಾಜ್ ಕ್ಲಾಸ್ ಲೀಡರ್ ಹುಡುಗನನ್ನು ವೇದಿಕೆಗೆ ಕರೆದು ಮಕ್ಕಳ ಪ್ರಾರ್ಥನೆಗೆ ಕಾಷನ್ ನೀಡಲು ಹೇಳುತ್ತಿದ್ದಂತೆ ಸೋನು ಹಾಗು ಗುಗ್ಗು ಎಂಬ ಎರಡು ಶ್ವಾನಗಳೂ ಕೂಡ ವೇದಿಕೆಯನ್ನು ಏರುತ್ತವೆ. ಮಕ್ಕಳು ಪ್ರಾರ್ಥನೆ ಶುರು ಮಾಡಿದ ಒಂದೆರಡು ಕ್ಷಣದ ನಂತರ ಸೋನು ಎಂಬ ಶ್ವಾನವೂ ತನ್ನದೇ ಆದ ಸ್ವರದಲ್ಲಿ ಪ್ರಾರ್ಥನೆಗೆ ತೊಡಗುತ್ತದೆ. ಶ್ವಾನ ಪ್ರಾರ್ಥನೆಯೆಂದರೆ ಕೇವಲ ನಾಯಿಯ ಊಳಿಡುವಿಕೆ ಅಲ್ಲ ಸ್ವಲ್ಪ ಮಟ್ಟಿಗಿನ ದನಿಯ ಏರಿಳಿತವನ್ನೂ ಮಾಡುತ್ತದೆ ಸೋನು ಎಂಬ ಶ್ವಾನ. ಗುಗ್ಗು ಎಂಬ ಶ್ವಾನ ಹಿರಿಯಣ್ಣ ಸೋನುವಿಗೆ ಸಾಥ್ ನೀಡುತ್ತದೆ. ರಾಷ್ಟಗೀತೆ ಮುಗಿದು ವರ್ತಮಾನ ಪತ್ರಿಕೆ ಓದಲು ಮಕ್ಕಳು ಶುರುವಿಟ್ಟುಕೊಂಡನಂತರ ಎರಡು ಶ್ವಾನಗಳೂ ವೇದಿಕೆಯಿಂದ ನಿರ್ಗಮಿಸುತ್ತವೆ. ಕೆಲಕಾಲ ಮಕ್ಕಳ ಸಾಲಿನ ನಡುವೆ ಓಡಾಡಿ ನಂತರ ಬಿಸಿಯೂಟ ಕ್ಕೆ ಮತ್ತೆ ಹಾಜರ್, ಅಲ್ಲಿಯತನಕ ಶಾಲೆಯ ಆವರಣದಲ್ಲಿ ಸುತ್ತಾಡುತ್ತಲೋ ಲಿಂಗನಮಕ್ಕಿಯ ಬೀದಿ ಸುತ್ತುತ್ತಲೋ ಇರುತ್ತವೆ ಎನ್ನುತ್ತಾರೆ ಶಾಲಾ ಶಿಕ್ಷಕಿ ಸಾವಿತ್ರಿ ಅಶೋಕ್. ಇದು ಯಾವ ಜನ್ಮದ ಋಣವೋ ಗೊತ್ತಿಲ್ಲ ಎನ್ನುತ್ತಾರೆ ಬಸವರಾಜ್. ಕಳೆದ ಎರಡು ವರ್ಷದಿಂದ ನಿರಂತರವಾಗಿ ಪ್ರಾರ್ಥನೆಯಲ್ಲಿ ತೊಡಗಿಕೊಂಡಿರುವ ಈ ಶ್ವಾನ ಜೋಡಿಯ ವಿಚಿತ್ರ ವರ್ತನೆ ಅರ್ಥವಾಗುವುದು ಕಷ್ಟಕರ.

ಬಸವರಾಜ್ ಫೋನ್:೭೭೯೫೨೨೮೨೬೧

Monday, December 3, 2012

ಬದುಕನ್ನು ಬಂಗಾgವಾಗಿಸಿದ ವೀಳ್ಯದೆಲೆ


"ಏಲೆ ಅಡಿಕೆ ಸುಣ್ಣ ಸೇರಿದರೆ ಕೆಂಬಣ್ಣ" ಎಂಬ ಹಾಡನ್ನು ನೀವು ಕೇಳಿರುತ್ತೀರಿ. ಗೋಪಾಲಕೃಷ್ಣ ಅಡಿಗರು ತಮ್ಮ ಭಾಷಣವೊಂದರಲ್ಲಿ "ಅಡಿಕೆ ತಿಂದರೆ ಸೊಕ್ಕು ಬರುತ್ತದೆ ಅಂತ ಕೇಳಿದ್ದೆ ಆದರೆ ಬೆಳೆದರೂ ಬರುತ್ತದೆ ಎಂದು ಗೊತ್ತಿರಲಿಲ್ಲ" ಎಂಬ ಮಾತನ್ನು ಹೇಳಿದ್ದರು. ಅಡಿಕೆಗೆ ಒಳ್ಳೆಯ ದರ ಬಂದಾಗ ಹೇಳಿದ ಮಾತದು. ಇನ್ನು ಸುಣ್ಣವೆಂಬ ಬಿಳೀ ಬಣ್ಣದ ವಿಷಯ ಎಲ್ಲರಿಗೂ ತಿಳಿದದ್ದೇ. ಈ ಮೂರನ್ನೂ ನಂಬಿ ಬದುಕುತ್ತಿರುವ ಕುಟುಂಬಗಳ ಸಂಖ್ಯೆ ವಿಫುಲವಾಗಿದೆ. ಆದರೆ ೭೦ ವರ್ಷಗಳಿಂದ ವೀಳ್ಯದೆಲೆಯನ್ನೇ ನಂಬಿ ಬದುಕುಬಂಗಾರವನ್ನಾಗಿಸಿಕೊಂಡ ಕುಟುಂಬಗಳು ತುಂಬಾ ಅಪರೂಪ. ಅಂತಹ ಕುಟುಂಬ ತಾಳಗುಪ್ಪ ಸಮೀಪದ ಕೆರೇಕೈ ಎಂ ಶ್ರೀಪಾದರವರದ್ದು.

ಕಳೆದ ಎಪ್ಪತ್ತು ವರ್ಷಗಳಿಂದ ನಿರಂತರವಾಗಿ ವೀಳ್ಯದೆಲೆ ಬೆಳೆದು, ಅವುಗಳನ್ನು ಜೋಡಿಸಿ ತಾಳಗುಪ್ಪ ಹಾಗೂ ಸಾಗರದ ಸಂತೆ ಪೆಟೆಯಲ್ಲಿ ಕುಳಿತು ಮಾರಾಟ ಮಾಡಿ ಬಂದ ಹಣದಿಂದ ಸುಂದರ ಬದುಕು ಕಟ್ಟಿಕೊಂಡ ಕುಟುಂಬದ ಎರಡನೇ ತಲೆಮಾರಿನ ವ್ಯಕ್ತಿ ಶ್ರೀಪಾದ. ಶ್ರೀಪಾದರವರ ತಂದೆ ಮಹಬಲೇಶ್ವರಯ್ಯ ೧೯೩೫ ನೇ ಇಸವಿಯಲ್ಲಿ ವೀಳ್ಯದೆಲೆ ಬೆಳೆಯನ್ನು ಆಯ್ಕೆ ಮಾಡಿಕೊಂಡರು. ಆಣೆ ಪಾವಲಿಗಳ ಅಂದಿನ ಕಾಲದಲ್ಲಿ ಅಡಿಕೆಗೆ ಸೂಕ್ತ ಮಾರುಕಟ್ಟೆ ಇಲ್ಲದ ಹಾಗೂ ನಿಯಂತ್ರಣಕ್ಕೆ ಬಾರದ ವ್ಯಾಪಕ ಕೊಳೆರೋಗದ ಕಾರಣ ಹಾಗೂ ಅತೀ ಸಣ್ಣ ಹಿಡುವಳಿಯ ಕಾರಣದಿಂದ ಅವಿಭಕ್ತ ಕುಟುಂಬದ ಪೋಷಣೆಗೆ ಬೇರೆಯ ಆದಾಯ ಮೂಲವನ್ನು ಹುಡುಕಿಕೊಳ್ಳುವುದು ಮಹಬ್ಜಲೇಶ್ವರಯ್ಯ ನವರಿಗೆ ಅನಿವಾರ್ಯ ವಾಗಿತ್ತು. ಅಂದು ಅವರು ಆಯ್ಕೆ ಮಾಡಿಕೊಂಡಿದ್ದು ವಿಳ್ಯದೆಲೆ. ಮನೆಯ ತೋಟದಲ್ಲಿ ಬೆಳೆದ ವೀಳ್ಯದೆಲೆಯನ್ನು ಕೊಯ್ದು ಜೊಡಿಸಿ ಆರು ಕಿಲೋಮಿಟರ್ ದೂರದ ತಾಳಗುಪ್ಪದ ಸಂತೆಗೆ ತಲೆಹೊರೆಯ ಮೇಲೆ ಹೊತ್ತೊಯ್ದು ಸಂಜೆಯ ತನಕ ಸಂತೆಯ ಪೇಟೆಯಲ್ಲಿ ಕುಳಿತು ಮಾರಾಟ ಮಾಡಿ ಬಂದ ಹಣದಿಂದ ಸಂಸಾರ ತೂಗಿಸುತ್ತಿದ್ದರು. ಕಾಲಚಕ್ರ ಉರುಳಿದಂತೆ ವಯೋಮಾನದ ಕಾರಣದಿಂದ ಮಹಭಲೇಶ್ವರಯ್ಯ ವೀಳ್ಯದೆಲೆಯ ವೃತ್ತಿಯಿಂದ ನಿವೃತ್ತರಾದರು. ಐದು ಜನ ಗಂಡುಮಕ್ಕಳಲ್ಲಿ ನಾಲ್ಕು ಜನ ಬೇರೆ ಊರುಗಳಿಗೆ ಜೀವನಕ್ಕಾಗಿ ಹೋಗಿದ್ದರಿಂದ ಅಲ್ಪ ಹಿಡುವಳಿಯ ಸಂಸಾರದ ನೊಗ ಶ್ರಿಪಾದರವರ ಹೆಗಲಮೇಲೆ ಬಿತ್ತು. ತಂದೆಯವರ ಕಾಲದಲ್ಲಿಯೇ ಅಲ್ಪ ಹಿಡುವಳಿ ಇನ್ನು ಅದರಲ್ಲಿ ಐದು ಹಿಸ್ಸೆ ಮಾಡಿದರೆ ಜೀವನ ನಿರ್ವಹಿಸುವ ವಿಧಾನದ ಬಗ್ಗೆ ಚಿಂತಿಸಿದ ಶ್ರೀಪಾದ ತಂದೆಯವರ ವೃತ್ತಿಗೆ ಇನ್ನಷ್ಟು ವಿಸ್ತಾರ ನಿಡುವ ಆಲೋಚನೆಗೆ ಇಳಿದರು. ಇಪ್ಪತ್ತು ವರ್ಷದ ಹಿಂದೆ ಅವರು ತೆಗೆದುಕೊಂಡ ನಿರ್ಧಾರ ಇಂದು ಅವರನ್ನು ಆರ್ಥಿಕ ಸ್ವಾವಲಂಬಿಯನ್ನಾಗಿಸಿದೆ.
ಶ್ರಿಪಾದವರಿಗೆ ೩೦ ಗುಂಟೆ ಜಮೀನು, ಅದರಲ್ಲಿ ಐದು ಭಾಗವಾದರೆ ಇವರದ್ದು ಆರು ಗುಂಟೆ. ಇವೆಲ್ಲಾ ಲೆಕ್ಕಾಚಾರವನ್ನು ಮಾಡಿದ ಅವರು ವಿಳ್ಯದೆಲೆಯ ವ್ಯಾಪಾರವನ್ನು ತಾಳಗುಪ್ಪ ಸಂತೆಯಿಂದ ಸಾಗರದ ಸಂತೆಗೂ ವಿಸ್ತರಿಸುವ ನಿರ್ಧಾರ ಕೈಗೊಂಡರು. ಅಕ್ಕಪಕ್ಕದ ತೊಟದ ಕೃಷಿಕರಿಗೂ ವೀಳ್ಯದೆಲೆಬಳ್ಳಿ ಅಡಿಕೆ ಮರಕ್ಕೆ ಹಚ್ಚುವ ಹುರುಪು ನೀಡಿ, ವೀಳ್ಯದೆಲೆ ಕೊಯ್ದು ಮಾರಾಟದ ಹೊಣೆಯನ್ನು ತಾವು ಹೊತ್ತುಕೊಂಡರು. ತಮ್ಮ ತೋಟದಲ್ಲಿ ೧ ರಿಂದ ೨ ಸಾವಿರ ಸಿಗುತ್ತಿದ್ದ ವೀಳ್ಯದೆಲೆ ಹತ್ತು ಸಾವಿರಕ್ಕೆ ಏರಿತು. ಅಲ್ಲಿಂದ ನಿಧಾನವಾಗಿ ಇಪ್ಪತ್ತು ಸಾವಿರದ ಸಂಖ್ಯೆ ತಲುಪಿತು. ಅದರಿಂದಾಗಿ ಶನಿವಾರ ತಾಳಗುಪ್ಪ ಸಂತೆಗೆ ಸೀಮಿತವಾಗಿದ್ದ ಶ್ರೀಪಾದ ಗುರುವಾರದ ಸಾಗರದ ಸಂತೆಗೂ ಲಗ್ಗೆ ಇಟ್ಟರು. ಆದಾಯ ಹೆಚ್ಚುತ್ತಿದ್ದಂತೆ ಕೆಲಸದ ಒತ್ತಡವೂ ಹೆಚ್ಚಿತು. ೩೦ ಗುಂಟೆ ಜಮೀನಿನಲ್ಲಿ ಐದು ಪಾಲು ಮಾಡುವದಕ್ಕಿಂತ ಇನ್ನೆರಡು ಎಕರೆ ತೋಟ ಮಾಡಿದರೆ ಹೇಗೆ ಎಂಬ ಆಲೋಚನೆಗೆ ಪುಷ್ಠಿ ನೀಡಿ ಅನುಷ್ಠಾನ ಗೊಳಿಸಿದ ಶ್ರೀಪಾದ ಎಲ್ಲ ಸಹೋದರರಿಗೂ ತಮ್ಮ ಶ್ರಮದಿಂದ ೩೦ ಗುಂಟೆ ತೋಟ ಮಾಡಿಕೊಟ್ಟರು. ಅಲ್ಲಿಗೆ ತಮ್ಮ ಆರ್ಥಿಕ ಭದ್ರತೆಯ ಜತೆ ಸಹೋದರರ ಆರ್ಥಿಕ ಭದ್ರತೆಗೂ ವೀಳ್ಯದೆಲೆಯನ್ನು ಆಧರಿಸಿದರು.
ನೂರು ವೀಳ್ಯದೆಲೆಯ ಒಂದು ಕಟ್ಟಿಗೆ ಇಪ್ಪತ್ತು ವರ್ಷದ ಹಿಂದೆ ೨ ರೂಪಾಯಿ ಇಂದು ಇಪ್ಪತ್ತು ರೂಪಾಯಿ. ವಾರವೊಂದಕ್ಕೆ ಸಾಗರ ಹಾಗೂ ತಾಳಗುಪ್ಪದ ಎರಡು ಸಂತೆಯಿಂದ ಐದು ಸಾವಿರ ರೂಪಾಯಿಗಳನ್ನು ತಿಂಗಳಿಗೆ ಇಪ್ಪತ್ತು ಸಾವಿರ ರೂಪಾಯಿಗಳನ್ನು ಸಂಪಾದಿಸುವ ಅವರು, ಖರ್ಚು ವೆಚ್ಚ ಕಳೆದು ಹದಿನೈದು ಸಾವಿರ ಮಿಗಿಸುತ್ತಾರೆ. ಈ ತರಹದ ಅವರ ನಿರಂತರ ಶ್ರಮದ ಪ್ರತಿಫಲ ಈಗ ಕಣ್ಣೆದುರಿಗಿದೆ. ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡಿದ್ದಾರೆ, ಸೈಕಲ್ ನಿಂದ ಆರಂಭವಾದ ಅವರ ವೇಗ ಇಂದು ಮೋಟರ್ ಸೈಕಲ್ ಗೆ ಏರಿದೆ. ಗುಡಿಸಲ ಮನೆಯಿಂದ ಸುವ್ಯವಸ್ಥಿತ ಸಕಲ ಸೌಲಭ್ಯದ ಮನೆ ಇದೆ. ಇವಕ್ಕೆಲ್ಲಾ ಪತ್ನಿ ಗೀತಾ ಹಾಗು ಮಕ್ಕಳು ಮತ್ತು ತಾಯಿ ವೀಳ್ಯದೆಲೆ ಜೋಡಿಸುವಂತಹ ಕೆಲಸಕ್ಕೆ ತಮ್ಮನ್ನು ತೊಡಗಿಸಿಕೊಂಡಿದ್ದೂ ಕಾರಣ ಎನ್ನುತ್ತಾರೆ ಶ್ರೀಪಾದ.
ಲಕ್ಕವಳ್ಳಿ,ಹಾಗೂ ನಾಗವಳ್ಳಿ ತಳಿಯ ವೀಳ್ಯದೆಲೆ ಮಲೆನಾಡಿನ ಅಡಿಕೆ ತೋಟಕ್ಕೆ ಸೂಕ್ತ ಎನ್ನುವ ಶ್ರೀಪಾದ, ಮಾರುಕಟ್ಟೆಯ ಏರಿಳಿತಗಳಿಗೆ ಚಿಂತಿಸದೆ ನಿರಂತರ ಕೆಲಸದಲ್ಲಿ ನಂಬಿಕೆ ಇಟ್ಟರೆ ಪ್ರತಿಫಲ ಖಂಡಿತ ಎನ್ನುತ್ತಾರೆ. ತಾಳಗುಪ್ಪ ಹಾಗೂ ಸಾಗರದ ಸಂತೆಯಲ್ಲಿ "ಎಲೆಭಟ್ರು" ಎಂದು ಜನಜನಿತವಾಗಿರುವ ಇವರು ಇರುವ ಜಾಗದಲ್ಲಿಯೇ ಆದಾಯ ನಿರ್ಮಿಸಿಕೊಂಡು ಬದುಕು ಕಟ್ಟಿಕೊಂಡು ಬಾಳು ಬಂಗಾರವಾಗಿಸಿಕೊಂಡವರ ಸಾಲಿಗೆ ಸೇರಿ ಉದ್ಯೋಗ ವಿಲ್ಲ ಎಂದು ಅಲೆಯುವ ಜನರಿಗೆ ಮಾರ್ಗದರ್ಶಿಯಾಗಿದ್ದಾರೆ

Tuesday, November 6, 2012

ಸಿಕ್ಕಿತೊಂದು ನವಿಲು ಮರಿ

ನವಿಲು ಎಂದಾಕ್ಷಣ ನಾಟ್ಯದ ನೆನಪು ಸಹಜ. ರಾಷ್ಟ್ರಪಕ್ಷಿ ನವಿಲಿನ ಕುರಿತು ವರ್ಣಿಸಿದ ಕವಿಗಳು ಹಲವಾರು. "ಗುಡುಗುಡು ಶಬ್ಧವು ಕೇಳಿದ ಮಾತ್ರಕೆ ಮಯೂರ ನಾಟ್ಯವನಾಡೀತೆ..? ಎಂದು ಕವಿಯೊಬ್ಬ ಮಯೂರ ನರ್ತಿಸಲು ಪ್ರಕೃತಿಯ ಗುಡುಗು ಸಿಡಿಲುಗಳೇ ಬೇಕು ಎಂಬ ಅರ್ಥದಲ್ಲಿ ವರ್‍ಣಿಸಿ ನವಿಲಿನ ಮಟ್ಟ ಹೆಚ್ಚಿಸಿದ್ದಾನೆ. ಹೀಗೆ ಹತ್ತು ಹಲವು ಹೆಗ್ಗಳಿಕೆಯನ್ನು ಗಮನಿಸಿ ನಾವು ಅದನ್ನು ರಾಷ್ಟ್ರಪಕ್ಷಿಯನ್ನಾಗಿಸಿ ಯಾಗಿದೆ. ಖೇದಕರ ಸಂಗತಿಯೆಂದರೆ ಕದ್ದುಬೇಟೆಯಾಡುವವರ ಈ ಚಂದದ ಪಕ್ಷಿ ನಿರಂತರ ಬಲಿಯಾಗುತ್ತಲೇ ಇವೆ. ಗರಿಯಿರುವ ಗಂಡು ನವಿಲಿಗೆ ಕಳ್ಳರು ಗುಂಡು ಹಾಕುವುದಿಲ್ಲ ಕಾರಣ, ಅದರ ಗರಿಗಳನ್ನು ಮುಚ್ಚಿಹಾಕುವುದು ಸ್ವಲ್ಪ ಕಷ್ಟಕರ ಕೆಲಸ, ಆದರೆ ಕೋಳಿಯಂತಿರುವ ಹೆಣ್ಣು ನವಿಲನ್ನು ರಾತ್ರಿ ಕದ್ದು ಬೇಟೆಯಾಡುತ್ತಾರೆ. ಇದರಿಂದಾಗಿ ಹೆಣ್ಣು ನವಿಲಿನ ಸಂತತಿ ನಿಧಾನಗತಿಯಲ್ಲಿ ಕ್ಷೀಣಿಸುತ್ತಿದೆ. ಆದರೂ ಪ್ರಕೃತಿ ಮಾನವನ ಹಲ್ಲೆಯನ್ನೂ ತಪ್ಪಿಸಿ ನವಿಲಿನ ಸಂತತಿಯನ್ನು ಕಾಪಾಡುತ್ತಿದೆ.


ನವೆಂಬರ್ ತಿಂಗಳಿನಿಂದ ಡಿಸೆಂಬರ್ ಅಂತ್ಯದವರೆಗೆ ನವಿಲು ಮೊಟ್ಟೆಗಳು ಒಡೆದು ಮರಿ ಆಚೆಬರುತ್ತವೆ. ತಾಯಿ ಮೊಟ್ಟೆಗಳನ್ನು ಜತನವಾಗಿ ಕಾಪಾಡಿಕೊಂಡು ಬರುತ್ತವೆ. ಮರಿಹೊರಬಂದ ನಂತರ ತನ್ನೊಂದಿಗೆ ಕರೆದುಕೊಂಡು ಹೋಗುತ್ತವೆ. ಆದರೆ ಮೊಟ್ಟೆಗಳನ್ನು ಒಂದೆಡೆ ಇಟ್ಟು ಆಹಾರಕ್ಕಾಗಿ ಹೊರಗೆ ಹೋದ ತಾಯಿ ಅಕಸ್ಮಾತ್ ಕಳ್ಳಬೇಟೆಗಾರರ ಗುಂಡಿಗೆ ಬಲಿಯಾದಾಗ ಮೊಟ್ಟೆಯಿಂದ ಹೊರಬಂದ ಮರಿಗಳ ಪಾಡು ತುಸು ಕಷ್ಟಕರ. ಈ ನವಿಲು ಮರಿಯ ಸ್ಥಿತಿಯೂ ಹಾಗೆಯೇ ಆಗಿದೆ. ತಾಳಗುಪ್ಪ ಸಮೀಪ ಹಿರೇಮನೆ ಅಸಳ್ಳೆ ಕೃಷ್ಣಮೂರ್ತಿ ಎಂಬುವವರ ತೋಟದಲ್ಲಿ ಮೊಟ್ಟೆಯಿಟ್ಟು ಆಹಾರವನ್ನರಸಲು ಹೋದ ಹೆಣ್ಣು ನವಿಲು ವಾಪಾಸ್ ಬರಲೇ ಇಲ್ಲ. ತೋಟಕ್ಕೆ ಹೋದ ಕೃಷ್ಣಮೂರ್ತಿಯವರ ಕಣ್ಣಿಗೆ ಬಿದ್ದ ಈ ಅನಾಥಮರಿಗಳನ್ನು ಅಲ್ಲಿಯೇ ಬಿಟ್ಟು ಹಾವುಗಳಿಗೆ ಆಹಾರವಾಗುವುದನ್ನು ತಪ್ಪಿಸುವ ಮನಸ್ಸು ಮಾಡಿದರು. ನವಿಲು ಮರಿಯನ್ನು ಜತನವಾಗಿ ತಂದು ರಶ್ಮಿಯ ಮನೆಗೆ ಕೊಟ್ಟರು. ಅಲ್ಲಿ ಈಗ ನವಿಲು ಸುರಕ್ಷಿತವಾಗಿ ಬೆಳೆಯುತ್ತಿದೆ. ದೊಡ್ಡದಾದಮೇಲೆ, ತನ್ನ ಆಹಾರ ತಾನು ಹುಡುಕಿಕೊಳ್ಳುವಷ್ಟು ಬೆಳೆದಮೇಲೆ ಕಾಡಿಗೆ ಬಿಡಬೇಕು ಎನ್ನುತ್ತಾರೆ ರಶ್ಮಿಯ ತಂದೆ ರಾಮಕೃಷ್ಣ. ಆದರೆ ಸದ್ಯಕ್ಕಂತೂ "ಅನಾಥ ಮಗುವಾದೆ" ಎನ್ನುತ್ತಿದೆ ನಮ್ಮ ರಾಷ್ಟ್ರಪಕ್ಷಿ. ಆದರೂ ಬೆಚ್ಚಗಿದೆ ಎನ್ನುವುದು ಸಮಾಧಾನಕರ.

Friday, November 2, 2012

ಮಾಡಲಿ ಬಿಡಿ ಅವಕ್ಕೂ ನೆನಪುಗಳು ಬೇಕಲ್ಲ....!

