Friday, June 22, 2012

ಕಾಲ ಪಕ್ವವಾಗಬೇಕಿದೆ.....

ಬ್ಲಾಗ್ ಬರೆಯುವುದು ನಿಂತೇ ಹೋಯಿತೇನೋ ಅಂತ ನನಗೆ ಕಾಡುವಷ್ಟು ದಿನಗಳಾಯಿತು ಅಕ್ಷರ ಕುಟ್ಟದೆ. ಇಂದು ಏನಾದರಾಗಲಿ ಅದು ನಾಲ್ಕೇ ಸಾಲಾದರೂ ಸರಿ ಅಂತ ಕುಟ್ಟಲು ಕುಳಿತೆ. ಬ್ಲಾಗ್ ಇದೆಯಲ್ಲ ಅದು ನನ್ನನ್ನು ಬಹು ಪ್ರೀತಿಯಿಂದ ಅಕ್ಕರೆಯಿಂದ ಬೆಳಸಿದೆ. ಅದರಿಂದ ಅದೆಷ್ಟೋ ಹೊಸ ಪ್ರಪಂಚದ ಅನಾವರಣವಾಗಿದೆ. ನನ್ನ ತುಮುಲ ತಣಿದಿದೆ, ಧಾವಂತದ ಬದುಕಿನ ಜನರ ಮುಖದಲ್ಲಿ ಮುಗುಳ್ನಗೆ ಮೂಡಿಸಿದೆ. ಅವರ ಸಂಪರ್ಕ ಸಾದ್ಯವಾಗಿದೆ. ಸುಮುಧುರ ನೆನಪು ಅಕ್ಷರ ರೂಪದಲ್ಲಿ ಉಳಿದಿದೆ, ನನಗೆ ಕುಟ್ಟುವಾಗ ಸಮಾಧಾನ ತಂದಿದ್ದು ಯಾವತ್ತೋ ಯಾರ ಕಣ್ಣಿಗೋ ಬಿದ್ದು ಸಮಾಧಾನ ತಂದಿದ್ದಿದೆ. ಇಷ್ಟೆಲ್ಲಾ ಮಜದ ಬ್ಲಾಗು ಬರೆಯಲು ಮತ್ತೆ ಶುರು ಮಾಡಬೇಕಿದೆ.
ಈಗ ಮಳೆ ಜೊರ್ರಂತ ಸುರಿಯುತ್ತಿದ್ದರೆ ಮನೆಯೊಳಗಿನಿಂದಲೇ ಅನುಭವಿಸುವಂತಹ "ತೊಟ್ಟಿ ಮನೆ" ತಯಾರಾಗಿ ನಿಂತಿದೆ. ಅಲ್ಲಿ ಕಾನೂನಿನ ಪ್ರಕಾರ ಕೊಂಚವೇ ಕೊಂಚ ಕೆಲಸ ಮುಗಿದರೆ ನೀವೂ ಅದನ್ನ ಬಿಸಿಬಿಸಿ ಪಕೋಡ ತಿನ್ನುತ್ತಾ ಅನುಭವಿಸಬಹುದು. ಕತೆ ಹೇಳಬಹುದು ಕೇಳಬಹುದು, ಮಲೆನಾಡಿನ ಪದಾರ್ಥಗಳ ಸವಿ ಅನುಭವಿಸಬಹುದು. ಆದರೆ ಅದಕ್ಕೆಲ್ಲಾ ಇನ್ನೂ ಕೊಂಚ ಸಮಯ ಕಾಯಬೇಕಿದೆ, ನಾನು ತಯಾರಾಗಬೇಕಿದೆ, ಕಾಲ ಪಕ್ವವಾಗಬೇಕಿದೆ......