Thursday, January 19, 2012

ಹಂಸ ಕ್ಷೀರ ನ್ಯಾಯ

ಹಂಸ ಕ್ಷೀರ ನ್ಯಾಯ ಎಂಬುದೊಂದು ಇದೆಯಂತೆ. ಅದರ ವಿವರ ಅಂದರೆ, ಹಾಲು ಹಾಗೂ ನೀರನ್ನು ಸೇರಿಸಿ ಒಂದು ತಟ್ಟೆಯಲ್ಲಿ ಹಾಕಿಟ್ಟರೆ ಹಂಸ ಹಾಲನ್ನು ಮಾತ್ರಾ ಹೀರಿಕೊಂಡು ನೀರನ್ನು ಬಿಟ್ಟುಬಿಡುತ್ತದೆಯಂತೆ. ಅದರ ತಾತ್ಪರ್ಯ ಪ್ರಪಂಚದಲ್ಲಿ ನಡೆಯುವ ಎಲ್ಲಾ ವಿದ್ಯಮಾನಗಳಲ್ಲಿ ಒಳ್ಳೆಯದನ್ನು ನಾವು ಹೀರಿಕೊಂಡು ಅಥವಾ ಅವಶ್ಯಕತೆಯಿದ್ದುದನ್ನು ಹೀರಿಕೊಂಡು ಕೆಟ್ಟದ್ದನ್ನು ಅಥವಾ ಬೇಡದ್ದನ್ನು ಬಿಡುವ ತಾಕತ್ತು ಇದ್ದರೆ ಚೆನ್ನ ಎಂಬುದು. ಇನ್ನು ಒಳ್ಳೆಯದು ಕೆಟ್ಟದ್ದು ಮುಂತಾದ ವಿಂಗಡಣೆಗಳೆಲ್ಲಾ ದೊಡ್ಡಮಟ್ಟದ ಜನರ ತರ್ಕಕ್ಕೆ ಸಂಬಂಧಪಟ್ಟದ್ದು ಹಾಗಾಗಿ ಅವನ್ನು ಅಲ್ಲಿಯೇ ಬಿಡೋಣ.
ಹಂಸಗಳ ಜೋಡಿಯನ್ನು ತಂದು ಅದಕ್ಕೆ ಶ್ವೇತ-ಸುಂದರ ಎಂಬ ನಾಮಕರಣ ಮಾಡಿ ಕೆರೆಗೆ ತಂದು ಬಿಟ್ಟಮೇಲೆ ಹಂಸಕ್ಷೀರ ನ್ಯಾಯದ ಕತೆ ನೆನಪಾಯಿತು. ಹಾಲು ನೀರು ಸೇರಿಸಿ ಕೊಟ್ಟರೆ ಅವು ಕೊಟ ಕೊಟ ಅಂತ ಸದ್ದು ಮಾಡುತ್ತವಷ್ಟೆ. ಆದರೆ ನೀರಿನ ಜತೆ ಅಕ್ಕಿ ಹಾಕಿದರೆ ಕೇವಲ ಅಕ್ಕಿಯನ್ನು ಮಾತ್ರಾ ಆಯ್ದು ತಿನ್ನುತ್ತವೆ. ಎಂಬಲ್ಲಿಗೆ ಅಂದಿನ ಕಾಲದ ಹಂಸಪಕ್ಷಿ ಹಾಗೆ ಮಾಡುತ್ತಿತ್ತೇನೋ ಎಂದು ಸಮಜಾಯಿಷಿ ನೀಡಬೇಕಷ್ಟೆ.