"ಬಾಲ್ಯ" ವಾವ್ ಅದೆರಡು ಅಕ್ಷರದಲ್ಲಿಯೇ ಮಜ ಇದೆ. ಬಡತನವಿರಲಿ, ಸಿರಿತನವಿರಲಿ ಇರಲಿ ಇಲ್ಲದಿರಲಿ ಬಾಲ್ಯ ಬಾಲ್ಯವೇ. ಅಲ್ಲೊಂದಿಷ್ಟು ಸುಮಧುರ ನೆನಪುಗಳು ನಮ್ಮ ನೆನಪಿನ ಕೋಶದಲ್ಲಿ ದಾಖಲಿಸುತ್ತವೆ. ಅದನ್ನು ಬೇಕೆಂದಾಗ ನೆನಪಿಗೆ ತಂದುಕೊಂಡು ಮಜ ಅನುಭವಿಸಬಹುದು. ಹಿಡಿದ-ಹಿಡಿಯದ ಮೀನು, ಕೆಸರಾಟ, ಮರಳು ಗುಡ್ಡೆಯಲ್ಲಿ ಗುಬ್ಬಿ ಹುಳ ಅರಸಿದ್ದು, ಗುಮ್ಮ ಅಂತ ಹೆದರಿಕೊಂಡಿದ್ದು, ಪಾಪದ ಕೆಂಪು ಪೀಟಿಯ ಅಂಡಿಗೆ ದಾರ ಕಟ್ಟಿ ಹೆಲಿಕ್ಯಾಪ್ಟರ್ ಅಂತ ಆಟ ಆಡಿದ್ದು, ಅದೊಂದು ಜೀವಿ ಎಂಬ ಅರಿವಿಲ್ಲದೇ ಅದಕ್ಕೆ ಹಿಂಸೆ ನೀಡಿ ಮಜ ಅನುಭವಿಸಿದ್ದು, ಹಸಿರುಳ್ಳೆ ಹಾವಿನ ಬಾಲ ಹಿಡಿದು ಗರಗರ ತಿರುಗಿಸಿ ಹಾರಿ ಬಿಟ್ಟಿದ್ದು, ಬಸ್ಸಿಗೆ ಕಲ್ಲು ಹೊಡೆದದ್ದು, ಹೀಗೆ ಒಂದಾ ಎರಡಾ..? ಸಾಲು ಸಾಲು ನೆನಪುಗಳು ಮುಗುಳ್ನಗೆ ಮೂಡಲು ಸಹಕರಿಸುತ್ತವೆ. ಅದು ಸರಿ ಅದೇ ತರಹದ ಹುಡುಗಾಟಿಕೆಯನ್ನು ಈಗ ನಿಮ್ಮ ಮಕ್ಕಳು ಮಾಡಲು ಹೊರಟಿದ್ದಾರೆ, ಮತ್ತೇಕೆ ಅವನ್ನು ಗದರಿಸುತ್ತೀರಿ, ಮಾಡಲಿ ಬಿಡಿ ಅವಕ್ಕೂ ನೆನಪುಗಳು ಬೇಕಲ್ಲ....!

Wednesday, September 19, 2012

ಶುಂಠಿ ಬೆಲ್ಲ ಎಂಬ ಮಜಕೂರ್ ಬ್ಲಾಗ್

ಸತ್ತ ಮೇಲೆ ಸಿಕ್ಕುವ ಸ್ವರ್ಗಕ್ಕಾಗಿ ಇಂದಿನ ಬಾಳನ್ನು ನರಕಸದೃಶವಾಗಿ ಮಾಡಿಕೊಳ್ಳುವುದು ಬೇಡ. ಇಂದಿನ ಇರುವಿಕೆಯನ್ನು ತಿಳಿವಳಿಕೆಯಿಂದ ತಿದ್ದಿಕೊಂಡರೆ ಇದೇ ಸ್ವರ್ಗ .


ಪ್ರತಿಯೊಬ್ಬನಿಗೂ ಒಂದು ಬಾಳಿನ ತತ್ವ ಬೇಕು. ಮಾನವ ಜೀವನವನ್ನು ಇಂದಿನಕಿಂತಲೂ ಹೆಚ್ಚು ಸುಗಮವನ್ನಾಗಿ, ಆದರ್ಶಪ್ರಾಯವನ್ನಾಗಿ ಮಾಡುವಂತಹ ತತ್ವ ಬೇಕು.

ದೇವನಿಗೂ ಒಂದು ಆತ್ಮಗೌರವ ಎಂಬುದಿದೆ. ಬೇರಾವ ಪ್ರಾಣಿಗೂ ಕೊಡಲಾರದಂತಹ ಬುದ್ಧಿಶಕ್ತಿ ಒಂದನ್ನು ದೇವನು ಮಾನವನಿಗೆ ಮಾತ್ರ ಇತ್ತಿದ್ದಾನೆ. ಇದರ ಸದುಪಯೋಗ ಮಾಡದಿರುವುದೇ ದೈವದ್ರೋಹ.
ದೇವನು ಸರ್ವಾಂತರ್ಯಾಮಿ ಮತ್ತು ಪ್ರತಿಯೊಬ್ಬರಲ್ಲಿಯೂ ಇದ್ದಾನೆ ಎಂಬ ವೇದವಾಕ್ಯವನ್ನು ಎಲ್ಲ ಸೊಸೆಯರೂ ಒಪ್ಪುತ್ತಾರೆ. ಆದರೆ ಎಲ್ಲದರಲ್ಲಿಯೂ ಇರುವ ಅದೇ ದೇವರು ಅದೇಕೆ ತನ್ನ ಅತ್ತೆಯಲ್ಲಿ ಇರುವುದಿಲ್ಲ? ಅತ್ತೆಯೊಡನೆ ಹಣಾಹಣಿ ಜಗಳವಾಡುತ್ತಾಳೆ. ದುಷ್ಟ ಶಬ್ದಗಳಿಂದ ಬೈಯುತ್ತಾಳೆ.
" ಕಾಲ ಎಷ್ಟು ಕೆಟ್ಟಿದೆ ನೋಡಿ, ನಮ್ಮ ಹಿಂದೂ ಸಂಸ್ಕೃತಿಯೇ ಹಾಳಾಗಿಹೋಗಿದೆ, ಅಲ್ಲಿರುವ ಆ ಇಬ್ಬರಲ್ಲಿ ಗಂಡು ಯಾರು ಹೆಣ್ಣು ಯಾರು ನೀವೇ ಹೇಳಿ ಸಾರ್" ಎಂದಂದೆ.
ಒಂದರೆ ನಿಮಿಷ ಆ `ಸಾರ್' ನನ್ನನ್ನು ದುರುಗುಟ್ಟಿ ನೋಡಿತು.
" ಏನ್ರೀ ನೀವು ಮಾತನಾಡೋದು? ಏನು ಮರ್ಯಾದೆ ಎಂಬುದೇ ಇಲ್ಲವೇ? ನನಗೆ ಸಾರ್ ಅಂತೀರಾ ನೀವು? ನಾನು ಆ ಎರಡೂ ಮಕ್ಕಳ ತಾಯಿ, ತಿಳೀತೆ?"

ಇವತ್ತಿಗೆ ಇಷ್ಟು. ಇನ್ನುಶುಕ್ರವಾರ. ಈಗ ನನ್ನದೊಂದು ಮುಕ್ತಕ.
ತಲೆಮಾರಿನ ಅಂತರ

"ಕುಂಟುವುದೇಕಜ್ಜ?" ಕೇಳಿದೆ ತಾತನ

"ಹೆಬ್ಬುಲಿ ಕಚ್ಚಿತು" ಎಂದ.

ಮೊಮ್ಮಗ ತಿಂಗಳು ಹಾಸಿಗೆ ಹಿಡಿದನು

ಚಪ್ಪಲಿ ಕಚ್ಚಿದ್ದರಿಂದ!     ಇನ್ನಷ್ಟು ಮಜ ಬೇಕಾ..? ಹಾಗಾದರೆ ತಕ್ಷಣ ಈ ಕೊಂಡಿ ಕ್ಲಿಕ್ಕಿಸಿ: http://shuntibella.blogspot.in/  

ಆಗ ಪಳಕ್ಕನೆ ಮಿಂಚಿತು........ಈ ಆನಂದ ಬಾಷ್ಪ .


ಹಾಗೆಲ್ಲಾ ಯೋಚಿಸಿದಾಗಲೆಲ್ಲಾ ನನಗೆ ಆನಂದ ಬಾಷ್ಪ ಒಸರುತ್ತದೆ. ಈ ಆನಂದ ಬಾಷ್ಪ ಇದೆಯಲ್ಲ ಅದೊಂದು ಅಪರೂಪದ ಕ್ಷಣ. ನೀವು ಆಸ್ವಾದಿಸಿದ್ದೀರೋ ಇಲ್ಲವೋ ಗೊತ್ತಿಲ್ಲ ನಾನಂತೂ ಹಲವು ಸಲ ಅನುಭವಿಸಿದ್ದೇನೆ. ನೋಡುಗರ ಕಣ್ಣಿಗೆ ದು:ಖವೆಂತಲೂ ನಮ್ಮ ಅಂತರಾಳಕ್ಕೆ ಸಂತೋಷವಾಗಿಯೂ ಇರುವ ಹಾಗೂ ಒಂದೇ ಘಟನೆಗೆ ಎರಡು ಅರ್ಥ ಕೊಡುವ ಅನುಭವ ಇದು. ಅದು ಯಾವ್ಯಾವಾಗ ಒಸರುತ್ತದೆ ಅಂತ ನಿಖಿರವಾಗಿ ಹೇಳಲಿಕ್ಕೆ ಆಗದಿದ್ದರೂ ಸರಿ ಸುಮಾರಾಗಿ ಹೀಗೆ ವಿಷದಪಡಿಸಬಹುದು.

ಮೊಟ್ಟ ಮೊದಲನೆಯದಾಗಿ ಆನಂದ ಭಾಷ್ಪ ಎನ್ನುವುದು ನಮ್ಮಗಳ ಮನಸ್ಥಿತಿಯ ಮೇಲೆ ಒಸರುತ್ತದೆ. ನೀವು ಯಾರಿಗೋ ಬುದ್ಧಿಪೂರ್ವಕವಾಗಿ ನಿಮ್ಮದನ್ನು ತೊರೆದು ಉಪಕಾರ ಮಾಡಿ ಮರೆತಿರುತ್ತೀರಿ. ಕಾಲ ಉರುಳಿದ ಒಂದು ದಿವಸ ತಣ್ಣನೆಯ ಸಮಯದಲ್ಲಿ ಮೆಲ್ಲಗೆ ಅವರು ನಿಮ್ಮ ಬಳಿ "ಅಂದು ನೀನಂದ ಮಾತು ನನ್ನ ಜೀವನದ ಅಭ್ಯುದಯಕ್ಕೆ ನಾಂದಿಯಾಯಿತು" ಅಂದು ಬಿಟ್ಟರು ಅಂದುಕೊಳ್ಳಿ. ಆಗ ಪಳಕ್ಕನೆ ಕಣ್ಣಂಚಿನಲ್ಲಿ ಮಿಂಚುತ್ತದೆ ಈ ಆನಂದ ಬಾಷ್ಪ. ನೀವು ಅದ್ಯಾವುದೋ ಕೆಲಸ ಯಾ ಯೋಜನೆಯನ್ನು ಆಸ್ಥೆಯಿಂದ ಕೈಗೊಂಡು ಶ್ರಮಪಟ್ಟು ಪೂರೈಸಿರುತ್ತೀರಿ, ಯಾರೂ ಏನೂ ಅಂದಿರುವುದಿಲ್ಲ ಆದರೆ ನೀವೆಣಿಸz ಸಣ್ಣ ವಯಸ್ಸಿನ ಮಗುವೊಂದು "ವಾವ್ ಸೂಪರ್" ಅಂತ ಹೆಬ್ಬೆರಳು ತೋರ್ಬೆರಳು ಸೇರಿಸಿ ಹೇಳಿತು ಅಂದುಕೊಳ್ಳಿ ಆಗಲೂ ಪಳಕ್ಕನೆ....... . ಅದು ಬಿಡಿ ಎಲ್ಲವೂ ನೀವೆಣಿಸಿದಂತೆ ನಡೆಯುತ್ತಿಲ್ಲ, ಅಲ್ಲೆಲ್ಲೋ ವ್ಯತ್ಯಯವಾಗುತ್ತಿರುತ್ತಿದೆ ಜೀವನಬಂಡಿ. ಆಗ ಅದ್ಯಾರೋ ನಿಮ್ಮ ಮನಸ್ಸಿನ ಭಾವನೆಗೆ ಸಮರ್ಪಕವಾಗಿ ಮ್ಯಾಚ್ ಆಗುವಂತಹ ಮಾತು ಆಡಿಬಿಡುತ್ತಾರೆ ಆಗಲೂ ಪಳಕ್ಕನೆ...... . ಇದು ಪಾಸಿಟೀವ್ ಕತೆಯಾಯಿತು ಆನಂದ ಬಾಷ್ಪಕ್ಕೆ ನೆಗಟೀವ್ ಕತೆಯೂ ಇದೆ. ಯಾರ್ಯಾರದೋ ಅಹಂಕಾರ ಮುರಿಯುವ ಕಾರಣ ಒಡ್ಡಿ ಪ್ರಕರಣ ಸೃಷ್ಟಿಸಿರುತ್ತಾರೆ, ಆ ಪ್ರಕರಣ ಕೊಂಚ ಯಶಸ್ಸು ಕಂಡಿತು ಅಂದಾದಾಗ ಪಳಕ್ಕನೆ ಬರುತ್ತದೆ ಬಟ್ ಅದನ್ನು ವಿಕೄತಾನಂದ ಭಾಷ್ಪ ಅಂತ ಕರೆದು ಮರೆತುಬಿಡೋಣ ಬಿಡಿ. ಹೋ ಮರೆತೆ ನನಗೇಕೆ ಇಂದು ಚಿಮ್ಮಿತು ಅಂತ ಹೇಳೋದನ್ನ

ನನ್ನ ಈಸ ರೈಸ್ ಬ್ಲಾಗ್ ಬರಹಕ್ಕೆ ನವ್ಯಾ ಕಾಮೆಂಟಿಸಿದ್ದಳು, ಈಗ ಆಕೆ ಇಂಜನಿಯರಿಂಗ್ ಪಧವೀಧರೆ, ಹೀಗೆ ನಾನು ಬಾಲ್ಯವನ್ನು ನೋಡಿದ ಮಕ್ಕಳು ಬೆಳೆದು ದೊಡ್ದವರಾಗಿದ್ದಾರೆ. ದೇಶವಿದೇಶದಲ್ಲಿ ನೆಲಸಿದ್ದಾರೆ ಗಟ್ಟಿಯಾಗಿ. ಅದೊಂದು ದೊಡ್ಡ ಗುಂಪೇ ಇದೆ. ನನಗೆ ಮಾತ್ರಾ ಅವರ ಹುಡುಗುತನವೇ ಕಾಣಿಸುತ್ತದೆ. ಸಂಸಾರ ಜಂಜಡದಲ್ಲಿ ನನಗೆ ಅವರನ್ನೆಲ್ಲಾ ಆಸ್ವಾದಿಸಲಾಗುತ್ತಿಲ್ಲ. ಹೀಗೆ ಅವರೆಲ್ಲಾ ಪಕ್ಕನೆ ನೆನಪಾದರು ಆಗ ಪಳಕ್ಕನೆ ಮಿಂಚಿತು........ಈ ಆನಂದ ಬಾಷ್ಪ .

Friday, August 31, 2012

ಈ ಈಸ ರೈಸ್ ನಿಮಗೆ ನೆನಪಿರಲಿ.

ಅದೊಂತರ ವಿಚಿತ್ರ ಸ್ಟೇಟಸ್. ಗುಂಪಿನಲ್ಲಿದ್ದಾಗ ಟೂರ್ ಹೋದಾಗ ಕೆಲವರು ಸ್ವಲ್ಪ ವಿಚಿತ್ರವಾಗಿ ಆಡತೊಡಗುತ್ತಾರೆ. ಅದಕ್ಕೆ ನಾವು ಈಸ ರೈಸ್ ಅನ್ನುತ್ತೇವೆ(ಇದು ನಮ್ಮ ವೈಯಕ್ತಿಕ ಪದ) ಒಟ್ಟಿನಲ್ಲಿ ಗುಂಪಿನಲ್ಲಿರುವವರಿಗಿಂತ ನಾವು ಬೇರೆ ಅಂತ ತೋರಿಸಿಕೊಳ್ಳುವ ಹಂಬಲದ ವರ್ತನೆ ಅದು. ಸಹಜ ಸ್ಥಿತಿಗಿಂತ ಮೇಲಿನ ಅವಸ್ಥೆ ಆಗಿದ್ದಕ್ಕೆ "ರೈಸ್" ಅನ್ನುವ ಪದ ಪ್ರಯೋಗ ಅಲ್ಲಿ ಅಷ್ಟೆ. ಈ ಈಸ ರೈಸ್ ಸ್ಥಿತಿ ಇದೆಯಲ್ಲಾ ಅದು ಜೀವ ಕಳೆದುಕೊಳ್ಳುವ ಮಟ್ಟಕ್ಕೆ ಹೋದ ಉದಾಹರಣೆ ಇದೆ. ಹೀರೋ ಆಗಲು ಹೋಗಿ ಝೀರೋ ಆಗುವ ಸ್ಥಿತಿ ಅದು. ಜೋಗ ಬ್ರಿಟೀಷ್ ಬಂಗ್ಲೆಯ ನೋಟದಲ್ಲಿ ಒಂದು ನುಣುಪಾದ ಬಂಡೆಯಿದೆ. ಅಲ್ಲಿ ಅಪಾಯ ಅಪಾಯ ಅಪಾಯ ಅಂತ ಎಲ್ಲರೂ ಹಲುಬುತ್ತಿರುತ್ತಾರೆ. ಇಷ್ಟಾದರೂ ಅಲ್ಲಿ ವರ್ಷಕ್ಕೆ ೩-೪ ಶೀಟಿ ಕೇಸ್ ನಡೆಯುತ್ತಲಿರುತ್ತದೆ. ಅದಕ್ಕೆ ಗುಂಪಿನಲ್ಲಿ ಬಂದಾಗ ಈಸ ರೈಸ್ ಆಗುವ ಸ್ಥಿತಿಯೇ ಕಾರಣ. ಈ ಚಿತ್ರದಲ್ಲಿ ನೋಡಿ ಜಿಟಿಜಿಟಿ ಮಳೆಯ ನಡುವೆ ಇವರದೆಂತಾ ಹುಚ್ಚಾಟ ಅಂತ. ಹಾಗಂತ ಹೀಗೆ ನೋಡಿ ಬಚಾವಾಗಿ ಹೋದವರ ಸಂಖ್ಯೆ ಬಹಳ ದೊಡ್ಡದಿದೆ. ಆದರೆ ಆ ಬಚಾವಾದವರು ಹುಚ್ಚಾಟ ಮಾಡಲು ಹೋಗಿರುವುದಿಲ್ಲ ಅಂತಲಾದರೂ ಅನ್ನಬಹುದು ಅಥವಾ ಮಾರನೇ ದಿವಸದ ಪತ್ರಿಕೆಯವರಿಗೆ ನಸೀಬು ಕೊಟ್ಟಿ  ಇತ್ತು ಅಂತಲಾದರೂ ಅನ್ನಬಹುದು. ಆದರೂ ಹುಷಾರು ತಪ್ಪಬಾರದು. ಬಿದ್ದರೂ ಈಸ ರೈಸ್ ಆಗಿ ಬೀಳಬಾರದು. ಹಾಗಾಗಿ ಟೂರ್ ಹೋದಾಗ ಈ ಈಸ ರೈಸ್ ನಿಮಗೆ ನೆನಪಿರಲಿ.

ಬಿಡಿಸಿಕೊಳ್ಳಲು ಯಾವ ವಾಕ್ಯವೂ ಸಹಾಯಕ್ಕೆ ಬರುತ್ತಿಲ್ಲ.

ಬಹು ಸುಲಭ, ಬಹು ಕಷ್ಟ ಹೀಗೆ ನಾವು ವಿಂಗಡಿಸಬಹುದು ವಿಷಯಗಳನ್ನ ಘಟನೆಗಳನ್ನ ವಿದ್ಯಮಾನಗಳನ್ನ....ಗಳನ್ನ ಗಳನ್ನ ಗಳನ್ನ. ಬಿಡಿ ಅದು ಬಹಳ ಇದೆ ಪ್ರಸ್ತುತ ಅವನ್ನೆಲ್ಲಾ ಬಿಟ್ಟು ಸಮಸ್ಯೆಗಳ ವಿಷಯವನ್ನಷ್ಟೆ ನೋಡೋಣ.
ಹೀಗೊಂದು ಸಮಸ್ಯೆ ಬಂದಾಗ ಪರಿಹಾರ ಹುಡುಕುವ ವಿಷಯ ಇದೆಯಲ್ಲ ಅಥವಾ ಸಮಸ್ಯೆಯಿಂದ ಆಚೆ ಬರುವ ವಿಚಾರ ಇದೆಯಲ್ಲ ಅದು ಬಹು ಸುಲಭ ಹಾಗೂ ಬಹು ಕಷ್ಟ ಅಂತ ವಿಂಗಡಿಸಬಹುದು. ಯಾವುದು ಕಷ್ಟ ಯಾವುದು ಸುಲಭ ಅಂತಾದರೆ, ಬೇರೆಯವರ ಸಮಸ್ಯೆಗೆ ತಟಕ್ಕನೆ ಪರಿಹಾರ ಹುಡುಕುವುದು ಬಹು ಸುಲಭ, ನಮ್ಮ ಸಮಸ್ಯೆಗೆ ಪರಿಹಾರ ಬಲು ಕಷ್ಟ.
ಸನ್ಯಾಸಿಯೊಬ್ಬ ನಿದ್ದ. ಭಕ್ತರ ನಿತ್ಯ ಸಮಸ್ಯೆಗೆ ಪರಿಹಾರ ಅವನ ಕಾಯಕಗಳಲ್ಲೊಂದು. ಬರುವ ಭಕ್ತರದ್ದೋ ಹತ್ತು ಹಲವು ಸಮಸ್ಯೆಗಳು. ಹೆಂಡತಿ ಹೊಂದಿಕೊಳ್ಳುವುದಿಲ್ಲ ಎಂದು ಗಂಡ, ಗಂಡನದು ದುಶ್ಚಟ ಎಂದು ಹೆಂದತಿ, ವ್ಯಾಪಾರದಲ್ಲಿ ನಷ್ಟ ಎಂದ ವ್ಯಾಪಾರಿ, ಉದ್ಯಮ ಏಳದು ಎಂಬ ಉದ್ಯಮಿ ಹೀಗೆ ಬರುವ ಭಕ್ತರ ಸಮಸ್ಯೆಗೆ ಸನ್ಯಾಸಿ ಚಟಕ್ಕನೆ ಉತ್ತರ ನೀಡಿ ಸಮಾಧಾನ ಪಡಿಸುತ್ತಿದ್ದ. ಹೀಗೆ ಸಮಾಧಾನ ಹೊಂದಿದವರು ಒಂದಿಷ್ಟು ಹಣ ನೀಡುತ್ತಿದ್ದರು. ಸನ್ಯಾಸಿಗೆ ಹಣದ ಕುರಿತು ಹೇಸಿಗೆ.
         ಆತ ದುಂಡನೆಯ ಹೊಟ್ಟೆ ಹೊತ್ತು ಬರುವ ಜನಕ್ಕೆ "ನೀವು ಬೇರೆಯವರ ಆಹಾರವನ್ನೂ ತಿನ್ನುವ ಕಾರಣಕ್ಕೆ ನಿಮ್ಮ ಹೊಟ್ಟೆಯಲ್ಲಿ ಶೇಖರಣೆಯಾಗಿದೆ, ನಿಮ್ಮ ದುಡಿಮೆಯದು ತಿನ್ನಿ" ಎನ್ನುತ್ತಿದ್ದ. ಕೇಳಿದವರಿಗೆ ಇದು ಅರ್ಥವಾಗಿ ಅವರು ಉದ್ಧಾರವಾಗಿ ಹೋದರು ಹೊಟ್ಟೆಯನ್ನೂ ಇಳಿಸಿಕೊಂಡರು. ಅವರೂ ಸನ್ಯಾಸಿಗೆ ಹಣವನ್ನು ಹಾಕಿದರು. ಸನ್ಯಾಸಿಗೆ ಹಣದ ಕುರಿತು ಹೇಸಿಗೆ ಕೊಂಚ ಕಡಿಮೆ ಯಾಯಿತು.
      "ಪತ್ನಿಯನ್ನು ಪ್ರೀತಿಸಿ, ಪರಪತ್ನಿಯನ್ನಲ್ಲ" ಅಂತ ಮೇಲ್ಮಟ್ಟದ ಮಾತನ್ನಾಡಿ ಕೆಳಮಟ್ಟಕ್ಕಿಳಿದವರನ್ನೂ ಮೇಲೆತ್ತಿದ. ಮೂರು ಪದದ ಮಾತಿನಲ್ಲಿ ಮುನ್ನೂರು ಅರ್ಥ ಪಡೆದುಕೊಂಡು ಭಕ್ತರು ಧನ್ಯರಾಗಿ ತಮ್ಮ ತಪ್ಪನ್ನು ತಿದ್ದಿಕೊಂಡು ಸುಖವನ್ನು ಕಾಣಹತ್ತಿದರು. ಅವರೂ ಸನ್ಯಾಸಿಯ ಪಾದಕ್ಕೆ ಹಣವನ್ನು ಹಾಕಿದರು, ಸನ್ಯಾಸಿ ಚೆಲ್ಲಾಪಿಲ್ಲಿಯಾಗುತ್ತಿದ್ದ ದುಡ್ಡನ್ನು ಒಂದೆಡೆ ಪೇರಿಸಿಟ್ಟ.
      "ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿದೆ" ಎಂದ ಸನ್ಯಾಸಿ, ಭಕ್ತರು ತೆರೆದ ಬಾಯಿ ಮುಚ್ಚಲಿಲ್ಲ. ಒಬ್ಬ ಭಕ್ತ ಹೇಳಿದ" ಹೌದು ಎಷ್ಟು ಆಳವಾದ ಮಾತಿದು, ನಾವು ಊಟ ಮಾಡುವುದು ಕೈಯಲ್ಲಿ, ಅಂತಾದ ಮೇಲೆ ಊಟ ಒಳ್ಳೆಯದಾಗಿದ್ದರೆ ಆರೋಗ್ಯ ಅಂತ ಅರ್ಥ ". ಮತ್ತೊಬ್ಬ ಹೇಳಿದ " ಆಕ್ಯೂಪ್ರೆಷರ್ ನ ಸಂಪೂರ್ಣ ಅರ್ಥವನ್ನು ಒಂದೇ ವಾಕ್ಯದಲ್ಲಿ ಸನ್ಯಾಸಿಗಳು ಹೇಳಿದ್ದಾರೆ ಅಬ್ಬ"  ಮಗದೊಬ್ಬ " ಹೌದು ಕೈ ಬಾಯಿ ಶುದ್ಧವಾಗಿದ್ದರೆ" ಆರೋಗ್ಯ ಅಂತ ಅದರ ಅರ್ಥ ಅಂದ. ಎಲ್ಲಾ ಭಕ್ತರೂ ಒಂದೇ ವಾಕ್ಯದಲ್ಲಿ ಪುನೀತರಾಗಿ ಹಣವನ್ನು ಪಾದಕ್ಕೆ ಹಾಕಲೆತ್ನಿಸಿದರು. ಸನ್ಯಾಸಿಗೆ ಪೇರಿಡಿಸುವುದು ಸಮಸ್ಯೆಯಾಗಿ ಒಂದು ಪೆಟ್ಟಿಗೆ ತರಿಸಿ ಅದರಲ್ಲಿ ಹಾಕುವಂತೆ ಅಣತಿ ಮಾಡಿದ
       ದಿನಕಳೆದಂತೆ ಸನ್ಯಾಸಿ ಪ್ರಖ್ಯಾತನಾಗುತ್ತಾ ಸಾಗಿದ. ಆಶ್ರಮ ಸ್ಥಾಪನೆಯಾಯಿತು, ಪೀಠ ಬಂತು, ಸೇವಕಿಯರು ಬಂದರು,ಸಮಸ್ಯೆ ಹೊತ್ತು ಬರುವವರ ಸಂಖ್ಯೆ ವಿಸ್ತಾರ ಪಡೆಯುತ್ತಾ ಸಾಗಿತು.
       ಮತ್ತು ಈಗ ಸನ್ಯಾಸಿ ಸಮಸ್ಯೆಯಲ್ಲಿದ್ದಾರೆ.. ಬಿಡಿಸಿಕೊಳ್ಳಲು ಯಾವ ವಾಕ್ಯವೂ ಸಹಾಯಕ್ಕೆ ಬರುತ್ತಿಲ್ಲ.

