Friday, July 20, 2012

ಅದು ಪರಮಸುಖಕ್ಕೆ ಪ್ರವೇಶದ ದಾರಿ.

ವಾವ್ ಅನ್ನಲೇಬೇಕು ಭತ್ತದ ಸಸಿಯ ಮೊಳಕೆಯೊಡೆಯುತ್ತಿರುವ ದೃಶ್ಯವ ಕಂಡು ಅಲ್ಲವೇ?. ಹೌದು ಸುಂದರ ಬೆಳೆಗಿನಲ್ಲಿ ಇಂತಹ ಒಂದು ದೃಶ್ಯ ನಿಮ್ಮ ಕಣ್ಣೆದುರಿಗಿದ್ದರೆ ಆವತ್ತಿನ ಮನಸ್ಥಿತಿಯೇ ಬೇರೆ ಬಿಡಿ. ಹಸಿರು ಉಲ್ಲಾಸ ತರುತ್ತದೆ, ಮನಸ್ಸು ಪ್ರಫುಲ್ಲಗೊಳ್ಳುತ್ತದೆ. ಇದು ಭಾರತೀಯ ರೈತ ತಾನು ತನ್ನ ಹೊಲಕ್ಕೆ ನಾಟಿಮಾಡಿಕೊಳ್ಳಲು ತಯಾರಿಸಿಕೊಂಡ ಸಸಿಮಡಿ ಗಳು. ಚಚ್ಚೌಕಾಕಾರದಲ್ಲಿದೆ. ಆದರೆ ಜಪಾನ್ ರೈತರುಗಳು ಹೀಗೆ ನಾಟಿಗೂ ಮುನ್ನದ ಗಿಡಗಳನ್ನು ಮಾಡುವಾವ ಒಂದು ಚಿತ್ತಾರ ಮಾಡಿಬಿಡುತ್ತಾರೆ. ಮನುಷ್ಯ ಪ್ರಾಣಿಗಳ ಮುಖ ಹೀಗೆ ಏನೇನೋ. ಅದನ್ನ ನೋಡಲು ಪ್ರವಾಸಿಗರ ದಂಡು ಬರುತ್ತದೆಯಂತೆ. ಆಗ ರೈತನಿಗೆ ಬಿತ್ತನೆಯ ಖರ್ಚು ಪ್ರವಾಸಿಗರ ಮೂಲಕ ಹರಿದುಬರುತ್ತದೆಯಂತೆ. ಬೆಳೆಯುವ ಅಕ್ಕಿಗೆ ಬೆಳೆಯುವ ಮುನ್ನವೆ ಹಣ ಜಣಜಣ ಎಣಿಸುತ್ತಾನೆ. ಹೀಗೆ ಲಾಭ ಅಲ್ಲಿ ಕೃಷಿ ಇಂದಿಗೂ. ಭಾರತದ ಪರಿಸ್ಥಿತಿ ಹಾಗಲ್ಲ. ಇಲ್ಲಿ ಕೃಷಿ ಲಾಭಕರ ಅಲ್ಲ ಅಷ್ಟೊಂದು ಆದರೆ ಮಜ ಗೊತ್ತಾ ಸಿಕ್ಕಾಪಟ್ತೆ ಲಾಭವಾದರೆ ಇಲ್ಲಿಯ ಜನರು ಕೃಷಿಯನ್ನು ಬಿಟ್ಟು ಬಿಡುತ್ತಾರೆ. ಇದು ಇಲ್ಲಿನ ಮನಸ್ಥಿತಿ. ಇರಲಿ ಎಲ್ಲಾ ಒಳ್ಳೆಯದಕ್ಕೆ ಅಂತ ನಾವು ಅಂದುಕೊಳ್ಳುವುದು. ಅದು ಪರಮಸುಖಕ್ಕೆ ಪ್ರವೇಶದ ದಾರಿ.

Wednesday, July 18, 2012

ಇನ್ನಷ್ಟು ನೆನಪಿಸಿದ್ದಾನೆ ಬರೆಯಬೇಕಿದೆ ಹೇಳಬೇಕಿದೆ

"ಜನರೂ ಹಾಗೆ, ಹಾಗಾಗಿಯೇ ಜನರೂ ಹೀಗೆ...
ಅಬ್ಬರ ಎಬ್ಬಿಸಿದವರಷ್ಟೇ ಕಾಣುವುದು ಇಲ್ಲಿ !"   -ವಿರಾಹೆ

ಹೀಗೊಂದು ಸಿಂಪಲ್ ಕಾಮೆಂಟ್ ಜಡಿದು ವಿರಾಹೆ ಅವನ ಡ್ಯೂಟಿಗೆ ಹೊರಟು ಹೋದ. ನನಗೆ ತಲೆ ಕೆರೆದುಕೊಳ್ಳುವುಂತಾಗುವುದು, ಮೈ ಪರಚಿಕೊಳ್ಳುವಂತಾಗುವುದು ಆವಾಗ. ನಾನು ಪ್ಯಾರಾಗಟ್ಟಲೆ ಕುಟ್ಟುತ್ತೇನೆ ನನ್ನೊಳಗಿನ ತುಮುಲವನ್ನು ನಿಮಗೆ ಅರ್ಥಮಾಡಿಸಲು. ನನಗಿಂತ ಇಪ್ಪತ್ತು ವರ್ಷ ಸಣ್ಣವ ಜಸ್ಟ್ ಒಂದೇ ಒಂದು ಸಾಲಿನಲ್ಲಿ ನಾನು ಹೇಳಬೇಕಾದ್ದನ್ನು ಹೇಳಿ ಹೋಗುತ್ತಾನೆ. ಛೆ ನಾನು ಯಾಕೆ ಹೀಗಲ್ಲ ಅಂತ ಅನ್ನಿಸುತ್ತದೆ. ಒಂದು ಸಾಲಿನಲ್ಲಿ ಹೇಳಬೇಕಾದ್ದಕ್ಕೆ ಪುಟಗಟ್ಟಲೆ.... ಹಾಗೆ ನನಗೆ ಒಂದು ಸಾಲಿನಲ್ಲಿ ಹೇಳಲು ಬಂದಿದ್ದರೆ ನಾನು ಝೆನ್ ಆಗಬಹುದಿತ್ತು. ಅದರ ಅರ್ಥ ಮಾಡಿಕೊಳ್ಳುವ ತಾಕತ್ತಂತು ನಿಮಗೆ ಇದ್ದೇ ಇದೆ. ಇಷ್ಟಾದಮೇಲೆ ನಾನೇಕೆ ಹಲುಬುತ್ತೇನೆ ಅಂತ ಅನ್ನಿಸಿ ಅನ್ನಿಸಿದರೂ ಮತ್ತೆ ಯಥಾಪ್ರಕಾರ ಅದಾಗದೆ ಕುಟ್ಟತೊಡಗುತ್ತೇನೆ ಈಗಿನಂತೆ. ಆಗಲಿ ಅದು ಅವನ ಶಕ್ತಿ ಇದು ನನ್ನ ನಿಶ್ಯಕ್ತಿ ಅಂತಲೂ ಅಂದು ಜೈ  ವಿರಾಹೆ ಅಂದು ಬಿಡೋಣ. ಇನ್ನಷ್ಟು ನೆನಪಿಸಿದ್ದಾನೆ ಬರೆಯಬೇಕಿದೆ ಹೇಳಬೇಕಿದೆ