Wednesday, August 29, 2012

ಹಾಗಾದರೆ ಮಾನವೀಯತೆ ಎಂಬುದು "ಛೆ" ಅನ್ನುವ ಮಟ್ಟಕ್ಕಷ್ಟೇ ನಿಂತು ಹೋಗಿದೆಯಾ..?

ಇದೊಂದು ಚಿತ್ರ ನೋಡಿದಾಗ ನಿಮಗಿರಲಿ ನನಗೂ ಕಣ್ಣೀರ ಕೋಡಿ ಹರಿದಿಲ್ಲ ನಿಜ ಆದರೆ ಛೆ ಅನ್ನುವಷ್ಟು ಬೇಸರವಾಗುತ್ತದೆ. ೧೮ ರ ಹರೆಯದ ಈ ಯುವಕ ಅತಿವೇಗದ ಬೈಕ್ ಡ್ರೈವ್ ಮಾಡಿ ಬಸ್ಸಿನಡಿಗೆ ಸಿಕ್ಕು ಕಳೆದ ಕೆಲ ದಿವಸದ ಹಿಂದೆ ದೇಹ ತ್ಯಜಿಸಿದ. ಆತನ ಮನೆಯವರ ರೋಧನ ಮುಗಿಲುಮುಟ್ಟುತ್ತಿತ್ತು. ನಾನು ರಿಪೋರ್ಟ್ ಮಾಡಲು ಹೋಗಿದ್ದೆ. ಆಗಸ್ಟ್ ಹದಿನೈದರ ಬೆಳಿಗ್ಗೆ ಎಂಟೂವರೆ ಗಂಟೆಗೆ ಪೋಲೀಸ್ ಕಾನಸ್ಟೇಬಲ್ ಲೋಕೇಶ್ ಹೀಗೊಂದು ಅಪಘಾತವಾಗಿದೆ ತಲವಾಟದ ಬಳಿ ಎಂದಾಗ "ಮಕ್ಕಳ ಪ್ರಭಾತ್ ಪೇರಿ" ಫೋಟೋ ತೆಗೆಯುತ್ತಿದ್ದವನು ಪಟಕ್ಕನೆ ಓಡಿದೆ. ನಾನು ಅಲ್ಲಿಗೆ ಹೋಗುವಷ್ಟರಲ್ಲಿ ಅಂಬುಲೆನ್ಸ್ ಬಂದು ಹಿಂಬದಿ ಕುಳಿತಿದ್ದವನನ್ನು ಹೇರಿಕೊಂಡು ಹೋಗಿತ್ತು. ಈತ ಇಹಲೋಕ ಯಾತ್ರೆ ಮುಗಿಸಿದ್ದ ಕಾರಣ ಅಲ್ಲಿಯೇ ಇದ್ದ. ಅದಾಗಲೇ ಜನಜಂಗುಳಿ ಸೇರಿತ್ತು. ಅಪ್ಪ ದುಬೈ ಲಿ ಇದ್ದವರಂತೆ ಮಗ ಸುಖವಾಗಿರಲಿ ಎಂದು ಹೊಸ ಬೈಕ್ ಕೊಡಿಸಿದ್ದರು ಹೊಚ್ಚ ಹೊಸ ಬೈಕ್ ಮಗನನ್ನೇ ಬಲಿತೆಗೆದುಕೊಂಡಿತ್ತು. ಇರಲಿ ಅವೆಲ್ಲಾ ಆಮೇಲಿನ ತರ್ಕದ ಕತೆಯಾಯಿತು. ವಾಸ್ತವಕ್ಕೆ ಬರೋಣ.

ಮಳೆಗಾಲದ ದಿನಗಳಲ್ಲಿ ವಾರಕ್ಕೆ ಕನಿಷ್ಟವೆಂದರೂ ೩-೪ ಇಂತಹ ಘಟನೆಗಳು ನನ್ನನ್ನು ರಸ್ತೆಗಿಳಿಸುತ್ತವೆ. ಅಲ್ಲಿ ಹೋಗಿ ಫೋಟೋ ತೆಗೆದು ನ್ಯೂಸ್ ಮಾಡುವುದಷ್ಟೇ ನಮ್ಮ ಕೆಲಸವಲ್ಲ. ಅಂಬುಲೆನ್ಸ್ ಗೆ ಫೋನ್ ಮಾಡುವುದು, ಪೋಲೀಸ್ ಗೆ ಹೆಲ್ಪ ಮಾಡುವುದು ಮುಂತಾದ ಕೆಲಸಗಳು ಇರುತ್ತವೆ. ಅವುಗಳಲ್ಲಿ ಮಹಜರ್ ಗೆ ಸೈನ್ ಹಾಕುವುದು ಪ್ರಮುಖ ಅಂಗ. ಮೊನ್ನೆ ಈ ಅಪಘಾತ ನಡೆದಾಗ ಗಂಟೆ ೧೨ ಆದರೂ ಮೃತ ದೇಹವನ್ನು ಮನೆಯವರಿಗೆ ಬಿಟ್ಟುಕೊಡಲು ಪೋಲೀಸರಿಗೆ ಆಗಲಿಲ್ಲ. ಅದಕ್ಕೆ ಪ್ರಮುಖ ಕಾರಣ ಮಹಜರ್ ಗೆ ಲೋಕಲ್ ಮೂವರು ಸಹಿ ಹಾಕಬೇಕು. ಆದರೆ ಅಲ್ಲಿ ಯಾರೂ ಸಹಿ ಹಾಕಲು ಒಪ್ಪುವುದಿಲ್ಲ. ಹಾಗೆ ಜನರು ಹೆದರಲು ಪ್ರಮುಖ ಕಾರಣ ಕೋರ್ಟು ಕಛೇರಿ ತಂಟೆ ನಮಗೆ ಯಾಕೆ? ಅಂಬುದಷ್ಟೇ ಕಾಳಜಿ. ಅಯ್ಯೋ ಅಮ್ಮಾ ಎಂಬ ಗೋಳಾಟದ ನಡುವೆ ಈ ಕಾನೂನು ಪ್ರಕ್ರಿಯೆ ನಡೆಯದೆಯೇ ದೇಹ ಅಲ್ಲಿಂದ ಶಿಫ್ಟ್ ಮಾಡುವಂತಿಲ್ಲ. ಅಂತೂ ಇಂತು ಎರಡು ಜನ ಮಹಜರ್ ಗೆ ಸಹಿ ಹಾಕಲು ಒಪ್ಪಿಸುವಲ್ಲಿ ಪೋಲೀಸರು ಹೈರಾಣಾಗಿದ್ದರು, ಮೂರನೆಯವನಾಗಿ ನಾನು ಯಥಾಪ್ರಕಾರ ಸೈನ್ ಜಡಿದೆ. ಪಟಕ್ಕನೆ ಕೆಲಸ ಮುಗಿಯಿತು.
ಆತ್ಮ ತ್ಯಜಿಸಿದ ದೇಹ ಒಂದೆಡೆ, ರೋಧನ ಮತ್ತೊಂದೆಡೆ, ಕಾನೂನು ಪ್ರಕ್ರಿಯೆ ಮಗದೊಂದೆಡೆ. ಹಾಗಾದರೆ ಮಾನವೀಯತೆ ಎಂಬುದು "ಛೆ" ಅನ್ನುವ ಮಟ್ಟಕ್ಕಷ್ಟೇ ನಿಂತು ಹೋಗಿದೆಯಾ..?

Sunday, August 26, 2012

ಹಾಗಾದರೆ ಹುಡುಕಿ ನೀವು

ತಪ್ಪುಗಳನ್ನು ಮಾಡದ ಮನುಷ್ಯರಿಲ್ಲ. ಒಪ್ಪಿಕೊಳ್ಳದವರು ಇದ್ದಾರೆ ಬಿಡಿ. ಅದು ಕಾಲದಿಂದಲೂ ನಡೆದುಕೊಂಡು ಬಂದಿದ್ದು. ಈಗ ನಾವು ಅದೇ ಏಕತಾನತೆಯಿಂದ ಆಚೆ ನಿಂತು ನೋಡಲು ಸಾಧ್ಯವೇ ಅಂತ ಯೋಚಿಸೋಣ. ತಪ್ಪುಗಳ ಅರ್ಥ ಅಷ್ಟೆ ನಮ್ಮ ವರ್ತನೆ ನಡೆ ನುಡಿ ಮತ್ತೊಬ್ಬರ ದೃಷ್ಟಿಯಲ್ಲಿ ಇಷ್ಟವಾಗದಾಗ ಅದು ತಪ್ಪು ಅಂತ ಅರ್ಥೈಸಿಕೊಳ್ಳುತ್ತದೆ.  ಈ ತಪ್ಪುಗಳು ಕೂಡ ಲಾಗಾಯ್ತಿನಿಂದಲೂ ಏಕತಾನತೆಯಿಂದ ಕೂಡಿ ಬೇಸರ ತರಿಸುತ್ತದೆ. ಅವರು ಅಷ್ಟು ದುಡ್ಡು ತಿಂದರು, ಅವನು ಮೂರು ಮದುವೆ ಮಾಡಿಕೊಂಡು ಕೈಕೊಟ್ಟ, ಅವನು ಕೊಲೆ ಮಾಡಿದ, ಇವರು ಮೋಸ ಮಾಡಿದರು, ಬಾಲಕ ಬೀಡಿ ಸೇದಿದ, ಕ್ವಾಟರ್ ಹೆಂಡ ಕುಡಿದ, ಹುಡುಗಿಗೆ ಲೈನ್ ಹೊಡೆದ ಹೀಗೆ ಕಾಲ ಕಾಲದಿಂದಲೂ ಒಂದೇ ತರಹದ ತಪ್ಪುಗಳನ್ನು ಮಾಡುತ್ತಾ ಸಾಗುತ್ತಲಿದ್ದಾರೆ ಮನುಜರು. ಅದಕ್ಕೆ ಕೊಂಚ ರೂಪಾಂತರ ಇರಬಹುದು ಬಿಟ್ಟರೆ ಹೊಸತನವಿಲ್ಲ.  ಅದೇ ಇಲ್ಲಿಯವರೆಗೆ ಯಾರೂ ಮಾಡಿರದ ತಪ್ಪುಗಳನ್ನು ಮಾಡಲು ಸಾದ್ಯವೇ ನಾವು?  ನಾವೇನಾದರೂ ಹೊಸ ತಪ್ಪುಗಳನ್ನು ಮಾಡಲು ಸಾದ್ಯವೇ ಅಂತ ಹುಡಕಬೇಕಿದೆ.
            ಅಭ್ಭಾ ಬಹಳ ಕಷ್ಟ ಕಣ್ರೀ./.. ಯಾರೂ ಮಾಡಿರದ ಹೊಸದೊಂದು ತಪ್ಪು ಹುಡುಕಲು. ಎಲ್ಲಾ ತಪ್ಪುಗಳು ಮುಗಿದುಹೋಗಿವೆಯೇನೋ ಅಂತ ಅನ್ನಿಸಲು ಶುರುವಾಗಿದೆ ಹೀಗೆ ಒಂದು ಯಡವಟ್ಟು ವಿಚಾರವನ್ನು ಯೋಚಿಸಲು ಕುಂತಾಗ. ಆದರೂ ಕೊಂಚ ತಲೆಕೆಡಿಸಿಕೊಂಡಾಗ ಎಲ್ಲಾದರೂ ಸಿಗಬಹುದಾ..? ಎಂಬ ಸಂಶಯ ಕಾಡುತ್ತದೆ.
            ಸ್ವಂತದ್ದೇ ಕಣ್ಣು ಕಿತ್ತುಕೊಳ್ಳುವುದರಿಂದ ಹಿಡಿದು ಸ್ವಮೂತ್ರ ಪಾನದ ವರೆಗೂ, ಹೆತ್ತ ಮಗಳ ಅತ್ಯಾಚಾರದಿಂದ ಹಿಡಿದು ಅಣ್ಣ ತಂಗಿಯ ವಿವಾಹದ ವರೆಗೂ, ಪ್ರಿತಿಸಿದವಳಿಗೆ ಕೈಕೊಟ್ಟವರಿಂದ ಹಿಡಿದು ಮದುವೆಯಾಗಿ ಕೈಬಿಟ್ಟವರವರೆಗೂ, ದೈವಕ್ಕೆ ಮೋಸ ಮಾಡುವುದರಿಂದ ಹಿಡಿದು ಮೋಸಕ್ಕೇ ದೈವದ ಸೃಷ್ಟಿಯವರೆಗೂ, ಹೆತ್ತವರನ್ನೇ ಹೊರ ಹಾಕುವುದರಿಂದ ಹಿಡಿದು ಹೆತ್ತವರೇ ಹೊರಹಾಕಿದವರೆಗೂ, ತಪ್ಪುಗಳು ಮುಗಿದುಹೋಗಿವೆ. ಹೊಸತಿಲ್ಲ ಹೊಸತನವಿಲ್ಲ. ಹೊಚ್ಚ ಹೊಸದೊಂದು ತಪ್ಪು ಮಾಡಲು ಆಗುವುದೇ ಇಲ್ಲ ಅನ್ನುವಷ್ಟು ಮುಗಿದುಹೋಗಿವೆ ಅಂತ ನಮಗೆ ಅನ್ನಿಸಿದರೆ ನಾವು ಆ ದಿಕ್ಕಿನಲ್ಲಿ ಯತ್ನಿಸುತ್ತಿಲ್ಲ ಅಂತ ಅನ್ನಬಹುದು. ಕಾರಣ ಚಲನಚಿತ್ರದಲ್ಲಿನ ಹೊಸ ಹೊಸ ಹಾಡುಗಳನ್ನೇ ತೆಗೆದುಕೊಳ್ಳಿ, "ಪ್ಯಾರ್ ಕೆ ಆಗ್ ಬುಟ್ಟೈತಿ’ ಬರುವವರೆಗೂ ಇಂತಹದೊಂದು ರಾಗ ಇತ್ತು ಅಂತ ನಮಗೆ ಗೊತ್ತಿರಲಿಲ್ಲ, ಮತ್ತು ಅದು ಕೇಳಿದ ನಂತರ ಇನ್ನು ಹೊಸ ಹಾಡು ಹೊಸ ರಾಗ ಸಾದ್ಯವಿಲ್ಲ ಅಂತ ನಮಗೆ ಅನ್ನಿಸುತ್ತದೆ. ಆದರೆ ಅಷ್ಟರಲ್ಲಿ ಮತ್ತೆ ನಾವು ನೀವು ಬಚ್ಚಲಮನೆಯಲ್ಲಿ ಗುಣುಗುಣಿಸುವಂತಹ ಅಪರೂಪದ ಹಾಡೊಂದು ಸೃಷ್ಟಿ ಯಾಗಿಬಿಡುತ್ತವೆ. ಅಲ್ಲಿಗೆ ಇದೆ ಅಂತಾಯಿತು ನಮಗೆ ಹಿಡಿಯಲಾಗುತ್ತಿಲ್ಲ. ಅಥವಾ ಹಿಡಿಯುವ ಅವಶ್ಯಕತೆಯಿಲ್ಲ ಎಂದರೂ ಸರಿಯೇ. ಇರಲಿ ತರ್ಕ ಬಿಟ್ಟು ಮತ್ತೆ ಹೊಸ ತಪ್ಪು ಹುಡುಕುವ ಯತ್ನ ಮಾಡೋಣ.
         ಇಲ್ಲ ಇಲ್ಲ ಸಿಗುತ್ತಿಲ್ಲ ನನಗೆ ಅಂದಾಗ ಇದ್ದದ್ದರಲ್ಲಿಯೇ ಹುಡುಕುವುದು ವಾಸಿ ಎನ್ನಿಸಿ, ಈಗ ನಾನು ಹೀಗೊಂದು ಹೊಸತಪ್ಪು ಹುಡುಕುವ ಯತ್ನ ಮಾಡುತ್ತಿದ್ದೇನಲ್ಲ ಇದೇ ದೊಡ್ಡ ಹೊಸ ತಪ್ಪು ಅಂತ ಅನ್ನಿಸಿ ಹುಡುಕುತ್ತಿದ್ದ ಬಳ್ಳಿ ಕಾಲಿಗೆ ತೊಡಕಿದಂತಾಗಿ ಹುರ್ರೇ ಎಂದೆ. ಹೌದೇ ಹೌದು ಇದೇ ಹೊಸ ತಪ್ಪು.  ಅರ್ಥ ಮತ್ತು ಸಮಾಧಾನ ಆಗಲಿಲ್ಲವೇ ಹಾಗಾದರೆ ಹುಡುಕಿ ನೀವು




Thursday, August 23, 2012

ಕಪ್ಪು ಬಣ್ಣಕ್ಕೆ ಹೊಗೆ ಇಲ್ಲ ಕಾಲ ಬದಲಾಗಿದೆ.

ಮಜ್ಜಿಗೆ ಕಪಾಟು ಅಂದರೆ ಅಡಿಗೆ ಮನೆಯಲ್ಲಿರುವ ಮರದ ಕಪಾಟು ಅಂಬೋದು ಅರ್ಥ ಅಂತಾದರೆ ನಿಮಗೆ ಸ್ವಲ್ಪ ತಲೆಕೆರೆದುಕೊಳ್ಳುವಷ್ಟು ಅಲ್ಲದಿದ್ದರೂ ಇದೇನಪ್ಪಾ ಮರದ ಕಪಾಟಿಗೆ ಮಜ್ಜಿಗೆಯ ಹೆಸರು ಅಂತ ನಿಮಗೆ ಅನ್ನಿಸದಿರದು. ನಮ್ಮ ಹಳ್ಳಿ ಮನೆಗಳಲ್ಲಿ ಒಂದುಕಾಲದ ಮನೆಯ ಗೃಹಲಕ್ಷ್ಮಿ...! ಯ ಅತ್ಯಂತ ಜತನವಾದ ಸ್ಥಳ ಅದು. ಅಡಿಗೆಮನೆಯ ಯಾವುದೋ ಒಂದು ಮೂಲೆಯಲ್ಲಿ ಕಪ್ಪುಬಣ್ಣದಲ್ಲಿರುವ, ಮರದ ಜಾತಿ ಯಾವುದು ಅಂತ ತಿಳಿಯದ ಹಂತದಲ್ಲಿರುವ ಈ ಕಪಾಟು ಮಜ್ಜಿಗೆ ಬೆಣ್ಣೆ ತುಪ್ಪ ಇಡುವ ಕಾರಣದಿಂದ ಆ ಹೆಸರು ಅದಕ್ಕೆ. ಹೆಸರಿಗೆ ತಕ್ಕಂತೆ ಅಷ್ಟೇ ಇಡುವ ಕಪಾಟಾಗಿದ್ದರೆ ಅದನ್ನ ನಾನು ಇಲ್ಲಿ ಬರೆಯುವ ಪ್ರಮೇಯ ಇರುತ್ತಿರಲಿಲ್ಲ. ಆದರೆ ಆ ಕಪಾಟು ಆ ಮನೆಯ ಗೃಹಿಣಿಯ ಎಲ್ಲಾ ಸ್ವತ್ತುಗಳನ್ನು ಜತನವಾಗಿ ಕಾಪಿಟ್ಟುಕೊಳ್ಳುವ ಜಾಗವಾಗಿದ್ದರಿಂದ ಅದಕ್ಕೊಂದು ಮಹತ್ವ ಸ್ಥಾನ. ಈಗ ಬಿಡಿ, ಕಬ್ಬಿಣದ ಸುವ್ಯವಸ್ಥಿತ ಪದ್ದತಿ ಬಂದಿದೆ ಹಾಗಾಗಿ ಮರದ ಮಜ್ಜಿಗೆ ಕಪಾಟು ತನ್ನತನ ಕಳೆದುಕೊಂಡು ಮಾಯವಾಗಿದೆ. ಈಗಿನದು ಬಿಟ್ಟು ಹಿಂದಿನದಕ್ಕೆ ತೆರಳೋಣ.

              ಕಟ್ಟಿಗೆಯ ಒಲೆಯ ಕಾಲ, ಹಾಗಂತ ತೀರಾ ನೂರು ವರ್ಷ ಹಿಂದಿನದಲ್ಲ ಜಸ್ಟ್ ನಲವತ್ತು ವರ್ಷ ಅಷ್ಟೆ. ನೆಲಕ್ಕೆ ಕುಳಿತು ಉಬಸಾ ಅಂಡೆ ಎಂಬ ಕಬ್ಬಿಣದ ಪೈಪ್ ನಿಂದ ವಿಚಿತ್ರ ಸದ್ದು ಮಾಡಿ ಒಲೆ ಉರಿಸಬೇಕು. ಅಡಿಗೆ ಮನೆಯಲ್ಲಿ ಒಂದೇ ಒಂದು ಕಪ್ ಕಾಫಿ ಮಾಡಿದರೂ ಹೊಗೆಯಿಂದ ತುಂಬಿ ತುಳುಕಾಡುವ ಸಮಯ. ಹೊಗೆಯ ಪ್ರಮಾಣ ಅಷ್ಟಿದ್ದಮೇಲೆ ಅಲ್ಲಿರುವ ಯಾವ ವಸ್ತು ಬೆಳ್ಳಗಿರಲು ಸಾದ್ಯ..? ಅಂತಹ ವಾತಾವರಣದಲ್ಲಿ ಈ ಮಜ್ಜಿಗೆ ಕಪಾಟು ಇರುತ್ತಿತ್ತು. ಅದಕ್ಕೊಂದು ಬಾಗಿಲು ಬಾಗಿಲಿಗೊಂದು ಚಿಲಕ. ಆ ಚಿಲಕ ಸಸೂತ್ರವಾಗಿ ನಿಂತಿದ್ದನ್ನು ನಾನಂತೂ ಯಾರಮನೆಯಲ್ಲಿಯೂ ನೋಡಿರಲಿಲ್ಲ. ಒಂದೋ ಹಲ್ಲುಕಚ್ಚಿ ತೆಗೆಯಬೇಕಾಗಿತ್ತು ಅಥವಾ ಚಿಲಕ ತೆಗೆಯುವ ಅವಶ್ಯಕತೆಯೇ ಇರುತ್ತಿರಲಿಲ್ಲ, ಓರೆಯಾಗಿ ಜೋತು ಬಿದ್ದಿರುತ್ತಿತ್ತು. ಅಂತಹ ಕಪಾಟಿನಲ್ಲಿ ಕೆಳಗಿನ ಅರೆಯಲ್ಲಿ ಸಾಲಾಗಿ ಮಜ್ಜಿಗೆ ಬೆಣ್ಣೆ ತುಪ್ಪ ಮುಂತಾದವುಗಳ ಸ್ಥಾನ, ಎರಡನೆ ಅಂದರೆ ಮಧ್ಯದ ಅರೆಯಲ್ಲಿ ನೆಂಟರಿಷ್ಟರು ತಂದಿರುವ ಗ್ಲುಕೋಸ್ ಬಿಸ್ಕತ್ತು ಮೂಸಂಬಿ ಹಣ್ಣು ಮುಂತಾದವುಗಳ ಸ್ಥಾನ. ನಮಗೆಲ್ಲಾ ಅತ್ಯಂತ ಇಷ್ಟವಾದ ಸ್ಟೆಪ್ ಅದು. ಮೇಲ್ಗಡೆ ಅರೆ ಗೃಹಣಿಯ ಸಾಸಿವೆ ಡಬ್ಬಿ ಯ ಸ್ಥಾನ. ಅಲ್ಲಿ ಮನೆಯೆಂಬ ಮಹಾಲಕ್ಷ್ಮಿಯ ಲಕ್ಷ್ಮಿ ಅವತಾರ ಅನಾವರಣ ಗೊಳ್ಳುತ್ತಿತ್ತು. ಯಾವುದೇ ಡಬ್ಬಿಯ ಅಡಿಬಾಗಕ್ಕೆ ಕೈಹಾಕಿದರೂ ಅಲ್ಲಿರುತ್ತಿತ್ತು ಚಿಲ್ಲರೆ ಕಾಸು. ಆ ಮೇಲಿನ ಸ್ಟೆಪ್ ಸಾಮಾನ್ಯವಾಗಿ ಹುಡುಗರ ಕೈಗೆ ಸಿಗದಷ್ಟು ಎತ್ತರದಲ್ಲಿರುತ್ತಿತ್ತು. ಕಾಸಷ್ಟೇ ಅಲ್ಲಿನ ವಾಸಸ್ಥಾನ ಅಲ್ಲ, ಸ್ವಲ್ಪ ದುಬಾರಿಯ ಪದಾರ್ಥಗಳಾದ ಗೋಡಂಬಿ ಕೇಸರಿ ದ್ರಾಕ್ಷಿಗಳ ಜತನತನವೂ ಅಲ್ಲಿಯೇ. ನಮಗೆಲ್ಲಾ ಆ ಕಾರಣದಿಂದ ಆ ಮೇಲಿನ ಸ್ಟೆಪ್(ಅರೆ) ತುಂಬಾ ಇಷ್ಟ. ಮನೆಯಲ್ಲಿ ಹಿರಿಯರು ಇಲ್ಲದಾಗ ಬಿಸ್ಕತ್ ಟಿನ್( ಬಿಸ್ಕತ್ ಗೆ ಉಪಯೋಗಿಸಿದ ಖಾಲಿ ಟಿನ್) ಮಗಚಿ ಇಟ್ಟು ಸರ್ಕಸ್ ಮಾಡಿ ಅಲ್ಲಿದ್ದ ಗೋಡಂಬಿ ಹೊಟ್ಟೆಗೆ ಸೇರಿಸಲು ಹರ ಸಾಹಸ ಮಾಡಿದ್ದಿದೆ. ಹಾಗೆ ಮಾಡಲು ಹೋಗಿ ದಡಾರನೆ ಬಿದ್ದು ಒದೆ ತಿಂದಿದ್ದೂ ಇದೆ. ಇವೆಲ್ಲಾ ಕಾರಣದಿಂದ ಕಪ್ಪುಮಸಿ ಬಣ್ಣದ ಮಜ್ಜಿಗೆಗೂಡು ನನ್ನ ಮಿದುಳಿನಲ್ಲಿ ಸಂಗ್ರಹವಾಗಿದೆ.
         ಈಗ ಮತ್ತೆ ಹೊಸ ಮನೆಯಲ್ಲಿ ಮಜ್ಜಿಗೆ ಗೂಡು ಮಾಡಿಸಿಯಾಗಿದೆ. ಆದರೆ ಮೊದಲನೇ ಸ್ಟೆಪ್ ಮಕ್ಕಳಿಗೆ ಸಿಗದಷ್ಟು ಎತ್ತರಕ್ಕೆ ಇಟ್ಟಾಗಿದೆ, ಕಾರನ ಈಗ ನಾವು ಮಕ್ಕಳ ಅನುಭವ ಪಡೆದ ದೊಡ್ಡವರು ಹಾಗಾಗಿ. ಆದರೆ ಕಪ್ಪು ಬಣ್ಣಕ್ಕೆ ಹೊಗೆ ಇಲ್ಲ ಕಾಲ ಬದಲಾಗಿದೆ.

Tuesday, August 21, 2012

ಓಕೆ ಮಜಾ ಮಾಡಿ ಮುಂಜಾನೆಯೊಂದಿಗೆ.

             "ಮುಂಜಾನೆದ್ದು ಕುಂಬಾರಣ್ಣ ಹಾಲು ಬಾನುಂಡಾನ, ಹಾರಿ ಹಾರ್ಯಾಡಿ ಮಣ್ಣ ತುಳಿದಾನ.." ಪ್ರಾಯಶಃ ಹೀಗೆಯೇ ಇರಬೇಕು ಒಂದು ಜನಪದ ಹಾಡಿದೆ. ತುಂಬಾ ಚೆನ್ನಾಗಿದೆ. ಅದರ ದನಿ ಒಳ್ಳೆಯ ಖುಷಿ ಕೊಡುತ್ತದೆ. ನನಗೆ ಅದರಲ್ಲಿ "ಮುಂಜಾನೆ" ಎಂಬ ಪದ ಇನ್ನಷ್ಟು ಖುಷಿ ಕೊಡುತ್ತದೆ. ಹೊಸ ದಿನದ ಆರಂಭದ ಕ್ಷಣವಾದ ಮುಂಜಾನೆಯಲ್ಲಿ ನಮಗೆ ಎಲ್ಲವೂ ಹೊಸ ಹೊಸತು. ರಾತ್ರಿ ಮಲಗಿ ಬೆಳಗ್ಗೆ ಏಳುವ ನಮ್ಮನ್ನೇ ನಾವು ಮರೆತು ಹೋಗಿದ್ದ ಆ ಆರೇಳು ತಾಸು ನಮ್ಮ ನಿಯಂತ್ರಣಕ್ಕೆ ಸಿಗದ ಕನಸುಗಳು, ನಮ್ಮ ದೇಹವನ್ನೇ ನಾವು ಮರೆತ ಗಳಿಗೆಗಳು ಏನಂತ ಹೇಗಂತ ತೀರಾ ತರ್ಕಕ್ಕೆ ಒಳಪಡಿಸದೆ ಕೇವಲ ಅನುಭವಕ್ಕಷ್ಟೆ ಆಲೋಚಿಸಿದರೆ ಇದ್ದಕ್ಕಿದ್ದಂತೆ ಚುಮು ಚುಮು ಬೆಳಗಿನಲ್ಲಿ ಪಟಕ್ಕನೆ ಎಚ್ಚರವಾದರೆ ಅದು ಮುಂಜಾನೆಯೇ ಆಗಿದ್ದರೆ, ನಿಮ್ಮ ಮಂಚದ ಪಕ್ಕದಲ್ಲಿ ಒಂದು ಕಿಟಕಿಯಿದ್ದರೆ, ಆ ಕಿಟಕಿಯಲ್ಲಿ ಕೆಂಬಣ್ಣದ ಸೂರ್ಯ ಇಣುಕಲು ಸಿದ್ಧವಾಗಿದ್ದರೆ, ಅದು ಸುಂದರ, ಕೇವಲ ಸುಂದರವೇನು ವರ್ಣಿಸಲಸದಳ. ಆದರೆ ಈ ಮುಂಜಾನೆಯನ್ನು ಅನುಭವಿಸಲು ನಿಮ್ಮ ರಾತ್ರಿಯೂ ಸುಂದರವಾಗಿರಬೇಕು, ಇನ್ನೇನು ನಿದ್ರೆಗೆ ಜಾರುವ ಕ್ಷಣಗಳು ನಿಮ್ಮ ನಿಯಂತ್ರಣದಲ್ಲಿರಬೇಕು. ಆ ನಿದ್ರೆಗೆ ಜಾರುವ ಕ್ಷಣಗಳು ಸುಂದರವಾಗಿರಬೇಕು ಎಂದಾದರೆ ಮುನ್ನಾ ದಿನದ ದಿನಚರಿ ನಿಮ್ಮ ಮನಸ್ಸಿಗೆ ಮಜ ಕೊಟ್ಟಿರಬೇಕು. ಮತ್ತೆ ಮಜ ಎಂದರೆ ಮೋಜಲ್ಲ ಅದು ಶಾಂತ ನೆಮ್ಮದಿ ಮುಂತಾದ ಪದಗಳಲ್ಲಿನ ನಿಮ್ಮ ಆತ್ಮ ತೃಪ್ತಿಯ ಮಜ.

           ಸರಿ ಮುನ್ನಾದಿನ ಯಾವ್ಯಾವುದೋ ಕಾರಣಕ್ಕೆ ಚಟಪಟ ಅಂತ ಮನಸ್ಸು ಅಂದಿದ್ದರೆ ಅಂದು ರಾತ್ರಿ ನಿಮ್ಮದೇಹ ನಿದ್ರೆಗೆ ಜಾರಿದ್ದರೂ ಮನಸ್ಸು ವಟವಟ ಅನ್ನುತ್ತಲಿರುತ್ತದೆ. ಈ ಪಟಪಟ ಸದ್ದು ರಾತ್ರಿ ಪೂರ್ತಿ ಕಾಡಿ ಮುಂಜಾನೆ ನಿಮಗೆ ಎಚ್ಚರವಾದಾಗ ಹೊಸತನವನ್ನು ಕಾಣಲು ಬಿಡುವುದಿಲ್ಲ. ಆವಾಗ ನವನವೀನ ಮುಂಜಾನೆಯ ಕ್ಷಣಗಳನ್ನು ಅನುಭವಿಸುವ ಮಜ ದಕ್ಕುವುದಿಲ್ಲ. ಆ ಮಜ ದಕ್ಕುವುದಿಲ್ಲ ಅಂದಾದ ಮೇಲೆ "ಮುಂಜಾನೆ" ಯು ಕಿರಿಕಿರಿಯಿಂದಲೆ ಆರಂಭ ಮತ್ತು ದಿನಪೂರ್ತಿ ಚಡಪಡಿಕೆ ಮತ್ತದೇ ರಾತ್ರಿ ಮತ್ತದೇ ಚಟಪಟ ಮನಸ್ಸಿನ ನಿದ್ರೆ ಮತ್ತದೇ ಕಿರಿಕಿರಿ ಮುಂಜಾನೆ. ಇಲ್ಲ ಅದು ಹಾಗಾಗಬಾರದು ದಿನನಿತ್ಯ ಹೊಸ ಮುಂಜಾನೆ ಹೊಸ ಸೂರ್ಯನ ಕಿರಣ ಹೊಸ ಮಜ ಆಗಬೇಕು ಅಂತಾದಲ್ಲಿ ಒಂದು ಸಣ್ಣ ಉಪಾಯವಿದೆ. ಅದನ್ನು ಹಲವರು ಹತ್ತುಬಾರಿ ನಿಮಗೆ ಹೇಳಿರಬಹುದು. ಆದರೂ ಮೊನ್ನೆ ನನೆಲ್ಲೋ ಓದಿದೆ ಅದನ್ನ ಇಲ್ಲಿ ಹೇಳಿಬಿಡುತ್ತೇನೆ. ಬೇಕಾದರೆ ಬಳಸಿಕೊಳ್ಳಿ ಬೇಡವಾದರೆ ಬಿಟ್ಟಾಕಿ.
             ನಮ್ಮ ಮಿದುಳಿಗೆ ಕೆಲಸವೆಂದರೆ ನೆನಪಿಟ್ಟುಕೊಳ್ಳುವುದು. ಅದು ನಮಗೆ ಬೇಕಾದ್ದರಿಲಿ ಬೇಡವಾದ್ದಿರಲಿ ನೆನಪಿಟ್ಟುಕೊಳ್ಳುತ್ತದೆ. ಭಯ ತರಿಸುವ ಧೈರ್ಯ ಕೊಡುವ ಎಲ್ಲಾ ಘಟನೆಗಳನ್ನು ಕಂಡಿದ್ದು ಕೇಳಿದ್ದರಲ್ಲಿ ಒಂದಿಷ್ಟು ಹೀಗೆ ನೆನಪಿಟ್ಟುಕೊಂಡು ಇದ್ದಕ್ಕಿದ್ದಂತೆ ದುತ್ತನೆ ನೆನಪಿಸುತ್ತದೆ. ಆ ನೆನಪಿನ ಶಕ್ತಿಯೇ ನಮಗೆ ಬಹು ಉಪಕಾರಿ ನಿಜ ಆದರೆ ಕೆಲವು ಬಾರಿ ಯಡವಟ್ಟುಕೊಡುತ್ತದೆ. ಆ ಯಡವಟ್ಟು ತಪ್ಪಿಸಲು ಸುಲಭ ಉಪಾಯವೆಂದರೆ ರಾತ್ರಿ ಮಲಗುವ ಮುನ್ನ ದೇಹವನ್ನು ದಣಿಸುವುದು. ತಕತಕ ಕುಣಿದರೂ ಸರಿಯೇ ಕಿಲೋಮೀಟರ್ ನಡೆದರೂ ಸರಿಯೇ ಒಟ್ಟಿನಲ್ಲಿ ದೇಹ ದಣಿಯಬೇಕು. ದೇಹ ದಣಿದ ಮರುಕ್ಷಣ ನಿದ್ರೆ ಆಳವಾಗಿ ಬರುತ್ತದೆ ಆವಾಗ ಮುಂಜಾನೆ ಸೂಪರ್. ಒಟ್ಟಿನಲ್ಲಿ ಮುಂಜಾನೆ ಸೂಪರ್ ಇರಬೇಕು ಎಂದಾದರೆ ಹೊಸತನದಿಂದ ಕೂಡಿರಬೇಕು ಎಂದಾದರೆ ಮುನ್ನಾದಿನ ಬಹುಮುಖ್ಯ. ಎಂಬಲ್ಲಿಗೆ ಜೀವನದಲ್ಲಿ ಎಲ್ಲಾ ದಿನಗಳು ಮುಖ್ಯ ಎಂದು ಹೊಸತಾಗಿ ಹೇಳಬೇಕಾಗಿಲ್ಲ ತಾನೆ?. ಆದರೆ ಈ ಜಂಜಡದಲ್ಲಿ ನಾವು ಎಲ್ಲಾ ದಿನಗಳನ್ನು ನಮಗೆ ಬೇಕಾದಂತೆ ಮಾಡಿಕೊಳ್ಳಲು ಆಗುವುದಿಲ್ಲ. ಅದು ಮಿಕ್ಕವರನ್ನೂ ಅವಲಂಬಿಸಿರುತ್ತದೆ. ಹಾಗಾಗಿ ಮಲಗುವ ಮುನ್ನ ನಮ್ಮನ್ನು ನಾವು ದಣಿಸಿಕೊಳ್ಳಬಹುದು. ಅದು ಸುಖ ನಿದ್ರೆಗೆ ಸುಲಭೋಪಾಯ, ಮತ್ತು ಶುಭ ಮುಂಜಾನೆಗೂ ಅದೇ ರಾಜಮಾರ್ಗ. ಓಕೆ ಮಜಾ ಮಾಡಿ ಮುಂಜಾನೆಯೊಂದಿಗೆ.

Photo:  SriakantaDatta Bangalore

Monday, August 20, 2012

ನನ್ನದಂತೂ ಆಸೆ ಅಷ್ಟೆ.

ಅಕ ಇಕ ಎನ್ನುವುದರೊಳಗೆ ನಾನು ಹೊಚ್ಚಹೊಸ ಕಾರು ತೆಗೆದುಕೊಂಡು ಒಂದು ವರ್ಷವಾಗುತ್ತಿದೆ
. ಸ್ಯಾಂಟ್ರೊ ಬರೊಬ್ಬರಿ ೧೮೧೫೦ ಕಿಲೋಮೀಟರ್ ನನ್ನನ್ನು ಸುತ್ತಾಡಿಸಿ ಇನ್ನೂ ಮಿರಿಮಿರಿ ಮಿಂಚುತ್ತಿಲ್ಲದಿದ್ದರೂ ಚೆನ್ನಾಗಿದೆ. ಕಾರ್ ಕಾರ್ ಕಾರ್ ಎಲ್ನೊಡಿ ಕಾರ್ ಎನ್ನುವಂತೆ ಒಂದು ಕಾಲದ ಐಷಾರಾಮಿಯಾಗಿದ್ದ ಕಾರುಗಳು ಈ ದಶಕದಲ್ಲಿ ಭಾರತದಂತಹ ಮಧ್ಯಮವರ್ಗದ ಜನರ ಸಂಖ್ಯೆ ಜಾಸ್ತಿಯಿರುವ ಇಂಡಿಯಾದಲ್ಲಿಯೂ ಅವಶ್ಯಕತೆಯ ಮಟ್ಟಕ್ಕೆ ಇಳಿದಿರುವುದು ಒಂಥರಾ ಸಂತಸದ ಸಂಗತಿ. ೪೦ ಸಾವಿರ ರೂಪಾಯಿಗಳು ಜೇಬಲ್ಲಿದ್ದರೆ ಅದಕ್ಕೆ ರಕ್ಕೆ ಬಂದಿದ್ದರೆ ಒಂದು ಸೆಕೆಂಡ್ ಹ್ಯಾಂಡ್ ಕಾರ್ ಕೊಂಡು ಕನಸು ನನಸು ಮಾಡಿಕೊಳ್ಳಬಹುದು ಎಂದಾದರೆ ಕನಸು ಕಾಣದೆ ಭಾಗ್ಯ ಕಳೆದುಕೊಳ್ಳಬೇಕೇ ವಿನಹ ನನಸಿಗೇನು ತೊಂದರೆಯಿಲ್ಲ ಎನ್ನುವಷ್ಟರಮಟ್ಟಿಗೆ ಇದೆ ಸ್ಥಿತಿ ಪರಿಸ್ಥಿತಿ. ಪುಟ್ಟ ಮನೆಯ ಮಜಕೊಡುವ ಕಾರ್ ಒಮ್ಮೆ ಅಭ್ಯಾಸವಾಯಿತೆಂದರೆ ಆಮೇಲೆ ಆರ್ಥಿಕ ಪರಿಸ್ಥಿತಿ ಕಣ್ಣಿಗೆ ಮನಸ್ಸಿಗೆ ಗೋಚರಿಸದು. ಮಜ ಇದೆ ಅಲ್ಲಿ ಅನುಭವಿಸುವ ಮನಸ್ಸು ಇರಬೇಕು ಅಥವಾ ಯೋಗದ ನಂಟು ಬಯಸುವ ಮಂದಿಯ ದೃಷ್ಟಿಯಲ್ಲಿ ಅದಿರಬೇಕು ಯೋಗಾಯೋಗ. ಅಂತೂ ಏನೋ ಒಂದು ವರ್ಷವಂತೂ ಯೋಗವಿತ್ತು ಮುಂದಿನದು..? ಯಾರಿಗೆ ಗೊತ್ತು....! ನನ್ನದಂತೂ ಆಸೆ ಅಷ್ಟೆ.

Sunday, August 19, 2012

ಅಷ್ಟಕ್ಕೆ ಬಿಟ್ಟರೂ ಓಕೆ.

           ನೀವು ಅಷ್ಟರಮಟ್ಟಿಗೆ ಬೆಳೆದಿರಿ ಎಂತಾದರೆ ಪ್ರಪಂಚವನ್ನೇ ಗೆದ್ದಂತೆ ಬಿಡಿ. ಅಷ್ಟರಮಟ್ಟಿಗೆ ಎಂದರೆ ಎಷ್ಟರಮಟ್ಟಿಗೆ ಎಂದಿರಾ...? ಸರಿ ಹಾಗಾದರೆ ನಾನೇನು ಮಾಡಲಿ ಕೊರೆಯಿಸಿಕೊಳ್ಳಲು ನೀವೇ ಬೈರಿಗೆ ಕೊಟ್ಟಂತಾಯಿತು . ಅಯ್ಯ ನಾನೆಲ್ಲಿ ಎಷ್ಟರಮಟ್ಟಿಗೆ..? ಎಂದೆ ಎಂದಿರಾ ಹಾಗಾದರೆ ಅದಕ್ಕೂ ನಾನು ತಯಾರು , ಮುಂದೆ ಹಾಗಂದವರು ಓದದಿದ್ದರಾಯಿತು. ಗೊಂದಲ ಬೇಡ ಸುಮ್ಮನೆ ಹೋಗೋಣ ಅಲ್ಲವೇ..?

           ಕಸ್ತೂರಿ ಕನ್ನಡಿಗರಾದ ನಾವು ನೀವುಗಳು ಒಂದಿಷ್ಟು ಜನಕ್ಕೆ ನೀವು ಎನ್ನುತ್ತೇವೆ, ಮತ್ತೊಂದಿಷ್ಟು ಜನಕ್ಕೆ ನೀನು ಎಂದು ಸಂಬೋಧಿಸುತ್ತೇವೆ. ವ್ಯಕ್ತಿಗತವಾಗಿ ನೀವು ಎಂಬ ಬಹುವಚನವೂ ಹಾಗೂ ನೀನು ಎಂಬ ಏಕವಚನವೂ ಇಂಗ್ಲೀಷ್ ನಲ್ಲಿ ಇಲ್ಲ ಅಂತ ಬಲ್ಲವರು ಹೇಳಿದ್ದು ಕೇಳಿದ್ದೇನೆ. ಇರಲಿ ಅವರ ಕತೆ ನಮಗೆ ಬೇಡ. ನಮ್ಮದೇ ನಮಗೆ ಹಾಸಿ ಹೊದ್ದುಕೊಳ್ಳುವಷ್ಟು ಬಿದ್ದಿದೆ ಅಲ್ಲೇಲ್ಲೋ ಇರೋರ ಕತೆ ಯಾಕೆ ಈಗ ಹಾಗಾಗಿ ವಿಷಯದತ್ತ ಹೊರಳೋಣ.
            ಈ ನೀನು ನೀವು ಗುದ್ದಾಟವನ್ನು ಒಮ್ಮೆ ಹೀಗೆ ಸುಮ್ಮನೆ ಕುಳಿತಾಗ ಆಲೋಚನೆ ಮಾಡಿ ನೋಡಿ. ಚಿತ್ರವಿಚಿತ್ರ ಹೊಳವಿನತ್ತ ಯೋಚನೆ ಸಾಗುತ್ತದೆ. ಸರ್ವಾಂತರ್ಯಾಮಿ ಸರ್ವಶಕ್ತನಾದ ಆ ಭಗವಂತನನ್ನು ನಾವು ನೀನು ಅಂತ ಏಕವಚನದಲ್ಲಿ ಕರೆಯುತ್ತೇವೆ. ದೇವರ ವಿಚಾರ ವಿಷಯಗಳಲ್ಲಿ ನಾವು ಪಕ್ಕಾ ಏಕವಚನ. ಮನೆಗೆ ಕಂಠಮಟ್ಟ ಕುಡಿದು ಬರುವ ಗಂಡನಿಂದ ಹಿಡಿದು ಸಕಲ ಜವಾಬ್ದಾರಿ ನಿಭಾಯಿಸುವ ಗಂಡಸಿನವರೆಗೂ ನಮ್ಮ ಮಹಿಳೆಯರು "ನೀವು" ಬನ್ನಿ ಹೋಗಿ" ಮುಂತಾಗಿ ಗೌರವ ಸೂಚಕ ಪದಗಳನ್ನು ಬಳಸುತ್ತಾರೆ. ಅಯ್ಯ ಇದೆಂತಾ ವಿಪರ್ಯಾಸ ಅಂತ ನನಗೆ ಕಾಡಿದ್ದಿದೆ. ಪರಿಚಯ ಆದ ತಕ್ಷಣ ನೀವು ಎಂಬ ಪದಗಳಿಂದ ಆರಂಭವಾಗುವ ಮಾತುಗಳು ತೀರಾ ಹತ್ತಿರವಾಗುತ್ತಿದ್ದಂತೆ ನೀನು ಎಂಬ ಮಾತಿಗೆ ತಿರುಗುತ್ತದೆ. ಈ ಏಕವಚನ ಎಂಬುದು ಆತ್ಮೀಯತೆಯ ಸಂಕೇತ ಅಂತ ಕೆಲವರು ಹೇಳುತ್ತಾರಪ್ಪ. ಸರಿ ಅದು ಆತ್ಮೀಯತೆಯ ಸಂಕೇತ ಅಂದಾದರೆ ಗಂಡನ ಬಳಿ ಹೆಂಡತಿಗೆ ಆತ್ಮೀಯತೆ ಇಲ್ಲವೇ..? ಎಂಬ ಪ್ರಶ್ನೆ ಬಡಕ್ಕನೆ ಎದ್ದು ನಿಲ್ಲುತ್ತದೆ. ಇಲ್ಲ ಆತ್ಮೀಯತೆಯೊಂದೇ ಅಲ್ಲಿ ಗೋಚರಿಸುವುದಿಲ್ಲ ನೀವು ಎಂಬುದು ಗೌರವ ಸೂಚಕ ಅಂತ ಅದಕ್ಕೆ ಪುಷ್ಠಿ. ಆದರೆ ಮರುಕ್ಷಣ ಹಾಗಾದರೆ ಆ ಮಹಾನುಭಾವ ದೇವರಿಗೆ ಗೌರವ ಸೂಚಕದ ಅವಶ್ಯಕೆತೆ ಇಲ್ಲವೇ..? ಎಂಬ ಕುಚೋದ್ಯವಲ್ಲದ ಕ್ವಶ್ಚನ್ ಹುಟ್ಟುವುದು ಸ್ವಾಭಾವಿಕ.
          ದೇವರಿಗೆ ಇಲ್ಲದ ಗೌರವ ಸೂಚಕ ಆ ಭಗವಂತನ ಅರ್ಚಕರಾದ ಪುರೋಹಿತರುಗಳಿಗೆ ಪುಗಸಟ್ಟೆ ಸಿಗುತ್ತದೆ. ಅಕಸ್ಮಾತ್ ಬಾಯಿತಪ್ಪಿ ಪುರೋಹಿತರುಗಳಿಗೆ ನೀವುಗಳು ಅಥವಾ ನಾವುಗಳು...! ಏಕವಚನದಲ್ಲಿ ಕರೆದಿವಿ ಅಂತಾದಲ್ಲಿ ಸ್ವತಃ ಅವರಿಂದ ಹಿಡಿದು ಮನೆಯಲ್ಲಿರುವ ಇವರ ವರೆಗೂ ಕೆಂಡಾಮಂಡಲ ಕೋಪ ಬರುತ್ತದೆ. ಅದು ಎಷ್ಟರಮಟ್ಟಿಗೆ ಎಂದರೆ ಮನೆಯಲ್ಲಿ ಶಾಂತಿ ನೆಮ್ಮೆದಿ ನೆಲಸುವ ಸಲುವಾಗಿ ಹಾಕಿಕೊಂಡ ಕಾರ್ಯಕ್ರಮ ಗಬ್ಬೆದ್ದು ಹೋಗುವಷ್ಟು.
          ಇದೆ, ವಿಷಯ ಇದೆ ಎಷ್ಟಪ್ಪಾ ಎಂದರೆ "ನೀವು ನಾವು" ಎಂಬ ವಿಷಯದ ಮೇಲೆ ಒಂದು ಕಾದಂಬರಿ ಬರೆಯುವಷ್ಟು ವಿಷಯ ಇದೆ. ಆದರೆ ಅದು ಎಷ್ಟು ಹೇಳಿದರೂ ಮತ್ಯಾರೋ ಕಾಮೆಂಟಿನಲ್ಲಿ ಒಂದೇ ಸಾಲಿನಲ್ಲಿ "ನೀನು ನೀನೆ ನಾನು ನಾನೆ" ಅಂತ ಒಂದೇ ಸಾಲಿನಲ್ಲಿ ಜಡಿದು ನಾನು ಕೈಬೆರಳು ನೋಯಿಸಿಕೊಂಡ ಶ್ರಮವನ್ನು ವ್ಯರ್ಥಮಾಡಿಬಿಡುತ್ತಾರೆ. ಹಾಗಾಗಿ ನಿಮ್ಮ ಹೈ ಐಕ್ಯೂ ಇರುವ ಮಿದುಳಿಗೆ ಹೀಗೊಂದು ವಿಷಯ ಬಿಟ್ಟಿದ್ದೇನೆ. ಅದು ಯಾವ್ಯಾವ ಹೊಳವನ್ನ ಪಡೆಯುತ್ತದೆಯೋ ನೋಡೋಣ. ಅಷ್ಟಕ್ಕೆ ಬಿಟ್ಟರೂ ಓಕೆ ಈಗ ನಿಮಗೆ ಅರ್ಥವಾಗಿರಬೇಕು ಎಷ್ಟರಮಟ್ಟಿಗೆ ಬೆಳೆದರೆ ಎಂದು. 

Monday, August 13, 2012

ಇಲ್ಲಿ ಚೊರೆದೆ ಅಷ್ಟೆ.

"ನಾನು ಸತ್ಯವನ್ನೇ ಹೇಳುತ್ತೇನೆ," ಅದೇನೋ ಸರಿ ಮರುಕ್ಷಣ "ನಾನು ಹೇಳುವುದೆಲ್ಲಾ ಸತ್ಯ" ಅಂದರೆ ಮೊದಲನೇ ಸಾಲಿಗೆ ಏನಂತ ಅರ್ಥ ಕಲ್ಪಿಸುವುದು..?.  ಅಷ್ಟಕ್ಕೂ ನಾವುಗಳು ನಮ್ಮ ಬದುಕಿನುದ್ದಕ್ಕೂ ಕೇವಲ ಸತ್ಯವನ್ನೇ ಹೇಳಿಕೊಂಡು ಬರಲು ಸಾದ್ಯವೇ..? ಸುಳ್ಳು ಹೇಳುತ್ತಾ ಬದುಕಿದ್ದಕ್ಕೆ ನಮ್ಮ ಅಂತರಂಗದಲ್ಲಿಯೇ ಸಾಕಷ್ಟು ಉದಾಹರಣೇ ಇಲ್ಲವೇ..? ಹೀಗೆ ಪ್ರಶ್ನೆಗಳು ಹುಟ್ಟತೊಡಗಿದರೆ ಪಟಕ್ಕನೆ ಬೇರೆ ಕೆಲಸದತ್ತ  ಹೊರಳುವುದು ಬಹಳ ಒಳ್ಳೆಯದು. ಇಲ್ಲವಾದಲ್ಲಿ ತಲೆಯೆಂಬ ತಲೆ ಮೊಸರು ಗಡಿಗೆ ಯಾಗಿಬಿಡುತ್ತದೆ. ಅಥವಾ ಒಂದು ಪರಿಪಕ್ವ ತೀರ್ಮಾನಕ್ಕೆ ಬರುವ ಮನಸ್ಥಿತಿ ಇದ್ದರೆ ಅದೂ ಒಳ್ಳೆಯದು.
       ಈ ಮನುಷ್ಯ ಪ್ರಪಂಚದಲ್ಲಿ ಸುಳ್ಳು-ಸತ್ಯ ಎರಡೂ ಒಟ್ಟಿಗೆ ಸಾಗುತ್ತಲಿದೆ ಅನಾದಿಯಿಂದಲೂ. ನಾವು ಸುಳ್ಳನ್ನು ಹೇಳುತ್ತಾ ಅದೇ ಸತ್ಯ ಎಂದು ಬಿಂಬಿಸುತ್ತಾ ಸಾಗುತ್ತಿರುತ್ತೇವೆ. ಸತ್ಯ ಹೇಳುತ್ತಲಿದ್ದರೂ ಇಲ್ಲ ಅದು ಸುಳ್ಳು ಎಂದು ಜನ ಬಿಂಬಿಸುತ್ತಾ ಸಾಗುತ್ತಲಿರುತ್ತಾರೆ. ಆದರೆ ನಿಜವಾದ ಪರಮ ಸತ್ಯ ಅಂತ ಒಂದು ಇದೆಯಲ್ಲ ಅದಕ್ಕೆ ಕಾಲ ಉತ್ತರಿಸುತ್ತದೆ. ಆದರೆ ಅಷ್ಟರೊಳಗೆ ಸತ್ಯವನ್ನು ಸುಳ್ಳೆಂದವರೂ ಸುಳ್ಳನ್ನು ಸತ್ಯವೆಂದವರು ಕಾಲವಾಗಿಬಿಟ್ಟಿರಬಹುದು. ಸತ್ಯಕ್ಕೆ ಜಯ ಸುಳ್ಳಿಗೆ ಸೋಲು ಮುಂತಾಗಿ ಎಂದೂ ಇಲ್ಲ ಇಂದೂ ಇಲ್ಲ ಮುಂದೂ ಇಲ್ಲ. ನಾವು ಎಲ್ಲಿ ನಿಂತುಕೊಂಡಿದ್ದೇವೆ ಎಂಬುದರ ಮೇಲೆ ಎಷ್ಟು ಕಾಲ ಅದರ ಮೇಲೆ ಇರುತ್ತೇವೆ ಎಂಬುದರ ಮೇಲೆ ಸೋಲು ಗೆಲುವುಗಳು. ಅದಕ್ಕೂ ತುಸು ಮೇಲೆ ನಿಂತು ಆಲೋಚಿಸಿದರೆ ಈ ಪ್ರಪಂಚದಲ್ಲಿ ಸೋಲೂ ಇಲ್ಲ ಗೆಲುವೂ ಇಲ್ಲ ಅವೆಲ್ಲಾ ಅವರವರಿಗೆ ಬೇಕಾದಂತೆ ಅರ್ಥೈಸುವ ರೀತಿಯಲ್ಲಿದೆ ಅಷ್ಟೆ. ಹಾಗಾಗಿ ಬದುಕನ್ನ ತೀರಾ ತಲೆಗೆ ಹಚ್ಚಿಕೊಳ್ಳಬೇಡಿ. ಸುಮ್ಮನೆ ಸಾಗಿರಿ, ನೇವು ಬೇರೆಯವರ ಹಿಂದೆ ನಿಮ್ಮಹಿಂದೆ ಬೇರೆಯವರು. ಸಿಕ್ಕಿದ್ದ್ದೆಲ್ಲಾ ದಕ್ಕಿದ್ದೆಲ್ಲಾ ಮಜ ಅಂದರೂ ಸುಳ್ಳು ಅಂತ ಜನಅ ನ್ನಬಹುದು, ಅಯ್ಯೋ  ಅಂದರೂ ಜನ ಸತ್ಯ ಅನ್ನದಿರಬಹುದು.
         ಅಯ್ಯ ಬೆಳಗಾ ಮುಂಚೆ ಇದೆಂತಾ ಬ್ಲಾಗಿದೆ ಮಾರಾಯ ಅಂದಿರಾ..? ಇಲ್ಲಪ್ಪ ಇದು ನಂದಲ್ಲ ನಿನ್ನೆ ಯಾರೋ ಸಿಕ್ಕಿದ್ದರು ಅರ್ದ ಗಂಟೆ ಪಟ್ಟಂಗಕ್ಕೆ, ಅವರು ಹೇಳಿದರಪ್ಪಾ.. ಇಲ್ಲಿ ಚೊರೆದೆ ಅಷ್ಟೆ. ಇಷ್ಟನ್ನೂ ಒಂದೇ ವಾಕ್ಯದಲ್ಲಿ ಹೇಳಬುದಿತ್ತು ಅದು ನನಗೆ ಬರಲಿಲ್ಲ ಅಷ್ಟೆ.

Thursday, August 9, 2012

ಒಮ್ಮೆ ನೋಡು ಜೋಗಾದ್ ಗುಂಡಿ

ಆಶ್ಲೇಷ ಮಳೆ ಅಬ್ಬರಿಸಿದ ಕಾರಣ ಜೋಗ ಜಲಪಾತ ತುಂಬಿ ತುಳುಕಾಡುತ್ತಿದೆ. ನಿತ್ಯ ಪ್ರವಾಸಿಗರ ಧಾಳಿಯಿಂದ ಗಿಜಿಗಿಜಿ ಎನ್ನುತ್ತಿದೆ ಜೋಗ. ನಿಮಗೂ ಹೇಗೂ ಪುರ್ಸೊತ್ತಿದ್ದರೆ ಬಂದು ಹೋಗಬಹುದು. ಇಲ್ಲ ಆಗಲ್ಲ ಅಂತಾದ್ರೆ ಒಮ್ಮೆ  ಈ ಫೋಟೋ ನೋಡಿ ಕಣ್ತುಂಬಿಕೊಂಡು ಬಿಡಿ. ಯಾಕಂದ್ರೆ "ಸಾಯೊದ್ರೊಳಗೆ ಒಮ್ಮೆ ನೋಡು ಜೋಗಾದ್ ಗುಂಡಿ" ಅಂಬೋ ಕವಿ ವಾಣಿಯನ್ನು   ಬೆಂಬಲಿಸಬೇಕಲ್ಲ ಹಾಗಾಗಿ. ಶುಭದಿನ

Tuesday, August 7, 2012

ಆಗಲೇ ಸಾರ್ಥಕ. ಇಲ್ಲದಿದ್ದಲ್ಲಿ ನಿರರ್ಥಕ.

                "ನೋಡಿ ನಾನು ಹೀಗೆ ಹೇಳುತ್ತಿದ್ದೀನಿ ಅಂತ ನೀನು ತಪ್ಪು ತಿಳಿದುಕೊಳ್ಳಬೇಡ. ಇತ್ತೀಚೆಗೆ ನೀನು ತೀರಾ ಒಂಥರಾ ಆಗುತ್ತಿದ್ದಿ, ಯಾವಾಗಲೂ ಬೇಡದ ಚಿಂತೆ, ಅದೇ ಮಾತು, ಎಲ್ಲಿ ಕಳೆದುಹೋಗಿದ್ದೀ ನೀನು" ಆತ ಹಾಗಂದ ಕ್ಷಣ ನಾನು ಒಮ್ಮೆ ತಬ್ಬಿಬ್ಬಾದೆ. ಹೌದಾ....? ಅಂತ ನನ್ನನ್ನು ನಾನು ಕೇಳಿಕೊಂಡೆ ರಾತ್ರಿ ಮಲಗಿದಾಗ. ಹೌದೇ ಹೌದು ಈ ಒಂದು ವರ್ಷದಲ್ಲಿ ಮನೆ ಕಟ್ಟುವಾಗಿನ ಸಮಯದಲ್ಲಿ ಬಂದ ತರ್ಲೆಗಳ ಬಗ್ಗೆ ಯೋಚಿಸುತ್ತಾ ನಾನು ಅವರಂತೆ ಆಡಲು ಶುರುವಿಟ್ಟುಕೊಂಡಿದ್ದೆ. ನಿಂತಲ್ಲಿ ಕುಂತಲ್ಲಿ ನಾನೂ ತರ್ಲೆ ಅರ್ಜಿ ಹಾಕಬೇಕು ಅವರಿಗೂ ಹೀಗೆ ಆಟ ಆಡಿಸಬೇಕು, ನಾನು ಕಟ್ಟಿಸುತ್ತಿದ್ದ ಸ್ವಂತ ಜಾಗದ ಮನೆಗೆ ಇಷ್ಟೆಲ್ಲಾ ತೊಂದರೆ ಕೊಟ್ಟರು ಅಂತಾದರೆ ಅವರೆಲ್ಲಾ ಸರ್ಕಾರಿ ಜಾಗದಲ್ಲಿ ಕಟ್ಟಿಕೊಂಡ ಮನೆಗಳಿಗೆ ನಾನೂ ಹೈಕೋರ್ಟ್ ಗೆ ಹೋಗಿ ಸ್ಟೆ ತರಬೇಕು, ಛೆ ಛೇ ಛೇ ಅಂತದ್ದೇ ಆಲೋಚನೆಯಿಂದ ನಿಧಾನ ಇಳಿಯತೊಡಗಿದ್ದೆ. ಆವಾಗಲೇ ಅವನು ಎಚ್ಚರಿಸಿದ, ಅವನೆಂದರೆ ಬೇರೆ ಯಾರೂ ಅಲ್ಲ ನನ್ನೊಳಗಿನ ಅವನು.

                ನೋಡಿ ನಾವೂ ನೀವು ಯಾರು ಎಷ್ಟೇ ಹಾರಾಡಲಿ ಕೂಗಾಡಲಿ ಚೀರಾಡಲಿ ಇಲ್ಲಿ ಒಂದು ಶಿಸ್ತುಬದ್ಧ ನಿಯಮವಿದೆ ನೀತಿಇದೆ. ನಮ್ಮ ಮನಸ್ಸಿಗೆ ಸ್ವಭಾವಕ್ಕೆ ಸುಖದ ನಿದ್ರೆಗೆ ಯಾವುದು ಆರಾಮದಾಯಕವೋ ಆ ಬಿಳಲನ್ನು ಹಿಡಿದುಕೊಂಡು ಜೀವನ ಯಾತ್ರೆ ಮುಗಿಸಬೇಕು. ಗುರಿಯೊಂದು ಗುರುವೊಂದು ಸಮರ್ಪಕವಾಗಿ ಸಿಕ್ಕಲ್ಲಿ ನಿಮ್ಮ ಅದೃಷ್ಟ, ಅಕಸ್ಮಾತ್ ಸಿಗದಿದ್ದಲ್ಲಿ ಗುರಿ ಹುಡುಕಿಕೊಂಡು ಗುರು ಪಡೆದುಕೊಂಡಲ್ಲಿ ಅದು ನಿಮ್ಮ ತಾಕತ್ತು. ಈ ತಾಕತ್ತು ಅದೃಷ್ಟದ ಆಟ ಹೇಗೂ ಸಾಗಬಹುದು. ಕಳೆದ ದಿನಗಳನ್ನು ಪದೇ ಪದೇ ಹಿಂತಿರುಗಿ ನೋಡಿದಲ್ಲಿ ಅಲ್ಲಿ ಸ್ಪಷ್ಟವಾಗಿ ನಮ್ಮ ತಪ್ಪುಗಳು ಗೋಚರಿಸತೊಡಗಿದರೆ ಮುಂದಿನ ದಾರಿ ಸುಗಮ. ಮೊನ್ನೆ ಯೆಲ್ಲೋ ಓದಿದೆ, ಕಳೆದ ಕಾಲ ರದ್ದಿ ಪೇಪರ್-ವರ್ತಮಾನ ನ್ಯೂಸ್ ಪೇಪರ್-ಭವಿಷ್ಯ ಖಾಲಿ ಪೇಪರ್. ವಾವ್ ಚನ್ನಾಗಿದೆ ಅಲ್ಲವೇ?. ಖಾಲಿ ಪೇಪರ್ ನಲ್ಲಿ ನಮ್ಮ ಭವಿಷ್ಯವನ್ನು ಬರೆಯುವ ಯತ್ನದಲ್ಲಿ ಹಿಂದಿನದು ಸಹಾಯಕ್ಕೆ ಬರಬೇಕು ಆವಾಗ ಸ್ವಲ್ಪ ಮಜ ಅನುಭವಿಸಿಕೊಳ್ಳಬಹುದು.
                "ಅಲ್ಲಾ ಗುರು... ಏನಂತ ಬರೆಯುತ್ತಿದ್ದೀಯಾ..? ನನಗಂತೂ ತಲೆ ಬುಡ ಅರ್ಥವಾಗುತ್ತಿಲ್ಲ" ಅಂತ ಪಾಪ ನೀವು ಲೊಚಗುಟ್ಟುತ್ತಿದ್ದೀರಿ ಅಂತ ಗೊತ್ತು. ಈಗ ನಿಮಗೆ ನನ್ನ ಬರಹ ಅರ್ಥವಾಗುತ್ತಿಲ್ಲ. ಮುಂದೊಂದು ದಿವಸ ಅರ್ಥವಾಗಬಹುದು, ಓದಿದಿರಿ ತಾನೆ?. ನಿಮ್ಮ ಸುಪ್ತಮನಸ್ಸಿನಲ್ಲಿ ಸ್ಟಾಕ್ ಆಗಿದೆ, ಇನ್ನು ನಿಶ್ಚಿಂತೆಯಿಂದ ನಿಮ್ಮಕೆಲಸದಲ್ಲಿ ತೊಡಗಿ. ನಾನು ಇನ್ನೊಂದೆರಡು ಸಾಲು ಕುಟ್ಟಿ ಮುಗಿಸುತ್ತೇನೆ.
               ಈ ಪಟದಲ್ಲಿ ಹೂವಿನ ಚಿತ್ರವೊಂದಿದೆ. ಆ ಹೂವಿಗೆ ಚಂದದ ಪರಿಮಳವೊಂದಿದೆ. ಆ ಪರಿಮಳ ಆಸ್ವಾದಿಸಲು ನಮಗೆ ನಿಮಗೆ ಮೂಗಿದೆ. ಪಟಪಟ ಮಿಟುಕಿಸುತ್ತಾ ಹೂವ ನೋಡಲು ಸುಂದರ ಎರಡು ಕಣ್ಣಿದೆ, ಹೂವ ಕೊಯ್ದು ಮೂಗಿನ ಬಳಿ ಒಡ್ಡಲು ಕೈಯಿದೆ, ಗಿಡದ ಬಳಿ ಸಾಗಲು ಕಾಲಿದೆ. ಅಷ್ಟಕ್ಕೂ ಇಷ್ಟಕ್ಕೆಲ್ಲಾ ಹತ್ತಿಪ್ಪತ್ತು ನಿಮಿಷ ಬೇಕಾಬಿಟ್ಟಿ ಸಮಯ ಬಿದ್ದಿದೆ. ಆದರೆ ನಾವು ಆಘ್ರಾಣಿಸುವ ಕೆಲಸ ಮರೆತಿದ್ದೇವೆ. ರಸ್ತೆಯಲ್ಲಿ ಸಾಗುತ್ತಿದ್ದಾಗ ಅದಾಗಿಯೇ ಮೂಗಿಗೆ ಬಂದು ಬಡಿಯುವ ಗಬ್ಬು ನಾತವನ್ನು ಸೇದುವ ಮಟ್ಟಿಗೆ ಮೂಗನ್ನು ಬಳಸಿಕೊಳ್ಳುತ್ತಿದ್ದೇವೆ. ಇಲ್ಲ ನನ್ನನ್ನೂ ಸೇರಿದಂತೆ ನೀವೂ ಬದಲಾಗಬೇಕಿದೆ. ಭಗವಂತ ಕೊಟ್ಟ ಎಲ್ಲಾ ಅವಯವಗಳನ್ನು ನಾವು ಉಪಯೋಗಿಸಬೇಕಿದೆ. ಅದು ಕೂಡ ಸದುಪಯೋಗಕ್ಕೆ ಮಾತ್ರಾ . ಆಗಲೇ ಸಾರ್ಥಕ. ಇಲ್ಲದಿದ್ದಲ್ಲಿ ನಿರರ್ಥಕ.

Monday, August 6, 2012

ಗೊತ್ತಾ ನಿಮಗೆ ಅಜ್ಜಿಸಿಂಬಳ........?




ಮಲೆನಾಡಿನಲ್ಲಿ ಬಾಲ್ಯ ಕಳೆದದ್ದೇ ಆದರೆ ".. ಅಜ್ಜಿಮುದುಕಿ ಸುಂಬಳಾನಾ...." ಅಂತ ರಾಗ ಎಳೆಯುತ್ತೀರಿ ನೀವು. ಹೌದು ಅದೇ ಇದು. "ಅಬ್ಬರದ ಮಳೆಗಾಲ ಮುಗಿದು ಕಿಟಿಕಿಟಿ ಮಳೆ ಶುರುವಾದ ತಕ್ಷಣ ಮರದಾಳಿ ಹುಲ್ಲಿನ ಬೇರಿನಲ್ಲಿ ಸಂಗ್ರಹವಾಗುವ ನೀರಿಗೆ ಹೀಗೆಂದು ಕರೆಯುತ್ತಾರೆ, ನಾವು ಸಣ್ಣಕ್ಕಿದ್ದಾಗ ಅದನ್ನು ಬಾಯಲ್ಲಿಟ್ಟು ಸೀಬುತ್ತಿದ್ದೆವು" ಅಂತ ನಿಮ್ಮ ಪುಟ್ಟ(ಟ್ಟಿ)ನ ಬಳಿ ಕತೆ ಹೇಳುತ್ತೀರಿ ಅನ್ನೋದು ನನಗೆ ಗೊತ್ತು. ಆದರೆ ಮಲೆನಾಡೆಂಬ ಮಳೆನಾಡಲ್ಲಿ ಹುಟ್ಟದೇ ಹೋಗಿ ನಂತರ ಒಂದು ದಿನ ಇಲ್ಲಿಗೆ ಬಂದವರಾಗಿದ್ದರೆ ಇದರ ಬಗ್ಗೆ ಮಾಹಿತಿ ನಿಮಗೆ ಬೇಕೇ ಬೇಕು ತಾನೆ..?. ಸರಿ ಹಾಗಾದರೆ ಅದೇ ಮಾಹಿತಿ ಆರಂಭದಲ್ಲಿ ಇತ್ತಲ್ಲ ಅದು. ಪರಿಶುದ್ಧವಾದ ನೀರು ಹುಲ್ಲಿನ ಬೇರಿಗೆ ಅಂಟಿಕೊಂಡಿರುತ್ತದೆ ಅದನ್ನು ನೀವು ಪರಹಿಂಸೆ ಸಹಿಸದ ಜನರಾಗಿದ್ದರೆ ಬೇರನ್ನು ಕತ್ತರಿಸದೇ ಹಾಗೆಯೇ ಬಾಯಲ್ಲಿಟ್ಟು ಸೀಬಿ ಮತ್ತೆ ಕೈಬಿಡಬಹುದು. ಇಲ್ಲ ನನಗೆ ಅವೆಲ್ಲಾ ಇಲ್ಲ ಅಂತಾದರೆ ಕತ್ತರಿಸಿ ಮಜ ತೆಗೆದುಕೊಳ್ಳಬಹುದು. ಒಂಥರಾ ಸ್ವಲ್ಪ ಹುಳಿ ಅಂಶವಿರುವ ಈ ನೀರು ಥಂಡಿ ರೋಗಕ್ಕೆ ಔಷಧಿ ಅಂತ ಬಲ್ಲವರು ಹೇಳಿದ್ದು ನೆನಪು. ಒಮ್ಮೆ ಟ್ರೈ ಮಾಡಿ ನೋಡಿ.

Saturday, August 4, 2012

ಅಕ್ಕಿ ಕಾಳು ಮತ್ತು ಫ್ಯಾನ್ ಬೆಲ್ಟು

ಮೊನ್ನೆ ಗುರುವಾರ ಬ್ರಾಹ್ಮಣರಾದ(ಸರ್ಕಾರವೇ ನಿನ್ನ ಜಾತಿ ಯಾವುದು ಅಂತ ಕೇಳುತ್ತೆ, ಹಾಗಾಗಿ ನಾನು ಇಲ್ಲಿ ಹೇಳಬಹುದು ಬಿಡಿ) ನಮಗೆಲ್ಲ ಫ್ಯಾನ್ ಬೆಲ್ಟ್ ಬದಲಾಯಿಸುವ ದಿನ ಅದಕ್ಕೆ ನೂಲುಹುಣ್ಣಿಮೆ ಅಂತ ಹೆಸರು. ವರ್ಷಪೂರ್ತಿ ಬೆನ್ನು ಉಜ್ಜಿ ಉಜ್ಜಿ ಕಪ್ಪು ಬಣ್ಣಕ್ಕೆ ತಿರುಗಿದ ಜನಿವಾರವನ್ನು ಬದಲಾಯಿಸುವ ದಿನ. ಊರಿನ ದೇವಸ್ಥಾನದಲ್ಲಿ ಬೆಳಗಾಮುಂಚೆ ಸಂಧ್ಯಾವಂದನೆ....? ಸೌಟು ಹಾಗೂ ಬಟ್ಟಲೊಂದಿಗೆ ಹತ್ತಿಪ್ಪತ್ತು ಜನ ಸಾಲಾಗಿ ಕುಳಿತು ಪುರೋಹಿತರ ಅಣತಿಗೆ ತಕ್ಕಂತೆ ಆಚಮನ, ದ್ವಿರಾಚಮನ, ಜನಿವಾರ ಮಾಲಾಕಾರ ಹೀಗೆ ನೂರೆಂಟು ತರಹದ ವಿದಿವಿಧಾನ ಅನುಸರಿಸಿ ಫ್ಯಾನ್ ಬೆಲ್ಟ್ ಬದಲಾಯಿಸಿಕೊಳ್ಳುತ್ತೇವೆ. ಮಾರನೇ ದಿನದಿಂದ ತುಸು ಜೋರಾಗಿ ಗಸಗಸ ಸದ್ದಿನೊಡನೆ ಬೆನ್ನುತಿಕ್ಕಿಕೊಳ್ಳಬಹುದು ಕಾರಣ ಜನಿವಾರ ಹೊಸತಲ್ಲವೇ..? ಇರಲಿ ವ್ಯಂಗ್ಯ ಜಾಸ್ತಿಯಾಗಿ ನಂತರ ಯಾರಿಗಾದರೂ ಬೆಸರವಾದರೆ ಕಷ್ಟ. (ಕಾರಣ ನಾನು ಈಗ ಏನು ಬರೆದರೂ ಅದಕ್ಕೆ ಅಪಾರ್ಥ ಹುಡುಕಿ ಸೀದಾ ತಹಶೀಲ್ದಾರರಿಗೆ ಅರ್ಜಿ ಹಾಕುವ ಪರಿಸ್ಥಿತಿ ಇದೆ-ಇದು ಗುಟ್ಟು ಯಾರಿಗೂ ಹೇಳಬೇಡಿ)


ಇರಲಿ ನಾನು ಹೇಳಹೊರಟಿರುವ ವಿಷಯಕ್ಕೆ ಬರುತ್ತೇನೆ. ಫ್ಯಾನ್ ಬೆಲ್ಟ್ ಚೇಂಜ್ ಕಾರ್ಯಕ್ರಮದಲ್ಲಿ ನನಗೆ ಬೇಸರ ತರಿಸಿದ್ದು ಎಂದರೆ ಪುರೋಹಿತರು "ಈಗ ಅಕ್ಕಿಕಾಳು ತೆಗೆದುಕೊಂಡು ಒಂದು ಸೌಟು ನೀರು ಬಿಟ್ಟು ಚೆಲ್ಲಿ" ಎಂದು ಪದೇ ಪದೇ ಹೇಳುತ್ತಿದ್ದುದು. ಚಂದ ಚಂದದ ಬೆಳ್ಳನೆಯ ಅಕ್ಕಿಕಾಳು ಈಗ ಹೀಗೆ ವ್ಯರ್ಥವಾಗಿ ಚರಂಡಿ ಸೇರುತ್ತದಲ್ಲ ಎಂಬುದು ಸಹಿಸಲಾರದ ಸಂಕಟ. ಒಬ್ಬೊಬ್ಬರು ಒಂದೊಂದು ಮುಷ್ಠಿ ಆದರೆ  ಸಹಸ್ರ ಸಹಸ್ರ ಜನ ಇಂದು ಹೀಗೆ ಅಕ್ಕಿ ಕಾಳು ಎಲ್ಲೆಲ್ಲೋ ಚೆಲ್ಲುತ್ತಿದ್ದಾರಲ್ಲ, ಛೆ ಅನ್ನಿಸಿತು. ಏನಾದರಾಗಲಿ ಎಂದು ನಾನು ಒಂದು ಅಕ್ಕಿ ಕಾಳನ್ನೂ ಚೆಲ್ಲಲಿಲ್ಲ, ಜತನವಾಗಿ ಬಾಳೆ ಎಲೆಯಲ್ಲಿ ಹಾಗೆ ಮಡಚಿಟ್ಟುಕೊಂಡು ತಂದು ನಮ್ಮ ಹಂಸಗಳಿಗೆ ಹಾಕಿದೆ. ಅವು ಕುಷ್ ಕುಷಿಯಾಗಿ ಬಕಬಕನೆ ನನ್ನ ಕಣ್ಮುಂದೆ ತಿನ್ನುವುದನ್ನು ನೋಡಿ ಸಂತಸ ಪಟ್ಟೆ.

ಸರಿ ಸರಿ ಅದು ಸರಿ ಈ ಫೋಟೋಕ್ಕೂ ನಿನ್ನ ವರಾತಕ್ಕೂ ಎತ್ತಣದೆತ್ತಣ ಸಂಬಂಧ ಶರ್ಮಾಜಿ(ನನಗೆ ನಾನು ಗೌರವ ಕೊಟ್ಟುಕೊಳ್ಳುವುದು ಎಂದರೆ ಇದೇ ನೋಡಿ, ನನಗೂ ಗೊತ್ತು ನೀವು ಶರ್ಮಾಜಿ ಅಂತ ಅನ್ನುವುದಿಲ್ಲ ಅಂತ ಇರಲಿ) ಅಂತ ನೀವು ಕೇಳಬಹುದು. ಹೌದು ಕಣ್ರೀ ನಾವು ಅತ್ತ ಅಕ್ಕಿಕಾಳು ನೀರಲ್ಲಿ ತೇಲಿಬಿಡುತ್ತಿದ್ದಾಗ ನಮ್ಮೂರ ಹೆಣ್ಮಕ್ಕಳು ಮಳೆ ಛಳಿಯನ್ನದೇ ಅದೇ ಅಕ್ಕಿಕಾಳಿನ ಸೃಷ್ಟಿಯಲ್ಲಿ ತೊಡಗಿದ್ದರು. ಈ ಕೆಲಸ ತುಂಬಾ ಕಷ್ಟ ಕಣ್ರೀ ಆದರೆ ಜನ ಅಕ್ಕಿಕಾಳು ಸೃಷ್ಟಿಕರ್ತನಿಗಿಂತ ನೀರಲ್ಲಿ ತೇಲಿಬಿಟ್ಟವರತ್ತ ನೊಡುತ್ತಾರೆ. ಛೆ. ಇರಲಿ ಯದ್ಬಾವಂ ತದ್ ಭವತಿ.

Friday, July 27, 2012

ಅಂತೂ ಇಂತೂ ಜೋಗಕ್ಕೆ ಇಷ್ಟು ನಿರು ಬಂತು

ಈವರ್ಷ ಮಳೆಗಾಲವೇ ಇಲ್ಲ ಬರ ಮುಂತಾಗಿ ಮಾತುಗಳು ಕೇಳಿಬರುತ್ತಿತ್ತು. ಆದರೆ ಹಾಗೇನೂ ಇಲ್ಲ ಅಂತ ಅನ್ನಿಸಲು ಶುರುವಾಗಿದೆ. ಧೋ ಅಂತ ನಮ್ಮಲ್ಲಿ ಮಳೆ ಬೀಳತೊಡಗಿದೆ. ಜಲಪಾತ ಭೋರ್ಗರೆಯತೊಡಗಿದೆ. ಮೊನ್ನೆ ಇಷ್ಟು ಇತ್ತು ಜೋಗ. ಇವತ್ತು ಇನ್ನೂ ಹೆಚ್ಚಿದೆಯಂತೆ, ಹೋದರೆ ಪಟ ಹಾಕುತ್ತೇನೆ ಮಜಾ ಮಾಡಿ. ಹ್ಯಾಪಿ ಡೆ.

Friday, July 20, 2012

ಅದು ಪರಮಸುಖಕ್ಕೆ ಪ್ರವೇಶದ ದಾರಿ.

ವಾವ್ ಅನ್ನಲೇಬೇಕು ಭತ್ತದ ಸಸಿಯ ಮೊಳಕೆಯೊಡೆಯುತ್ತಿರುವ ದೃಶ್ಯವ ಕಂಡು ಅಲ್ಲವೇ?. ಹೌದು ಸುಂದರ ಬೆಳೆಗಿನಲ್ಲಿ ಇಂತಹ ಒಂದು ದೃಶ್ಯ ನಿಮ್ಮ ಕಣ್ಣೆದುರಿಗಿದ್ದರೆ ಆವತ್ತಿನ ಮನಸ್ಥಿತಿಯೇ ಬೇರೆ ಬಿಡಿ. ಹಸಿರು ಉಲ್ಲಾಸ ತರುತ್ತದೆ, ಮನಸ್ಸು ಪ್ರಫುಲ್ಲಗೊಳ್ಳುತ್ತದೆ. ಇದು ಭಾರತೀಯ ರೈತ ತಾನು ತನ್ನ ಹೊಲಕ್ಕೆ ನಾಟಿಮಾಡಿಕೊಳ್ಳಲು ತಯಾರಿಸಿಕೊಂಡ ಸಸಿಮಡಿ ಗಳು. ಚಚ್ಚೌಕಾಕಾರದಲ್ಲಿದೆ. ಆದರೆ ಜಪಾನ್ ರೈತರುಗಳು ಹೀಗೆ ನಾಟಿಗೂ ಮುನ್ನದ ಗಿಡಗಳನ್ನು ಮಾಡುವಾವ ಒಂದು ಚಿತ್ತಾರ ಮಾಡಿಬಿಡುತ್ತಾರೆ. ಮನುಷ್ಯ ಪ್ರಾಣಿಗಳ ಮುಖ ಹೀಗೆ ಏನೇನೋ. ಅದನ್ನ ನೋಡಲು ಪ್ರವಾಸಿಗರ ದಂಡು ಬರುತ್ತದೆಯಂತೆ. ಆಗ ರೈತನಿಗೆ ಬಿತ್ತನೆಯ ಖರ್ಚು ಪ್ರವಾಸಿಗರ ಮೂಲಕ ಹರಿದುಬರುತ್ತದೆಯಂತೆ. ಬೆಳೆಯುವ ಅಕ್ಕಿಗೆ ಬೆಳೆಯುವ ಮುನ್ನವೆ ಹಣ ಜಣಜಣ ಎಣಿಸುತ್ತಾನೆ. ಹೀಗೆ ಲಾಭ ಅಲ್ಲಿ ಕೃಷಿ ಇಂದಿಗೂ. ಭಾರತದ ಪರಿಸ್ಥಿತಿ ಹಾಗಲ್ಲ. ಇಲ್ಲಿ ಕೃಷಿ ಲಾಭಕರ ಅಲ್ಲ ಅಷ್ಟೊಂದು ಆದರೆ ಮಜ ಗೊತ್ತಾ ಸಿಕ್ಕಾಪಟ್ತೆ ಲಾಭವಾದರೆ ಇಲ್ಲಿಯ ಜನರು ಕೃಷಿಯನ್ನು ಬಿಟ್ಟು ಬಿಡುತ್ತಾರೆ. ಇದು ಇಲ್ಲಿನ ಮನಸ್ಥಿತಿ. ಇರಲಿ ಎಲ್ಲಾ ಒಳ್ಳೆಯದಕ್ಕೆ ಅಂತ ನಾವು ಅಂದುಕೊಳ್ಳುವುದು. ಅದು ಪರಮಸುಖಕ್ಕೆ ಪ್ರವೇಶದ ದಾರಿ.

Wednesday, July 18, 2012

ಇನ್ನಷ್ಟು ನೆನಪಿಸಿದ್ದಾನೆ ಬರೆಯಬೇಕಿದೆ ಹೇಳಬೇಕಿದೆ

"ಜನರೂ ಹಾಗೆ, ಹಾಗಾಗಿಯೇ ಜನರೂ ಹೀಗೆ...
ಅಬ್ಬರ ಎಬ್ಬಿಸಿದವರಷ್ಟೇ ಕಾಣುವುದು ಇಲ್ಲಿ !"   -ವಿರಾಹೆ

ಹೀಗೊಂದು ಸಿಂಪಲ್ ಕಾಮೆಂಟ್ ಜಡಿದು ವಿರಾಹೆ ಅವನ ಡ್ಯೂಟಿಗೆ ಹೊರಟು ಹೋದ. ನನಗೆ ತಲೆ ಕೆರೆದುಕೊಳ್ಳುವುಂತಾಗುವುದು, ಮೈ ಪರಚಿಕೊಳ್ಳುವಂತಾಗುವುದು ಆವಾಗ. ನಾನು ಪ್ಯಾರಾಗಟ್ಟಲೆ ಕುಟ್ಟುತ್ತೇನೆ ನನ್ನೊಳಗಿನ ತುಮುಲವನ್ನು ನಿಮಗೆ ಅರ್ಥಮಾಡಿಸಲು. ನನಗಿಂತ ಇಪ್ಪತ್ತು ವರ್ಷ ಸಣ್ಣವ ಜಸ್ಟ್ ಒಂದೇ ಒಂದು ಸಾಲಿನಲ್ಲಿ ನಾನು ಹೇಳಬೇಕಾದ್ದನ್ನು ಹೇಳಿ ಹೋಗುತ್ತಾನೆ. ಛೆ ನಾನು ಯಾಕೆ ಹೀಗಲ್ಲ ಅಂತ ಅನ್ನಿಸುತ್ತದೆ. ಒಂದು ಸಾಲಿನಲ್ಲಿ ಹೇಳಬೇಕಾದ್ದಕ್ಕೆ ಪುಟಗಟ್ಟಲೆ.... ಹಾಗೆ ನನಗೆ ಒಂದು ಸಾಲಿನಲ್ಲಿ ಹೇಳಲು ಬಂದಿದ್ದರೆ ನಾನು ಝೆನ್ ಆಗಬಹುದಿತ್ತು. ಅದರ ಅರ್ಥ ಮಾಡಿಕೊಳ್ಳುವ ತಾಕತ್ತಂತು ನಿಮಗೆ ಇದ್ದೇ ಇದೆ. ಇಷ್ಟಾದಮೇಲೆ ನಾನೇಕೆ ಹಲುಬುತ್ತೇನೆ ಅಂತ ಅನ್ನಿಸಿ ಅನ್ನಿಸಿದರೂ ಮತ್ತೆ ಯಥಾಪ್ರಕಾರ ಅದಾಗದೆ ಕುಟ್ಟತೊಡಗುತ್ತೇನೆ ಈಗಿನಂತೆ. ಆಗಲಿ ಅದು ಅವನ ಶಕ್ತಿ ಇದು ನನ್ನ ನಿಶ್ಯಕ್ತಿ ಅಂತಲೂ ಅಂದು ಜೈ  ವಿರಾಹೆ ಅಂದು ಬಿಡೋಣ. ಇನ್ನಷ್ಟು ನೆನಪಿಸಿದ್ದಾನೆ ಬರೆಯಬೇಕಿದೆ ಹೇಳಬೇಕಿದೆ




Friday, June 29, 2012

ಜನರಿಂದ ಹಾಗೆಯೋ ಹಾಗಾಗಿ ಜನರೋ ತಿಳಿಯದಾಗಿದೆ

ಹೊಸ್ಮನೆ ಮುತ್ತು   ಎಲ್ಲರಿಗೂ ಹೆಸರು ಗೊತ್ತಿರುವಷ್ಟು ದೊಡ್ದ ಮಟ್ಟದ ಬರಹಗಾರ ಅಲ್ಲ ನಿಜ, ಆದರೆ ತೀರಾ ಗಮನಿಸಿ ಓದುವ ಕನ್ನಡದ ಓದುಗರಿಗೆ ಪರಿಚಯ ಇರುವ ಲೇಖಕ. ದಿನಪತ್ರಿಕೆಗಳಲ್ಲಿ ತನ್ನದೇ ಆದ ಶೈಲಿಯಲ್ಲಿ ಚುಟುಕಾಗಿ ಹೇಳಬೇಕಾದ್ದಷ್ಟನ್ನೇ ಹೇಳುವ ಆತ ನನಗೆ ಪರಿಚಯ ಇಲ್ಲಿಯವರೆಗೆ ಫೋನ್ ಮುಖಾಂತರವಷ್ಟೆ. ಆದರೆ ಸ್ನೇಹ ಒಂಥರಾ ಗಾಢವಾಗಿದೆ. ಬರೆಯುವ ಪ್ರತೀ ಬರಹದಲ್ಲಿಯೂ ಶ್ರದ್ಧೆ ಪ್ರೀತಿ ಎದ್ದು ಕಾಣುವಂತೆ ಬರೆಯಬಲ್ಲ ಮುತ್ತು ಭಾವ ಜೀವಿ. ಒಂದು ಫೋನ್ ಮಾಡಿದರೆ "ಅಣ್ಣಯ್ಯಾ,  ಧನ್ಯೊಸ್ಮಿ" ಅನ್ನುವಷ್ಟು. ಆತ ಒಮ್ಮೊಮ್ಮೆ ಮೈಲ್ ಮಾಡುವುದು ಇದೆ. ಅದು ತುಂಬಾ ಆಳವಾದ ಭಾವನೆಯಲ್ಲಿರುತ್ತದೆ. ತಿರುಗಿ ಮೈಲ್ ಮಾಡಲಿ ಎಂಬುದು ಆತನ ಆಸೆ, ಆದರೆ ನನಗೆ ಆ ಮೈಲ್ ಗೆ ಉತ್ತರಿಸುವಷ್ಟು ಭಾಷೆಯ ಮೇಲೆ ಹಿಡಿತ ಇಲ್ಲ ಎನ್ನುವುದನ್ನು ಬರೆಯಲಾಗದೆ ಹೇಳಲಾರದ ಸಂಕಟದಲ್ಲಿ ಸುಮ್ಮನಿದ್ದುಬಿಡುತ್ತೇನೆ. ಬಹಳ ಸಾರಿ ಮೌನ ಲೇಸು, ಕಾರಣ ಅದು ನಮ್ಮ ಬುದ್ದಿವಂತಿಕೆಯನ್ನು ಹೊರಹಾಕದಿದ್ದರೂ ದಡ್ದತನವನ್ನು ಪ್ರದರ್ಶಿಸುವುದಿಲ್ಲ.
ರಾಧಾಕೃಷ್ಣ ಭಡ್ತಿ ಹಲವರಿಗೆ ಪರಿಚಿತ ಹೆಸರು. ನೀರಿನ ಕುರಿತು ಇನ್ನು ಯಾರೂ ಬರೆಯಲಾಗದಷ್ಟು ಬರೆದ ಬರಹಗಾರ ಆತ. ಕನ್ನಡದ ದಿನಪತ್ರಿಕೆ ಕನ್ನಡಪ್ರಭದ ಅಂಕಣಕಾರ. ಸ್ವಲ್ಪ ಬಿಡುವಿಲ್ಲದ ಮನುಷ್ಯ. ಆತನಿಗೂ ಒಮ್ಮೊಮ್ಮೆ ಫೋನ್ ಮಾಡುವುದಿದೆ. ಆತ್ಮೀಯವಾಗಿ ಮಾತನಾಡುವ ಭಡ್ತಿ ಊರಲ್ಲಿ ಸಾಗರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಬಗ್ಗೆ ವಿಚಾರಿಸುತ್ತಾನೆ. ಮತ್ತು ಒಂದಿಷ್ಟು ಬರಿಯಬೇಕು ನೀನು ಅನ್ನುತ್ತಾನೆ. ಹಿಂದೆ ವಿಕ ದ ಲವಲವಿಕೆ ಯನ್ನು ಕಟ್ಟಿ ಬೆಳಸಿದ ಮನುಷ್ಯ. ನನಗೆ ಆತನ ಜತೆಯೂ ಒಂದು ಸ್ನೇಹದ ಎಳೆ ಇದೆ.
ಚಂದ್ರಶೇಖರ್ ನೀವು ಹೆಸರನ್ನೇ ಕೇಳಿಲ್ಲ ಬಿಡಿ. ಶಿವಮೊಗ್ಗದ "ಜನ ಹೋರಾಟದ"  ಬೆನ್ನೆಲುಬು. ಶೃಂಗೇಶ್ (ಓಹ್ ಈ ಹೆಸರು ಗೊತ್ತು ಅಂದಿರಾ...) ರ ಸಹೋದರ. ಆದರೆ ಪತ್ರಿಕಾ ಪ್ರಪಂಚದ ಒಳಹೊರ ಹೂರಣ ಗೊತ್ತಿದ್ದು ತಮ್ಮ ಹೆಸರನ್ನು ಎಲ್ಲಿಯೂ ಕಾಣಿಸದೆ ಪತ್ರಿಕೆ ನಡೆಸುವ ಜನ. ಅವರಿಗೂ ನಾನು ಒಮ್ಮೊಮ್ಮೆ ಫೋನಾಯಿಸುವುದು ಇದೆ. ಕಷ್ಟನಷ್ಟಗಳನ್ನು ಹಂಚಿಕೊಳ್ಳುವುದು ಇದೆ. ಪತ್ರಿಕೆಗಲ ಬಗ್ಗೆ ಅಲ್ಲಿರುವ ಎಲ್ಲಾತರಹದ ಜನರ ಬಗ್ಗೆ ಕರಾರುವಕ್ಕಾಗಿ ಗೊತ್ತಿರುವ ಚಂದ್ರಶೇಖರ್ ಬರಹಗಳ ಬಗ್ಗೆ ಚೆನ್ನಾಗಿ ಮಾತನಾಡಬಲ್ಲರು. ಪತ್ರಿಕೋದ್ಯಮದ ಬಗ್ಗೆ ಕಾಳಜಿಯ ಜನ.
ಹೀಗೆ ನೂರಾರು ಜನರ ದಂಡೇ ಇದೆ, ಬರಹಗಳ ಬಗ್ಗೆ ಆಳವಾದ ತಿಳುವಳಿಕೆಯುಳ್ಳವರು, ಅದಕ್ಕಾಗಿ ದುಡಿಯುವವರು, ಅಲ್ಲೇ ಮುಳುಗಿ ಹೋದವರು, ಮತ್ತು ಮೇಲೆ ಬಂದವರು. ಮಜ ಗೊತ್ತಾ...? ಹೀಗೆಲ್ಲಾ ತಮ್ಮಪಾಡಿಗೆ ತಾವು ಅಕ್ಷರ ಸೇವೆ ಮಾಡುವವರ ಹೆಸರು ಅಷ್ಟೊಂದು ಜನಜನಿತವಲ್ಲ. ಜನಜನಿತವಾದರ ಹಿಂದೆ ಇವರ ಸೇವೆ ಇದೆ. ಈಗ ನಿಚ್ಚಳವಾಗುತ್ತದೆ, ಪತ್ರಿಕೋದ್ಯಮಕ್ಕೆ ಬೇಕಾಗಿರುವುದು ಶ್ರದ್ಧೆಯೊ, ಕಾಳಜಿಯೋ, ಅಥವಾ ಮತ್ತಿನ್ನೇನೋ..
ಇವೆಲ್ಲಾ ಯಾಕೆ ಬರೆದೆನೆಂದರೆ, ನಮ್ಮ ಮಾಜಿ ರಾಷ್ಟ್ರಪತಿ ಒಮ್ಮೆ ಇಸ್ರೇಲ್ ಗೆ ಹೋಗಿದ್ದರಂತೆ. ಅಲ್ಲಿಯ ಪತ್ರಿಕೆಗಳನ್ನು ನೋಡಿ ಅವರು ತುಂಬಾ ಖುಷಿ ಪಟ್ಟರಂತೆ. ಕಾರಣ ಅಂದು ಅಲ್ಲಿ ಬ್ಲಾಸ್ಟ್ ಆದ ಬಾಂಬ್ ನ ವರದಿ ೮ ನೇ ಪುಟದ ಮೂಲೆಯಲ್ಲಿತ್ತಂತೆ, ಹಾಗೂ ಮುಖ್ಯ ಪುಟದಲ್ಲಿ ದೇಶದ ಅಂದಿನ ತಾಂತ್ರಿಕತೆಯ ಬೆಳವಣಿಗೆಯ ಕುರಿತು ವರದಿ ಇತ್ತಂತೆ. ಹಾಗಾಗಿ ಪುಟ್ಟ ದೇಶವಾದರೂ ಇಸ್ರೇಲ್ ಇಂದು ಜಗತ್ತಿನ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದೆ ಪ್ರಪಂಚದಲ್ಲಿ. ಮಾದ್ಯಮಗಳು ಇಲ್ಲಿಯೂ ಇದೆ, ಜನ ಮುಖ್ಯಪುಟದಲ್ಲಿ ಬೇಡದ್ದನ್ನು ಓದುತ್ತಾರೆ. ಒಳಪುಟಕ್ಕೆ ಹೋಗುವ ಪುರುಸೊತ್ತು ಇಲ್ಲದೆ ರದ್ದಿ ಅಂಗಡಿಗೆ ಪತ್ರಿಕೆ ಸೇರಿಸುತ್ತಾರೆ. ಆದರೆ ಅಲ್ಲಿರುತ್ತಿತ್ತು ಮಾಹಿತಿ ಬರಪ್ಪೂರ. ಜನರಿಂದ ಹಾಗೆಯೋ ಹಾಗಾಗಿ ಜನರೋ ತಿಳಿಯದಾಗಿದೆ


Thursday, June 28, 2012

ಕಟ್ಟೆ ಬಂದು ಕುಳಿತಿದೆ ಗಿಡ ನೆಡಬೇಕು

"ತುಳಸಿ ತಾಯೆ ದಳಸಂಪನ್ನೆ ನಂದಸು ನಂದಸು ನಂದರ ಬಾಲೆ ಶಿವನಂದರ ಶಿವ ಪೂಜೆಗಾಗಿ ನಾ ನಿನ್ನ ನಿಯ್ಸ್ತೇನೆ ತಾಯಿ ನೀ ನನ್ನ ನೋಯಿಸಬೇಡ ತಾಯೆ" ಎಂಬ ಮಂತ್ರ....! ಗುಣಗುಣಿಸುತ್ತಾ ಬೆಳಗ್ಗೆ ಹೂವಿನ ಕೊಯ್ಲು ಅಂತ್ಯದಲ್ಲಿ ತುಳಸಿ ಕೊಯ್ಯುತ್ತಿದ್ದ ಕಾಲವೊಂದಿತ್ತು. ಅದು ಸರಿ ಸುಮಾರು ಮೂವತ್ತೈದು ವರ್ಷದ ಹಿಂದಿನ ಕಾಲ. ಮನೆಯ ಹಿತ್ತಲಿನಲ್ಲಿ ಕಿಚಪಿಚ ಕೆಸರಿನ ನಡುವೆ ಕರಕರ ಗುಟ್ಟುತ್ತಾ ಹೂವು ಕೊಯ್ಯುವ ಕಾಯಕದ ಸಮಯದಲ್ಲಿ ಇವೆಲ್ಲಾ ಯಾಕೆ ಅಂತ ಒಮ್ಮೊಮ್ಮೆ ಮೂಡುತ್ತಿತ್ತು. ಮಿಲ್ಟ್ರಿ ದರ್ಬಾರಿನ ಅಪ್ಪಯ್ಯನ ಹೆದರಿಕೆಯಲ್ಲಿ ಅಂತೂ ಇಂತು ಹೂವು ದೇವರ ಮನೆ ಸೇರುತ್ತಿತ್ತು. ನಾವೇನೋ ಹೂ ಕೊಯ್ಯುವ ಕೆಲಸ ಮಾಡಿಯಾಯಿತು. ಇಂದು ನನ್ನ ಮಗ ಅಂತಹ ಕೆಲಸ ತಿಪ್ಪರಲಾಗ ಹಾಕಿದರೂ ಮಾಡಲಾರ. ಇರಲಿ ಕಾಲಾಯ ತಸ್ಮೈ ನಮಃ: ಈಗ ಈ ಕೆಲಸ ಸ್ವಲ್ಪ ಈಸಿ ಮಾಡುವ ಸಮಯ ಬಂದಿದೆ. ಮನೆಯೊಳಗಡೆ ತುಳಸಿ ತಂದಿಟ್ಟರೆ..? ಯೆಸ್ ಹಾಗಾಗಿದೆ ಕಟ್ಟೆ ಬಂದು ಕುಳಿತಿದೆ ಗಿಡ ನೆಡಬೇಕು.

ಸೂರ್ಯನಿಗೆ ಸಿಗ್ನಲ್ಲೋ..ಸೂರ್ಯನೇ ಸಿಗ್ನಲ್ಲೋ

ಜೂನ್ ತಿಂಗಳೆಂದರೆ ಮಲೆನಾಡು ಜಿರ್ರೋ ಎನ್ನಬೇಕಿತ್ತು ಆದರೆ ಎಂದಿನ ಭರಾಟೆಯನ್ನು ವರುಣ ತೋರಿಸುತ್ತಿಲ್ಲ. ಜೂನ್ ತಿಂಗಳಿನಲ್ಲಿ ಸೂರ್ಯ ಉದಯ ಕಾಣಿಸುವ ದಿವಸಗಳು ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ. ಆದರೆ ಈ ವರ್ಷ ಮಳೆಯ ಅಬ್ಬರ ಕಡಿಮೆಯ ಕಾರಣ ತಾಳಗುಪ್ಪದ ರೈಲ್ವೇ ಗೇಟಿನ ಬಳಿ ಶನಿವಾರ ಮುಂಜಾನೆ ಸೂರ್ಯ ಕಾಣಿಸಿದ್ದು ಹೀಗೆ. ರೈಲ್ವೇ ಇಲಾಖೆಯ ಕೆಂಪು ಸಿಗ್ನಲ್ ಸೂರ್ಯನಿಗೋ ಅಥವಾ ಮಳೆಗೋ ಅಥವಾ ಸೂರ್ಯನೇ ಈ ವರ್ಷ ಮಳೆ ಇಲ್ಲ ಎನ್ನುವ ಸಿಗ್ನಲ್ಲೋ ಎನ್ನುವಂತೆ.

Wednesday, June 27, 2012

ಬಲೆಗಾರು ಬಯಲಿಗೆ ಕಪ್ಪುಮೂತಿ ಕೊಕ್ಕರೆ ದಂಡು

 ಜೂನ್ ತಿಂಗಳ ಮಳೆಗಾಲ ಎಂದರೆ ರಾಷ್ಟ್ರೀಯ ಹೆದ್ದಾರಿ ೨೦೬ ರ ತಾಳಗುಪ್ಪ ಸಮೀಪದ ಬಲೆಗಾರು ಗದ್ದೆ ಬಯಲು ಹಸಿರಿನಿಂದ ಕಂಗೊಳಿಸುತ್ತದೆ. ಈ ಹಸಿರಿನ ಸಿರಿಗೆ ಕಪ್ಪು ಮೂತಿ ಕೊಕ್ಕರೆಗಳು ಬೆಳ್ಳನೆಯ ಚುಕ್ಕಿಯಾಗಿ ನಯನ ಮನೋಹರ ದೃಶ್ಯವನ್ನು ಸೃಷ್ಟಿಸುತ್ತದೆ. ಈ ಕಪ್ಪು ಮೂತಿ ಕೊಕ್ಕರೆಗಳು ಪ್ರತೀ ವರ್ಷ ಜೂನ್ ತಿಂಗಳಿಗೆ ಇಲ್ಲಿಗೆ ವಲಸೆ ಬಂದು ಅಗಸ್ಟ್ ತಿಂಗಳಿನಲ್ಲಿ ಮತ್ತೆ ವಾಪಾಸಾಗುತ್ತದೆ. ಮೂಲದ ಪ್ರಕಾರ ಈ ಕೊಕ್ಕರೆ ಬಹಳ ವರ್ಷದಿಂದ ಈ ಪದ್ದತಿ ಅನುಸರಿಸುತ್ತಿವೆ. ನೂರಾರು ಸಂಖ್ಯೆಯ ಗುಂಪಿನಲ್ಲಿ ಬಂದು ಬಿತ್ತನೆಗದ್ದೆಯಲ್ಲಿನ ಹುಳುಗಳನ್ನು ಬೇಟೆಯಾಡುವ ಇವು ರೈತಮಿತ್ರ ಕೊಕ್ಕರೆಗಳಾದ್ದರಿಂದ ರೈತರು ಇವಕ್ಕೆ ತೊಂದರೆಮಾಡುವುದಿಲ್ಲ. ಆಹಾರಕ್ಕಾಗಿ ಬರುವ ಇವು ದಾಇಹೋಕರ ಕಣ್ಣಿಗೆ ನಿತ್ಯ ರಸನೋಟವನ್ನು ನೀಡುತ್ತಿವೆ.




Friday, June 22, 2012

ಕಾಲ ಪಕ್ವವಾಗಬೇಕಿದೆ.....

ಬ್ಲಾಗ್ ಬರೆಯುವುದು ನಿಂತೇ ಹೋಯಿತೇನೋ ಅಂತ ನನಗೆ ಕಾಡುವಷ್ಟು ದಿನಗಳಾಯಿತು ಅಕ್ಷರ ಕುಟ್ಟದೆ. ಇಂದು ಏನಾದರಾಗಲಿ ಅದು ನಾಲ್ಕೇ ಸಾಲಾದರೂ ಸರಿ ಅಂತ ಕುಟ್ಟಲು ಕುಳಿತೆ. ಬ್ಲಾಗ್ ಇದೆಯಲ್ಲ ಅದು ನನ್ನನ್ನು ಬಹು ಪ್ರೀತಿಯಿಂದ ಅಕ್ಕರೆಯಿಂದ ಬೆಳಸಿದೆ. ಅದರಿಂದ ಅದೆಷ್ಟೋ ಹೊಸ ಪ್ರಪಂಚದ ಅನಾವರಣವಾಗಿದೆ. ನನ್ನ ತುಮುಲ ತಣಿದಿದೆ, ಧಾವಂತದ ಬದುಕಿನ ಜನರ ಮುಖದಲ್ಲಿ ಮುಗುಳ್ನಗೆ ಮೂಡಿಸಿದೆ. ಅವರ ಸಂಪರ್ಕ ಸಾದ್ಯವಾಗಿದೆ. ಸುಮುಧುರ ನೆನಪು ಅಕ್ಷರ ರೂಪದಲ್ಲಿ ಉಳಿದಿದೆ, ನನಗೆ ಕುಟ್ಟುವಾಗ ಸಮಾಧಾನ ತಂದಿದ್ದು ಯಾವತ್ತೋ ಯಾರ ಕಣ್ಣಿಗೋ ಬಿದ್ದು ಸಮಾಧಾನ ತಂದಿದ್ದಿದೆ. ಇಷ್ಟೆಲ್ಲಾ ಮಜದ ಬ್ಲಾಗು ಬರೆಯಲು ಮತ್ತೆ ಶುರು ಮಾಡಬೇಕಿದೆ.
ಈಗ ಮಳೆ ಜೊರ್ರಂತ ಸುರಿಯುತ್ತಿದ್ದರೆ ಮನೆಯೊಳಗಿನಿಂದಲೇ ಅನುಭವಿಸುವಂತಹ "ತೊಟ್ಟಿ ಮನೆ" ತಯಾರಾಗಿ ನಿಂತಿದೆ. ಅಲ್ಲಿ ಕಾನೂನಿನ ಪ್ರಕಾರ ಕೊಂಚವೇ ಕೊಂಚ ಕೆಲಸ ಮುಗಿದರೆ ನೀವೂ ಅದನ್ನ ಬಿಸಿಬಿಸಿ ಪಕೋಡ ತಿನ್ನುತ್ತಾ ಅನುಭವಿಸಬಹುದು. ಕತೆ ಹೇಳಬಹುದು ಕೇಳಬಹುದು, ಮಲೆನಾಡಿನ ಪದಾರ್ಥಗಳ ಸವಿ ಅನುಭವಿಸಬಹುದು. ಆದರೆ ಅದಕ್ಕೆಲ್ಲಾ ಇನ್ನೂ ಕೊಂಚ ಸಮಯ ಕಾಯಬೇಕಿದೆ, ನಾನು ತಯಾರಾಗಬೇಕಿದೆ, ಕಾಲ ಪಕ್ವವಾಗಬೇಕಿದೆ......

Thursday, April 5, 2012

ನೀರಿಲ್ಲದ ಜೋಗಕ್ಕೆ ಸಂಗೀತ ಕಾರಂಜಿ ಮೆರುಗು.




ಜೋಗ ಜಲಪಾತ ಏಪ್ರಿಲ್ ಮೆ ತಿಂಗಳಿನಲ್ಲಿ ನೀರಿಲ್ಲದ ಕಾರಣ ನೀರಸ. ಜಲಪಾತದ ಮೆರುಗಿಲ್ಲದೆ ಪ್ರವಾಸಿಗರ ಕೊರತೆಯಿಂದ ಜೋಗ ಸೋರಗುತ್ತದೆ. ಈ ನಿಟ್ಟಿನಲ್ಲಿ ಜೋಗವನ್ನು ಸರ್ವ ಋತು ಪ್ರವಾಸೋದ್ಯಮ ತಾಣವನ್ನಾಗಿಸಲು ಜೋಗ ಅಭಿವೃದ್ಧಿ ಪ್ರಾಧಿಕಾರ ಸಂಗೀತ ಕಾರಂಜಿಯನ್ನು ನಿರ್ಮಿಸಿದೆ.
ಮಂಗಳವಾರದಿಂದ ಪ್ರಾಯೋಗಿಕವಾಗಿ ಸಂಗೀತ ಕಾರಂಜಿಯನ್ನು ಆರಂಭಿಸಿದ್ದಾರೆ. ಸಂಜೆ ೭-೧೫ ಪ್ರತಿ ನಿತ್ಯ ಸಂಗೀತ ಕಾರಂಜಿಯ ಕಾರ್ಯಕ್ರಮ ಆಯೋಜಿಸಲಾಗಿದೆ. ಪಶ್ಚಿಮ ಬಂಗಾಲದ ಪ್ರೀಮಿಯರ್ ವರ್ಲ್ಡ್ ಟೆಕ್ನಾಲಜಿ ಸಂಸ್ಥೆ ೧.೨೦ ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಕಾರಂಜಿಯನ್ನು ಶೀಘ್ರದಲ್ಲಿ ಅಧಿಕೃತವಾಗಿ ಉದ್ಘಾಟಿಸಲಾಗುವುದು .
ಸಂಗೀತ ಕಾರಂಜಿಯು ಮೈಸೂರಿನ ಬೃಂದಾವನ ಮಾದರಿಯನ್ನು ಹೊಂದಿದ್ದು ಪ್ರವಾಸಿಗರ ಮನ ತಣಿಸುವಲ್ಲಿ ಯಶಸ್ವಿಯಾಗುವ ಭರವಸೆಯನ್ನು ಹೊಂದಿದೆ. ಕಾರಂಜಿಯಲ್ಲಿ ಮೂಡಿಬರುವ ಚಿತ್ರಗಳು ಹಾಗೂ ಅದಕ್ಕೆ ಹಿನ್ನಲೆ ಸಂಗೀತ ಜೋಗದ ಸಂಜೆಯನ್ನು ಮಧುರವನ್ನಾಗಿಸುತ್ತದೆ ಎಂಬುದರಲ್ಲಿ ಸಂಶಯವಿಲ್ಲ. ಲೇಸರ್ ತತ್ರಾಂಶ ಬಳಸಿ ಮೂಡಿಬರುವ ಚಿತ್ರಗಳಲ್ಲಿ ಕ್ರಿಕೆಟ್ ಪಟು ಸಚಿನ್ ತಂಡೂಲ್ಕರ್,ಪಿಟಿ ಉಷಾ, ಪಂಕಜ್ ಅಡ್ವಾಣಿ ಹಾಗೂ ರಾಷ್ಟ್ರನಾಯಕ ಚಿತ್ರಗಳು ಬೆರಗು ಮೂಡಿಸುತ್ತಿವೆ. ಮಳೆಗಾಲದಲ್ಲಿ ಜಲಪಾತದಿಂದ ಹಾಗೂ ಜಲಪಾತದಲ್ಲಿ ನೀರಿಲ್ಲದ ಬೇಸಿಗೆಯಲ್ಲಿ ಸಂಗೀತ ಕಾರಂಜಿಯಿಂದ ಪ್ರವಾಸಿಗರಿಗೆ ಕಣ್ಮನ ತಣಿಸುವ ನಿಟ್ಟಿನಲ್ಲಿ ಜೋಗ ಅಭಿವೃದ್ಧಿ ಪ್ರಾಧಿಕಾರ ಹೊಸ ಹೆಜ್ಜೆಯನ್ನು ಇಟ್ಟಿರುವುದು ಸ್ವಾಗತಾರ್ಹ.

Tuesday, March 20, 2012

ವಾವ್ ಅನ್ನದೇ ವಿಧಿಯಿಲ್ಲ

ಹೌದೇ ಹೌದು ಈಗ ನಮ್ಮೂರಿನ ಗುಡ್ಡದ ತುಂಬೆಲ್ಲಾ ಮುಳ್ಳಣ್ಣಿನದೇ ಶ್ರಾಯ. ಬೆಳ್ಳಬೆಳ್ಳಗೆ ಗೊಂಚಲು ಕೈಬೀಸಿ ಕರೆಯುತ್ತದೆ. ಹಗೂರ ತುದಿ ಹೆರೆ ಬಗ್ಗಿಸಿ ಒಂದೋಂದೇ ಬಿಳಿಬಿಳಿ ಹಣ್ಣು ತಿನ್ನುವ ಮಜ ತಿಂದವರಿಗೇ ಗೊತ್ತು. ಹಾಗಂತ ಈ ಮುಳ್ಳಣ್ಣು ಹಲಗೆ ಹಣ್ಣಿನಂತೆ ಬಾಯಲ್ಲಿ ಚೊಳ್ಳನೆ ನೀರು ಬರಿಸುವಷ್ಟು ರುಚಿಯದಲ್ಲ ಆದರೂ ವಿಶೇಷ ರುಚಿ ಖಂಡಿತಾ ಇದೆ ಬಿಡಿ. ಹಿಟ್ಟು ಹಿಟ್ಟು ಸಿಹಿ ಸಿಹಿ ವಾವ್ ಅನ್ನದೇ ವಿಧಿಯಿಲ್ಲ. ಬೇಸಿಗೆ ರಜದ ಮಜ ಮುಳ್ಳುಹಣ್ಣಿಗೆ ಗುಡ್ಡ ಅಲೆಯುವುದರಲ್ಲಿ ಇದೆ. ಅದು ಜೀವನಪೂರ್ತಿ ನೆನಪಿರುತ್ತದೆ. ಮೊನ್ನೆ ಅಮರ ಬಂದಿದ್ದ. ಅವನಿಗೆ ಇಲ್ಲಿ ಜಾಗ ಖರೀದಿ ಮಾಡುವ ಮನಸ್ಸಾಗಿದೆ. ಅವನು ನೋಡುತ್ತಿದ್ದ ಜಾಗದಲ್ಲಿ ಈ ಹಣ್ಣು ಇತ್ತು ಅವನು ತಾನು ತಿಂದ ಹಳೇ ನೆನಪಿಗೆ ಜಾರಿದ. ಹಾಗಿದೆ ಬಿಡಿ ಗುಡ್ಡ ಸುತ್ತಿ ಹಣ್ಣು ಅದರಲ್ಲಿಯೂ ಕಾಡು ಹಣ್ಣು ತಿನ್ನುವ ಮಜ. ಅದು ಚಿಕ್ಕಂದಿನ ಸ್ಕೂಲಿನ ದಿನ ನೆನಪಿಸುತ್ತದೆ. ಆವಾಗಿನ ಮಜ ಯಾವತ್ತೂ ಮತ್ತೆ ಮತ್ತೆ ಮರುಕಳಚುತ್ತದೆ. ಅದೇ ರುಚಿ ನಾಲಿಗೆಗೆ ಬಿದ್ದಾಗ.

Thursday, March 15, 2012

ಅಂದು ನೋಡೋಣ..



ಮೊದಲಿನ ಫೋಟೋ ಇವತ್ತು ತೆಗದದ್ದು. ಎರಡನೇ ಫೋಟೋ ಕಳೆದ ವರ್ಷ ಇದೇ ತಿಂಗಳು ಇದೇ ದಿನಾಂಕದ್ದು. ಒಂದು ವರ್ಷದಲ್ಲಿ ಇಷ್ಟಾಗಿದೆ. ಮುಂದಿನ ವರ್ಷ ಅಂದು ನೋಡೋಣ..



Friday, March 9, 2012

ಅದು ಮತ್ತೊಂದು ತರ

ವಿಜಯವಾಣಿ ಎಂಬ ಹೆಸರು ವಿಜಯ ಸಂಕೇಶ್ವರ ಅದರ ಒಡೆಯ ಎಪ್ರಿಲ್ ೨ ನೇ ತಾರೀಕು ಬಿಡುಗಡೆ. ಶಶಿ ಸಂಪಳ್ಳಿ ಶಿವಮೊಗ್ಗ ಬ್ಯೂರೋ ಚೀಫ್, ದೀಪಕ್ ಸಾಗರ್ ಸಾಗರ ಸ್ಟ್ರಿಂಜರ್. ಇಷ್ಟೆಲ್ಲಾ ಯಾಕೆ ಹೇಳುತ್ತೀದ್ದೀನೆಂದರೆ ನಾನೂ ಕೂಡ ತಾಳಗುಪ್ಪ-ಕಾರ್ಗಲ್-ಜೋಗ ಕ್ಕೆ ಸ್ಟ್ರಿಂಜರ್ ಆಗಿ ಸೇರುವ ಇರಾದೆ ಹೊಂದಿದ್ದೇನೆ.
ಬರಹದ ಪ್ರಪಂಚವೇ ಹಾಗೆ ಬಿಟ್ಟಿರಲು ಆಗದು ಹಾಗೂ ಬಿಡಲೂ ಬಾರದು. ಕಾರಣ ನಾನೇ ಜ್ವಲಂತ ಸಾಕ್ಷಿ. ನಾನು ವರದಿಗಾರನಾಗಿ ಸಂಕೇಶ್ವರರ ಉಷಾಕಿರಣದಲ್ಲಿದ್ದಾಗ ನಿತ್ಯ ಹತ್ತು ಹಲವು ನ್ಯೂಸು ಕುಟ್ಟಿದ್ದೆ. ಉಷಾಕಿರಣ ಎಂದು ಬಂದ್ ಆಯಿತೋ ಅಲ್ಲಿಗೆ ನಾನು ಕೂಡ ವರದಿಗಾರನಾಗಿ ಬಂದ್ ಆದೆ. ಅಲ್ಲಿಂದ ಶುರುವಾಯಿತು ನೋಡಿ ಸಮಸ್ಯೆ. ನಾನು ವರದಿಗಾರನಾಗಿದ್ದಾಗ ಕುಟ್ಟಿದ್ದ ನ್ಯೂಸಿನ ಎಲ್ಲಾ ಪಾತ್ರಧಾರಿಗಳೂ ಬೆನ್ನೆತ್ತಿ ಕಾಡತೊಡಗಿದವು.
ಈಗ ಅವರುಗಳ ಕಾಟ ತಪ್ಪಿಸಿಕೊಳ್ಳಲಾದರೂ ಮತ್ತೆ ವರದಿಗಾರನಾಗಬೇಕು. ಪ್ರಪಂಚವೇ ಹಾಗೆ ರೌಡಿ ಯಿಂದ ಹಿಡಿದು ಪೋಲೀಸ್ ರ ವರಗೂ ಅಧಿಕಾರ ಹೋದಮೇಲೆ ಕಷ್ಟ ಕಷ್ಟ ಕಷ್ಟ. ಹಾಗಂತ ಅದಿದ್ದಾಗ ಸುಖ ಅಂತಲ್ಲ. ಅದು ಮತ್ತೊಂದು ತರ. ಒಟ್ಟಿನಲ್ಲಿ ಯಾವುದೂ ನಮ್ಮ ಕೈಯಲ್ಲಿಲ್ಲ.

Saturday, February 18, 2012

ಪುಕ್ಕಟೆ ಪೀಪಿ




ವಾವ್ ಅಂತ ಅನ್ನದಿರಲು ಆಗದಲ್ಲ ಈ ಹಸಿರಾಗುವ ಕೆಂಪು ನೋಡಿ. ಇರಲಿ ಆಮೇಲೆ ವಾವ್ ಅಂದರೂ ಆದೀತು ಈಗ ಇದರ ಒಂದು ಸಣ್ಣ ಮಜ ನೋಡೋಣ. ಇದು ಅರಳಿಮರದ ಚಿಗುರು. ಕಲ್ಲಿನ ಸಂದಿಯಲ್ಲಿ ಹುಟ್ಟಿದ್ದರಿಂದ ಕಲ್ಲರಳಿ ಅಂತಲೂ ಅನ್ನಬಹುದು. ಹಾಗಂತ ಕಲ್ಲು ಅರಳುವುದು ಅಂದರೆ ಅರ್ಥವೇ ಇಲ್ಲ ಹಾಗಾಗಿ ಇಲ್ಲಿ ಕಲ್ಲು ಮತು ಅರಳಿ ಬೇರೆ ಬೇರೆ.

ನಿಮ್ಮ ಮನೆಯ ಮುದ್ದು ಕಂದನಿಗೆ ಪೇಟೆಗೆ ಹೋದಾಗ ಅಲ್ಲಲ್ಲ ಶಾಪಿಂಗ್ ಗೆ ಹೋದಾಗ ಪೀ......ಎನ್ನುವ ಪೀಪಿ ಖರೀದಿ ಮಾಡಿದ್ದುಂಟು. ನೀವೂ ಕೂಡ ಬಾಲ್ಯದಲ್ಲಿ ಅದಕ್ಕಾಗಿ ವರಾತ ಮಾಡಿದ್ದು ನನಗೇನು ಎಲ್ಲರಿಗೂ ಗೊತ್ತಿದೆ ಬಿಡಿ. ಈಗ ಈ ಅರಳಿ ಚಿಗುರಿನ ವಿಷಯಕ್ಕೆ ಬರೋಣ. ಚೂಪನೆಯ ಚಿಗುರು ಕಾಣಿಸುತ್ತಿದೆಯಲ್ಲ ಅದನ್ನು ಉಗುರಿನಿಂದ ನಯವಾಗಿ ಚಿವುಟಿ ಸಣ್ಣದಾಗಿ ಕೈಗೆ ಬರುವ ಕಹಳೆಯನ್ನು ನಾಲಿಗೆಯ ಮೇಲಿಟ್ಟುಕೊಂಡು ಉಸಿರು ಒಳಗೆ ತೆಗೆದುಕೊಂಡರೆ ಪಕ್ಕಾ ಪಕ್ಕಾ ಹಕ್ಕಿಯ ಮರಿಯ ದನಿ ಹೊರಡುತ್ತದೆ. ಆಗ ಎರಡೂ ಕೈಯನ್ನು ಗೂಡಾಗಿ ಹಿಡಿದುಕೊಂಡರಂತೂ ನೋಡುಗರಿಗೆ ಕೈಯಲ್ಲಿ ಹಕ್ಕಿ ಮರಿ ಕಿವಿಗೆ ಮರಿಯ ಕೂಗಿನ ಸದ್ದು. ಒಮ್ಮೆ ಎಲ್ಲರೂ "ಅಯ್ಯೋ ಪಾಪ. ಮರಿ ಹಕ್ಕಿ ಬಿಡ ಬಿಡ" ಅನ್ನೋದು ಗ್ಯಾರಂಟಿ ಕೈಯಲ್ಲಿ ಗೋರಂಟಿ ಇದ್ದರಂತೂ ಇನ್ನೂ ಇನ್ನೂ ಗ್ಯಾರಂಟಿ

ಒಟ್ಟಿನಲ್ಲಿ ನಾನು ಏನು ಹೇಳಲು ಹೊರಟಿದ್ದೇನೆಂದರೆ ಪ್ರಕೃತಿ ನಮಗೆ ಪುಕ್ಕಟೆ ಪೀಪಿ ದಯಪಾಲಿಸಿದೆ ಅದಕ್ಕಾಗಿ ಹಣ ವ್ಯಯಿಸಬೇಡಿ. ಗುಡ್ ಡೆ.

Monday, February 6, 2012

ತುಸು ಕಷ್ಟದ್ದು ಅಂತ ನಿಮಗೂ ಅನಿಸಿರಬೇಕಲ್ಲ

ತರ್ಕಕ್ಕೆ ನಿಲುಕದ ವಿಷಯಗಳು ಒಮ್ಮೊಮ್ಮೆ ಜೀವನದಲ್ಲಿ ಘಟಿಸಿಬಿಡುತ್ತವೆ. ಅದು ಆ ಕ್ಷಣದ ಅನುಭವ ಅಂತ ಸುಮ್ಮನೆ ತಳ್ಳಿಹಾಕಲೂ ಆಗದು ಹಾಗಂತ ಅದಕ್ಕೆ ಜೋತುಬಿದ್ದು ಹಗಲಿರುಳೂ ಅದೇ ಜಪ ಮಾಡುತ್ತ ಕುಳಿತಿರಲೂ ಆಗದು ಅಂತ ಒಂದು ಮಜದ ಘಟನೆ ಕೇಳಿ ಅಲ್ಲಲ್ಲ ಓದಿ.


ಭಾನುವಾರ, ಕಟ್ಟಿಸುತ್ತಿರುವ ಮನೆಯೆದುರು ಕುಳಿತಿದ್ದೆ. ಕಾನ್ಲೆ ವೆಂಕಟಾಚಲ ಹಿಟಾಚಿ ಕೆಲಸ ನೋಡಿ ಹೋಗಲು ಬಂದಿದ್ದ. ನಾನೂ ಅವನು ಕೆಲಸದ ಕುರಿತು ಮಾತನಾಡುತ್ತಾ ಕುಳಿತಿದ್ದಾಗ ರಸ್ತೆಯಲ್ಲಿ ಹಳದಿ ಬಟ್ಟೆ ಧರಿಸಿದ ವ್ಯಕ್ತಿಯೊಬ್ಬ ನಡೆದು ಹೋದ. ಆತ ಬಹುಷ: ಭಿಕ್ಷುಕ ಅಂತ ನನಗೆ ಅನಿಸಿತು. ಆತ ಮುಂದೆ ಹೋಗಿ ನಮ್ಮ ಹೊಸಮನೆಯ ಮೈನ್ ಗೇಟಿನೊಳಕ್ಕೆ ನುಸುಳಿ ಒಳಗೆ ಬರತೊಡಗಿದ. ಅದನ್ನು ಗಮನಿಸಿದ ವೆಂಕಟಾಚಲ ದೊಡ್ಡ ದನಿಯಲ್ಲಿ " ಏಯ್ ಇಲ್ಲಿ ಯಾರೂ ಒಕ್ಕಲು ಇಲ್ಲ, ಮುಂದೆ ಹೋಗು" ಎಂದ. ಅದಕ್ಕೆ ಆತ "ಯಾರೂ ಬರಬಾರದು ಅಂತ ಮನೆ ಕಟ್ಟಿಸಿದ್ದೀರಾ..?" ಎಂದು ಗಢಸು ದನಿಯಲ್ಲಿ ಕೇಳುತ್ತಾ ಮುಂದೆ ಬರತೊಡಗಿದ. ಆತನ ಆ ದನಿ ನನಗೆ ಅದೇಕೋ ಭಿಕ್ಷುಕನ ದನಿ ಅಲ್ಲ ಅನಿಸಿತು. ಜಂಗಮ ಇರಬಹುದಾ ಅಂತಲೂ ಅನಿಸಿತು, ಆದರೂ ನಾನು ಆತನ ಬಗ್ಗೆ ಗಮನ ಕೊಡದೆ ಬೇರೇನೋ ಯೋಚಿಸುತ್ತಿದ್ದೆ. ಆದರೆ ವೆಂಕಟಾಚಲ ಅವನ ಬೆನ್ನು ಹತ್ತತೊಡಗಿದ. ಅದೂ ಇದೂ ಹಾಗೇ ಹೀಗೆ ಅಂತಿದ್ದ. ಆತ ವೆಂಕಟಾಚಲನ ಮಾತಿಗೆ ಆತ ಉತ್ತರ ಕೊಡುವ ಗೋಜಿಗೆ ಹೋಗದೆ ಸೀದಾ ನನ್ನ ಬಳಿ ಬರತೊಡಗಿದ . ಆತ ತೀರಾ ಹತ್ತಿರವಾದಾಗ ವೆಂಕಟಾಚಲ " ಏಯ್ ನನಗೆ ಮದುವೆಯಾಗಬೇಕು, ಹೆಣ್ಣು ಸಿಗುತ್ತಾ..? ಯಾವಾಗ ಸಿಗುತ್ತೆ?" ಹೇಳು ಅಂತ ಕಿಚಾಯಿಸಿದ. ಅದಕ್ಕೆ ಆತ " ಶ್ರೀ ಕೃಷ್ಣ ಪರಮಾತ್ಮನಿಗೆ ಹದಿನಾರು ಸಾವಿರ ಹೆಂಡಿರು, ನಿನಗೆ ಎಷ್ಟು ಬೇಕು..?" ಅಂತ ಕೇಳಿ ನನ್ನೆದುರು ಬಂದು ನಿಂತು


ನೀನು ಕರೆದಲ್ಲಿಗೆ ಗಂಗೆ ಬಂದಿದ್ದಾಳೆ-ಈ ಜಾಗಕ್ಕೆ ಇಲ್ಲಿನ ಕೆಲಸಕ್ಕೆ ತೊಂದರೆ ಕೊಡಬೇಕು ಅಂತ ಎಂಟು ಜನ ಕೋರ್ಟು ಕಛೇರಿ ಅಂತ ಗಂಟು ಬಿದಿದ್ದಾರೆ ಆದರೆ ನಿನ್ನ ಪ್ರಾಮಾಣಿಕತೆಯಿಂದ ಸತ್ಯ ಧರ್ಮ ದಿಂದ ನಿನ್ನ ರೋಮವನ್ನೂ ಅಲುಗಾಡಿಸಲಾಗಲಿಲ್ಲ". ನಾನು ಇವೆಲ್ಲಾ ಒಗಟಿನ ತರಹದ ಮಾಮೂಲು ಮಾತು ಅಂತ ಸುಮ್ಮನುಳಿದೆ, ಆದರೆ ವೆಂಕಟಾಚಲ " ಏಯ್ ಇವ ಈ ತರಹ ನೂರಕ್ಕೆ ನೂರು ಹೇಳ್ತಾನಲ್ಲ ಮಾರಾಯ, ನಾನು ಕಿಚಾಯಿಸಿದ್ದು ತಪ್ಪಾಯ್ತಾ..?" ಅಂತ ನನ್ನ ಬಳಿ ಕೇಳಿದ. ಅದಕ್ಕೆ ಆತ " ನಾನು ಉಕ್ಕಡಗಾತ್ರಿಯಿಂದ ಬಂದ ಜಂಗಮ, ದಾರಿಯಲ್ಲಿ ಹೋಗುತ್ತಾ ಇದ್ದೆ. ಬರಬೇಕು ಅಂತ ಅನಿಸಿತು ಬಂದೆ, ಹೇಳು ಅಂತ ಅಪ್ಪಣೆಯಾಯಿತು ಹೇಳುತ್ತಾ ಇದ್ದೇನೆ " ಎಂದು ಹೇಳಿ ನನ್ನತ್ತ ಕೈಮಾಡಿ " ಇಂಥವರ ಮುಕಾಂತರ ಜಮೀನು ವ್ಯವಹಾರ ಮಾಡಿದ್ದೀಯ, ಸಮಾಧಾನವಾಗಿ ಬಗೆ ಹರಿಸಿಕೋ" ಎಂದು ವೆಂಕಟಾಚಲನ ಬಳಿ ಹೇಳಿದ. ಈ ಬಾರಿ ವೆಂಕಟಾಚಲ ಎಚ್ಚರ ತಪ್ಪಿ ಬೀಳುವುದೊಂದೇ ಬಾಕಿ, ಕಾರಣ ವೆಂಕಟಾಚಲ ನನ್ನ ಮೂಲಕ ಒಂದು ಜಮೀನು ಖರೀದಿಸಿ ಅದು ಸ್ವಲ್ಪ ಜಡಕಾಗಿತ್ತು. ನಂತರ ಮುಂದುವರೆದ ಜಂಗಮ ನನ್ನ ಬಳಿ " ಪೂರ್ವ ದಿಕ್ಕಿನಲ್ಲಿ ಒಂದು ಜಮೀನಿದೆ, ಅದು ಪಾಳು ಬಿದ್ದಿದೆ, ಪ್ರಯತ್ನಿಸು ನಿನ್ನವರಿಗೆ ಆಗುತ್ತೆ- ಒಳ್ಳೆಯವರೊಡನೆ ಸೇರಿ ಒಳ್ಳೆಯ ಕೆಲಸ ಮಾಡುತ್ತಾ ಇದ್ದೀಯ ಒಳ್ಳೆಯದೇ ಆಗುತ್ತೆ- ನಿನ್ನ ಏಳ್ಗತಿಯ ಮೇಲೆ ಜನರ ಕಣ್ಣಿನ ದೃಷ್ಟಿ ಇದೆ, ನೀನು ಅವನ್ನೆಲ್ಲಾ ನಂಬಲ್ಲ, ಆದರೆ ಹೊಟ್ಟೆಕಿಚ್ಚಿನ ಕಣ್ಣಿಗೆ ಕಲ್ಲು ತುಂಡು ಮಾಡುವ ಶಕ್ತಿಯಿದೆ ಹಾಗಾಗಿ ಕೇವಲ ಮಾಡಬೇಡ, ಒಂದು ಶಾಂತಿ ಮಾಡಿಸು" ಎಂದ. ಹಾಗಂದ ಕೂಡಲೇ ವೆಂಕಟಾಚಲ " ನಾನು ಮೊದಲೇ ಹೇಳಲಿಲ್ಲವಾ, ಇವರದ್ದು ಶುರು ಆಯಿತು ನೋಡು ಶಾಂತಿ ಗೀಂತಿ ಅಂತ ದುಡ್ದು ಹೊಡೆಯುವ ತಂತ್ರ" ಎಂದು ಮತ್ತೆ ಕಿಚಾಯಿಸಿದ. ಅದಕೆ ಜಂಗಮ "ಇಲ್ಲ ಇದು ಹಣ ಖರ್ಚುಮಾಡಿ ಮಾಡುವ ಶಾಂತಿಯಲ್ಲ ಗೋಮೂತ್ರ ಮನೆಯ ಸುತ್ತ ಸಿಂಪಡಿಸು ಅಷ್ಟೆ ಎಂದು ಹೇಳಿ ಉಕ್ಕಡಗಾತ್ರಿಯಲ್ಲಿ ನನ್ನದೊಂದು ಪುಟ್ಟ ಗೋ ಶಾಲೆಯಿದೆ ಧನ ಸಹಾಯ ಮಾಡುವುದಾದರೆ ಮಾಡಿ ಎಂದು ಫೋಟೋ ತೋರಿಸಿದ, ನಾನಷ್ಟು ಕೊಟ್ಟೆ ವೆಂಕಟಾಚಲನೂ ಅಷ್ಟು ಕೊಟ್ಟ. ತಕ್ಷಣ ಹೊರಟು ನಿಂತ ಜಂಗಮ " ಮುಂದಿನ ವರ್ಷ ಇದೇ ಸಮಯಕ್ಕೆ ಬರುತ್ತೇನೆ ನಾನು ಹೇಳಿದ್ದು ಸತ್ಯವಾದರೆ ಧರ್ಮ ಮಾಡು, ಸುಳ್ಳಾದರೆ ಅಟ್ಟು ಎನ್ನುತ್ತಾ ಹೊರಟ. ಆಗ ವೆಂಕಟಾಚಲ ಮತ್ತೆ " ನನಗೆ ಹೆಣ್ಣು ಸಿಗುತ್ತೇನೋ..?" ಎಂದು ಕೇಳಿದ. ಅದಕ್ಕೆ ಆತ " ಸರಿಯಪ್ಪಾ ನಿನಗೆ ನಾನು ಹದಿನಾರು ದಿವಸದಲ್ಲಿ ಹೆಣ್ಣು ಕೊಡಿಸುತ್ತೇನೆ, ಆದರೆ ಇರುವ ಹೆಂಡತಿಯನ್ನು ಏನು ಮಾಡುತ್ತೀಯಾ?, ಸುಮ್ಮನೆ ಬೇಡದ್ದನ್ನೆಲ್ಲಾ ಕೇಳಬೇಡ " ಎನ್ನುತ್ತಾ ಬಿರಬಿರನೆ ನಡೆದ. ವೆಂಕಟಾಚಲ ಅಡ್ಡಬೀಳುವುದೊಂದು ಬಾಕಿ.


ಇದು ಘಟನೆ. ಇಲ್ಲಿ ಅತಿಶಯೋಕ್ತಿ ಇಲ್ಲ. ನಡೆದದ್ದನ್ನು ನಡೆದಂತೆ ನಿಮ್ಮ ಮುಂದೆ ಹಂಚಿಕೊಂಡಿದ್ದೇನೆ. ಜಂಗಮ ಹೇಳಿದ ಅಷ್ಟೂ ನೂರಕ್ಕೆ ನೂರು ಸತ್ಯ, ಆತ ಹೇಳಿದ ಮಾತು" ಗಂಗೆ ನೀನು ಕರೆದಲ್ಲಿಗೆ ಬಂದಿದ್ದಾಳೆ" ಎಂಬುದೂ ಕೂಡ. ನಾವು ತೆಗೆಯಿಸಿದ ಬೋರ್ ವೆಲ್ ನಿರಂತರ ನೀರಿನ ಬುಗ್ಗೆಯಾಗಿ ಚಿಮ್ಮುತ್ತಿದೆ. ಇದು ತರ್ಕಕ್ಕೆ ನಿಲುಕದ್ದು, ನಾನಾಗಿಯೇ ಹುಡುಕಿ ಹೋಗಿ ಅಂಗೈ ಕೊಟ್ಟದ್ದಲ್ಲ. ಒಂದು ಘಟನೆ ಅಷ್ಟೆ. ಸತ್ಯವೋ ಸುಳ್ಳೋ ವಿಮರ್ಶೆ ತುಸು ಕಷ್ಟದ್ದು ಅಂತ ನಿಮಗೂ ಅನಿಸಿರಬೇಕಲ್ಲ....?




Tuesday, January 31, 2012

ಮುಂದೆ ಹೀಗೆ ಕುಟ್ಟಬಹುದು..



ವಿದ್ಯಾರ್ಥಿ ಜೀವನ ಬಂಗಾರದ್ದಂತೆ, ಆದರೆ ಅದು ಬಂಗಾರದ್ದು ಅಂತ ತಿಳಿಯುವುದು ಆ ಜೀವನ ಮುಗಿದಮೇಲೆಯೇ ಅಂತೆ. ಹೌದೇ ಹೌದು. ಈ ಪಟದಲ್ಲಿನ ಮುದ್ದು ಮುದ್ದು ಮಕ್ಕಳು ಹಣೆಯಮೇಲೆ ಕೈಯಿಟ್ಟು ನಿಂತದ್ದು ನೋಡಿದಾಗ ನಮಗೆ ನಿಮಗೆ ಹಾಗನ್ನಿಸುವುದು ನಿಜ. ಆದರೆ ನಾವು ನೀವೂ ಕೂಡ ಹೀಗೆ ಒಂದು ದಿನ ಹಣೆಯಮೇಲೆ ಕೈಯಿಟ್ಟು ಜೈ ಎಂದಿದ್ದಿದೆ. ಒಮ್ಮೆ ಕಷ್ಟಪಟ್ಟು ಆ ದಿನಗಳನ್ನು ನೆನಪಿಸಿಕೊಳ್ಳಿ. ಎಂತಾ ಮಜ ಈಗ ಅಲ್ಲವೇ?. ಹಾಗಾದರೆ ಅಂದು...?

ಥೂ ತಲೆಕೆಟ್ಟು ಹೋಗುತ್ತಿತ್ತು. ಸಾಲಾಗಿ ಒಬ್ಬರ ಹಿಂದೆ ಒಬ್ಬರು ಹೋಗಬೇಕಿತ್ತು. ಮಾಸ್ತರುಗಳೋ ನಮ್ಮನ್ನು ಗದರಿಸಲು ಭಗವಂತ ತಯಾರಿಸಿದ ಯಂತ್ರಗಳಂತೆ ಭಾಸವಾಗುತ್ತಿತ್ತು. ಗಣರಾಜ್ಯೋತ್ಸವವಾದರೆ ಕೊಂಚ ಅಡ್ಡಿಲ್ಲ ಚಳಿ ಚಳಿ ಅಷ್ಟೆ. ಆ ಆಗಸ್ಟ್ ಹದಿನೈದೋ ಭಗವಂತನಿಗೇ ಪ್ರೀತಿ. ನೀವು ಪಟ್ಟಣದಲ್ಲಿ ಓದಿದ ಜನ ಆಗಿದ್ದರೆ ನಿಮಗೆ ಕಪ್ಪುಸುಂದರಿ ಟಾರ್ ರಸ್ತೆಯಮೇಲೆ ನಡಿಗೆ, ನಮಗೆ ಅಮ್ಮಾ... ಕೆಸರು ಕಿಚಕಿಚ ಅದರ ನಡುವೆ ನಮ್ಮ ಪ್ರಭಾತ್ ಪೇರಿ. "ಸಾಗಿ ಮುಂದೆ ಭಾರತೀಯರ ಹಿಂದೆ" ಹಾಡು ಯಾರಿಗೆ ಬೇಕಿತ್ತು..?. ಎರಡು ಕಿಲೋಮೀಟರ್ ಕೆಸರಿನಲ್ಲಿ ಸಾಲಾಗಿ ಸುತ್ತಿ ವಾಪಾಸು ಚಡ್ಡಿಯನ್ನೆಲ್ಲಾ ಒದ್ದೆ ಮುದ್ದೆ ಮಾಡಿಕೊಂಡು ರೂಂ ನಲ್ಲಿ ಕಿಚಿಪಿಚಿಯಲ್ಲಿ ಕುಳಿತು ಕುಟ್ಟುವ ಭಾಷಣ ಕೇಳಬೇಕಿತ್ತು. ಅದನೂ ಅರ್ಥವೇ ಆಗುತ್ತಿರಲಿಲ್ಲ. ಪ್ರತೀ ಬಾರಿಯೂ ಅದೇ ರಾಗ ಅದೇ ಹಾಡು, ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು, ದೇಶಕ್ಕಾಗಿ ನಾವು ತ್ಯಾಗ ಮಾಡಬೇಕು... ಹೀಗೆ ದೊಡ್ಡವರೆನಿಸಿಕೊಂಡ ದೊಡ್ಡ ಜನ ತಮ್ಮ ಮನಸ್ಸೋ ಇಚ್ಛೆ ಕೊರೆಯುತ್ತಿದ್ದುದನ್ನು ಗಲಾಟೆ ಮಾಡದೇ ಆಲಿಸಬೇಕಿತ್ತು. ಅಪ್ಪಿ ತಪ್ಪಿ ಪಿಟಕ್ ಎಂದರೆ ಮನೆಯಲ್ಲಿ ಹೆಂಡತಿ ಕೈಯಲ್ಲಿ ಉಗಿಸಿಕೊಂಡು ಸಿಟ್ಟು ತೀರಿಸಿಕೊಳ್ಳಲು ಹಪಹಪಿಸುತ್ತಿರುವ ಮಾಸ್ತರರ ಕೋಲಿಗೆ ಆಹುತಿ. ಆದರೂ ಇದರ ನಡುವೆ ಎನೋ ಒಂದು ಸಂಭ್ರಮ ಇತ್ತು ಅಂತ ಈಗ ಅನ್ನಿಸುತ್ತಿದೆ.

ಮೊನ್ನೆ ೨೬ ನೇ ತಾರೀಕು ಅದೇ ಹಳೆಯ ವಾಕ್ಯಗಳು ಅಂದಿನ ಮಕ್ಕಳಿಂದ ಇಂದಿನ ಮಕ್ಕಳಿಗೆ ಕೊರೆಯಲ್ಪಟ್ಟಾಗ ಛೆ ಅಂತ ಅನ್ನಿಸಿದ್ದು ಸುಳ್ಳಲ್ಲ. ಆ ಇಂದಿನ ಮಕ್ಕಳಲ್ಲಿ ಒಬ್ಬಿಬ್ಬರಾದರೂ ಮುಂದೆ ಹೀಗೆ ಕುಟ್ಟಬಹುದು.. ಬಂಗಾರದ......

Thursday, January 19, 2012

ಹಂಸ ಕ್ಷೀರ ನ್ಯಾಯ

ಹಂಸ ಕ್ಷೀರ ನ್ಯಾಯ ಎಂಬುದೊಂದು ಇದೆಯಂತೆ. ಅದರ ವಿವರ ಅಂದರೆ, ಹಾಲು ಹಾಗೂ ನೀರನ್ನು ಸೇರಿಸಿ ಒಂದು ತಟ್ಟೆಯಲ್ಲಿ ಹಾಕಿಟ್ಟರೆ ಹಂಸ ಹಾಲನ್ನು ಮಾತ್ರಾ ಹೀರಿಕೊಂಡು ನೀರನ್ನು ಬಿಟ್ಟುಬಿಡುತ್ತದೆಯಂತೆ. ಅದರ ತಾತ್ಪರ್ಯ ಪ್ರಪಂಚದಲ್ಲಿ ನಡೆಯುವ ಎಲ್ಲಾ ವಿದ್ಯಮಾನಗಳಲ್ಲಿ ಒಳ್ಳೆಯದನ್ನು ನಾವು ಹೀರಿಕೊಂಡು ಅಥವಾ ಅವಶ್ಯಕತೆಯಿದ್ದುದನ್ನು ಹೀರಿಕೊಂಡು ಕೆಟ್ಟದ್ದನ್ನು ಅಥವಾ ಬೇಡದ್ದನ್ನು ಬಿಡುವ ತಾಕತ್ತು ಇದ್ದರೆ ಚೆನ್ನ ಎಂಬುದು. ಇನ್ನು ಒಳ್ಳೆಯದು ಕೆಟ್ಟದ್ದು ಮುಂತಾದ ವಿಂಗಡಣೆಗಳೆಲ್ಲಾ ದೊಡ್ಡಮಟ್ಟದ ಜನರ ತರ್ಕಕ್ಕೆ ಸಂಬಂಧಪಟ್ಟದ್ದು ಹಾಗಾಗಿ ಅವನ್ನು ಅಲ್ಲಿಯೇ ಬಿಡೋಣ.
ಹಂಸಗಳ ಜೋಡಿಯನ್ನು ತಂದು ಅದಕ್ಕೆ ಶ್ವೇತ-ಸುಂದರ ಎಂಬ ನಾಮಕರಣ ಮಾಡಿ ಕೆರೆಗೆ ತಂದು ಬಿಟ್ಟಮೇಲೆ ಹಂಸಕ್ಷೀರ ನ್ಯಾಯದ ಕತೆ ನೆನಪಾಯಿತು. ಹಾಲು ನೀರು ಸೇರಿಸಿ ಕೊಟ್ಟರೆ ಅವು ಕೊಟ ಕೊಟ ಅಂತ ಸದ್ದು ಮಾಡುತ್ತವಷ್ಟೆ. ಆದರೆ ನೀರಿನ ಜತೆ ಅಕ್ಕಿ ಹಾಕಿದರೆ ಕೇವಲ ಅಕ್ಕಿಯನ್ನು ಮಾತ್ರಾ ಆಯ್ದು ತಿನ್ನುತ್ತವೆ. ಎಂಬಲ್ಲಿಗೆ ಅಂದಿನ ಕಾಲದ ಹಂಸಪಕ್ಷಿ ಹಾಗೆ ಮಾಡುತ್ತಿತ್ತೇನೋ ಎಂದು ಸಮಜಾಯಿಷಿ ನೀಡಬೇಕಷ್ಟೆ.




Thursday, January 12, 2012

ಅದನ್ನ. ಮತ್ತೆ ಇದನ್ನ.

ಹೊರ ನೋಟಕ್ಕೆ ಇಷ್ಟರಮಟ್ಟಿಗೆ ತಯಾರಾಗಿ ನಿಂತಿದೆ ಮನೆ. ಇನ್ನು ಇಂಟೀರಿಯರ್ ನಡೆಯಬೇಕಿದೆ. ಕಳೆದ ವರ್ಷ ಮಾರ್ಚ್ ತಿಂಗಳಿನಿಂದ ಇಲ್ಲಿಯವರೆಗೆ ಆಗಿರುವ ಅನುಭವ "ಮನೆ ಕಟ್ಟಿ ನೋಡು" ಎಂಬ ಪುಸ್ತಕ ಹೊರ ತರಬಹುದಾದಷ್ಟಿದೆ. ಮನೆ ಕಟ್ಟುವುದು ಒಂದು ಮಹಾ ಅಪರಾಧ ಎಂಬಂತೆ ಬಿಂಬಿಸಿದ ಅನಂತ ಪಟಾಲಂ ನಿಂದ ಹಿಡಿದು ನಿನ್ನೆ ನಮ್ಮ ಮನೆ ಕೊನೆಕೊಯ್ಯುವ ಜನ ಕಂಠಮಟ್ಟ ಕುಡಿದು ಅನಾಹುತಮಾಡಿಕೊಂಡಲ್ಲಿಯವರೆಗೆ, ನಾನು ಮಾಡಿದ ಕೆಲಸಕ್ಕೆ ಸರ್ಕಾರ ಸಂಬಳ ಕೊಡುತ್ತೆ ಎಂದ ಮಂಜುಳಾ ಶಾನುಭೋಗರಿಂದ ಹಿಡಿದು ತಳ್ಳಿ ತಳ್ಳಿ ಇನ್ನಷ್ಟು ತಳ್ಳಿ ಎಂದ ಜನರವರೆಗೂ, ನಾನು ಇಲ್ಲಿ ಕೆಲಸ ಮಾಡಿ ಹೊಸ ಮನುಷ್ಯನಾದೆ ಎಂದ ತಿಲಕ್ ರಾಯ್ಕರ್ ನಿಂದ ಹಿಡಿದು ಕೆಲಸವನ್ನೇ ಮಾಡದೇ ಹಣ ಪೀಕಿದ ಜನರವರೆಗೂ, ಗೊಣಗದೆ ಸೂಪರ್ ಸೂಪರ್ ಎನ್ನುತ್ತಾ ಹಣ ನೀಡಿದ ಗೌರೀಶನಿಂದ ಹಿಡಿದು, ಜವಾಬ್ದಾರಿಯೇ ಇಲ್ಲ ಎಂದ ಅಪ್ಪಯ್ಯನವರೆಗೂ, ಇಲ್ಲಿ ಬೋರ್ ತೆಗೆದರೆ ನೀರು ಚಿಮ್ಮುತ್ತೆ ಎಂದ ಕೃಷ್ಣಮೂರ್ತಿಯಣ್ಣನಿಂದ ಹಿಡಿದು ಮಳೆಗಾಲದಲ್ಲಿ ಸ್ಲ್ಯಾಬ್ ಹಾಕಿದರೆ ಆರು ತಿಂಗಳೂ ನಿಲ್ಲದು ಎಂದು ಹೆದರಿಸಿದ ಜನರವರೆಗೂ, ನೀನು ಮನೆ ಕಟ್ಟು ಯಾರೂ ಏನೂ ಮಾಡಲಾಗದು ಕಾರಣ ನೀನು ಕಾನೂನಿನ ಪ್ರಕಾರ ಸರಿಯಾಗಿದ್ದೀಯ ಎಂದ ಕಾನುತೋಟದ ಶೇಷಗಿರಿಯಣ್ಣ ಹಾಗೂ ಬಾಬುವಿನಿಂದ ಹಿಡಿದು ನಾನು ಹೇಳಿದರೆ ಡಿಸಿ ಬಂದು ಮನೆ ಕೆಲಸ ನಿಲ್ಲಿಸುತ್ತಾರೆ ಎಂದ ಶ್ಯಾಂ ಭಟ್ಟನವರೆಗೂ, ಸಮಸ್ಯೆ ಬಂದಾಗ ಕಣ್ಮುಚ್ಚು ನಿನ್ನ ಕೆಲಸ ಮಾಡುತ್ತಾ ಹೋಗು ಎಂದು ಧೈರ್ಯ ತುಂಬಿದ ಜನಾರ್ಧಣ್ಣನಿಂದ ಹಿಡಿದು ಅವನು ಕಟ್ಟಿದ ಮನೆ ಸರ್ಕಾರಿ ಜಾಗದಲ್ಲಿದೆ ಅದು ಉಳಿಸಿಕೊಳ್ಳುವುದು ಕಷ್ಟ ಎಂದ ಜನರವರೆಗೂ, ಎಲ್ಲವೂ ಪಾತ್ರಗಳೆ ಪರಿಚಯಸ್ಥರೆ, ಅವನ್ನೆಲ್ಲಾ ಒಂದೆಡೆ ಯಾರಿಗೂ ಅವಮಾನವಾಗದಂತೆ ಅಕ್ಷರದಲ್ಲಿ ಬಂಧಿಸಿ, ಅನುಮಾನಕ್ಕೆ ಎಡೆಯಿಲ್ಲದಂತೆ ಬರೆದು ಮುದ್ರಿಸಿ ಮತ್ತೆ ಯಥಾಪ್ರಕಾರ ಹಂಚಬೇಕಿದೆ. ಆವಾಗ ನನಗೆ ನೆನಪು ಬರುವುದು ನಿಮ್ಮನ್ನ. ಎಲ್ಲಿಯೋ ಕುಳಿತು ಭೇಟಿಯಾಗದೆ ಪರಿಚಯವಿಲ್ಲದೆ ಇದ್ದರೂ ಗಾಡ್ ಬ್ಲೆಸ್ ಯೂ ಅನ್ನುತ್ತೀರಲ್ಲ ಅದನ್ನ. ಮತ್ತೆ ಇದನ್ನ.